ಮಂಗಳೂರು: ದೀರ್ಘಾವಧಿ ಮಧುಮೇಹ ಮಾರಕ ಕಾಯಿಲೆಯು ದೇಹದ ಆರೋಗ್ಯ ಮತ್ತು ನಾನಾ ಅಂಗಾಂಗಳ ಮೇಲೆ ಕಠಿಣ ದುಷ್ಪರಿಣಾಮ ಬೀರಿದೆ. ಕಾಯಿಲೆಯ ಕುರಿತು ಮಾಹಿತಿ, ಜಾಗೃತಿ, ಮುಂಜಾಗ್ರತೆ, ಉಪಶಮನ ಚಿಕಿತ್ಸೋಪಾಯ ಕ್ರಮದ ಬಗ್ಗೆ ಜ್ಞಾನದ ಅವಶ್ಯಕತೆ ಇದೆ ಎಂದು ಕರ್ನಾಟಕ ವೈದ್ಯಕೀಯ ಮಂಡಳಿಯ ವೀಕ್ಷಕ ಪ್ರತಿನಿಧಿ ಡಾ.ಮಹಮ್ಮದ್ ಇಸ್ಮಾಯಿಲ್ ಹೇಳಿದರು.
ಅವರು ಕಣಚೂರು ವೈದ್ಯಕೀಯ ಕಾಲೇಜಿನ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಶನಿವಾರ ಸಂಸ್ಥೆಯ ಸಭಾಂಗಣದಲ್ಲಿ ಜರುಗಿದ ವಿಶ್ವ ಮಧುಮೇಹ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ವಿಶ್ವದಲ್ಲಿ ಇನಸುಲಿನ್ ಔಷಧದ ಆವಿಷ್ಕಾರ ಈ ಕಾಯಿಲೆಗೆ ವರದಾನ ಎಂದರು.

ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧ್ಯಕ್ಷ ಡಾ. ಯು.ಕೆ. ಮೋನು ಈ ವೈದ್ಯಕೀಯ ಕಾರ್ಯಾಗಾರವನ್ನು ಉದ್ಘಾಟಿಸಿದರು. ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ವೈದ್ಯಕೀಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ದೇವದಾಸ್ ರೈ ಅವರು ಮಧುಮೇಹ ಕಾಯಿಲೆಯು ಒಂದು ಆಧುನಿಕ ಜೀವನ ಶೈಲಿ ಪದ್ಧತಿಯ ಕಾಯಿಲೆ ಆಗಿದ್ದು, ಕೆಲಸ, ಕಾರ್ಯಗಳ ಒತ್ತಡ, ಬೊಜ್ಜು, ಅಧಿಕ ಸಕ್ಕರೆ ಅಂಶದ ಆಹಾರ ಸೇವನೆ ಮತ್ತು ವ್ಯಾಯಾಮ ರಹಿತ ಜೀವನ ಪ್ರಮುಖ ಕಾರಣವೆಂದರು.
ಈ ಕಾರ್ಯಾಗಾರದಲ್ಲಿ ಖ್ಯಾತ ವೈದ್ಯಕೀಯ ಶಾಸ್ತç ತಜ್ಞರು ಹಾಗೂ ಮಧುಮೇಹ ಕಾಯಿಲೆಯ ತಜ್ಞರಾದ ಡಾ. ಸೌರಭ ಭಟ್, ಡಾ.ಪ್ರಶಾಂತ್ ಹುಬ್ಬಳ್ಳಿ, ಡಾ.ಸುದೀಪ್ ಕೆ., ಡಾ.ಅಖಿಲಾ ಭಂಡಾರ್ಕರ್, ಡಾ.ವಿಜಯ್ ಕುಮಾರ್, ಡಾ.ಎಂ. ಪ್ರಜ್ಞ, ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾಯಿಲೆಯ ಕಾರಣಗಳು ಮತ್ತು ಲಕ್ಷಣಗಳು, ಉಪಶಮನ ಮತ್ತು ನಿರ್ವಹಣೆ ಬಗ್ಗೆ ಅತಿಥಿ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಡಾ.ದೇವದಾಸ್ ರೈಯವರು ಮಧುಮೇಹ ಕಾಯಿಲೆಯ ಬಗ್ಗೆ ರಸಪ್ರಶ್ನೆ ಸ್ಪರ್ಧಾಕೂಟವನ್ನು ಆಯೋಜಿಸಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸ್ಥೆಯ ಪ್ರಿನ್ಸಿಪಾಲ್ ಡಾ. ಶಹನವಾಜ್ ಮನಿಪಾಡಿ, ಆಡಳಿತ ಅಧಿಕಾರಿ ಡಾ.ರೋಹನ್ ಮೊನಿಸ್ ಉಪಸ್ಥಿತರಿದ್ದರು.
ಈ ವೈದ್ಯಕೀಯ ಕಾರ್ಯಾಗಾರದಲ್ಲಿ ಸುಮಾರು 190 ವೈದ್ಯರು, ವೈದ್ಯಕೀಯ ಶಿಕ್ಷಣ, ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಡಾ. ಶ್ರೀಕಾಂತ್ ಹೆಗ್ಡೆ ವಂದಿಸಿದರು. ಡಾ.ಲಕ್ಷಿತಾ ಸುರೇಶ್ ಮತ್ತು ಡಾ.ಅಬ್ದುಲ್ ಫರೂಖಿ ಕಾರ್ಯಕ್ರಮ ನಿರೂಪಿಸಿದರು.





















































































































































































