ಜವಾಬ್ ಆಶ್ರಯದಲ್ಲಿ ಯಕ್ಷಗಾನ ತಾಳಮದ್ದಳೆ. ‘ತಾಳಮದ್ದಳೆಯಿಂದ ಸಂಸ್ಕಾರ’ : ರಘು ಎಲ್. ಶೆಟ್ಟಿ

109.4K Views 14 Aug 2025

ಮುಂಬಯಿ: ‘ಮುಂಬೈಯ ಹೋಟೆಲ್ ಉದ್ಯಮಿಗಳು ಒಟ್ಟು ಸೇರಿ ಜವಾಬ್ ಆಶ್ರಯದಲ್ಲಿ ಕಳೆದ ಎರಡು ದಶಕಗಳಿಂದ ಅಜೆಕಾರು ಕಲಾಭಿಮಾನಿ ಬಳಗದ ತಾಳಮದ್ದಳೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಅದು ನಮ್ಮ ಅಭಿರುಚಿಗೆ ಪೂರಕವಾಗಿ ಎಲ್ಲರನ್ನೂ ಆಕರ್ಷಿಸುತ್ತಿರುವುದರಿಂದ ಪ್ರತಿ ಬಾರಿಯೂ ಒಳ್ಳೆಯ ಪ್ರೇಕ್ಷಕ ವರ್ಗವನ್ನು ಸೆಳೆಯುತ್ತಿದೆ. ಯಕ್ಷಗಾನ ತಾಳಮದ್ದಳೆ ಪ್ರಕಾರದಲ್ಲಿ ಪುರಾಣ ಜ್ಞಾನದೊಂದಿಗೆ ಜೀವನಕ್ಕೆ ಸಂಸ್ಕಾರ ನೀಡುವಂತಹ ಹಲವು ವಿಚಾರಗಳನ್ನು ತಿಳಿಯಲು ಸಾಧ್ಯವಾಗುತ್ತದೆ’ ಎಂದು ಜವಾಬ್ ನ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ರಘು ಎಲ್. ಶೆಟ್ಟಿ ಹೇಳಿದ್ದಾರೆ.


ಮುಂಬೈ ಮಹಾನಗರದ ಹೋಟೆಲ್ ಉದ್ಯಮಿಗಳ ಬೃಹತ್ ಸಂಘಟನೆಯಾದ ಜವಾಬ್ ವತಿಯಿಂದ ಅಂಧೇರಿಯ ಹೋಟೆಲ್ ಪ್ಯಾಪಿಲೋನ್ ನಲ್ಲಿ ಆಗಸ್ಟ್ 11ರಂದು ಜರಗಿದ ಅಜೆಕಾರು ಕಲಾಭಿಮಾನಿ ಬಳಗದ 24ನೇ ಸರಣಿಯ ಮೂರನೇ ದಿನದ ತಾಳಮದ್ದಳೆ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಜವಾಬ್ ಅಧ್ಯಕ್ಷ ರಾಜೇಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಶಿ ಅವರು ಮುಂಬೈ ಪ್ರೇಕ್ಷಕರ ಕಲಾಭಿಮಾನವನ್ನು ಪ್ರಶಂಸಿಸಿ ಶುಭಾಶಂಸನೆಗೈದರು. ಬಳಗದ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಕಲಾವಿದರನ್ನು ಪರಿಚಯಿಸಿ, ಅಜೆಕಾರು ಕಲಾಭಿಮಾನಿ ಬಳಗದ 24ನೇ ವರ್ಷದ ಸರಣಿ ತಾಳಮದ್ದಳೆಯ ವಿವರಗಳನ್ನು ಹಾಗೂ ಮುಂದಿನ ವರ್ಷ ಬೆಳ್ಳಿ ಹಬ್ಬ ಆಚರಿಸುವ ಬಗ್ಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ರೂವಾರಿ ಅಜೆಕಾರು ಬಾಲಕೃಷ್ಣ ಶೆಟ್ಟಿ ಮತ್ತು ತಂಡದ ಎಲ್ಲಾ ಕಲಾವಿದರನ್ನು ಜವಾಬ್ ವತಿಯಿಂದ ಗೌರವಿಸಲಾಯಿತು.
‘ಗಾಂಡೀವ ನಿಂದನೆ – ಕರ್ಣಾವಸಾನೊ’ ತಾಳಮದ್ದಳೆ :
ಉದ್ಘಾಟನೆ ಬಳಿಕ ಊರಿನ ಪ್ರಸಿದ್ಧ ಕಲಾವಿದರಿಂದ ‘ಗಾಂಡೀವ ನಿಂದನೆ (ಕನ್ನಡ) ಮತ್ತು ಕರ್ಣಾವಸಾನೊ (ತುಳು)’ ಪ್ರಸಂಗಗಳ ಯಕ್ಷಗಾನ ತಾಳಮದ್ದಳೆ ಜರಗಿತು. ಡಾ.ಎಂ. ಪ್ರಭಾಕರ ಜೋಶಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ , ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ದಿನೇಶ್ ಶೆಟ್ಟಿ ಕಾವಳಕಟ್ಟೆ ಮತ್ತು ಸದಾಶಿವ ಆಳ್ವ ತಲಪಾಡಿ ಅರ್ಥಧಾರಿಗಳಾಗಿದ್ದರು. ದೇವಿಪ್ರಸಾದ್ ಆಳ್ವ ತಲಪಾಡಿ ಅವರ ಭಾಗವತಿಕೆಗೆ ದೇಲಂತಮಜಲು ಸುಬ್ರಹ್ಮಣ್ಯ ಭಟ್ ಮತ್ತು ಪ್ರಶಾಂತ ಶೆಟ್ಟಿ ವಗೆನಾಡು ಹಿಮ್ಮೇಳದಲ್ಲಿ ಸಹಕರಿಸಿದರು

Read More News

Scroll to Top