ಮಂಗಳೂರು:ಮಂಗಳೂರಿನಲ್ಲಿ 500 ಮತ್ತು ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 2,000 ಅನಧಿಕೃತ ಕ್ಯಾಟರಿಂಗ್ಗಳಿದ್ದು, ಇದರಿಂದಾಗಿ ನೊಂದಾಯಿತ ಕ್ಯಾಟರಿಂಗ್ ಮಾಲಕರಿಗೆ ತುಂಬಾ ತೊಂದರೆ ಮತ್ತು ತೀವ್ರ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಅನಧಿಕೃತ ಕ್ಯಾಟರಿಂಗ್ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿ ದ.ಕ. ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘ (ರಿ) ಮಂಗಳೂರು ಇವರು ಜಿಲ್ಲಾಧಿಕಾರಿ ಸಹಿತ ಮಂಗಳೂರು ಮಹಾನಗರ ಪಾಲಿಕೆಯ ಕಮೀಷನರ್, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಎಲ್ಲಾ ಶಾಸಕರುಗಳಿಗೆ ಮನವಿ ಸಲ್ಲಿಸಿದ್ದಾರೆ. ಇದರ ಕುರಿತು ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ಇಂದು (ನವೆಂಬರ್ 13ರಂದು) ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ದ.ಕ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘ(ರಿ) ಮಂಗಳೂರು ಇದರ ಅಧ್ಯಕ್ಷ ಅಬ್ದುಲ್ ರಶೀದ್ರವರು ಜಿಲ್ಲೆಯಲ್ಲಿ ನೋಂದಾಯಿತ ಅಂದರೆ ಅಧಿಕೃತ 250 ಕ್ಯಾಟರಿಂಗ್ಗಳಿವೆ ಎಂದು ಹೇಳಿದರು. ನೋಂದಾಯಿತ ಕ್ಯಾಟರಿಂಗ್ ಮಾಲಕರಿಗೆ ಟ್ರೇಡ್ ಲೈಸನ್ಸ್ ಮತ್ತು ಎಫ್ಎಸ್ಎಸ್ಎಐ ರಿಜಿಸ್ಟ್ರೇಶನ್ ಪರವಾನಿಗೆ ಇದ್ದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಎಫ್ಎಸ್ಎಸ್ಎಐ ರಿಜಿಸ್ಟ್ರೇಶನ್ ಇದೆ. ಇದಕ್ಕಾಗಿ ವರ್ಷಕ್ಕೆ 20,000ದಿಂದ 50,000 ಸಾವಿರ ತನಕ ಟ್ರೇಡ್ ಲೈಸನ್ಸ್ ಶುಲ್ಕ ಮತ್ತು ರೂ. 2000ದವರೆಗೆ ಎಫ್ಎಸ್ಎಸ್ಎಐ ಲೈಸನ್ಸ್ ಗಾಗಿ ನೀಡಲಾಗುತ್ತದೆ.


ಇಷ್ಟೆಲ್ಲ ಪರವಾನಿಗೆ ಮಾಡಿಕೊಂಡು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಅತ್ಯಂತ ಗುಣಮಟ್ಟದ ಆಹಾರ ಪದಾರ್ಥಗಳನ್ನು ಅಧಿಕೃತ ಕ್ಯಾಟರಿಂಗ್ ಮಾಲಕರು ಪೂರೈಕೆ ಮಾಡುತ್ತಿದ್ದರೂ ಕೆಲವು 2000ಕ್ಕೂ ಅಧಿಕ ಅಕ್ರಮ ಮತ್ತು ಅನಧಿಕೃತ ಕ್ಯಾಟರಿಂಗ್ ಮಾಲಕರ ಹಾವಳಿಯಿಂದಾಗಿ ತುಂಬಾ ಸಂಕಷ್ಟಕ್ಕೆ ಒಳಗಾಗಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಈ ಬಗ್ಗೆ ತಕ್ಷಣ ಕಾನೂನುಕ್ರಮ ಕೈಗೊಂಡು ತಮಗೆ ನ್ಯಾಯ ದೊರಕಿಸಿಕೊಡಬೇಕೆಂದು ದ.ಕ. ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘ (ರಿ) ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ನೀಡಿ ವಿನಂತಿಸಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು ಅಬ್ದುಲ್ ರಶೀದ್, ಗೌರವ ಅಧ್ಯಕ್ಷರು ಸುಧಾಕರ್ ಕಾಮತ್, ಮಾಜಿ ಅಧ್ಯಕ್ಷರು ರಾಜಗೋಪಾಲ್ ರೈ, ದೀಪಕ್ ಕೋಟ್ಯಾನ್, ಅನೀಸ್ ಶೇಕ್ ಮೊಹಮ್ಮದ್. ಉಪಾಧ್ಯಕ್ಷರು ವಿಜಯ್ ಕುಮಾರ್, ರಾಜೇಶ್ ಕೊಂಚಾಡಿ, ಪ್ರಧಾನ ಕಾರ್ಯದರ್ಶಿ ಕರುಣಾಕರ್ ಪಡಿಯಾರ್, ಖಜಾಂಚಿ ಪ್ರಕಾಶ್ ಲೋಬೊ, ಸ್ಥಾಪಕ ಸದಸ್ಯರು ಬಾಲಕೃಷ್ಣ ಕುಕ್ಯಾನ್, ಸಂಘಟನಾ ಕಾರ್ಯದರ್ಶಿ ದೇವಿ ಪ್ರಸಾದ ಶೆಟ್ಟಿ,ಕೇಟರಿಂಗ್ ಮಾಲಕರ ಸಂಘ ಬಂಟ್ವಾಳ ವಲಯದ ಅಧ್ಯಕ್ಷರು ನಾರಾಯಣ ಸುವರ್ಣ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ ಹಾಗೂ ಇತರ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗೆ ದೂರು:
ದ.ಕ. ಜಿಲ್ಲಾ ಕ್ಯಾಟರಿಂಗ್ ಅಸೋಸಿಯೇಷನ್ ವತಿಯಿಂದ ವಿವಿಧ ಬೇಡಿಕೆಗಳನ್ನು ಅಗ್ರಹಿಸಿ ದ.ಕ. ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಅಬ್ದುಲ್ ರಶೀದ್, ಗೌರವಾಧ್ಯಕ್ಷ ಸುಧಾಕರ ಕಾಮತ್, ಉಪಾಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಸುಧಾಕರ ಪಡಿವಾಳ್, ಮಾಜಿ ಅಧ್ಯಕ್ಷ ರಾಜಗೋಪಾಲ್ ರೈ ಹಾಗೂ ಸದಸ್ಯರು ಉಪಸ್ಥಿತಿ ಇದ್ದರು.







































































































































































































