ಮಂಗಳೂರು: ಮಂಗಳೂರಿನ ಪಾಲ್ದನೆ ಸಂತ ತೆರೆಜಾ ಚರ್ಚ್ ನಲ್ಲಿ ಸೈಬರ್ ಕ್ರೈಮ್ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಿತು. ಬೆಳಗ್ಗಿನ ಬಲಿ ಪೂಜೆಯ ಬಳಿಕ ಚರ್ಚ್ ನ ತೆರೆದ ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ವಾಮಂಜೂರಿನಲ್ಲಿರುವ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೆಬಲ್ ಪ್ರದೀಪ್ ನಾಗನ ಗೌಡ ಅವರು ಮಾಹಿತಿ ನೀಡಿದರು. ಸೈಬರ್ ಅಪರಾಧಗಳು ಹೇಗೆ ನಡೆಯುತ್ತವೆ, ಸಾರ್ವಜನಿಕರು ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳ ಬೇಕು, ಮೊಬೈಲ್ ಫೋನ್ ಗಳಿಗೆ ಅಪರಿಚಿತ ಆ್ಯಪ್ ಗಳು, ಸಂದೇಶಗಳು, ವಾಟ್ಸಪ್ ಲಿಂಕ್ ಗಳು ಬಂದಾಗ ಅವುಗಳನ್ನು ನಿಭಾಯಿಸುವುದು ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಅವರು ವಿವರಿಸಿದರು. ಜನರ ಖಾತೆಗಳಲ್ಲಿರುವ ಹಣವನ್ನು ಸೈಬರ್ ಕಳ್ಳರು ಕಸಿದು ಕೊಳ್ಳುವ ಕುರಿತು ಮಾಹಿತಿ ನೀಡಿ ಎಚ್ಚರಿಕೆಯಿಂದ ಇರುವಂತೆ ಸಲಹೆ ಮಾಡಿದರು. ಕಾರ್ಯಕ್ರಮದಲ್ಲಿ ಚರ್ಚ್ ನ ಸದಸ್ಯರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಅವರ ಪ್ರಶ್ನೆ ಮತ್ತು ಸಂಶಯಗಳಿಗೆ ಉತ್ತರ ನೀಡಿದರು.
ಚರ್ಚ್ ನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಇಲಾಖೆಗೆ ಧನ್ಯವಾದ ಅರ್ಪಿಸಿದರು. ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಪೊಲೀಸ್ ಸಿಬಂದಿ ಬೀರೇಂದ್ರ, ಹನುಮಂತ ಅವರು ಉಪಸ್ಥಿತರಿದ್ದರು.





















































































































































































