Author name: editor

ಕರ್ನಾಟಕ ವಾರ್ತೆಗಳು

“ಕರ್ನಾಟಕ ಮುಕುಟಮಣಿ” ಪ್ರಶಸ್ತಿಗೆ ಸಮಾಜ ಸೇವಕ ಯು.ಆರ್.ಶೆಟ್ಟಿ ಆಯ್ಕೆ

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಈ ಬಾರಿ ಕನ್ನಡ ರಾಜ್ಯೋತ್ಸವದ ಸಂದರ್ಭ ನೀಡಲಿರುವ ” ಕರ್ನಾಟಕ ಮುಕುಟಮಣಿ ” ಪ್ರಶಸ್ತಿಗೆ ಮಂಗಳೂರಿನ ಸಮಾಜ ಸೇವಕ ಯು.ಆರ್.ಶೆಟ್ಟಿ ಯವರನ್ನು ಆಯ್ಕೆಗೊಳಿಸಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ನೌಕರರಾಗಿರುವ ಯು.ಆರ್.ಶೆಟ್ಟಿ ಮಾಡಿರುವ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಗೊಳಿಸಲಾಗಿದೆ. ತುರ್ತು ಸಂದರ್ಭ ಗಳಲ್ಲಿ ಅನೇಕ ಬಾರಿ ರಕ್ತದಾನವನ್ನು ಮಾಡಿರುವ ಇವರು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕವೂ ಜನಮನ್ನಣೆ ಪಡೆದಿರುವರು. ಕೋವಿಡ್-19 ತುರ್ತುಸ್ಥಿತಿ ಯಲ್ಲಿ ಪ್ಲಾಸ್ಮಾ ದಾನ ಮಾಡಿರುವ ಯು.ಆರ್.ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ನಾಟಕ ಸ್ಪರ್ಧೆಯಲ್ಲಿ ಸತತ ಏಳು ಬಾರಿ ಆಯ್ಕೆಗೊಂಡು ಇಲಾಖೆಗೆ ಹೆಮ್ಮೆ ತಂದಿರುವರು. ಕರ್ನಾಟಕ ಕಲಾ ಮತ್ತು ಸಾಂಸ್ಕೃತಿಕ ಸಂಘದ ಜಿಲ್ಲಾಧ್ಯಕ್ಷರಾಗಿರುವ ಶ್ರೀಯುತರು ಈಗಾಗಲೇ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುವರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರು: ಪಾಲ್ದನೆ ಚರ್ಚ್ ಗೆ ಐಜ್ವಾಲ್‌ ಧರ್ಮಾಧ್ಯಕ್ಷರ ಭೇಟಿ

ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಜಾ ಚರ್ಚ್‌ ಗೆ ಉತ್ತರ ಭಾರತದ ಐಜ್ವಾಲ್‌ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಡಾ. ಜೋಕಿಂ ವಾಲ್ಡರ್‌ ಅವರು ಅತಿಥಿಯಾಗಿ ಆಗಮಿಸಿ ಇಂದು ಬೆಳಗ್ಗಿನ ಬಲಿ ಪೂಜೆಯ ನೇತೃತ್ವ ವಹಿಸಿದ್ದರು. ಅವರು ತಮ್ಮ ಪ್ರವಚನದಲ್ಲಿ ಬಡ ಬಗ್ಗರ ಬಗ್ಗೆ ನಾವು ಹೆಚ್ಚಿನ ಕಾಳಜಿ ವಹಿಸ ಬೇಕು. ಪ್ರಾರ್ಥನೆ ನಮ್ಮ ಆದ್ಯತೆ ಆಗ ಬೇಕೆಂದರು. ಬಲಿ ಪೂಜೆಯ ಬಳಿಕ ಅವರ ಭೇಟಿಯ ಸವಿ ನೆನಪಿಗಾಗಿ ಅವರನ್ನು ಸನ್ಮಾನಿಸಲಾಯಿತು.ಬಲಿಪೂಜೆಯಲ್ಲಿ ಶಿವಮೊಗ್ಗ ಧರ್ಮ ಪ್ರಾಂತ್ಯದ ವಂದನೀಯ ರೋಶನ್‌ ಪಿಂಟೊ ಭಾಗಿಯಾಗಿದ್ದರು. ಪಾಲ್ದನೆ ಚರ್ಚಿನ ಪ್ರಧಾನ ಧರ್ಮ ಗುರು ವಂದನೀಯ ಆಲ್ಬನ್‌ ಡಿ’ಸೋಜಾ, ಚರ್ಚ್ ಉಪಾಧ್ಯಕ್ಷ ಎಲಿಯಾಸ್‌ ಫೆರ್ನಾಂಡಿಸ್‌, ಕಾರ್ಯದರ್ಶಿ ಆಸ್ಟಿನ್‌ ಮೊಂತೇರೊ, ವಿವಿಧ ಆಯೋಗಗಳ ಸಂಚಾಲಕ ಜೊಸ್ಲಿನ್‌ ಲೋಬೊ, ಲೀಜನ್ ಆಫ್‌ ಮೇರಿ ಸಂಘದ ಅಧ್ಯಕ್ಷೆ ಹೆಲೆನ್‌ ಲೋಬೊ ಉಪಸ್ಥಿತರಿದ್ದರು.

ಕ್ರೀಡಾಂಗಣ

ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ನಲ್ಲಿ ಕಳಪೆ ಬ್ಯಾಟಿಂಗ್ ನಿಂದ ಸರಣೆ ಕಳೆದುಕೊಂಡ ಭಾರತ. ಕೊಹ್ಲಿ, ರೋಹಿತ್ ನಿವೃತ್ತಿಯಾಗಲು ಇದು ಸಕಾಲ.

ಣೆ :ನ್ಯೂಜಿಲ್ಯಾಂಡ್ ನ ಸ್ಯಾಂಟ್ನರ್ ಬೌಲಿಂಗ್ ಗೆ ತತ್ತರಿಸಿದ ಭಾರತ ಕ್ರಿಕೆಟ್ ತಂಡ ತನ್ನ ಕಳಪೆ ಬ್ಯಾಟಿಂಗ್ ನಿಂದ 3 ಟೆಸ್ಟ್ ಪಂದ್ಯಗಳ ಪೈಕಿ, ಆಡಿದ ಎರಡು ಟೆಸ್ಟ್ ಪಂದ್ಯಗಳಲ್ಲಿ ಹೀನಾಯವಾಗಿ ಸೋತು ಸರಣೆ ಕಳೆದುಕೊಂಡಿದೆ. ಈ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿರುವ ಕ್ರಿಕೆಟ್ ಅಭಿಮಾನಿಗಳು ಕೊಹ್ಲಿ, ರೋಹಿತ್ ನಿವೃತ್ತಿಯಾಗಲು ಇದು ಸಕಾಲ ಎನ್ನುತ್ತಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರಕ್ಕೆ ಪ್ರದೀಪ ಕುಮಾರ ಕಲ್ಕೂರನವೆಂಬರ್ 11ರಂದು ಪ್ರಶಸ್ತಿ ಪ್ರದಾನ

ಮಂಗಳೂರು: ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಜಿಲ್ಲೆಯ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ರಂಗದ ಸಾಧಕರು ಮತ್ತು ಯಕ್ಷಗಾನ ಕಲಾಪೋಷಕರಿಗಾಗಿ ನೀಡುವ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ವನ್ನು ಈ ಬಾರಿ ಎಸ್. ಪ್ರದೀಪ ಕುಮಾರ್ ಕಲ್ಕೂರ ಅವರಿಗೆ ನೀಡಲಾಗುವುದು ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಕಲ್ಕೂರಾ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಮ್ಮ ಕಲ್ಕೂರ ಪ್ರತಿಷ್ಠಾನದ ಆಶ್ರಯದಲ್ಲಿ ಎಡೆಬಿಡದೆ ಮಾಡಿದ ಹಲ ಬಗೆಯ ಸೇವಾ ಕಾರ್ಯಗಳಿಗಾಗಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದವರು ತಿಳಿಸಿದ್ದಾರೆ.ಬಹುಮುಖೀ ಸಾಧಕ ಕಲ್ಕೂರ:ನವೆಂಬರ್ 16,1960 ರಂದು ಉಡುಪಿಯ ಸಗ್ರಿಯಲ್ಲಿ ಮಂಜುನಾಥ ಕಲ್ಕೂರ ಮತ್ತು ಲಲಿತಾ ಕಲ್ಕೂರ ದಂಪತಿಗೆ ಹಿರಿಯ ಪುತ್ರನಾಗಿ ಜನಿಸಿದ ಪ್ರದೀಪ ಕುಮಾರ ಕಲ್ಕೂರ ಪ್ರಾಥಮಿಕ ಶಿಕ್ಷಣವನ್ನು ಕಡಿಯಾಳಿ ಶಾಲೆ, ಪ್ರೌಢಶಾಲೆಯನ್ನು ಕಮಲಾ ಬಾಯಿ ಹೈಸ್ಕೂಲ್ ನಲ್ಲಿ ಪೂರೈಸಿದರು. ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ, ಬಳಿಕ ಮಂಗಳೂರಿನ ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಡಿಪ್ಲೊಮಾ ಪದವೀಧರರಾದರು. ಕಲ್ಕೂರ ಎಡ್ವರ್ಟೈಸರ್ಸ್ ಸಮೂಹ ಸಂಸ್ಥೆಗಳನ್ನು ಮಂಗಳೂರಿನಲ್ಲಿ ಆರಂಭಿಸುವ ಮೂಲಕ ವೃತ್ತಿ ಜೀವನ ಆರಂಭಿಸಿದ ಅವರು ಜೊತೆ ಜೊತೆಗೆ ಸಾಹಿತ್ಯ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ನಿರಂತರ ಐದು ಅವಧಿಗಳಿಗೆ ಅವಿರೋಧವಾಗಿ ಆಯ್ಕೆಗೊಳ್ಳುವ ಮೂಲಕ ಅತ್ಯಂತ ಯಶಸ್ವೀ ಸಾಹಿತ್ಯಪರ ಕೆಲಸಗಳು, ಸಮ್ಮೇಳನಗಳನ್ನು ಆಯೋಜಿಸಿ ಸಾಹಿತ್ಯಾಸಕ್ತರ ಅಪಾರ ಮೆಚ್ಚುಗೆಗೆ ಪಾತ್ರರಾದರು. ಇದಲ್ಲದೆ ತನ್ನದೇ ನೇತೃತ್ವದ ಕಲ್ಕೂರ ಪ್ರತಿಷ್ಠಾನ ಮೂಲಕ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯನ್ನು ಕಳೆದ ನಾಲ್ಕು ದಶಕಗಳಿಂದ ಶ್ರೀ ಕ್ಷೇತ್ರ ಕದ್ರಿಯ ಆವರಣದಲ್ಲಿ ಆಯೋಜಿಸಿ ಮಕ್ಕಳಲ್ಲಿ ರಾಷ್ಟ್ರೀಯ ಹಾಗೂ ಧಾರ್ಮಿಕ ಚಿಂತನೆ ಬೆಳೆಸುವ ಕಾಯಕದಲ್ಲಿ ತೊಡಗಿರುವರು. ಕನ್ನಡ ರಾಜ್ಯೋತ್ಸವ, ಕಾರಂತ ಹುಟ್ಟು ಹಬ್ಬ, ಸಾವಯವ ಕೃಷಿ ಸಂತೆ, ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಯಕ್ಷಗಾನ, ಸಾಹಿತಿ – ಕಲಾವಿದರ ಸಂಸ್ಮರಣೆ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಜೋಡಿಸಿಕೊಂಡು, ಹಿರಿ ಕಿರಿಯ ಪ್ರತಿಭೆಗಳನ್ನು ಗೌರವಿಸುವ ಸತ್ಕಾರ್ಯವನ್ನು ಮಾಡುತ್ತಲೇ ಬಂದಿದ್ದಾರೆ. ಕವನ, ಪ್ರಬಂಧ, ಚಿತ್ರ ರಚನಾ ಸ್ಪರ್ಧೆ ಏರ್ಪಡಿಸಿ ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಕಲ್ಕೂರ ಪ್ರಕಾಶನದ ಮೂಲಕ ಯಕ್ಷಗಾನ ಸಹಿತ ಅನೇಕ ಪುಸ್ತಕಗಳ ಪ್ರಕಾಶನ ವನ್ನೂ ಮಾಡಿರುವರು.ಉಡುಪಿಯ ಪೇಜಾವರ ಮಠಾಧೀಶರಾಗಿದ್ದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದರ ಪರಮಾಪ್ತ ಶಿಷ್ಯರಾಗಿ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಸಮಿತಿಯ ಗೌರವ ಕಾರ್ಯದರ್ಶಿಯಾಗಿ, ಶಾರದಾ ಸಮೂಹ ವಿದ್ಯಾ ಸಂಸ್ಥೆ ಸಹಿತ ಇನ್ನೂ ಅನೇಕ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ, ಪೋಷಕರಾಗಿ ಸೇವಾನಿರತರಾಗಿರುವ ಕಲ್ಕೂರರದು ಬಹುಮುಖೀ ವ್ಯಕ್ತಿತ್ವ. ಇದಕ್ಕಾಗಿ ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ.ತಿರುಪತಿ ತಿರುಮಲ ದೇವಸ್ಥಾನ ಕೊಡಮಾಡುವ ‘ಪುರಂದರ ದಾಸಾನುಗ್ರಹ ಪ್ರಶಸ್ತಿ’ , ಉಡುಪಿ ಶ್ರೀಕೃಷ್ಣ ಮಠದ ‘ಶ್ರೀ ಕೃಷ್ಣಾನುಗ್ರಹ ಪ್ರಶಸ್ತಿ’, ಸಹಿತ ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ.ಕದ್ರಿ ದೇವಳದಲ್ಲಿ ಪ್ರಶಸ್ತಿ ಪ್ರದಾನ:ಇದೇ 2024 ನವೆಂಬರ 11ರಿಂದ 17ರ ವರೆಗೆ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ನಡೆಯುವ 12ನೇ ವರ್ಷದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದ್ವಾದಶ ಸರಣಿಯ ಉದ್ಘಾಟನಾ ಸಮಾರಂಭದಲ್ಲಿ ನವೆಂಬರ್ 11ರಂದು ಸೋಮವಾರ ಪ್ರದೀಪ ಕುಮಾರ್ ಕಲ್ಕೂರರು ಯಕ್ಷಾಂಗಣದ ರಾಜ್ಯೋತ್ಸವ ಗೌರವ ಸ್ವೀಕರಿಸುವರು. ಬಳಿಕ ಒಂದು ವಾರ ಪರ್ಯಂತ ಕ್ರಮವಾಗಿ ರಾಜಾ ದಂಡಕ, ಕಚ – ದೇವಯಾನಿ, ಸೈಂಧವ ವಧೆ, ತ್ರಿಶಂಕು ಸ್ವರ್ಗ, ಬಿನದ ದಾಂಪತ್ಯ, ಸುದರ್ಶನೋಪಖ್ಯಾನ, ಸತೀ ಶಕುಂತಳೆ ಮತ್ತು ‘ರೆಂಜೆ ಬನೊತ ಲೆಕ್ಯೆಸಿರಿ (ತುಳು)’ ಯಕ್ಷಗಾನ ತಾಳಮದ್ದಳೆಗಳು ಜರಗಲಿವೆ ಎಂದು ಭಾಸ್ಕರ ರೈ ಕುಕ್ಕುವಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ರೂಪೇಶ್ ಶೆಟ್ಟಿ ನಿರ್ದೇಶನದ “ಜೈ” ತುಳು ಸಿನಿಮಾಕ್ಕೆ ಮುಹೂರ್ತ. ಒಂದೇ ಹಂತದಲ್ಲಿ ಚಿತ್ರೀಕರಣ

ಮಂಗಳೂರು: ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಜೈ ತುಳು ಸಿನಿಮಾದ ಮುಹೂರ್ತ ಸಮಾರಂಭ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು. ಶರವು ರಾಘವೇಂದ್ರ ಶಾಸ್ತ್ರೀ ಕ್ಲಾಪ್ ಮಾಡಿ ಸಿನಿಮಾಕ್ಕೆ ಶುಭ ಹಾರೈಸಿದರು.ಸಮಾರಂಭದಲ್ಲಿ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ್, ತಾರಾನಾಥ ಶೆಟ್ಟಿ ಬೋಳಾರ್, ಮಂಜುನಾಥ ಅತ್ತಾವರ, ಬಾಳ ಜಗನ್ನಾಥ ಶೆಟ್ಟಿ, ನವೀನ್ ಶೆಟ್ಟಿ ಆರ್ಯನ್ಸ್ ಮೊದಲಾದವರು ಉಪಸ್ಥಿತರಿದ್ದರು. ಗಿರಿಗಿಟ್, ಗಮ್ಜಾಲ್, ಸರ್ಕಸ್ ಚಿತ್ರಗಳ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ಅವರು ಮತ್ತೊಂದು ಬಿಗ್ ಬಜೆಟ್ ನ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಜೈ ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ.ರೂಪೇಶ್ ಶೆಟ್ಟಿ ಸಿನಿಮಾದ ನಿರ್ದೇಶಕರಾಗಿದ್ದು, ಕತೆ ಹಾಗೂ ಸಂಭಾಷಣೆಯನ್ನು ಪ್ರಸನ್ನ ಶೆಟ್ಟಿ ಬೈಲೂರು ಬರೆದಿದ್ದಾರೆ.ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನಿರ್ಮಾಪಕರು ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ, ಸಹ ನಿರ್ಮಾಪಕರು ದೀಕ್ಷಿತ್ ಆಳ್ವ, ನೃತ್ಯ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ ಆರ್ಯನ್ಸ್.“‘ಜೈ ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್, ಮೊದಲಾದವರು ಅಭಿನಯಿಸಲಿದ್ದಾರೆ.ಸಿನಿಮಾಕ್ಕೆ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ನಟ, ನಿರ್ದೇಶಕ ರೂಪೇಶ್ ಶೆಟ್ಟಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಅಕ್ಟೋಬರ್ 28 ರಂದು ಕುತ್ಲುರು ಸರಕಾರಿ ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ

ಮಂಗಳೂರು, ಅಕ್ಟೋಬರ್ 25,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸಂಘದ ಸಹಭಾಗಿತ್ವದಲ್ಲಿ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಕುತ್ಲುರು ಸರಕಾರಿ ಶಾಲೆ ಮಕ್ಕಳಿಗೆ ಎಂಸಿಫ್ ಸಿ ಎಸ್ ಆರ್ ನಿಧಿಯಿಂದ ಒಂದು ಲಕ್ಷ ರೂಪಾಯಿ ಮೌಲ್ಯದ ಸಮವಸ್ತ್ರ ವಿತರಣೆ ಅಕ್ಟೋಬರ್ 28 ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಪತ್ರಿಕಾ ಭವನ ದಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಮವಸ್ತ್ರ ವಿತರಣೆ ಮಾಡಲಿದ್ದಾರೆ.ಸಾಹಸ ಪ್ರವಾಸೋದ್ಯಮ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಕುತ್ಲುರು ಗ್ರಾಮದ ಪ್ರತಿನಿಧಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿ ಯತೀಶ್ ಸನ್ಮಾನಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಸಿಫ್ ಕಂಪನಿ ಚೀಫ್ ಪ್ರೊಡಕ್ಷನ್ ಆಫೀಸರ್ ಗಿರೀಶ್. ಎಸ್, ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಚೇತನ್ ಮೆಂಡೋನ್ಸ, ಸಾರ್ವಜನಿಕ ಸಂಪರ್ಕಧಿಕಾರಿ ಅವಿನಂದನ್, ಕುತ್ಲುರು ಸರಕಾರಿ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ. ಆರ್ ಉಪಸ್ಥಿತರಿಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇ0ದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕ ವಾರ್ತೆಗಳು

ಇವರೇ ತಮಗೆ ಬೇಕಾದಂತೆ ಪಟ್ಟಿ ಮಾಡುವುದಾದರೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಹೇಳುವುದು ಯಾಕೆ? ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಾರದರ್ಶಕವೇ?

ತನಿಖಾ ವರದಿ: ಡಾ.ಅಶೋಕ್ ಶೆಟ್ಟಿ ಬಿ. ಎನ್.ಬೆಂಗಳೂರು: ಕಳೆದ ಒಂದು ತಿಂಗಳಿಂದ ಕನ್ನಡ ರಾಜ್ಯೋತ್ಸವದ ಪ್ರಶಸ್ತಿಗಾಗಿ ಲಾಬಿ ನಡೆಸುವವರ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ. ಈ ಪೈಕಿ,ಬಂಟ ಉದ್ಯಮಿಯೊಬ್ಬರು 15 ಲಕ್ಷ ರೂಪಾಯಿ ಖರ್ಚು ಮಾಡಿದ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಪ್ರಶಸ್ತಿಗಾಗಿ ಆನ್ಲೈನ್ ಅರ್ಜಿ ಸಲ್ಲಿಸಲು ಸೆ. 30 ಕೊನೆಯ ದಿನಾಂಕವಾಗಿತ್ತು. ಹೀಗೇ 2,800 ಅರ್ಜಿಗಳು ಬಂದಿದ್ದವು. ಅವುಗಳನ್ನು 700 ಕ್ಕೆ ಇಳಿಸಿ ಪಟ್ಟಿ ಮಾಡಲಾಗಿತ್ತು. ಗಮನಿಸಬೇಕಾದ ವಿಷಯವೆಂದರೆ,ಕೇವಲ ಆನ್ಲೈನ್ ಅರ್ಜಿ ಸಲ್ಲಿಸಿ ಸುಮ್ಮನೆ ಕುಳಿತವರಿಗೆ ಪ್ರಶಸ್ತಿ ಇಲ್ಲ. ಎಂಎಲ್ಎ, ಮಂತ್ರಿಗಳ ಮೂಲಕ ಲಾಬಿ ನಡೆಸಿದವರಿಗೆ ಮಾತ್ರ ಪ್ರಶಸ್ತಿವೆಂಬುದು ಬಹಿರಂಗ ಸತ್ಯವಾಗಿದೆ. ಕೇವಲ ಲಾಬಿ ನಡೆಸುವವರಿಗೆ ಪ್ರಶಸ್ತಿ ನೀಡುವುದಾರೆ ಆನ್ಲೈನ್ ಮೂಲಕ ಪ್ರಶಸ್ತಿಗೆ ಅರ್ಜಿ ಕರೆಯುವುದು ಯಾವ ಪುರುಷಾರ್ಥಕ್ಕೆ?ಇದು ಜನರ ಕಣ್ಣೆಗೆ ಮಣ್ಣೆರೆಚುವುದೇ? ಸಿಎಂ ಸಿದ್ದರಾಮಯ್ಯ ಅವರು ಈ ಬಗ್ಗೆ ಪ್ರಶಸ್ತಿಗೆ ಅರ್ಹರ ಪಟ್ಟಿಯನ್ನು ಅಂತಿಮಗೊಳಿಸುವುದಕ್ಕೆ ಮುನ್ನ ಪರಿಶೀಲಿಸಬೇಕಾಗಿದೆ. ಕಳೆದ ವರ್ಷ ವಿದೇಶದಲ್ಲಿರುವ ಬಂಟ ಉದ್ಯಮಿಯೊಬ್ಬರು 25 ಲಕ್ಷ ರೂಪಾಯಿ ಖರ್ಚು ಮಾಡಿದ್ದೂ ಗುಟ್ಟಾಗಿ ಉಳಿದಿಲ್ಲ. ರಾಜ್ಯೋತ್ಸವ ಪ್ರಶಸ್ತಿ ಎನ್ನುವುದು ಹಣ ಮಾಡುವ ಸ್ಕೀಮೇ ಅಥವಾ ಅರ್ಹರನ್ನು ಗೌರವಿಸುವ ಸರಕಾರದ ಯೋಜನೆಯೇ? ಗೊಂದಲದಲ್ಲಿದ್ದಾರೆ ಜನ. ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಸಂಗಪ್ಪ ತಂಗಡಗಿಯವರಿಗೆ ಫುಲ್ ಪವರ್ ಅಂತೆ? ರಿಮೋಟ್ ಕಂಟ್ರೋಲ್ ಸಿಎಂ ಕೈಯಲ್ಲಂತೆ. ಅರ್ಹರನ್ನು, ಪ್ರತಿಭಾವಂತರನ್ನು ಹಾಗೇ ಸುಮ್ಮನೆ ಗೌರವಿಸಿ ಪ್ರಶಸ್ತಿ ನೀಡುವ ಶುಭ ಘಳಿಗೆ ಸಿಎಂ ಸಿದ್ದರಾಮಯ್ಯ ಅವರು ಮನಸ್ಸು ಮಾಡಿದರೆ ಖಂಡಿತ ಸಾಧ್ಯವಿದೆ. ಮಾನ್ಯ ಮುಖ್ಯಮಂತ್ರಿಗಳು ಈ ಬಗ್ಗೆ ತಕ್ಷಣ ಅರ್ಹರ ಪಟ್ಟಿಯನ್ನು ಅಂತಿಮಗೊಳಿಸಬೇಕಾಗಿದೆ. ಇದು ಸಾಧ್ಯನಾ? ಕಾತರದಿಂದ ಕಾಯುತ್ತಿದ್ದಾರೆ ಜನ.

ಪ್ರಾದೇಶಿಕ ವಾರ್ತೆಗಳು

ಎಂಎಲ್ಸಿ ಉಪಚುನಾವಣೆ ಫಲಿತಾಂಶ: ಬಿಜೆಪಿಯ ಕಿಶೋರ್ ಕುಮಾರ್ ಗೆಲುವು

ಮಂಗಳೂರು :ವಿಧಾನಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಎದುರು 1600ಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ವಿಧಾನಪರಿಷತ್ ಉಪಚುನಾವಣೆಯ ಮತ ಎಣಿಕೆಯು ಮಂಗಳೂರಿನ ಸಂತ ಎಲೋಷಿಯಸ್ ಪದವಿ ಪೂರ್ವ ಕಾಲೇಜ್ ನಲ್ಲಿ ಇಂದು ನಡೆದಿದ್ದು,ಕೇಂದ್ರ ಚುನಾವಣಾ ವೀಕ್ಷಕ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತಿರಿದ್ದರು.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಧರ್ಮಪ್ರಾಂತ್ಯದ ಸಿಟಿ ವಲಯದ ವ್ಯಾಪ್ತಿಯಲ್ಲಿ ಬರುವ ಚರ್ಚ್ ಗಳ 21 ಆಯೋಗದ ಸದಸ್ಯರಿಗೆ ಕಾರ್ಯಗಾರ.

ಮಂಗಳೂರು ಧರ್ಮಪ್ರಾಂತ್ಯದ ಸಿಟಿ ವಲಯದ ವ್ಯಾಪ್ತಿಯಲ್ಲಿ ಬರುವ ಕುಲಶೇಖರ, ಬೊಂದೇಲ್, ನೀರುಮಾರ್ಗ, ಪಾಲ್ದನೆ, ಬಜಾಲ್, ಕೆಲರೈ, ದೇರೆಬೈಲ್, ಪೆರ್ಮಯ್, ವಾಮಂಜೂರು, ಅಂಜೆಲೊರ್, ಶಕ್ತಿನಗರ ಇದರ 21 ಆಯೋಗದ ಸದಸ್ಯರಿಗೆ ಕಾರ್ಯಗಾರವನ್ನು ಕುಲಶೇಖರದ ಹೋಲಿ ಕ್ರಾಸ್ ಚರ್ಚಿನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಚರ್ಚಿನ 21ಆಯೋಗದ ಸದಸ್ಯರಿಗೆ ಮಾಹಿತಿ, ವಿಚಾರ ವಿನಿಮಯ, ಸಂದೇಹಗಳಿಗೆ ಉತ್ತರ ನೀಡುವ ಮೂಲಕ ಸಹಕಾರಿಯಾಯಿತು. ಕಾರ್ಯಗಾರದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವುಲ್ ಸಲ್ಡಾನ ಅವರು ಕಾರ್ಯಗಾರದ ಉದ್ಘಾಟಣೆ ಮಾಡಿ ಮಾಹಿತಿ ನೀಡಿದರು. ಮುಂದೆ ಸುಮಾರು 2 ಗಂಟೆಗಳ ಕಾಲ ವಂದನೀಯ ಪಾ| ಪಾವೊಸ್ತಿನ್ ಲೋಬೊ ಅವರು ಆಯೋಗದ ಬಗ್ಗೆ ಸವಿಸ್ತಾರವಾದ ವಿವರ ನೀಡಿದರು.ವೇದಿಕೆಯಲ್ಲಿ ಸಿಟಿ ವಲಯದ ವಿಕಾರ್ ವಾರ್ ವಂ| ಪಾ| ಜೇಮ್ಸ್ ಡಿ’ಸೋಜ ಅವರು ಕಾರ್ಯಗಾರದ ಮಹತ್ವ ವಿವರಿಸಿ ಸ್ವಾಗತಿಸಿದರು. ವಂ| ಪಾ| ವಿಜಯ್ ಮೊಂತೆರೋ ಅವರು ಪ್ರಾರ್ಥನಾ ವಿದಿ ನೆರವೇರಿಸಿದರು.ವ| ಪಾ| ಕ್ಲಾನೀ ಡಿ’ಸೋಜಾ, ವಂ| ಪಾ| ಆಲ್ವಿನ್ ಡಿ’ಸೋಜ, ಕೊರ್ಡೆಲ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ| ಕ್ಲಿಫರ್ಡ್ ಫೆರ್ನಾಂಡಿಸ್, ಧರ್ಮಪ್ರಾಂತ್ಯದ ಸಾರ್ವಜನಿಕ ಅಧಿಕಾರಿ ರೋಯ್ ಕ್ಯಾಸ್ಟಲೀನೊ ಉಪಸ್ಥಿತರಿದ್ದರು. ಕಾರ್ಯಗಾರದಲ್ಲಿ ಎಲ್ಲಾ ಚರ್ಚುಗಳ ಧರ್ಮಗುರುಗಳು, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಆಯೋಗದ ಸಂಚಾಲಕರು, ಧರ್ಮ ಭಗಿನಿಯರು ಭಾಗವಹಿಸಿದ್ದರು.ಆಂಜೆಲೋರ್ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ| ಫೆಡ್ರಿಕ್ ಮೊಂತೇರೊ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಂತೋಷ್ ಡಿ’ಕೋಸ್ತಾ ವಂದಿಸಿದರು.

ಪ್ರಾದೇಶಿಕ ವಾರ್ತೆಗಳು

ತುಳು ರಂಗಭೂಮಿಯಲ್ಲಿ ಸದಭಿರುಚಿಯ ಹಾಸ್ಯಕ್ಕೆ ಮನ್ನಣೆ-ನಟ ಅರವಿಂದ ಬೋಳಾರ್

ಮಂಗಳೂರು: ರಂಗಭೂಮಿ ಕಲಾವಿದನಿಗೆ ತನ್ನ ವೃತ್ತಿಯಲ್ಲಿ ನಿಷ್ಠೆ,ಭಕ್ತಿ ಇದ್ದರೆ ಜೀವನ ನಿರ್ವಹಣೆಗೆ ಯಾವುದೇ ಕೊರತೆ ಉಂಟಾಗದು. ಕಲಾವಿದನಲ್ಲಿ ಸಮಾಜ ಪ್ರಜ್ಞೆ ಅಗತ್ಯ . ತುಳು ರಂಗಭೂಮಿಯಲ್ಲಿ ಸದಭಿರುಚಿಯ ಹಾಸ್ಯವನ್ನು ಮಾತ್ರ ಪ್ರೇಕ್ಷಕರು ಒಪ್ಪುತ್ತಾರೆ. ಹಾಸ್ಯ ಕಲಾವಿದರು ಕೂಡಾ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಬಹುದು ಎಂಬುದನ್ನು ತುಳು ನಾಟಕಗಳು ತೋರಿಸಿಕೊಟ್ಟಿವೆ ಎಂದು ಜನಪ್ರಿಯ ನಟ ಅರವಿಂದ ಬೋಳಾರ್ ಹೇಳಿದರು.ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಬುಧವಾರ ಪತ್ರಿಕಾ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ‘ ರಂಗಭೂಮಿ ಕಲಾವಿದನಾಗಿ ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ಜನತೆಯ ಪ್ರೇರಣೆಯಿಂದಲೇ ಹಾಸ್ಯವನ್ನು ನಾನು ಸ್ವೀಕರಿಸಿದ್ದು, ಅದನ್ನು ವೃತ್ತಿ ಜೀವನದಲ್ಲಿ ಮುಂದುವರಿಸುತ್ತಿದ್ದೇನೆ. ಪ್ರತಿ ಬಾರಿಯೂ ಹಾಸ್ಯದಲ್ಲಿ ಹೊಸತನ ತರಲು ಪ್ರಯತ್ನಿಸುತ್ತೇನೆ ಎಂದರು.ಪ್ರಾಥಮಿಕ ಶಾಲೆಯಲ್ಲಿ ಇರುವಾಗ ಹುಚ್ಚನ ಪಾತ್ರ ಮಾಡಿ ಪ್ರಥಮ ಸ್ಥಾನ ಪಡೆದೆ. ಬಡತನದ ಕಾರಣ ಹೆಚ್ಚು ಶಿಕ್ಷಣ ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಶಾರದಾ ಮಾತೆ ನನ್ನ ಕೈ ಬಿಡಲಿಲ್ಲ. ಹೊಟ್ಟೆಪಾಡಿಗೆ ಹಲವು ಕೆಲಸ ಮಾಡಿದೆ. ಸ್ಥಳೀಯ ದೇವಾಲಯಗಳಲ್ಲಿ ನಡೆಯುವ ನಾಟಕಗಳಲ್ಲಿ ಹಾಸ್ಯ ಪಾತ್ರ ಮಾಡುತ್ತಿದ್ದೆ. ಬಳಿಕ ಹಾಸ್ಯ ಪಾತ್ರ ನನ್ನ ಜೀವನದಲ್ಲಿ ಹಾಸುಹೊಕ್ಕಾಯಿತು. ರಂಗಭೂಮಿಯ ಮೇಲಿನ ಆಸಕ್ತಿ, ಗುರುಗಳ ಹಾಗೂ ಪ್ರೇಕ್ಷಕರ ಆಶೀರ್ವಾದ ನನ್ನನ್ನು ಎತ್ತರಕ್ಕೆ ಬೆಳೆಸಿತು. ದೇವದಾಸ್ ಕಾಪಿಕಾಡ್ ಅವರ ತಂಡಕ್ಕೆ ಸೇರ್ಪಡೆಯಾದ ಬಳಿಕ ಸಾಕಷ್ಟು ಜನಪ್ರಿಯತೆ ಪಡೆದೆ. ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರಿಂದ ತುಳು ಸಿನಿಮಾ ಪ್ರವೇಶಿಸಿ ಅಲ್ಲಿಯೂ ಒಳ್ಳೆಯ ಅವಕಾಶ ಪಡೆದೆ ಎಂದು ಅವರು ಹೇಳಿದರು.ಯಕ್ಷಗಾನ, ಟಿ.ವಿ.ಕಾರ್ಯಕ್ರಮಗಳಲ್ಲೂ ಬೇಡಿಕೆಯ ನಟನಾದೆ. ಇದು ನನ್ನ ಭಾಗ್ಯ. ರಂಗಭೂಮಿ ನನಗೆ ಎಲ್ಲವನ್ನೂ ನೀಡಿದೆ. ಅನ್ನದ ದಾರಿ, ಸಂಪಾದನೆ ,ಉತ್ತಮ ಹೆಸರು, ಸ್ವಂತ ಮನೆ, ಮಕ್ಕಳಿಗೆ ಶಿಕ್ಷಣ ಎಲ್ಲವೂ ರಂಗಭೂಮಿಯಿಂದ ಸಾಧ್ಯವಾಗಿದೆ .ಮುಂದಿನ ಜನ್ಮಇದ್ದರೆ ರಂಗಭೂಮಿ ಕಲಾವಿದನಾಗಿಯೇ ಜನಿಸಬೇಕು ಎಂಬ ಬಯಕೆ. ಜನರ ಪ್ರೀತಿ ನನಗೆ ಸಿಕ್ಕಿದ್ದು, ಅದುವೇ ನನ್ನನ್ನು ಇಷ್ಟುಎತ್ತರಕ್ಕೆ ಬೆಳೆಸಿದೆ ಎಂದು ಅರವಿಂದ ಬೋಳಾರ್ ಹೇಳಿದರು.ಕಾರ್ಯಕ್ರಮ ಉದ್ಘಾಟಿಸಿದ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳು ರಂಗಭೂಮಿ ಕಟ್ಟಲು ಅನೇಕರ ತ್ಯಾಗ, ಪರಿಶ್ರಮ ಇದೆ. ತುಳು ರಂಗಭೂಮಿ ತುಳು ಭಾಷೆಯ ಉಳಿವಿಗೆ ತನ್ನದೇ ಆದ ಕೊಡುಗೆ ನೀಡಿದೆ.ತುಳು ರಂಗ ಭೂಮಿಗೆ ಅರವಿಂದ ಬೋಳಾರ್ ಅವರ ಕೊಡುಗೆ ಅನನ್ಯ ಎಂದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ , ಕಾರ್ಯಕ್ರಮ ಸಂಯೋಜಕ ಸತೀಶ್ ಇರಾ ಉಪಸ್ಥಿತರಿದ್ದರು. ಪ್ರೆಸ್‌ಕ್ಲಬ್ ಉಪಾಧ್ಯಕ್ಷ ಮಹಮ್ಮದ್ ಆರಿಫ್ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.ವಿದೇಶಕ್ಕೆ ಬೋಳಾರ್ಅರವಿಂದ ಬೋಳಾರ್ ಅವರು ನ.6ರಿಂದ ಆಸ್ಟ್ರೇಲಿಯಾ, ಡಿ.5ರಿಂದ ನೈಜೀರಿಯಾದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿಭಾಗವಹಿಸಲಿದ್ದಾರೆ .ಅಮೆರಿಕಾ ಇಂಗ್ಲೆಂಡ್ ದೇಶಗಳಲ್ಲೂ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ನೀಡುವ ಬಗ್ಗೆ ಸಂಘಟಕರು ಮಾತುಕತೆ ನಡೆಸಿದ್ದಾರೆ.

Scroll to Top