ಬೋಂದೆಲ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದಲ್ಲಿ ಸಂತ ಲಾರೆನ್ಸರ ಹಬ್ಬದ ನೊವೆನಾ ಆರಂಭ. ಹಬ್ಬದ ವಿಷಯ: “ನಾನು ನಿಮ್ಮನ್ನು ಪ್ರೀತಿಸಿದಂತೆಯೇ ಒಬ್ಬರನ್ನೊಬ್ಬರು ಪ್ರೀತಿಸೋಣ” (ಯೋಹಾನ 15:12). ಸಂದೇಶ: “ಸಂತ ಲಾರೆನ್ಸರಂತೆ ನಾವು ಬಡವರನ್ನು ಪ್ರೀತಿಸೋಣ ಮತ್ತು ಸೇವೆ ಮಾಡೋಣ.”

97.8K Views 2w ago

ಮಂಗಳೂರು: ಮಂಗಳೂರಿನ ಬೋಂದೆಲ್ ಸಂತ ಲಾರೆನ್ಸ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದ ವಾರ್ಷಿಕ ಹಬ್ಬದ ಆಚರಣೆಗಳು ಮಂಗಳೂರು ನಗರ ವಲಯದ ವಿಕಾರ್ ವಾರ್ ಹಾಗೂ ಪಾಲ್ದನೆ ಸಂತ ತೆರೆಸಾ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರ ವಿಧ್ಯುಕ್ತ ಧ್ವಜಾರೋಹಣದೊಂದಿಗೆ ಪ್ರಾರಂಭವಾಯಿತು. ಅವರನ್ನು ಬೋಂದೆಲ್ ಚರ್ಚ್ ಮತ್ತು ಪುಣ್ಯ ಕ್ಷೇತ್ರದ ರೆಕ್ಟರ್ ವಂದನೀಯ ಫಾ. ಬೇಸಿಲ್ ವಾಸ್ ಅವರು ಪುಷ್ಪಗುಚ್ಛ ಮತ್ತು ಶಾಲು ಹೊದಿಸಿ ಆತ್ಮೀಯವಾಗಿ ಸ್ವಾಗತಿಸಿದರು.
ತಮ್ಮ ಸಂದೇಶದಲ್ಲಿ, ಫಾ.ರಿಚಾರ್ಡ್ ಕುವೆಲ್ಲೊ ಅವರು ಹಬ್ಬದ ಶುಭಾಶಯಗಳನ್ನು ಸಲ್ಲಿಸಿದರು ಮತ್ತು ಸಂತ ಲಾರೆನ್ಸರಂತೆ ನಾವು ಬಡವರನ್ನು ಪ್ರೀತಿಸೋಣ ಮತ್ತು ಸೇವೆ ಮಾಡೋಣ” ಎಂಬ ಹಬ್ಬದ ಸಂದೇಶವನ್ನು ನೀಡಿದರು. ಬಡವರನ್ನು ಪ್ರೀತಿಸುವುದು ಮತ್ತು ಸೇವೆ ಮಾಡುವುದು ಪ್ರತಿಯೊಬ್ಬ ಕ್ರೈಸ್ತನ ಧ್ಯೇಯ ಮತ್ತು ಕ್ಯಾಥೊಲಿಕರ ನಂಬಿಕೆಯ ಅತ್ಯಗತ್ಯ ಅಭಿವ್ಯಕ್ತಿ ಯಾಗಿದೆ ಎಂದು ಹೇಳಿದರು.
ಸ್ವಾಗತಿಸಿದ ವಂದನೀಯ ಫಾ. ಬೇಸಿಲ್ ವಾಸ್ ಅವರು ಒಂಬತ್ತು ದಿನಗಳ ನೊವೆನಾದಲ್ಲಿ ಭಾಗವಹಿಸಲು ಮತ್ತು ಸಂತ ಲಾರೆನ್ಸ್ ಅವರ ಆಶೀರ್ವಾದವನ್ನು ಪಡೆಯಲು ಎಲ್ಲರನ್ನೂ ಆಹ್ವಾನಿಸಿದರು. ಹಬ್ಬದ ವಿಷಯವನ್ನು ಉಲ್ಲೇಖಿಸಿ, ಈ ವರ್ಷ ರೋಗಿಗಳು ಮತ್ತು ಅಶಕ್ತರಿಗೆ ವೈದ್ಯಕೀಯ ನಿಧಿ ಆರಂಭಿಸಲು ಉದ್ದೇಶಿಸಿದ್ದು, ಈ ಯೋಜನೆಗೆ ಜನರು ಬೆಂಬಲಿಸ ಬೇಕೆಂದರು.
ಸಮಾರಂಭದಲ್ಲಿ ಸಹಾಯಕ ಧರ್ಮಗುರು ವಂದನೀಯ ಫಾ. ಲಾರೆನ್ಸ್ ಕುಟಿನ್ಹಾ; ಸೇಂಟ್ ಲಾರೆನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂದನೀಯ ಫಾ. ಪೀಟರ್ ಗೊನ್ಸಾಲ್ವಿಸ್, ವಂದನೀಯ ಫಾ. ಬಿಜು ಬೆತ್ರಮ್, ವಂದನೀಯ ಫಾ. ಜೇಮ್ಸ್ ಬ್ರಿಟ್ಟೊ, ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಜಾನ್ ಡಿ’ಸಿಲ್ವಾ; ಕಾರ್ಯದರ್ಶಿ ಅಲ್ವಿನ್ ಸಲ್ಡಾನ್ಹಾ; ಸರ್ವ ಆಯೋಗಗಳ ಸಂಯೋಜಕಿ ಅವಿತಾ ಮಸ್ಕರೇನ್ಹಸ್; ಪುಣ್ಯಕ್ಷೇತ್ರದ ಸಂಚಾಲಕ ಜೇಸನ್ ಫೆರ್ನಾಂಡಿಸ್; ಮತ್ತು ಮಾಧ್ಯಮ ಸಂಚಾಲಕಿ ಮೀನಾ ಬಾರ್ಬೋಜಾ, ಮಾಧ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಿಯಾ ವೇಗಸ್ ನಿರೂಪಿಸಿದರು.
ಧ್ವಜಾರೋಹಣದ ಬಳಿಕ ವಂದನೀಯ ಫಾ . ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಅವರು ಪರಮ ಪ್ರಸಾದದ ಆರಾಧನೆಯನ್ನು ಮುನ್ನಡೆಸಿದರು ಮತ್ತು ಎಲ್ಲಾ ಭಕ್ತರ ಇಷ್ಟಾರ್ಥಗಳಿಗಾಗಿ ಪ್ರಾರ್ಥಿಸಿದರು. ಬಳಿಕ ಅವರು ಮೊದಲ ದಿನದ ನೊವೆನಾ ಪ್ರಾರ್ಥನೆಯನ್ನು ನಡೆಸಿಕೊಟ್ಟರು. “ಮಕ್ಕಳು ದೇವರ ರಾಜ್ಯದ ಫಲಗಳು” ಎಂಬ ವಿಷಯದ ಕುರಿತು ಪ್ರಬೋಧನೆ ನೀಡಿದ ಅವರು ಪೋಷಕರು ತಮ್ಮ ಮಕ್ಕಳನ್ನು ನಿಯಮಿತವಾಗಿ ಚರ್ಚ್‌ಗೆ ಕರೆತರ ಬೇಕು. ಇದರಿಂದ ಅವರು ದೇವರ ಪ್ರೀತಿ ಮತ್ತು ಉಪಸ್ಥಿತಿಯನ್ನು ಅನುಭವಿಸ ಬಹುದು. ಮಕ್ಕಳು ದೇವರಿಂದ ಬಂದ ಅಮೂಲ್ಯ ಉಡುಗೊರೆ. ಅವರನ್ನು ನಂಬಿಕೆ ಮತ್ತು ಕ್ರಿಶ್ಚಿಯನ್ ಮೌಲ್ಯಗಳಲ್ಲಿ ಬೆಳೆಸಬೇಕು ಎಂದು ಅವರು ಪೋಷಕರಿಗೆ ನೆನಪಿಸಿದರು.
ಪಾಲ್ದನೆ ಚರ್ಚ್ ನ ಲೀಝಿ ಫೆರ್ನಾಂಡಿಸ್ ನೇತೃತ್ವದ ಗಾಯನ ತಂಡವು ಪರಮ ಪ್ರಸಾದದ ಆರಾಧನೆ ಮತ್ತು ಬಲಿಪೂಜೆಯ ಸಂದರ್ಭ ಭಕ್ತಿ ಗಾಯನದೊಂದಿಗೆ ಸಹಕರಿಸಿತು.

Read More News

ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ನಮ್ಮ ಟಿವಿ ಚಾನೆಲ್ ನ ಆಡಳಿತ ನಿರ್ದೇಶಕ ಡಾ. ಶಿವಶರಣ್ ಶೆಟ್ಟಿ ಮತ್ತು ಅವರ ಸಹೋದರರಾದ ದೇವಿಚರಣ್ ಶೆಟ್ಟಿ, ಹರಿಕಿಶನ್ ಶೆಟ್ಟಿ ಯವರ ಮಾತೃಶ್ರೀ,ಶಿಕ್ಷಣ ಇಲಾಖೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕಿ ಹಾಗೂ ಡಾ. ಎ. ಸದಾನಂದ ಶೆಟ್ಟಿಯವರ ಸಹೋದರಿ ಎಂ. ರತ್ನಕಾಂತಿ ಶೆಟ್ಟಿ ಅವರಿಗೆ ಗಣ್ಯರಿಂದ ಶ್ರದ್ದಾಂಜಲಿ

ಕಸ್ತೂರಿ ರಂಗನ್ ವರದಿ ಆಧಾರಿತ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶಗಳ 7 ನೇ ಕರಡು ಅಧಿಸೂಚನೆ ಬಗ್ಗೆ ಸದನದ ಗಮನ ಸೆಳೆದ ಶಾಸಕ ಗಂಟಿಹೊಳೆ. ಗ್ರಾಮೀಣ ಜನರ ಆತಂಕ ನಿವಾರಣೆ ಹಾಗೂ ಜೀವನೋಪಾಯಗಳಿಗೆ ಆಗಬಹುದಾದ ಸಂಭವನಿಯ ಅಪಾಯಗಳ ಬಗ್ಗೆ ಪ್ರಸ್ತಾಪಿಸಿದ ಬೈಂದೂರು ಶಾಸಕರು. ಜನರಿಗೆ ಸ್ಪಷ್ಟ ಮಾಹಿತಿ ಹಾಗೂ ಅಧಿಸೂಚನೆ ವಿರುದ್ಧ ಸ್ಪಷ್ಟ ವಾದ ಮಂಡನೆ ಸಲುವಾಗಿ ಒಂದು ಬಾರಿ ಅಧಿಸೂಚಿತ ಗ್ರಾಮಗಳನ್ನು ಭೌತಿಕ ಸರ್ವೇಗೆ ಒಳಪಡಿಸಲು ಆಗ್ರಹ. 7 ನೇ ಕರಡು ಅಧಿಸೂಚನೆ ಸರಕಾರದ ಹಂತದಲ್ಲಿ ಪರಿಶೀಲನೆಯಲ್ಲಿದೆ ಎಂದ ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಸಚಿವರು.

Scroll to Top