ಮಂಗಳೂರು: ಬಜಪೆಯಲ್ಲಿ ಕೊಲೆಯಾದ ಭಜರಂಗದಳ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಬಂಟ್ವಾಳದ ಮನೆಗೆ ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಮಂಗಳವಾರ ಭೇಟಿ ನೀಡಿ ವೈಯಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂ. ಅರ್ಥಿಕ ನೆರವಿತ್ತರು.
ಸುಹಾಸ್ ಶೆಟ್ಟಿ ಅವರ ಹೆತ್ತವರು ಹಾಗೂ ಕುಟುಂಬಸ್ಥರ ಜೊತೆ ಕೆಲ ಹೊತ್ತು ಮಾತುಕತೆ ನಡೆಸಿ ಸಾಂತ್ವನ ಹೇಳಿದರಲ್ಲದೆ ತಮ್ಮ ಕುಟುಂಬದ ಜೊತೆ ಸದಾಕಾಲವೂ ಇರುವುದಾಗಿ ಭರವಸೆ ನೀಡಿದರು.
ಸರಕಾರದಿಂದ ಭರವಸೆ ಇಲ್ಲ:
ಕರ್ನಾಟಕ ಸರಕಾರ ಮತ್ತು ಪೊಲೀಸ್ ಇಲಾಖೆ ಮೇಲೆ ಯಾವುದೇ ಭರವಸೆಯು ಉಳಿದಿಲ್ಲ. ಇದುವರೆಗೂ ಸರಕಾರದ ಪರವಾಗಿ ಯಾವೊಬ್ಬ ಪ್ರತಿನಿಧಿಯೂ ನಮ್ಮನ್ನು ಮಾತನಾಡಿಸಿಲ್ಲ ಎಂದು ಈ ಸಂದರ್ಭ ಸುಹಾಸ್ ಹೆತ್ತವರು ಮಾಜಿ ಸಂಸದ ನಳಿನ್ ಕುಮಾರ್ ಮುಂದೆ ಬೇಸರ ವ್ಯಕ್ತಪಡಿಸಿದರು.
ಪ್ರಕರಣದ ತನಿಖೆಯನ್ನು ಎನ್.ಐ.ಎ. ಸಂಸ್ಥೆಗೆ ವಹಿಸಿ, ಮಗನ ಸಾವಿಗೆ ನ್ಯಾಯ ಒದಗಿಸಿ ಕೊಡಿ ಮತ್ತು ಮುಂದಿನ ದಿನಗಳಲ್ಲಿ ಯಾವೊಬ್ಬ ಹಿಂದೂಕಾರ್ಯಕರ್ತನಿಗೆ ಇಂತಹ ಕಷ್ಟ ಬರಬಾರದು ಎಂದು ಕಣ್ಣೀರಿಟ್ಟರು.
ಮಾಜಿ ಮೇಯರ್ ಸುಧೀರ್ರ್ ಶೆಟ್ಟಿ ಕಣ್ಣೂರು, ಮಾಜಿ ಕಾರ್ಪೊರೇಟರ್ ವಿಜಯಕುಮಾರ್ ಶೆಟ್ಟಿ, ಪುತ್ತೂರು ಮಾಜಿ ಮಂಡಲ ಅಧ್ಯಕ್ಷ ಸಹಜ ರಾಧಾಕೃಷ್ಣ ಆಳ್ವ, ಸುಳ್ಯ ಮಂಡಲ ಮಾಜಿ ಅಧ್ಯಕ್ಷ ಹರೀಶ್ ಕಾಂಜಿಪಿಳಿ, ಬಿಜೆಪಿ ಮುಖಂಡರಾದ ರವೀಶ್ ಶೆಟ್ಟಿ ಕಾರ್ಕಳ, ಸುದರ್ಶನ ಬಜ, ಮಾಧವ ಮಾವೆ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು, ಪುರುಷೋತ್ತಮ ಶೆಟ್ಟಿ ವಾಮದಪದವು, ಗಣೇಶ್ ರೈ ಮಾಣಿ, ದಿನೇಶ್ ಶೆಟ್ಟಿ ದಂಬೆದಾರ್, ಅಜಿತ್ ಶೆಟ್ಟಿ ಕಾರಿಂಜ, ಹರೀಶ್ ಕುತ್ತಾರ್, ರವಿರಾಮ ರೈ, ನಾಗೇಶ್ ಶೆಟ್ಟಿ ಕೊಡಂಗಾಯಿ, ಸತೀಶ್ ಶೆಟ್ಟಿ ಮದ್ವ ಅಜಿತ್ ಪುತ್ತೂರು, ರಂಜಿತ್, ಸುಕೇಶ್ ಚೌಟ,ಕಾರ್ತಿಕ್ ಬಲ್ಲಾಳ್, ಶ್ಯಾಮಣ್ಣ ಶೆಟ್ಟಿ, ಹರೀಶ್ ರಾಯಿ, ಅರುಣ್ ಕುವೆಲ್ಲೋ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ನಳಿನ್ ಕುಮಾರ್ ಕಟೀಲ್ ಸುಹಾಸ್ ಅಂತ್ಯಕ್ರಿಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು


















































































































































































