ಮಸ್ಕತ್: ಬಂಟ್ಸ್ ಓಮಾನ್ ಸಾಂಸ್ಕೃತಿಕ ಸಂಘದ (BOSS)ನೆರಳಲ್ಲಿ “ಸಾಂಸ್ಕೃತಿಕ ಸಮ್ಮಿಲನ ” ಕೆಸರು ಗದ್ದೆ ಗೋಲ್ಡ್ ಫೀಲ್ಡ್ (KGF) – ಗ್ರಾಮೀಣ ಕ್ರಿಡೋತ್ಸವವು ಕಳೆದ ಶುಕ್ರವಾರ ಮಸ್ಕತ್ ನ “ಬರ್ಕ ಗುತ್ತಿ ” ನ ಅಗೋಳಿ ಮಂಜಣ್ಣ ಅಂಗಣದಲ್ಲಿ ಜರಗಿತು. ತುಳುನಾಡಿನ ಬಂಟರ ಸಂಸ್ಕೃತಿ,ನಂಬಿಕೆ,ಆಚರಣೆಗಳ, ನಡವಳಿಕೆಗಳ ನೆನಪಿನ ಮೆಲುಕು ಹಾಕಲು “ತುಳುನಾಡಿನ ಪ್ರತಿಕೃತಿ ” ಸೃಷ್ಟಿ ಸಲಾಗಿತ್ತು.ಮಸ್ಕತ್ ಹೊರವಲಯದಲ್ಲಿ ರುವ ಉದ್ಯಮಿ ಅಶ್ವಿನಿ ದರಂಸಿ ಭಾಯ್ ಅವರ ಫಾರ್ಮ್ ಹೌಸ್ ನಲ್ಲಿ ದಿವಾಕರ ಶೆಟ್ಟಿ ಮಲ್ಲಾರ್ ಅವರ ಪರಿಕಲ್ಪನೆಯಲ್ಲಿ “ಬರ್ಕ ಗುತ್ತು ಮನೆ ” , ಸಾವಿರ ಮಂದಿ ಕುಳಿತು ಕೊಳ್ಳ ಬಹುದಾದ “ಬಂಟರ ಭವನ” ನಿರ್ಮಿಸಲಾಗಿತ್ತು.ಗುತ್ತಿನ ಪಡಸಾಲೆ, ರಾಟೆ ಅಳವಡಿಸಿದ ಭಾವಿ, ಸಿರಿ ತುಪ್ಪೆ -ಭತ್ತದ ಕಣಜ, ಪಡಿ ಮಂಚ, ಭತ್ತ ಕುಟ್ಟುವ “ಬಾರ ಕಲ” ದಲ್ಲಿರಿಸಿದ ಒನಕೆಗಳು, ಮಡಲು ತಟ್ಟಿಯ ಹಳ್ಳಿ ಯ ಬಚ್ಚಲು ಮನೆ,ಉತ್ತು ಹದಗೊಳಿಸಿದ ಸುಮಾರು 60 ಮೀಟರ್ ಉದ್ದ ದ ಕೆಸರು ನೀರು ತುಂಬಿದ ವಿಶಾಲವಾದ ಕಂಬಳ ಗದ್ದೆ, ಸೆಗಣಿ ಸಾರಿಸಿದ ವಿಸ್ತರವಾದ ಅಂಗಳ, ತೆಂಗಿನ ಸೋಗೆ ಹೆಣೆದು ಮಾಡಿದ ವಿಶಾಲವಾದ ಚಪ್ಪರ(ಶಾಮಿಯಾನ ದ ಬಳಕೆ ಮಾಡಲಿಲ್ಲ ), ಏಕ ಕಾಲದಲ್ಲಿ 200 ಮಂದಿ ಕುಳಿತು ಊಟ ಮಾಡುವ ವ್ಯವಸ್ಥೆಯ ಭೋಜನ ಶಾಲೆ, ಖರ್ಜೂರದ ಮರಕ್ಕೆ ಎಳನೀರು ಗೊಂಚಲುಗಳನ್ನು ಕಸಿಕಟ್ಟಿ ಅಳವಡಿಸಿದ ಶೇಂದಿ ಮೂರ್ತೆಯ ಮಡಿಕೆ, ಸಂತೆಯ ಗದ್ದೆ ಯಲ್ಲಿ ಎಲೆ ಮಡಲು ಕಟ್ಟಿ ನಿರ್ಮಿಸಿದ ಗೂಡಂಗಡಿಗಳು…. ಸಮ್ಮಿಲನ ಕ್ಕಾಗಿ ಅಣಿಗೊಳಿಸ ಲಾಗಿತ್ತು. ಕೊಡೆತ್ತೂರಿನಿಂದ ತರಿಸಿದ್ದ ಭತ್ತ ದ ತೆನೆಗಳನ್ನು ಗುತ್ತಿನ ಯಜಮಾನ ಶಶಿಧರ ಶೆಟ್ಟಿ ಮಲ್ಲಾರ್ ಅವರು ತೊಳಸಿ ಕಟ್ಟೆ ಯ ಬಳಿಯಿಂದ ಹೊತ್ತುಕೊಂಡು ಪರಿವಾರದೊಂದಿಗೆ ಗುತ್ತಿನ ಚಾವಡಿ ಪ್ರವೇಶಿಸಿದರು. ದೀಪ ಬೆಳಗಿಸಿ,ಪ್ರಾರ್ಥನೆ ಮಾಡಿ ಕೊರಲ್ ಪರ್ಬ (ಕದಿರು ಹಬ್ಬ) ಆಚರಿಸಲಾಯಿತು.ಬೆಳಗ್ಗಿನ ಉಪಹಾರ ಕ್ಕೆ ತುಳುನಾಡಿನ ಸಾಂಪ್ರದಾಯಿಕ ಪದೆಂಗಿ , ಸಜ್ಜಿಗೆ ಬಜಿಲ್, ಮೂಡೆ ಚಟ್ನಿ, ಶೀರ… ಮತ್ತು ಗೂಡoಗಡಿಗಳಲ್ಲಿ ನಿರಂತರ ವಾಗಿ ಎಳನೀರು, ಬಚ್ಚಗಾoಯಿ, ಕಬ್ಬಿನ ರಸ, ಮಜ್ಜಿಗೆ, ಪಾನಕ, ಚರುoಬುರಿ, ಬಾಳೆ ಹಣ್ಣು,ಐಸ್ ಕ್ಯಾಂಡಿ,ಸಬಿ ತಿಂಡಿ ಗಳ ವಿತರಣೆ ಮಾಡಲಾಗಿತ್ತು.ಸಂಜೆ ಮೊಟ್ಟೆ ಆಮ್ಲೆಟ್, ಪೋಡಿ, ಗೋಳಿಬಜೆ ಯ ವ್ಯವಸ್ಥೆ ಇತ್ತು.ಬಂಟ ಪರಿವಾರದವರೇ ಸಿದ್ದ ಪಡಿಸಿದ ಶುಚಿ ರುಚಿಯಾದ ತುಳುನಾಡಿನ ಕೋಳಿ ತಮ್ಮನ ದ ಊಟವನ್ನು ತುದಿ ಬಾಳೆಎಲೆ ಯಲ್ಲಿ ಬಡಿಸಲಾಯಿತು.ಮಸ್ಕತ್ ನ ಬರ್ಕಗುತ್ತು ಕಂಬಳ:ಶಿಬಿರಗಳಲ್ಲಿ ಕೋಣ ಗಳನ್ನು ಸಜ್ಜು ಗೊಳಿಸಿ ಕೊಂಬು, ಡೋಲು ವಾದ್ಯ, ಕೀಲು ಕುದುರೆ, ಗೊಂಬೆ ಕುಣಿತ ದೊಂದಿಗೆ ಬರ್ಕ ಗುತ್ತಿನ ಅಂಗಳಕ್ಕೆ ಉತ್ಸಾಹ ದಿಂದ ಆಗಮಿಸುವ ನೊಗ ಕಟ್ಟಿದ ಓಟದ ಕೋಣಗಳ ಅಬ್ಬರ,ಯಜಮಾನ ಪರಿವಾರ ವನ್ನು ಬರ್ಕ ಗುತ್ತಿನ ಏಳು ಪ್ರಮುಖರು ಜೋಡು ಬೊಂಡ ಕೊಟ್ಟು ಸ್ವಾಗತ ನೀಡಿ ಬರಮಾಡಿ ಕೊಳ್ಳುವ,ಕೋಣಗಳು ಸಾಲಾಗಿ ಗದ್ದೆಗೆ ಇಳಿಯುವ, ಗಂತಿನಲ್ಲಿ ಪುoಡಾಟ ಮಾಡುವ, ಕೋಣಗಳನ್ನು ಓಡಿಸುವ ದೃಶ್ಯ ಗಳು ರಂಜನೀಯವಾಗಿತ್ತು.ಕೋಣಗಳ ಪ್ರತಿಕೃತಿಗಳನ್ನು ರಚಿಸಿ, ಅದರೊಳಗೆ ಸೇರಿ ನಿಜ ಕೋಣಗಳ ಹಾವಭಾವ ಗಳನ್ನು ಪ್ರದರ್ಶನ ಮಾಡುವಾಗ ಸಂಪ್ರದಾಯಿಕ ಕಂಬಳದ ಉಡುಗೆ ಉಟ್ಟು, ಮುಂಡಾಸು ಕಟ್ಟಿ, ಬೆತ್ತ ಹಿಡಿದು ಅಣಕು ಕಂಬಳ ದೃಶ್ಯ ನಿರ್ಮಿಸಿ ಸಂಭ್ರಮಿಸುವ ಬಳಗದ ಸದಸ್ಯರ ಉತ್ಸಾಹವು ಮಸ್ಕತ್ ನಲ್ಲಿ ತುಳುನಾಡಿನ ಕಂಬಳದ ಮರು ಸೃಷ್ಟಿ ಮಾಡುವಲ್ಲಿ ಯಶಸ್ವಿಯಾಯಿತು.