ಬೆಂಗಳೂರು: ಕರ್ನಾಟಕ ಉಚ್ಛ ನ್ಯಾಯಾಲಯದ ‘ಹಿರಿಯ ನ್ಯಾಯವಾದಿ’ಯಾಗಿ ಖ್ಯಾತ ವಕೀಲ ಪಿ.ಪಿ. ಹೆಗ್ಡೆಯವರನ್ನು ಹೈಕೋರ್ಟ್ ನ್ಯಾಯಮೂರ್ತಿಗಳು ಪದೋನ್ನತಿಗೊಳಿಸಿದ್ದಾರೆ.
ಪಿಪಿ ಹೆಗ್ಡೆ ಎಂದೇ ಚಿರಪರಿಚಿತರಾಗಿರುವ ಮಂಗಳೂರಿನ ಪದ್ಮಪ್ರಸಾದ್ ಹೆಗ್ಡೆಯವರು ಎಲ್.ಎಲ್.ಬಿ. ಮತ್ತು ಎಲ್.ಎಲ್.ಎಮ್. ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದಿದ್ದರು. ಅತೀ ಕಿರಿಯ ವಯಸ್ಸಿನಲ್ಲಿಯೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವವುಳ್ಳ ಪಿಪಿ ಹೆಗ್ಡೆಯವರು ಮಂಗಳೂರು, ಬೆಂಗಳೂರು ಮತ್ತು ದೆಹಲಿಯಲ್ಲಿ ಕಚೇರಿ ಹೊಂದಿದ್ದಾರೆ.

ಸುಪ್ರೀಂ ಕೋರ್ಟ್ ಕೇಸ್ಗಳಲ್ಲಿಯೂ ಇವರು ವಾದ ಮಂಡಿಸುತ್ತಿದ್ದಾರೆ. ಹಲವಾರು ಕ್ಲಿಷ್ಟಕರ ಕೇಸುಗಳಲ್ಲಿ ಸಮರ್ಥವಾಗಿ ವಾದಿಸಿ ಗಮನ ಸೆಳೆದಿರುವ ಇವರು ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರ ಭ್ರಷ್ಟಾಚಾರದ ವಿರುದ್ಧ ಹೋರಾಟ ರೂಪಿಸಿ ಯಶಸ್ವಿಯಾಗಿದ್ದರು. ಈ ಹೋರಾಟಕ್ಕೆ ನ್ಯಾಯಮೂರ್ತಿಗಳಾದ ನ್ಯಾ. ಶಿವರಾಜ್ ಪಾಟೀಲ್ ಮತ್ತು ನ್ಯಾ. ಸಂತೋಷ್ ಹೆಗ್ಡೆಯವರು ವಕೀಲರೊಂದಿಗೆ ಕೈ ಜೋಡಿಸಿದ್ದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ನಕಲಿ ವಕೀಲರುಗಳನ್ನು ಪತ್ತೆ ಹಚ್ಚಿ ಅವರನ್ನು ಅಮಾನತುಗೊಳಿಸಿದ್ದರಲ್ಲದೆ ವಕೀಲ ವೃತ್ತಿಯಲ್ಲಿ ಇರುವವರು ಅನ್ಯ ವೃತ್ತಿ ಮಾಡಬಾರದು ಎಂಬ ನಿಯಮವನ್ನು ಪಿಪಿ ಹೆಗ್ಡೆಯವರು ಪರಿಣಾಮಕಾರಿಯಾಗಿ ಜಾರಿ ತಂದಿದ್ದರು. ಪ್ರಚಲಿತ ಕಾನೂನು ಮತ್ತು ಸಂವಿಧಾನದ ಕುರಿತು ಆಳವಾದ ಜ್ಞಾನ ಹೊಂದಿರುವ ಪಿಪಿ ಹೆಗ್ಡೆಯವರು ಅಂಕಣಗಳ ಮೂಲಕವೂ ಜನಜಾಗೃತಿ ಮೂಡಿಸಿ ಗಮನ ಸೆಳೆದಿದ್ದಾರೆ.





















































































































































































