ಮಂಗಳೂರು: ಗೋಲ್ಡನ್ ಮೂವಿ ನಿರ್ಮಾಣದ ಕನ್ನಡ ಮತ್ತು ತುಳು ಭಾಷೆಯ ಚಿತ್ರ ‘ಪಿಚ್ಚರ್’ ಆ. 7 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಕರಾವಳಿಯಲ್ಲಿ ತುಳು ಭಾಷೆaಯಲ್ಲಿ ಮತ್ತು ಹೊರ ಜಿಲ್ಲೆಗಳಲ್ಲಿ ಕನ್ನಡದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ನಿರ್ಮಾಪಕ ಗೋಲ್ಡನ್ ಸ್ಟಾರ್ ಗಣೇಶ್ ತಿಳಿಸಿದ್ದಾರೆ.
ಮಂಗಳೂರಿನ ಖಾಸಗಿ ಹೊಟೇಲ್ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ವಿವರ ನೀಡಿದರು.
ಕರಾವಳಿ ಮಾತ್ರವಲ್ಲ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ಕರಾವಳಿಯ ಎಲ್ಲ ಹಿರಿಯ, ಕಿರಿಯ ಅನುಭವಿ ಕಲಾವಿದರಲ್ಲದೆ, ಹೊಸ ಕಲಾವಿದರೂ ನಟಿಸಿದ್ದಾರೆ. ಉಡುಪಿ ಮತ್ತು ಪುತ್ತೂರಿನಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಗಡಿನಾಡು ಕಾಸರಗೋಡು, ಗಲ್ಫ್ ರಾಷ್ಟ್ರ ಮಾತ್ರವಲ್ಲದೆ ಒಟಿಟಿಯಲ್ಲೂ ಈ ಚಿತ್ರ ಕಾಣಿಸಲಿದೆ ಎಂದರು.

ತುಳುವರಿಗೆ ಹ್ಯಾಟ್ಸ್ಅಪ್
ತುಳುವಿನ ಕಾಮಿಡಿ, ಕನ್ನಡದ ಭಾವನಾತ್ಮಕತೆಯ ಸಮ್ಮಿಳಿತ ಈ ಚಿತ್ರವಾಗಿದ್ದು, ತುಳುವಿನ ದೊಡ್ಡ ಕಲಾವಿದರು ನಟಿಸಿರುವುದು ಖುಷಿ ತಂದಿದೆ. ನನ್ನ ಮೊದಲ ಚಿತ್ರದ ನಿರ್ದೇಶಕರೂ
ಕರಾವಳಿಯವರೇ ಎಂಬುದು ಅಭಿಮಾನದ ಸಂಗತಿ. ಇಲ್ಲಿನ ಕಲಾವಿದರು ತುಳು ಭಾಷೆಗೆ ನೀಡುವ ಕೊಡುಗೆಗೆ ಹ್ಯಾಟ್ಸ್ಅಪ್ ಎಂದರು.
ಈ ಚಿತ್ರಕ್ಕೆ ತುಳು ಭಾಷಿಕರೂ ಉತ್ತಮ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ. ಹಾಗಾಗಿ ಈ ಚಿತ್ರದ ಸೂಪರ್ ಹಿಟ್ ಎಂರೆ ಪ್ರೇಕ್ಷಕರೇ. ಯಾವುದೇ ಸಿನಿಮಾಗೆ ಹೂಡಿದ
ಬಂಡವಾಳ ಶೇ.ನೂರರಷ್ಟು ವಾಪಸ್ ಸಿಗುವುದಿಲ್ಲ. ಶೇ.5ರಿಂದ ಶೇ.6ರಷ್ಟು ಮಾತ್ರ ಲಾಭ ಸಿಗುತ್ತದೆ. ಸಿನಿಮಾ ಸೂಪರ್ಹಿಟ್ ಆದರೆ ಮಾತ್ರ ಇನ್ನಷ್ಟು ಹೂಡಿಕೆದಾರರು ಒಲವು ತೋರಿಸಲು ಸಾಧ್ಯವಿದೆ ಎಂದರು.
ಒಳ್ಳೆ ಸಿನಿಮಾ ಸಿಕ್ಕಿದರೆ ತುಳುವಲ್ಲಿ ನಟನೆ
ಒಳ್ಳೆಯ ಸಿನಿಮಾ ಸಿಕ್ಕಿದರೆ ತುಳು ಭಾಷೆಯಲ್ಲಿ ನಟಿಸಲು ಸಿದ್ಧ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದರು. ಮುಂದಿನ ಸಿನಿಮಾವನ್ನು ಸ್ಕ್ರಿಪ್ಟ್ ನೋಡಿ ನಿರ್ಧರಿಸುತ್ತೇನೆ. ಇಲ್ಲಿನ ಸಿನಿ ಪ್ರಿಯರಿಗೆ ಬೇಕಾಗುವ ಸಿನಿಮಾವನ್ನು ನಿರ್ಮಾಣ ಮಾಡಬೇಕು. ಆಗ ಮಾತ್ರ ಅದು ಯಶಸ್ವಿಯಾಗಲು ಸಾಧ್ಯ. ಕೃತಕಬುದ್ಧಿ ಮತ್ತೆ (ಎಐ) ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಏನೂ ತೊಂದರೆ ಆಗದು. ನಾವು ಎಐ ಅನ್ನು ಹೇಗೆ ಸ್ವೀಕರಿಸುತ್ತೇನೆ ಎನ್ನುವುದರ ಮೇಲೆ ಒಳಿತು, ಕೆಡುಕು ಅವಲಂಬಿತವಾಗಿದೆ ಎಂದರು.
ನಿರ್ಮಾಪಕಿ ಶಿಲ್ಪಾ ಗಣೇಶ್ ಮಾತನಾಡಿ, ಒಂದೂವರೆ ವರ್ಷದ ಹಿಂದೆ ಈ ಸಿನಿಮಾಗೆ ನಿರ್ಧಾರ ಮಾಡಿದ್ದೆ. ಪ್ರೀಮಿಯರ್ ಶೋಗಳಲ್ಲಿ ಪ್ರೇಕ್ಷಕರ ಉತ್ತಮ ಸ್ಪಂದನೆ
ವ್ಯಕ್ತವಾಗಿದೆ. ಸಣ್ಣದರಲ್ಲಿ ಆರಂಭಿಸಿದ ಸಿನಿಮಾ ಈಗ ದೊಡ್ಡ ಬಜೆಟ್ ಆಗಿದೆ.
ಸಿನಿಮಾದ ಎಲ್ಲ ಹಾಡುಗಳೂ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಜಯಭೇರಿ ಕಂಡರೆ ಇನ್ನಷ್ಟು ಸಿನಿಮಾ ಮಾಡುವ ಹುಮ್ಮಸ್ಸು ಇದೆ ಎಂದರು.
ಹಿರಿಯ ನಟ ಡಾ ದೇವದಾಸ್ ಕಾಪಿಕಾಡ್, ಭೋಜರಾಜ್ ವಾಮಂಜೂರು, ನಟ ಅರ್ಜುನ್ ದೇವ್, ಸಂಗೀತ ನಿರ್ದೇಶಕ ಸಾಮ್ಯುವೆಲ್, ಸಿನಿಮಾ ವಿತರಕರಾದ ಸಚಿನ್ ಎ ಎಸ್ ಉಪ್ಪಿನಂಗಡಿ, ಮುನೀಂದ್ರ ಮತ್ತಿತರರಿದ್ದರು. ಅನುರಾಗ್ ನಿರೂಪಿಸಿದರು.
ಸಿನಿಮಾ ಚೆನ್ನಾಗಿ ಮೂಡಿಬಂದಿದೆ
*ಗೋಲ್ಡನ್ ಮೂವಿ ನಿರ್ಮಾಣದ ಈ ‘ಪಿಚ್ಚರ್’ ಸಿನಿಮಾದಲ್ಲಿ ಮೊದಲ ಬಾರಿ
ನಟಿಸುತ್ತಿದ್ದು, ಈ ಸಿನಿಮಾ ಬಹಳ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಪ್ರೀಮಿಯರ್ ಶೋ ನೋಡಿದವರು ಹೇಳುತ್ತಿದ್ದಾರೆ. ಸಿನಿಮಾ ನೋಡಿ ಇನ್ನಷ್ಟು ಪ್ರೋತ್ಸಾಹ ಇರಲಿ.
ನಿತ್ಯಪ್ರಕಾಶ್ ಬಂಟ್ವಾಳ್, ನಾಯಕ ನಟ
ಉತ್ತಮ ಪಾತ್ರ ಲಭಿಸಿದೆ
ರಾಜ್ ಬಿ. ಶೆಟ್ಟಿ ಪ್ರೋತ್ಸಾಹದಿಂದ ಚಿತ್ರರಂಗಕ್ಕೆ ಧುಮುಕಿದ್ದು, ಈ ಸಿನಿಮಾದಲ್ಲಿ ಉತ್ತಮ ರೀತಿಯಲ್ಲಿ ನಟಿಸಿದ್ದೇನೆ. ಜನತೆ ಈ ಸಿನಿಮಾ ಇಷ್ಟಪಡುವ ನಂಬಿಕೆ ಇದೆ. ಜನರಪ್ರೋತ್ಸಾಹವೇ ಚಿತ್ರ ತಂಡಕ್ಕೆ ನೀಡುವ ಶ್ರೀರಕ್ಷೆ.
-ಅಮೃತಾ, ನಾಯಕಿ ನಟಿ
ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕರು ನೋಡುತ್ತಾರೆ
ತುಳು ಚಿತ್ರ ರಂಗದ ಎಲ್ಲ ಕಲಾವಿದರನ್ನು ಸೇರಿಸಿ ಈ ಸಿನಿಮಾ ನಿರ್ಮಿಸಿರುವುದು ಹೆಗ್ಗಳಿಕೆ. ಕನ್ನಡ ಚಿತ್ರರಂಗದ ಅಜಾತಶತ್ರು ಗೋಲ್ಡನ್ ಸ್ಟಾರ್ ಗಣೇಶ್-ಶಿಲ್ಪಾ
ಗಣೇಶ್ ದಂಪತಿ ಇದನ್ನು ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿ. ಒಳ್ಳೆಯ ಸಿನಿಮಾ ಕೊಟ್ಟರೆ ಜನತೆ ನೋಡುತ್ತಾರೆ.
-ದೇವದಾಸ್ ಕಾಪಿಕಾಡ್,
ತುಳು ಚಿತ್ರ ನಟ, ನಿರ್ಮಾಪಕ







































































































































































































