ಪ್ರತ್ಯಕ್ಷ ವರದಿ. ಮಂಗಳೂರು -ಕನ್ನಗುಡ್ಡೆ ನೂಜಿ ಸರಿಪಲ್ಲ ಹೈವೇ ಕ್ರಾಸಿಂಗ್ ಕಾಮಗಾರಿ ಇನ್ನೂ ಅಪೂರ್ಣಗೊಂಡಿದೆ. ಚುನಾವಣೆ ವೇಳೆ ತ್ವರಿತಗತಿಯಲ್ಲಿ ಸಾಗುತ್ತಿದ್ದ ರಸ್ತೆ ಕಾಮಗಾರಿ, ಬಳಿಕ ಅರ್ಧಕ್ಕೆ ನಿಂತಿದೆ. ರಸ್ತೆ ಅಗೆದು ಜಲ್ಲಿ ಹಾಕಿಸಿ ಹೋದ ಗುತ್ತಿಗೆದಾರ ನಂತರ ಈ ಕಡೆ ಮರಳಿಲ್ಲ. ಸ್ಥಳೀಯ ಜನಪ್ರತಿನಿಧಿಗಳು ಗುತ್ತಿಗೆದಾರನಿಗೆ, ಇಂಜಿನಿಯರ್ಗೆ ಫೋನ್ ಮಾಡಿದರೆ ಸ್ವೀಕರಿಸುತ್ತಿಲ್ಲ, ಇದರಿಂದ ನಿವಾಸಿಗಳಿಗೆ ಸಂಚಾರ ಸಂಕಷ್ಟ ಎದುರಾಗಿದ್ದು, ಈ ರಸ್ತೆಯಲ್ಲಿ ಯಾವುದಾದರೂ ದೊಡ್ಡ ವಾಹನ ಬಂದರೆ ಜನಸಾಮಾನ್ಯರೂ ಪಕ್ಕದ ಚರಂಡಿಗೆ ಇಳಿದು ನಿಲ್ಲುವ ಪರಿಸ್ಥಿತಿ ಎದುರಾಗಿದೆ.
ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನಗಳು ಇಲ್ಲಿ ಸಂಚರಿಸುವುದೇ ಒಂದು ದೊಡ್ಡ ಸವಾಲಾಗಿದೆ. ಬೈಕ್ ಸವಾರರು ಸ್ವಲ್ಪ ನಿರ್ಲಕ್ಷ್ಯ ಮಾಡಿದರೆ ಆಸ್ಪತ್ರೆ ಪಕ್ಕಾ ಎನ್ನುವಂತಿದೆ.ರಸ್ತೆಗಳ ತುಂಬಾ ತಗ್ಗು ದಿಣ್ಣೆಗಳು, ರಸ್ತೆಯಲ್ಲಿ ಗುಂಡಿಗಳಿವೆಯೋ, ಗುಂಡಿಯಲ್ಲಿಯೇ ರಸ್ತೆಗಳಿವೆಯೋ ಎನ್ನುವ ಅನುಮಾನ ಕಾಡುತ್ತದೆ.


ಪ್ರತಿನಿತ್ಯ ಈ ದಾರಿಯಲ್ಲಿ ನೂರಾರು ವಾಹನಗಳು ಸಂಚಾರ ನಡೆಸುತ್ತವೆ,ಆದರೂ ರಸ್ತೆ ಕಾಮಗಾರಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲಕರವಾದಂತಿಲ್ಲ. ಕಾಮಗಾರಿ ಆರಂಭವಾದರೂ ಸಹ ಇನ್ನೂ ಪೂರ್ಣಗೊಂಡಿಲ್ಲ. ಜನರು ವಾಹನ ಬಿಟ್ಟು ವಿಮಾನದಲ್ಲಿ ಸಂಚಾರ ನಡೆಸಬೇಕೆ? ಎಂದು ಜನ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ. ಈ ರಸ್ತೆಯಲ್ಲಿ ಘಾಟ್ ಇದೆ. ಇಲ್ಲಿ ರಸ್ತೆ ಹಾಗೂ ತಿರುವುಗಳು ಹೊಸ ಸೇತುವೆ ನಿರ್ಮಾಣ, ಕಾರ್ಯ ನಡೆಯದೆ ಇರುವುದರಿಂದ ಮಂಗಳೂರಿನ ಕಡೆಗೆ ವಾಹನ ಕಳಿಸಿದರೆ ಮುಂಗಡವಾಗಿ ಟಯರ್ ಬುಕ್ ಮಾಡಿ ಇಡಬೇಕಾದ ಪರಿಸ್ಥಿತಿ ಇದೆ” ಎಂದು ಸ್ಥಳೀಯರು ರಸ್ತೆಯ ಸ್ಥಿತಿಯ ವಿವರ ನೀಡಿದ್ದಾರೆ.ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಚಿವರುಗಳು ದಯಮಾಡಿ ಆ ರಸ್ತೆಯಲ್ಲಿ ತಮ್ಮ (ಖಾಸಗಿ ವಾಹನ) ವಾಹನದಲ್ಲಿ ಸಂಚಾರ ನಡೆಸಿ ರಸ್ತೆಯನ್ನು ಒಮ್ಮೆ ನೋಡಿ ಬರಲಿ. ರಸ್ತೆ ಬಳಕೆ ಮಾಡುವವರ ಮೇಲೆ ಸ್ವಲ್ಪ ಆದರೂ ಇವರಿಗೆ ಕಳಕಳಿ ಇರಲಿ. ರಸ್ತೆ ಅವ್ಯವಸ್ಥೆ ಬಗ್ಗೆ ಏಕೆ ಅವರು ಮಾತನಾಡುತ್ತಿಲ್ಲ” ಎಂದು ಪ್ರಶ್ನೆಮಾಡಿದ್ದಾರೆ.ಈಗ ಬಾಕಿ ಇರುವ ಕಾಮಗಾರಿಗಳನ್ನು ಯಾವಾಗ ಪೂರ್ಣ ಮಾಡುತ್ತೀರಿ. ಹೊಸ ರಸ್ತೆ ನಿರ್ಮಾಣ ಮಾಡುವ ಬದಲು ಈಗಿರುವ ರಸ್ತೆಯನ್ನು ವಾಹನ ಸವಾರರಿಗೆ ಅನುಕೂಲವಾಗುವಂತೆ ಮಾಡಿ ಎಂದು ಒತ್ತಾಯಿಸಲಾಗಿದೆ.ಕ್ಷೇತ್ರದಲ್ಲಿ ಸಾವಿರಾರು ಕೋಟಿ ಅನುದಾನದ ಕಾಮಗಾರಿಯಾಗಿದೆ ಎನ್ನುವ ಶಾಸಕರು ಇಂತಹ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಹದಗೆಟ್ಟಿರುವ ಬಗ್ಗೆ ತಕ್ಷಣ ಸ್ಪಂದಿಸಿ ಜನರ ಸಮಸ್ಯೆಗೆ ಉತ್ತರ ನೀಡಬೇಕಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬೇಸತ್ತು ಗ್ರಾಮಸ್ಥರೇ ನಾವೇ ರಸ್ತೆ ದುರಸ್ಥಿಗೆ ಮುಂದಾಗಬೇಕೋ ಎನ್ನುತ್ತಿದ್ದಾರೆ. ಇನ್ನಾದರೂ ಸರಕಾರ ಹಾಗೂ ಮುಖ್ಯ ಜನಪ್ರತಿನಿಧಿಗಳು ಇದರ ಕಾಮಗಾರಿ ಪೂರ್ಣಗೊಳ್ಳುವಂತೆ ಸಹಕರಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಮತ ಜಾತಿ ಭೇದ ಪಕ್ಷ ಸಂಘಟನೆ ರಾಜಕೀಯ ಮಾಡದೆ ಈ ಕಾಮಗಾರಿಯ ಪ್ರಗತಿಗೆ ನಿಷ್ಪಕ್ಷಪಾತವಾಗಿ ಸಹಕರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.








































































































































































































