ಮಂಗಳೂರು: ರಾಷ್ಟ್ರೀಯ ಹೆದ್ದಾರಿ 169ರ ಕುಲಶೇಖರದಿಂದ ಸರಿಪಳ್ಳವಾಗಿ ಕನ್ನಗುಡ್ಡೆ-ನೂಜಿ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದು ಸಾರ್ವಜನಿಕರಿಗೆ ಬಹುಸಮಸ್ಯೆಯಾಗಿ ಪರಿಣಮಿಸಿದೆ.


ರಾ.ಹೆ.ಯಿಂದ ನೂಜಿಗೆ ಸುಮಾರು 3 ಕಿ.ಮೀ. ಇದೆ. ಇಲ್ಲಿನ 4ಡಿ ಬಸ್ ತಿರುವು ಪಡೆಯುವ ಸರಿಪಳ್ಳ ಭಾಗದಿಂದ ನೂಜಿವರೆಗೆ ಸುಮಾರು 500 ಮೀ. ಕಾಂಕ್ರೀಟ್ ರಸ್ತೆ ಕೆಲಸ ಬಾಕಿ ಇದೆ. ಕಳೆದ ಆರು ತಿಂಗಳಿನಿಂದ ಕಾಮಗಾರಿ ಆರಂಭಗೊಂಡಿದ್ದು, ನಿಧಾನಗತಿಯಲ್ಲಿ ಸಾಗುತ್ತಿದೆ. ಮಳೆಗಾಲವೂ ಆರಂಭಗೊಳ್ಳುತ್ತಿದ್ದು, ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ಸ್ಥಳೀಯರು.
ಕಾಮಗಾರಿ ನಿಟ್ಟಿನಲ್ಲಿ ರಸ್ತೆಯನ್ನು ಅಗೆದಿದ್ದು, ಒಂದು ಪಾರ್ಶ್ಚದಲ್ಲಿ ಕಾಂಕ್ರೀಟ್ ಅಳವಡಿಸಲಾಗಿದೆ. ರಸ್ತೆಯ ಅಲ್ಲಲ್ಲಿ ಎತ್ತರ-ತಗ್ಗು ಇದೆ. ವಿದ್ಯುತ್ ಕಂಬ ರಸ್ತೆ ಮಧ್ಯ ಭಾಗದಲ್ಲಿದ್ದು ಅಪಾಯ ಸೂಚಿಸುತ್ತಿದೆ. ಇಲ್ಲಿನ ಮನೆಗಳಿಗೆ ನಿರ್ಮಿಸಲು ಉದ್ದೇಶಿಸಿದ ತಡೆಗೋಡೆ ಅರ್ಧದಲ್ಲೇ ಬಾಕಿಯಾಗಿದೆ. ಪ್ರತೀ ದಿನ ಅನೇಕ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಮಳೆ ಬಂದರೆ ಈ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟವಾಗುವ ಸಾಧ್ಯತೆ ಇದೆ. ಮನೆಗಳಿಗೆ ಸಂಪರ್ಕ ಪಡೆಯುವ ರಸ್ತೆಗಳೂ ಬಂದ್ ಆಗಿದೆ.

ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಪ್ರತಿಕ್ರಿಯಿಸಿ ಈ ರಸ್ತೆಯ ಕಾಮಗಾರಿಗೆ ವಿಸ್ತರಣೆ ನಡೆಸುವ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಸ್ಥಳೀಯರ ಜತೆ ಅನೇಕ ಬಾರಿ ಮಾತುಕತೆ ನಡೆಸಲಾಗಿದೆ. ಪಾಲಿಕೆ ಸದ್ಯ ಆಡಳಿತಾಧಿಕಾರಿ ಆಡಳಿತದಲ್ಲಿದೆ. ಅನುದಾನ ಹೊಂದಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಬಂದ Pwd ಅನುದಾನ ಸ್ಥಗಿತಗೊಳಿಸಬಾರದು ಎಂದು ಸಚಿವರಿಗೆ ಪತ್ರ ನೀಡಿದ್ದೇನೆ. ಅವರು ಒಪ್ಪಿಗೆ ಸೂಚಿಸಿದ್ದಾರೆ. ಈ ಕಾಮಗಾರಿ ಪೂರ್ಣಗೊಳಿಸಲು ಇನ್ನಷ್ಟು ಅನುದಾನದ ಅಗತ್ಯವಿದೆ ಎನ್ನುತ್ತಾರೆ.
ಕೃಪೆ:ಉದಯವಾಣಿ








































































































































































































