ಮಂಗಳೂರು : ರಸ್ತೆ ದಾಟುತ್ತಿದ್ದಾಗ ಖಾಸಗಿ ಬಸ್ ವೊಂದು ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ, ಮಹಿಳೆಯೊಬ್ಬರು ರಸ್ತೆಗೆ ಅಪ್ಪಳಿಸಿ ತೀವ್ರತರದ ಗಂಭೀರ ಗಾಯಗೊಂಡು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಉಡುಪಿ ನಗರದ ನೈವೇದ್ಯ ಹೋಟೆಲ್ ಸಮೀಪದ ಕೋರ್ಟ್ ರಸ್ತೆ ಹತ್ತಿರದ ಲಯನ್ಸ್ ಸರ್ಕಲ್ ಬಳಿ ಆಗಸ್ಟ್ 1ರ ಶನಿವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಬಿಜೆಪಿ ಮುಖಂಡ (ಮಂಜುನಾಥ್)ಮಂಜುಕೊಳ ಅವರ ಪತ್ನಿ, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ (37)ಎಂದು ಗುರುತಿಸಲಾಗಿದೆ.


ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಸಭೆ ಮುಗಿಸಿ, ತಾಲೂಕು ಪಂಚಾಯತ್ ಕಟ್ಟಡದಲ್ಲಿರುವ ಉಡುಪಿ ಶಾಸಕರ ಕಚೇರಿಗೆ ತೆರಳಿದ್ದು, ಅಲ್ಲಿಂದ ಅವರು ಮನೆಗೆ ಹೋಗಲು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಖಾಸಗಿ ಬಸ್ಸೊಂದು ಅವರಿಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು ಎಂದು ತಿಳಿದುಬಂದಿದೆ.


ಮಾಹಿತಿ ತಿಳಿದು ಉಡುಪಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತದ ಕುರಿತು ತನಿಖೆ ಆರಂಭಿಸಿದ್ದಾರೆ. ಈ ರಸ್ತೆ ಅಪಘಾತ ಜನಮಾನಸದಲ್ಲಿ ಕಣ್ಣೀರು ಸುರಿಸಿದೆ. ರಾಜಕೀಯವಾಗಿ ಇನ್ನಷ್ಟು ಉಜ್ವಲ ಭವಿಷ್ಯ ಹೊಂದಿದ್ದ, ಜನ ಸೇವೆ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದ ಲಕ್ಷ್ಮೀ ಮಂಜುನಾಥ್ ಅವರನ್ನು ವಿಧಿಯ ಕ್ರೂರ ಅಟ್ಟಹಾಸವು ರಸ್ತೆ ದುರಂತದ ಮೂಲಕ ಬಲಿ ತೆಗೆದುಕೊಂಡಿದೆ.







































































































































































































