ಮಂಗಳೂರು-ಫಿರ್ಯಾದಿದಾರರಾದ ಪೊಲೀಸ್ ನಿರೀಕ್ಷಕರು ಕರ್ನಾಟಕ ಲೋಕಾಯುಕ್ತ ಮಂಗಳೂರುರವರು ದಿನಾಂಕ 30-06-2025 ರಂದು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿರುವ ಸಮಯ ಬೆಳಿಗ್ಗೆ 11.15 ಗಂಟೆಯ ಸುಮಾರಿಗೆ ಪ್ರವೀಣ್ ನಾಯ್ಕ್ ಮಾಲಿಕರು, ಪ್ರಶಾಂತ್ ಆಯಿಲ್ ಇಂಡಸ್ಟ್ರಿಸ್, ಕೋಟೆಕಣಿ, ಮಂಗಳೂರುರವರು ಮತ್ತು ಗಜೇಂದ್ರ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ಬಂದು ಫಿರ್ಯಾದಿದಾರರಾದ ಪೊಲೀಸ್ ನಿರೀಕ್ಷಕರಿಗೆ ಮಾಹಿತಿ ನೀಡಬೇಕು ಎಂಬುದಾಗಿ ಠಾಣೆಯ ಸಿಬ್ಬಂದಿಯವರಲ್ಲಿ ತಿಳಿಸಿ, ನಂತರ ಗಜೇಂದ್ರ, ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ, ಮಂಗಳೂರುರವರು ಫಿರ್ಯಾದಿದಾರರಾದ ಪೊಲೀಸ್ ನಿರೀಕ್ಷಕರವರಲ್ಲಿ ಮಾತನಾಡುತ್ತಾ ತನ್ನ ವಿರುದ್ಧ ಹಾಗೂ ತನ್ನ ಇಲಾಖೆಯ ವಿರುದ್ಧ ಲೋಕಾಯುಕ್ತ ಸಂಸ್ಥೆಯಿಂದ ಯಾವುದೇ ಪ್ರಕರಣ ದಾಖಲಿಸಬಾರದು ಅಥವಾ ದಾಳಿ ಮಾಡಬಾರದು ಎಂಬುದಾಗಿ ತಿಳಿಸಿ ತಾನು 3 ತಿಂಗಳಿಗೊಮ್ಮೆ 25,000/- ಹಣವನ್ನು ಲಂಚವಾಗಿ ಮಂಗಳೂರು ಲೋಕಾಯುಕ್ತ ಠಾಣೆಗೆ ನೀಡುವುದಾಗಿ ಫಿರ್ಯಾದಿದಾರರಿಗೆ ಲಂಚದ ಅಮಿಷ ಒಡ್ಡಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಗಜೇಂದ್ರ, ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ, ಮಂಗಳೂರುರವರ ವಿರುದ್ಧ ಪ್ರಕರಣ ದಾಖಲಾಗಿರುತ್ತದೆ. 30.05.2025ರಂದು ಮಂಗಳೂರು ಲೋಕಾಯುಕ್ತ ಠಾಣೆಯ ಠಾಣಾಧಿಕಾರಿಯವರಿಗೆ ಲಂಚ ಹಣ ನೀಡುವುದಾಗಿ ಆಮೀಷ ಒಡ್ಡಿದ ಸರಕಾರಿ ಅಧಿಕಾರಿಯಾದ ಗಜೇಂದ್ರ ವಿ ಎಡಕೆ, ಸಹಾಯಕ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ ಇಲಾಖೆ, ಮಂಗಳೂರುರವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಕುಮಾರಚಂದ್ರ, ಪೊಲೀಸ್ ಅಧೀಕ್ಷಕರು (ಪ್ರಭಾರ), ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗರವರ ಮಾರ್ಗದರ್ಶನದಲ್ಲಿ, ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್, ಸುರೇಶ್ ಕುಮಾರ್.ಪಿ, ಪೊಲೀಸ್ ನಿರೀಕ್ಷಕರಾದ ಶ್ರೀಮತಿ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ರವರು ಸಿಬ್ಬಂದಿಗಳ ಜೊತೆ ಕಾನೂನು ಕ್ರಮ ಕೈಗೊಂಡಿರುತ್ತಾರೆ.


















































































































































































