ಮಂಗಳೂರು: ಕನ್ನಡ ಪತ್ರಿಕೋದ್ಯಮಕ್ಕೆ ಸಲ್ಲಿಸುವ ಶ್ರೇಷ್ಠ ಸೇವೆಗಾಗಿ ಕರ್ನಾಟಕ, ಕೇರಳ ಹಾಗೂ ಮುಂಬೈಯ ಪತ್ರಕರ್ತರಿಗೆ ಕಾಸರಗೋಡು ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ ನೀಡಲ್ಪಡುವ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭವು ನಿನ್ನೆ ಕಾಸರಗೋಡಿನಲ್ಲಿ ನಡೆದಿದ್ದು, ತನಿಖಾ ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಕಾಲ ಸಲ್ಲಿಸಿದ ವಿಶಿಷ್ಟ ಸೇವೆಗಾಗಿ ಮಂಗಳೂರಿನ ಪತ್ರಕರ್ತ ಇಕ್ಬಾಲ್ ಕುತ್ತಾರ್ ಈ ಪ್ರಶಸ್ತಿಗೆ ಭಾಜನರಾಗಿ ಸದ್ರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.
ಮೂರು ರಾಜ್ಯಗಳ ಅರ್ಹ 21 ಪತ್ರಕರ್ತರು ಸದ್ರಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಪೈಕಿ ‘ಎನ್ಕೌಂಟರ್’ ಪತ್ರಿಕೆಯ ಸಂಪಾದಕರಾದ ಇಕ್ಬಾಲ್ ಕುತ್ತಾರ್ ರಾಜ್ಯದಲ್ಲಿ ತನಿಖಾ ವರದಿಗಾರಿಕೆಗೆ ಕಳೆದ 3 ದಶಕಗಳ ಕಾಲ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು.

ಎಡನೀರು ಮಠದ ಶ್ರೀಗಳಾದ ಸಚ್ಚಿದಾನಂದ ಭಾರತಿ ಶ್ರೀಪಾದಂಗಳ್ ಅವರ ಆಶೀರ್ವಚನದೊಂದಿಗೆ ಪ್ರಾರಂಭಗೊಂಡ ಸಮಾರಂಭದಲ್ಲಿ ಕರ್ನಾಟಕ ಸರಕಾರದ ಸಚಿವರಾದ ಶ್ರೀ ಎನ್. ಚೆಲುವರಾಯ ಸ್ವಾಮಿ ಪ್ರಶಸ್ತಿ ಪ್ರದಾನಿಸಿದ್ದು, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಕೆ. ಕೆ. ಶೆಟ್ಟಿ, ಸೋಮಣ್ಣ ಬೇವಿನ ಮರದ, ಟಿ. ಎಂ. ಶಹೀದ್, ಕನ್ಯಾನ ಸದಾಶಿವ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕಾಸರಗೋಡು ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಯ್ಕಾಪು ಪ್ರಸ್ತಾವನೆ ಮಾಡಿದ ಕಾರ್ಯಕ್ರಮವನ್ನು ರಫೀಕ್ ಮಾಸ್ಟರ್ ನಿರ್ವಹಿಸಿದರು.






























































































































































































