ಮಂಗಳೂರು, ಜೂ. 25: ಮಂಗಳೂರು ನನ್ನ ಬಾಲ್ಯದ ಊರಿದು. ಮತ್ತೆ ಇಲ್ಲಿಗೆ ಬರುವ ಮೂಲಕ ನನ್ನ ನೆನಪುಗಳು ತಾಜಾ ಆಗಿವೆ, ಭಗವಂತ ಕಲ್ಪಿಸಿದರೆ ಇನ್ನಷ್ಟು ಇಲ್ಲಿನ ನೆನಪುಗಳ ಮರು ಸೃಷ್ಟಿಸುವೆ.
ಹೀಗೆಂದದ್ದು ಬಾಲಿವುಡ್ ಬಾದ್ಷಾ ಖ್ಯಾತಿಯ ಶಾರುಖ್ ಖಾನ್.
ನಗರದ ಖ್ಯಾತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೋರೇಶನ್ ಅಡ್ಯಾರ್ ಗಾರ್ಡನ್ನಲ್ಲಿ ಜೂನ್ 25ರ ಗುರುವಾರ ಆಯೋಜಿಸಿದ್ದ ಆ್ಯನ್ ಈವ್ನಿಂಗ್ ವಿದ್ ಶಾರುಖ್ ಖಾನ್ ಕಾರ್ಯಕ್ರಮದಲ್ಲಿ ಅವರು ಅತಿಥಿಯಾಗಿ ಪಾಲ್ಗೊಂಡು, ಮಾತನಾಡಿದರು.



ಚಿಕ್ಕಂದಿನಲ್ಲಿ ಕೆಲ ಕಾಲ ಇಲ್ಲಿದ್ದರೂ ಕಿಂಗ್ ಖಾನ್ ಆದ ಬಳಿಕ ಮೊದಲ ಬಾರಿಗೆ ಭೇಟಿ ನೀಡಿದ ಶಾರುಖ್, ಮಂಗಳೂರಿನ ಅಭಿಮಾನಿಗಳ ಪ್ರೀತಿ, ಅಭಿಮಾನಕ್ಕೆ ಫಿದಾ ಆದರು.
ಮಂಗಳೂರು ಸುಂದರ ನಗರ, ನಾನು ವಿಮಾನ ನಿಲ್ದಾಣದಲ್ಲಿ ಇಳಿದು, ಈ ವೇದಿಕೆಗೆ ಬರುವವರೆಗೂ ನೀವು ಪ್ರೀತಿ ತೋರಿದ್ದೀರಿ, ರೋಹನ್ ಕಾರ್ಪೋರೇಶನ್ ನವರು ಸುರತ್ಕಲ್ ಕಡಲ ಕಿನಾರೆಯಲ್ಲಿ ಮರೀನಾ ಒನ್ ಯೋಜನೆಯನ್ನು ರೂಪಿಸುತ್ತಿರುವುದು ಮತ್ತಷ್ಟು ಖುಷಿ ತಂದಿದೆ. ಈ ಊರಿನಲ್ಲಿ ಕೆಲ ಸಮಯ ಕಳೆಯುವುದು, ನೀರು ದೋಸೆ ಸವಿಯುವುದು ಇಷ್ಟ ಎಂದರು.

ರೋಹನ್ ಮರೀನಾ ಅನಾವರಣ
ಈ ಸಂದರ್ಭದಲ್ಲಿ ರೋಹನ್ ಕಾರ್ಪೋರೇಶನ್ ಐಷಾರಾಮಿ ಸಮುದ್ರ ತೀರ ವಸತಿ ಯೋಜನೆ ‘ಮರೀನಾ ಒನ್’ ಅನ್ನು ಶಾರುಖ್ ಖಾನ್ ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ರೋಹನ್ ಕಾರ್ಪೋರೇಶನ್ ಪ್ರವರ್ತಕ ಡಾ. ರೋಹನ್ ಮೊಂತೇರೊ, ಶಾರುಖ್ ಖಾನ್ ಅವರ ಜೀವನ ಪಯಣವು ಲಕ್ಷಾಂತರ ಜನರಿಗೆ ಪ್ರೇರಣೆಯ ಮೂಲ. ಶಾರುಖ್ ಖಾನ್ ಅವರನ್ನು ಮಂಗಳೂರಿಗೆ ಕರೆ ತರುವ ಕನಸು ಇಂದು ನಿಜವಾಗಿದೆ ಎಂದರು.
ರೋಹನ್ ಕಾರ್ಪೊರೇಷನ್ ನಿರ್ದೇಶಕ ಡಿಯೋನ್ ಮೊಂತೇರೊ ಮಾತನಾಡಿ, ಮಂಗಳೂರಿನ ಜನತೆಗೆ ವಿಶ್ವಮಟ್ಟದ ಅನುಭವ ನೀಡಲು ಈ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಜನರಿಂದ ದೊರೆತ ಅಭೂತಪೂರ್ವ ಸ್ಪಂದನೆ ಕಾರ್ಯಕ್ರಮವನ್ನು ಸಂಸ್ಥೆಯ ಪಯಣದ ಅತ್ಯಂತ ಸ್ಮರಣೀಯ ಘಟ್ಟವನ್ನಾಗಿ ರೂಪಿಸಿದೆ ಎಂದರು. ರೋಹನ್ ಮೊಂತೇರೊ ಅವರ ಪತ್ನಿ ಲವೀಟಾ, ಮಗಳು ರಿಯಾ ಮೊಂತೇರೊ ಉಪಸ್ಥಿತರಿದರು. ಸಾಹಿಲ್ ಜಹೀರ್ ಹಾಗೂ ಡೋನಾ ಸೆಬಾಸ್ಟಿಯನ್ ನಿರೂಪಿಸಿದರು.
ಕಾದರೂ ಖುಷಿ ಪಟ್ಟ ಅಭಿಮಾನಿಗಳು :
ಜೂನ್ 25ರ ಸಂಜೆ 6ಕ್ಕೆ ಶಾರುಖ್ ಬರುವುದು ನಿಗದಿಯಾಗಿದ್ದರೂ ಅಪರಾಹ್ನ 3 ಗಂಟೆಗೇ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಸಭಾಂಗಣಕ್ಕೆ ಆಗಮಿಸಿದರು. ಕಾರ್ಯಕ್ರಮಕ್ಕೆ ಶಾರುಖ್ ಆಗಮಿಸುವಾಗ ರಾತ್ರಿ 8 ಗಂಟೆಯಾಗಿದ್ದರೂ ಅಭಿಮಾನಿಗಳು ಕಾದಿದ್ದರು. ಪೊಲೀಸರು, ಖಾಸಗಿ ಭದ್ರತಾ ಸಿಬಂದಿ ಸಹಿತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಮೊದಲು ಸಂಜೆ ಐದರ ಸುಮಾರಿಗೆ ಮುಂಬಯಿಯಿಂದ ಖಾಸಗಿ ವಿಮಾನದಲ್ಲಿ ಆಗಮಿಸಿದ ಶಾರುಖ್ ಖಾನ್ ಅವರನ್ನು ವಿಮಾನನಿಲ್ದಾಣದಲ್ಲಿ ಅಭಿಮಾನಿಗಳು ಹರ್ಷೋದ್ಗಾರದೊಂದಿಗೆ ಸ್ವಾಗತಿಸಿದರು, cಖುಷ್ ಆದ ಕಿಂಗ್ ಖಾನ್: ಶಾರುಖ್ ತನ್ನ ಅಭಿಮಾನಿಗಳ ಕಡೆಗೆ ಕೈಬೀಸಿ ಫೈಯಿಂಗ್ ಕಿಸ್ ಹಾರಿಸಿದರು.
ನಮಸ್ಕಾರ ಕುಡ್ಲ.. ಎಂಚ ಉಲ್ಲರ್ ಎನ್ನುತ್ತಾ ಮಾತು ಆರಂಭಿಸಿದ ಶಾರುಖ್ ಪ್ರೀತಿ ಉಪ್ಪಡ್ ಎನ್ನುತ್ತಾ ವಿದಾಯ ಕೋರಿದರು. ನನ್ನ ಅಜ್ಜ ಮಂಗಳೂರು ಬಂದರಿನಲ್ಲಿ ಎಂಜಿನಿಯರ್ ಆಗಿದ್ದವರು. ಆ ಬಗ್ಗೆ ನನಗೆ ಹೆಚ್ಚು ನೆನಪುಗಳಿಲ್ಲ. ಆದರೆ ಇಲ್ಲಿನ ಕೆಲವು ಫೋಟೋ ಗಳು ನನ್ನೊಂದಿಗಿವೆ ಎನ್ನುತ್ತಾ ಹಳೆಯ ಫೋಟೋಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಿದಾಗ ಜನ ಚಪ್ಪಾಳೆ ತಟ್ಟಿ ಖುಷಿಪಟ್ಟರು.
ನಿಮಗೆ ಸಂವಾದ ನಡೆಸುವಾಗ ಬೋರ್ ಎನ್ನಿಸಿದರೆ ಹೇಳಿ, ಮನರಂಜಿಸುವೆ ಎಂದ ಶಾರುಖ್ ಚಮ್ಮಕ್ ಚಲ್ಲೋ… ತುಜೆ ದೇಖಾ ತೋ ಯೇ ಜಾನಾ ಸನಮ್ ಹಾಡಿಗೆ ಹೆಜ್ಜೆ ಹಾಕಿದ್ದನ್ನು ಸಹಸ್ರಾರು ಮಂದಿ ಅಭಿಮಾನಿಗಳು ಕಣ್ತುಂಬಿಕೊಂಡದ್ದಲ್ಲದೆ ಸ್ಮಾರ್ಟ್ ಫೋನ್ ಮೆಮೊರಿಗೂ ಸೇರಿಸಿಕೊಂಡರು.
ಹುಚ್ಚೆಬ್ಬಿಸಿದ ಸಲ್ಮಾನ್ ಅಲಿ:
ಇಂಡಿಯನ್ ಐಡೋಲ್ ಖ್ಯಾತಿಯ ಗಾಯಕ ಸಲ್ಮಾನ್ ಅಲಿ, ಶಾರುಖ್ ಅವರ ಸಿನೆಮಾಗಳ ಛಯ್ಯ ಛಯ್ಯ, ಕೋಯಿ ಮಿಲ್ ಗಯಾ, ತುಮ್ಸ್ ಮಿಲ್ ಕೆ ದಿಲ್.. ಮೊದಲಾದ ಹಾಡುಗಳಿಗೆ ಜನ ಕುಣಿದು ಸಂಭ್ರಮಿಸಿದರು.
‘ಮಂಗಳೂರು ತನ್ನದೇ ಆದ ಸಂಸ್ಕೃತಿಯಿಂದ ಎಲ್ಲರ ಗಮನ ಸೆಳೆಯುತ್ತಿದೆ, ಮುಂಬಯಿನಲ್ಲೂ ಬಹಳ ಮಂದಿ ಮಂಗಳೂರಿನವರಿದ್ದಾರೆ. ನಾನು ಆಗಾಗ ಮುಂಬಯಿಯಿಂದ ಇಲ್ಲಿಗೆ ಬರಲು ಬಯಸುವೆ.’
-ಶಾರುಖ್ ಖಾನ್, ಹಿಂದಿ ಚಿತ್ರ ನಟ
ಕುಡ್ಲದಲ್ಲಿ ಶಿಕ್ಷಕನಾಗಿರುತ್ತಿದ್ದೆ!
ಕಾರ್ಯಕ್ರಮದ ಮಧ್ಯೆ ವಿಶೇಷ ಸಂವಾದದಲ್ಲೂ ಶಾರುಖ್ ಪಾಲ್ಗೊಂಡರು. ಒಂದು ವೇಳೆ ನೀವು ಬಾಲಿವುಡ್ಗೆ ಹೋಗದಿರುತ್ತಿದ್ದರೆ ಏನಾಗಿರುತ್ತಿದ್ದಿರಿ ಎಂಬ ಪ್ರಶ್ನೆಗೆ, ಬಹುಶಃ ಇಲ್ಲಿನ ಸಂತ ಅಲೋಶಿಯಸ್ ಅಥವಾ ಮೌಂಟ್ ಕಾರ್ಮೆಲ್ ಅಥವಾ ಶಾರದಾ ಕಾಲೇಜಿನಲ್ಲಿ ಶಿಕ್ಷಕನಾಗಿರುತ್ತಿದ್ದೆ ಎಂದರು. ಯುವಜನತೆ ದೊಡ್ಡ ಕನಸು ಕಾಣಬೇಕು, ತಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು ಹಾಗೂ ಗುರಿ ಸಾಧನೆಗಾಗಿ ಸತತ ಶ್ರಮಿಸಬೇಕು ಎಂದರು.
ಶಾರುಖ್ ಖಾನ್ ಅವರ ಜೀವನ ಪಯಣವು ಲಕ್ಷಾಂತರ ಜನರಿಗೆ ಪ್ರೇರಣೆಯ ಮೂಲ. ಅವರನ್ನು ಇಲ್ಲಿಗೆ ಕರೆತರುವ ಕನಸು ನನಸಾಗಿದೆ ಎಂದು ರೋಹನ್ ಕಾರ್ಪೋರೇಶನ್ ಸಂಸ್ಥೆಯ ಪ್ರವರ್ತಕ ಡಾ. ರೋಹನ್ ಮೊಂತೆರೋ ಅವರು ನುಡಿದರು. ಶಾರುಖ್ ಖಾನ್ ಅವರನ್ನು ಮಂಗಳೂರಿಗೆ ಕರೆಸುವುದರ ಮೂಲಕ ರೋಹನ್ ಕಾರ್ಪೋರೇಶನ್ ಸಂಸ್ಥೆ ಕಾರ್ಪೊರೇಟ್ ಜಗತ್ತಿನಲ್ಲಿ ಹೊಸ ದಾಖಲೆ ಬರೆದಿದೆ. ಈ ಕಾರ್ಯಕ್ರಮ ಜನ ಮೆಚ್ಚುಗೆ ಪಡೆದಿದೆ




























































































































































































