ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ಅಕ್ಟೋಬರ್ 2ರಂದು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ “ಗಲಾಟೆ ಸಂಸಾರ” ಧಾರಾವಾಹಿಯ ಶೀರ್ಷಿಕೆ ಹಾಡು ಬಿಡುಗಡೆ

ಮೂಲ್ಕಿ : ಶ್ರೀಗುರುನಮನಸಂತೃಪ್ತಿ ಸಿನಿಮಾ ನಿರ್ಮಾಣ ಸಂಸ್ಥೆಯಿಂದ ನಿರ್ಮಿಸಿರುವ ಬಹು ನಿರೀಕ್ಷಿತ “ಗಲಾಟೆ ಸಂಸಾರ” ಕನ್ನಡ ಧಾರಾವಾಹಿಯ ಶೀರ್ಷಿಕೆ ಹಾಡನ್ನು ಅಕ್ಟೋಬರ್ 2ರಂದು ಸಂಜೆ 4ಕ್ಕೆ ಹಳೆಯಂಗಡಿ ಬಳಿಯ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಅನಾವರಣಗೊಳ್ಳಲಿದೆ.ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿರುವ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಪ್ರಾಯೋಜಕತ್ವದಲ್ಲಿ ಈ ಧಾರಾವಾಹಿ ನಿರ್ಮಾಣವಾಗಿದ್ದು ಜಿಲ್ಲಾ, ರಾಜ್ಯ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತವಾಗಿರುವ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ವಿಶೇಷ ಸಹಕಾರದಲ್ಲಿ “ಗಲಾಟೆ ಸಂಸಾರ”ದ ಶೀರ್ಷಿಕೆ ಹಾಡು ಬಿಡುಗಡೆಗೊಳ್ಳಲಿದೆ.ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ವಸಂತ ಬೆರ್ನಾಡ್ ಅವರು ಶೀರ್ಷಿಕೆ ಹಾಡನ್ನು ಲೋಕಾರ್ಪಣೆಗೊಳಿಸಲಿದ್ದಾರೆ. ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರಾದ ಗುರುರಾಜ್ ಎಸ್. ಪೂಜಾರಿ ಅವರು ಈ ಸಂದರ್ಭದಲ್ಲಿ ಎರಡು ಕುಟುಂಬಗಳಿಗೆ ಪಡಿತರವನ್ನು ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಅರುಣ್‌ಕುಮಾರ್, ಮಂಗಳೂರಿನ ಕುವೆಲ್ಲೋ ಬ್ರದರ್‍ಸ್ ಸಿನಿ ಕ್ರಿಯೇಶನ್ಸ್‌ನ ಲ್ಯಾನ್ಸಿ ಕುವೆಲ್ಲೋ, ಪಡುಪಣಂಬೂರು ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಮೋಹನ್‌ದಾಸ್, ಮಂಗಳೂರಿನ ಕಲಾಭಿ ಸಂಸ್ಥೆಯ ಗೌರವಾಧ್ಯಕ್ಷ ಸುರೇಶ್ ಬಿ. ವರ್ಕಾಡಿ ಅವರು ಭಾಗವಹಿಸಲಿದ್ದಾರೆ ಎಂದು ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ದೀಪಕ್ ಸುವರ್ಣ ಹಾಗೂ ಶ್ರೀಗುರುನಮನಸಂತೃಪ್ತಿ ಸಂಸ್ಥೆಯ ಪಾಲುದಾರ ನರೇಂದ್ರ ಕೆರೆಕಾಡು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.“ಗಲಾಟೆ ಸಂಸಾರ” ಕನ್ನಡ ಧಾರಾವಾಹಿ :ಅಂತಾರಾಷ್ಟ್ರೀಯ ವಾಸ್ತುತಜ್ಞರು, ಆಧ್ಯಾತ್ಮಿಕಗುರುಗಳು, ಜ್ಯೋತಿಷ್ಯರು ಆಗಿರುವ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಆಶೀರ್ವಾದದಿಂದ ನಿರ್ಮಾಣವಾಗಿರುವ “ಗಲಾಟೆ ಸಂಸಾರ” ಧಾರಾವಾಹಿಯನ್ನು ಮೂಲ್ಕಿಯ ನಮನ ಕಮ್ಯುನಿಕೇಶನ್ ಸಂಸ್ಥೆ ನಿರ್ಮಾಣ ಮಾಡಿದ್ದು, ಪ್ರಧಾನ ಪ್ರಾಯೋಜಕರಾಗಿ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯು ಕೈ ಜೋಡಿಸಿದೆ. ಕಥೆ-ಸಂಭಾಷಣೆಯನ್ನು ನರೇಂದ್ರ ಕೆರೆಕಾಡು ರಚಿಸಿದ್ದು, ಚಿತ್ರಕಥೆ, ಸಾಹಿತ್ಯ, ಸಂಕಲನದೊಂದಿಗೆ ದೇವಿಪ್ರಕಾಶ್ ಧಾರಾವಾಹಿಯನ್ನು ನಿರ್ದೇಶಿಸಿದ್ದಾರೆ. ಛಾಯಾಗ್ರಾಹಕರಾಗಿ ಹರೀಶ್ ಪಿ. ಕೋಟ್ಯಾನ್ ಪಡುಪಣಂಬೂರು, ಸಂಗೀತವನ್ನು ಗಗನ್ ಸುವರ್ಣ ಮೂಲ್ಕಿ, ಗಾಯಕರಾಗಿ ಜಿ.ಎಸ್.ದಿನೇಶ್ ಶೀರ್ಷಿಕೆ ಹಾಡನ್ನು ಹಾಡಿದ್ದಾರೆ. ಪಿಆರ್‌ಒ ಆಗಿ ಸೋನು ಕ್ರಿಯೇಶನ್ಸ್‌ನ ರೋಶನ್ ನೆಲ್ಲಿಗುಡ್ಡೆ, ಪ್ರಚಾರದಲ್ಲಿ ಚಿಗುರು ಸಂಸ್ಥೆಯ ರಾಕೇಶ್ ಎಕ್ಕಾರು, ವಿನ್ಯಾಸವನ್ನು ಮೂಲ್ಕಿಯ ಇಂಪ್ರೇಷನ್ ಸಂಸ್ಥೆ ನಿರ್ವಹಿಸಿದೆ. ಕಲಾವಿದರಾಗಿ ಸುರೇಶ್ ವರ್ಕಾಡಿ, ದೇವಿಪ್ರಕಾಶ್, ನರೇಂದ್ರ ಕೆರೆಕಾಡು, ಹರೀಶ್ ಪಿ. ಕೋಟ್ಯಾನ್, ನಯನ ಪಡುಬಿದ್ರಿ, ಸುರೇಶ್ ಶೆಟ್ಟಿಗಾರ್ ಕೆರೆಕಾಡು, ಪೂರ್ಣಿಮಾ ಸುರತ್ಕಲ್, ಕೃತಿಕಾ ಉಲ್ಲಂಜೆ, ನಾಗರಾಜ್ ಪೂಜಾರಿ ಬಪ್ಪನಾಡು, ಧರ್ಮಾನಂದ ಶೆಟ್ಟಿಗಾರ್, ವಿಲ್‌ಫ್ರೇಡ್ ಕೊಲ್ಲೂರು ಮತ್ತಿತರರು ಅಭಿನಯಿಸಿದ್ದಾರೆ.“ನಮನ ಕಾಮಿಡಿ” ಛಾನೆಲ್‌ನ ಮೂಲಕ ಈ ಧಾರಾವಾಹಿ ಅತೀ ಶೀಘ್ರದಲ್ಲಿಯೇ ಪ್ರಸಾರಗೊಳ್ಳಲಿದೆ ಎಂದು ಶ್ರೀಗುರುನಮನಸಂತೃಪ್ತಿ ಸಂಸ್ಥೆಯು ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಅಭಿಯಾನ

ಮಂಗಳೂರು, ಸೆಪ್ಟೆಂಬರ್ 28,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ,, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸ ಹಭಾಗಿತ್ವ ದಲ್ಲಿ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಅಭಿಯಾನ ಅಕ್ಟೋಬರ್ ಒಂದರಂದು ಬೆಳಿಗ್ಗೆ 10 ಗಂಟೆಗೆ ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಲ್ಲಿ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡಾ. ಆನಂದ್ ನೆರವೇರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಆಳ್ವ ವಿದ್ಯಾರ್ಥಿಗಳಿಗೆ ಬಟ್ಟೆ ಬ್ಯಾಗ್ ವಿತರಣೆ ಮಾಡಲಿದ್ದಾರೆ. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಬ್ರಾಯನ್ ಪಿಂಟೋ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾ0ಶುಪಾಲ ಡಾ ಜಗದೀಶ ಬಾಳ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ. ಆರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇ0ದ್ರ ಕುಂದೇಶ್ವರ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ದಕ್ಷಿಣಕ್ಕೆ ಮೀಸಲಿರಿಸಿದ ಕುಡ್ಸೆoಪುನ 78 ಕೋಟಿ ರೂಪಾಯಿ ಹಣವನ್ನು ಬೇರೆಡೆಗೆ ವರ್ಗಾಯಿಸಿದ ಕಾಂಗ್ರೆಸ್ ಸರಕಾರ. ಪರಿಣಾಮ, ಪಾಲಿಕೆ ವ್ಯಾಪ್ತಿಯ 38 ವಾರ್ಡ್ ಗಳ ರಸ್ತೆ, ಡ್ರೈನೇಜ್ ಕಾಮಗಾರಿ ಅಪೂರ್ಣ. ಜೆಪ್ಪು ಕುಡಪಾಡಿ ರಸ್ತೆ ಸ್ಥಿತಿ ಶೋಚನೀಯ. ಇದನ್ನು ಸದನದಲ್ಲಿ ಪ್ರಶ್ನಿಸಿ ನ್ಯಾಯ ದೊರಕಿಸಿ, ಸಮಸ್ಯೆ ಪರಿಹಾರ ಮಾಡುವ ಭರವಸೆ ನೀಡಿದ ಶಾಸಕ ವೇದವ್ಯಾಸ ಕಾಮತ್

ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ. ಬಿ. ಎನ್.ಮಂಗಳೂರು :ಪಾಲಿಕೆಯ 59 ನೇ ಜೆಪ್ಪು ವಾರ್ಡಿನ ಜೆಪ್ಪು ಕುಡುಪಾಡಿಯಲ್ಲಿ ಕಳೆದ ಒಂದು ತಿಂಗಳಿಂದ ಡ್ರೈನೇಜ್ ಕೆಲಸ ನಡೆಯುತ್ತಿದ್ದೂ, ಇಲ್ಲಿನ ಪರಿಸ್ಥಿತಿ ಶೋಚನೀಯವಾಗಿದೆ. ಈ ಬಗ್ಗೆ mp mlas ನ್ಯೂಸ್ ಶಾಸಕ ವೇದವ್ಯಾಸ ಕಾಮತ್ ರಲ್ಲಿ, ಜೆಪ್ಪು ಕುಡಪಾಡಿ ರಸ್ತೆ ಯಾವಾಗ ರಿಪೇರಿಯಾಗಬಹುದೆಂದು ಕೇಳಿದಾಗ, ಕಾಂಗ್ರೆಸ್ ಸರಕಾರದ ದಿವ್ಯ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ. ಕೇವಲ ಜೆಪ್ಪು ಕುಡುಪಾಡಿ ಮಾತ್ರವಲ್ಲ, ಮಂಗಳೂರು ದಕ್ಷಿಣದ 38 ವಾರ್ಡ್ ಗಳ ರಸ್ತೆ ದುರಸ್ತಿ, ಡ್ರೈನೇಜ್ ಕಾಮಗಾರಿಗಳಿಗೆ ಕುಡ್ಸೆoಪ್ ನಲ್ಲಿ ಮೀಸಲಿರಿಸಿದ 78 ಕೋಟಿ ರೂಪಾಯಿ ಹಣವನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಬೇರೆಡೆಗೆ ಡೈವರ್ಟ್ (ವರ್ಗಾಯಿಸಿದೆ)ಮಾಡಿದೆ. ಇದರಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಬಗ್ಗೆ ಸದನದಲ್ಲಿ ಪ್ರಶ್ನಿಸಿ, ಸಮಸ್ಯೆ ಪರಿಹಾರಕ್ಕೆ ಯತ್ನಿಸಿ ಕಾಂಗ್ರೆಸ್ ಸರಕಾರ ಇಲ್ಲಿನ ಜನರಿಗೆ ಮಾಡಿದ ಅನ್ಯಾಯದ ವಿರುದ್ಧ ಪ್ರತಿಭಟಿಸಿ,ನ್ಯಾಯ ದೊರಕಿಸಿ ಕೊಡುವೆಂದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಈ ಬಗ್ಗೆ ಗಮನ ಹರಿಸಬೇಕಾಗಿದೆ. ತನ್ನ ಸರಕಾರ ಮಾಡಿದ ಎಡವಟ್ಟಿಗೆ ಸಮಸ್ಯೆ ತಕ್ಷಣ ಸರಿಪಡಿಸಿ ಮಂಗಳೂರು ದಕ್ಷಿಣಕ್ಕೆ ಸಲ್ಲಬೇಕಾದ 78 ಕೋಟಿ ರೂಪಾಯಿ ಹಣವನ್ನು ವಾಪಾಸ್ ಮಾಡುವಲ್ಲಿ ಸೂಕ್ತ ಕ್ರಮ ಜರುಗಿಸಬೇಕಾದದ್ದು ಅವರ ಆದ್ಯ ಕರ್ತವ್ಯವಾಗಿದೆ. ಇಲ್ಲದಿದ್ದಲ್ಲಿ ಅವರು ಉಸ್ತುವಾರಿ ಸಚಿವರಾಗಿದ್ದು ಏನು ಪ್ರಯೋಜನ? ಜನ ಕಾಂಗ್ರೆಸ್ ಗೆ ಹಿಡಿಶಾಪ ಹಾಕುತ್ತಿದ್ದಾರೆ. ಜನರಿಗೆ 5 ಗ್ಯಾರಂಟಿ ಕೊಟ್ಟು ಅದನ್ನು ಅರ್ಧದಲ್ಲೇ ನಿಲ್ಲಿಸುವ ಹಂತ ತಲುಪಿದ ಕಾಂಗ್ರೆಸ್ ಸರಕಾರ ಅಂಗವಿಕಲರ ಮಾಸಾಶನವನ್ನು ಕಸಿದು ಕೊಂಡಿದೆ. ಇದೀಗ ಮಂಗಳೂರು ದಕ್ಷಿಣಕ್ಕೆ ಮೀಸಲಿರಿಸಿದ 78 ಕೋಟಿ ಹಣವನ್ನು ಬೇರೆ ಕಡೆಗೆ ಡೈವರ್ಟ್ ಮಾಡಿ ಬಹುದೊಡ್ಡ ಅನ್ಯಾಯವೆಸಗಿದೆ. ಇಲ್ಲಿನ ಜನ ಕಾಂಗ್ರೆಸ್ ಗೆ ಹಿಗ್ಗಾ ಮುಗ್ಗಾ ಬೈಯ್ಯುತ್ತಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಬಾವುಟಗುಡ್ಡದಿಂದ ಮಂಗಳಾದೇವಿಗೆ 103 ರೂಪಾಯಿ ಆಟೋ ಚಾರ್ಜ್. ನಗರದಲ್ಲಿ ಹೀಗೂ ಉಂಟೇ?

ವರದಿ : ಡಾ. ಅಶೋಕ್ ಶೆಟ್ಟಿ. ಬಿ.ಎನ್.ಮಂಗಳೂರು: ಮಂಗಳೂರಿನ ಮಹಿಳಾ ಪ್ರಯಾಣಿಕರೊಬ್ಬರು ಬಾವುಟಗುಡ್ಡದ ಬಳಿ ನಿಂತು ಮಂಗಳಾದೇವಿಗೆ ಡ್ರಾಪ್ ಮಾಡಿಯೆಂದು ಎಲೆಕ್ಟ್ರಿಕ್ ಆಟೋಚಾಲಕಿಯೊಬ್ಬರಲ್ಲಿ ಹೇಳಿದಾಗ ಆ ಚಾಲಕಿ ಕಂಕನಾಡಿ -ಮಾರ್ನಮಿಕಟ್ಟೆ ಮಾರ್ಗವಾಗಿ ಆ ಮಹಿಳಾ ಪ್ರಯಾಣಿಕರನ್ನು ತನ್ನ ಆಟೋದಲ್ಲಿ ತಲುಪಿಸಿದರು. ಆಗ ಮೀಟರ್ ಚಾರ್ಜ್ ಬರೋಬ್ಬರಿ 103 ರೂಪಾಯಿ ಆಗಿತ್ತು. ಇಷ್ಟಕ್ಕೂ ಆ ಮಹಿಳಾ ಆಟೋ ಚಾಲಕಿಗೆ ಬಾವುಟಗುಡ್ಡೆಯಿಂದ ಜ್ಯೋತಿ -ಆರ್ ಟಿ ಓ ಮಾರ್ಗವಾಗಿ ಮಂಗಳಾದೇವಿಗೆ ಹೋಗಲು ಗೊತ್ತಿಲ್ಲವೇ?ಹಾಗೆ ಹೋಗಿದ್ದರೆ ಮೀಟರ್ ಚಾರ್ಜ್ 55 ರೂಪಾಯಿ ಆಗುತ್ತಿತ್ತು. ಪಾಪ! ಬಡಪಾಯಿ ಮಹಿಳಾ ಪ್ರಯಾಣಿಕೆ ದುಬಾರಿ ಆಟೋ ಚಾರ್ಜ್ ಕೊಟ್ಟು ಮಂಗಳಾದೇವಿ ತಲುಪಬೇಕಾದ ಪರಿಸ್ಥಿತಿ ಬಂದಿದೆ. ಎಲೆಕ್ಟ್ರಿಕ್ ಆಟೋ ರಿಕ್ಷಾಗಳು ಬಂದ ಮೇಲೆ ಹೊರಗಿನ ಜಿಲ್ಲೆಯವರು ರಾಶಿ ರಾಶಿಯಾಗಿ ಮಂಗಳೂರಿಗೆ ವಕ್ಕರಿಸಿದ್ದು,ಅವರಿಗೆ ಸರಿಯಾಗಿ ಮಂಗಳೂರು ಸಿಟಿಯ ಮಾರ್ಗಗಳ ಅನುಭವವೇ ಇಲ್ಲ. ಇಂತಹವರು ಆಟೋ ಓಡಿಸಿದರೆ ಇದೇ ಪರಿಸ್ಥಿತಿ ಬರುವುದು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಇಂತಹ ಅನನುಭವಿ ಚಾಲಕರ ಪಟ್ಟಿ ತಯಾರಿಸಿ ಸೂಕ್ತ ಕ್ರಮ ಕೈ ಗೊಳ್ಳಿ. ಇಲ್ಲದಿದ್ದಲ್ಲಿ ಮಂಗಳೂರಿನ ಬಡಪಾಯಿ ಪ್ರಯಾಣಿಕರ ಪರಿಸ್ಥಿತಿ ಅಧೋಗತಿಯಾಗುವ ಅಪಾಯವಿದೆ.

ಪ್ರಾದೇಶಿಕ ವಾರ್ತೆಗಳು

DMart -22 anniversary gift ಹೆಸರಲ್ಲಿ ಫೇಕ್ ಲಿಂಕ್.

ವರದಿ: ಡಾ. ಅಶೋಕ್ ಶೆಟ್ಟಿ ಬಿ. ಎನ್.ಮಂಗಳೂರು: DMart -22 anniversary gift ಹೆಸರಲ್ಲಿ ಲಿಂಕ್ ವೊಂದು ನಿಮ್ಮ ಮೊಬೈಲ್ ಗೆ ಬರುತ್ತದೆ. ಅದನ್ನು ಒತ್ತಿದರೆ 4 ಆಯ್ಕೆ ಬಟನ್ ಗಳಿದ್ದು,ಅವುಗಳಲ್ಲಿ ಒಂದರಲ್ಲಿ 25 ಸಾವಿರ ರೂಪಾಯಿ ಗೆದ್ದಿದ್ದೀರಿ. ಈ ಲಿಂಕ್ ನ್ನು 20 ಜನರಿಗೆ ಫಾರ್ವರ್ಡ್ ಮಾಡಿ ಇಲ್ಲವೇ 5 ಗ್ರೂಪ್ ಗಳಿಗೆ ಕಳುಹಿಸಿವೆಂಬ ಸಂದೇಶವಿರುತ್ತದೆ. ನೀವು ಆ ರೀತಿ ಫಾರ್ವರ್ಡ್ ಮಾಡಿದರೂ ನಿಮಗೆ ಹಣ ಬರುವುದಿಲ್ಲ. ಆದರೆ, ಕೆಲವರು ತಮಗೆ ಹಣ ಬಂದಿದೆಂದು ಹೇಳುವ ಕಾಮೆಂಟ್ಸ್ ಕೂಡಾ ಈ ಲಿಂಕ್ ನಲ್ಲಿರುತ್ತದೆ.ಇದೆಲ್ಲ ಅಪ್ಪಟ ಸುಳ್ಳಾಗಿದ್ದು, ಇದು ನಕಲಿ ಲಿಂಕ್ ಆಗಿದೆ. ಕಳೆದ ಒಂದು ವಾರದಿಂದ ಇದು ಎಲ್ಲೆಡೆ ವೈರಲ್ ಆಗುತ್ತಿದ್ದೂ ಹಣ ಸಿಗಬಹುದೆನ್ನುವ ಆಸೆಯಿಂದ ಎಲ್ಲರೂ ಈ ಲಿಂಕ್ ನ್ನು ಫಾರ್ವರ್ಡ್ ಮಾಡುತ್ತಿದ್ದಾರೆ. ಆದರೆ, ಇದು ನಕಲಿಯಾಗಿದ್ದು, ಈ ಬಗ್ಗೆ DMart ಆಡಳಿತ ಮಂಡಳಿ ತಕ್ಷಣ ಎಚ್ಚೆತ್ತು ನಿಜಾಂಶ ಬಹಿರಂಗ ಪಡಿಸಬೇಕಾಗಿದೆ. ಇಲ್ಲದಿದ್ದಲ್ಲಿ, DMart ಗ್ರಾಹಕರ ವಿಶ್ವಾಸ ಕಳೆದುಕೊಳ್ಳುವ ಅಪಾಯವಿದೆ.

ಪ್ರಾದೇಶಿಕ ವಾರ್ತೆಗಳು

ಮುಂಬೈ ವಾಲ್ಕೆಶ್ವರ ಶ್ರೀ ಕಾಶೀ ಮಠದಲ್ಲಿ ಸೆಪ್ಟೆಂಬರ್ 27 ರಂದು ವಿಭಾ ಶ್ರೀನಿವಾಸ್ ನಾಯಕ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ

ಮಂಗಳೂರು, ಸೆಪ್ಟೆಂಬರ್ 25,ಕಾಶೀ ಮಠಾಧಿಪತಿ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರ ಚತುರ್ಮಾಸ ವೃತದ ಅಂಗವಾಗಿ ವಿಭಾ ಶ್ರೀನಿವಾಸ್ ನಾಯಕ್ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಸೆಪ್ಟೆಂಬರ್ 27 ರಂದು ಮುಂಬೈ ಯ ವಾಲ್ಕೆಶ್ವರ ಶ್ರೀ ಕಾಶೀ ಮಠ ದಲ್ಲಿ ಸಂಜೆ 7 ಗಂಟೆ ಯಿಂದ 9 ಗಂಟೆ ವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಾದೇಶಿಕ ವಾರ್ತೆಗಳು

“ಅಮೇರಿಕಾದಲ್ಲಿ ಯಕ್ಷಗಾನ ಕಲೆಗೆ ಸಿಕ್ಕ ಗೌರವ ಅವಿಸ್ಮರಣೀಯ”-ಪಟ್ಲ ಸತೀಶ್ ಶೆಟ್ಟಿ. ಅಮೇರಿಕಾ ಪ್ರವಾಸದಿಂದ ತಾಯ್ನಾಡಿಗೆ ಮರಳಿದ ಯಕ್ಷಗಾನ ತಂಡ.

ಮಂಗಳೂರು: ಅಮೇರಿಕ ಪ್ರವಾಸ ಕೈಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ತಮ್ಮ ತಂಡದ ಜೊತೆ ಮಂಗಳವಾರ ರಾತ್ರಿ ತಾಯ್ನಾಡಿಗೆ ಮರಳಿದ್ದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಸ್ವಾಗತ ಕೋರಿದರು.ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ 9 ಮಂದಿಯ ತಂಡ ಅಮೇರಿಕ ದೇಶದ ಬೇರೆ ಬೇರೆ ತಾಣಗಳಲ್ಲಿ ಯಕ್ಷಗಾನ ಪ್ರದರ್ಶಿಸಿ 75 ದಿನಗಳ ಬಳಿಕ ತಾಯ್ನಾಡಿಗೆ ಮರಳಿದೆ.ಈ ವೇಳೆ ತಮ್ಮ ಅಮೇರಿಕ ಪ್ರವಾಸದ ಕಥನವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡ ಅವರು, “ವಿದೇಶಗಳಲ್ಲಿ ತುಳುನಾಡಿನ ಗಂಡುಮೆಟ್ಟಿನ ಕಲೆಯಾಗಿರುವ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಹೆಮ್ಮೆ ಅನಿಸುತ್ತಿದೆ. ಅಲ್ಲಿನ ಜನರು ಕೂಡ ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿಯ ವಿಚಾರ” ಎಂದರು. “ಅಮೇರಿಕಾದ ಎರಡು ನಗರಗಳಲ್ಲಿ ಪಟ್ಲ ಫೌಂಡೇಶನ್ ದಿನವನ್ನಾಗಿ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಇದು ಅವಿಸ್ಮರಣೀಯ ಅನುಭವ. ನಮ್ಮ ಕಲೆಗೆ ಇಂದು ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ. ಪಟ್ಲ ಫೌಂಡೇಷನ್ ಟ್ರಸ್ಟ್ ಅಮೇರಿಕಾ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್ ಮತ್ತಿತರ ಪ್ರಮುಖರು ಅಮೆರಿಕದ 20 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದರು ಅವರಿಗೆ ಧನ್ಯವಾದಗಳು” ಎಂದರು. ಪ್ರೊ.ಎಂ.ಎಲ್. ಸಾಮಗ ಮಾತನಾಡಿ, “ಅಮೇರಿಕಾದ ಜನರು ನಮ್ಮ ಯಕ್ಷಗಾನ ತಂಡದ ಮೇಲೆ ತೋರಿಸಿದ ಪ್ರೀತಿ ಮರೆಯಲಾಗದ್ದು. ಪ್ರತೀ ಪ್ರದರ್ಶನಕ್ಕೂ 500 ಜನರಿಗಿಂತ ಕಡಿಮೆ ಜನರು ಸೇರುತ್ತಿರಲಿಲ್ಲ. ನಮ್ಮ ತಂಡದಲ್ಲಿ ಕಲಾವಿದರು ಮಿತಿಯಲ್ಲಿ ಇದ್ದುದರಿಂದ ಅದಕ್ಕೆ ಸೂಕ್ತ ಎನಿಸುವ ಪ್ರಸಂಗ ಆಡಿ ತೋರಿಸಬೇಕಿತ್ತು. ಕೆಲವರು ತಾವು ವೇಷ ಹಾಕುತ್ತೇವೆ ಎಂದು ಮುಂದೆ ಬಂದರು ಮತ್ತೂ ಕೆಲವರು ಭಾಗವತಿಕೆ ಕಲಿಯಲು ಮುಂದೆ ಬಂದರು. ಆನ್ ಲೈನ್ ಕ್ಲಾಸ್ ಬಗ್ಗೆಯೂ ವಿಚಾರಿಸಿದ್ದಾರೆ. ಮುಂದೆ ಆ ಬಗ್ಗೆ ಯೋಚನೆ ಮಾಡುತ್ತೇವೆ“ ಎಂದರು.ಪಟ್ಲ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು.ಅಮೇರಿಕಾ ನಗರಗಳಲ್ಲಿ “ಪಟ್ಲ ಫೌಂಡೇಶನ್ ಡೇ”!ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಪ್ರದರ್ಶಿಸಿದ ಯಕ್ಷಗಾನ ಹಾಗೂ ಪಟ್ಲ ಫೌಂಡೇಷನ್ ಕಾರ್ಯ ಚಟುವಟಿಕೆಯನ್ನು ಮೆಚ್ಚಿ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್‌ಫೀಲ್ಡ್ ನಗರದ ಮೇಯರ್ ಸ್ಟೀವನ್ ವಿ. ಪೋಂಟೊ ಅವರು ಆಗಸ್ಟ್ 18 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ.ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್ ನಗರದ ಮೇಯರ್ ಅವರು ಜುಲೈ 27 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

`ಅನ್ಯರನ್ನು ನೋಯಿಸದೆ, ಪ್ರೀತಿಸುವುದೇ ಧರ್ಮ’

ಸಾರ್ವಜನಿಕ ಶ್ರೀಗಣೇಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಧಾನ ಪಾತ್ರ ಪಡೆದಿದೆ. ಧರ್ಮವು ಜಾತಿಯಲ್ಲ, ಧರ್ಮವು ಮತವಲ್ಲ, ಧರ್ಮವು ಪಂಥವೂ ಅಲ್ಲ, ಸಂಪ್ರದಾಯವೂ ಅಲ್ಲ.” ಹಾಗಾದರೆಧರ್ಮ” ಎಂದರೆ ಕಾಯದಿಂದ, ಮಾತಿನಿಂದ, ಮನಸ್ಸಿನಿಂದ ಅನ್ಯ ಜನರಿಗೆ ನೋಯಿಸದೇ ಸಕಲರನ್ನೂ ಪ್ರೀತಿಸುವುದೇ ಧರ್ಮವಯ್ಯಾ…… ಎಂದು ಧಾರ್ಮಿಕ ಮುಂದಾಳು ಪುಂಡಲೀಕ ಹೊಸಬೆಟ್ಟು ಶ್ರೀಗಣೇಶ ಭಜನಾ ಮಂದಿರ, ಜನತಾ ಕಾಲನಿಯಲ್ಲಿ ಜರುಗಿದ 37ನೇ ವರ್ಷದ ಶ್ರೀಗಣೇಶೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಕ್ತರನ್ನುದ್ದೇಶಿಸಿ ಮಾತನಾಡಿದರು.ಇದೇ ಸಂದರ್ಭ ಗರಿಷ್ಠ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಾಧಕರನ್ನೂ ಅಭಿನಂದಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.ಸುರತ್ಕಲ್ ಕ್ಷೇತ್ರದ ಶಾಸಕ ಡಾ. ಭರತ್ ವೈ ಶೆಟ್ಟಿ ಶುಭ ಹಾರೈಸಿದರು. ಕಾರ್ಪೊರೇಟರ್ ಶ್ರೀಮತಿ ಸರಿತಾ ಶಶಿಧರ್, ಜ್ಯೋತಿಷಿ ಸುದರ್ಶನ್ ಬನ್ನಿಂತಾಯ, ಪುಷ್ಪರಾಜ್ ಮುಕ್ಕ, ಭರತ್‌ರಾಜ್ ಕೃಷ್ಣಾಪುರ,ನಾಗೇಶ್ ಬಂಗೇರ, ಶ್ರೀ ಗಣೇಶ ಭಜನಾ ಮಂದಿರದ ಅಧ್ಯಕ್ಷ ಸುಜಿತ್ ಹೆಗ್ಡೆ, ಗೌರವಾಧ್ಯಕ್ಷ ಭೋಜ ಹೆಗ್ಡೆ, ಕಾರ್ಯದರ್ಶಿ ಮಿಲನ್, ಕೋಶಾಧಿಕಾರಿ ಗಣೇಶ್ ಆಚಾರ್ಯ, ಮಹಿಳಾ ಸಮಾಜದ ಅಧ್ಯಕ್ಷೆ ರಾಧಾ ಶೆಟ್ಟಿ, ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಬಿ. ಸುಧಾಮ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಪೂಜಾ ರಾವ್ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಬಿಜೈ ಕಾಪಿಕಾಡ್ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಮಾಹಿತಿ ಕಾರ್ಯಕ್ರಮ

ಮಂಗಳೂರು,ಸೆ.21;ನಗರದ ಬಿಜೈ ಕಾಪಿಕಾಡ್ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹದ ಅಂಗವಾಗಿ ಪೌಷ್ಟಿಕ ಆಹಾರದಲ್ಲಿ ಪೌಷ್ಟಿಕಾಂಶದ ಸಂರಕ್ಷಣೆ, ಪೌಷ್ಟಿಕ ಆಹಾರದ ತಯಾರಿಯ ಬಗ್ಗೆ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು.ಸಮಾರಂಭವನ್ನು ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉದ್ಘಾಟಿಸಿಮಾತನಾಡುತ್ತಾ, ನಿರಂತರ ಚಟುವಟಿಕೆಯಿಂದ ಇರುವ ಬಿಜೈ ಅಂಗನವಾಡಿ ಕೇಂದ್ರದ ಅಂಗನವಾಡಿ ಕಾರ್ಯಕರ್ತೆಯ ಕಾಳಜಿ ಯಿಂದ ಮಕ್ಕಳ ಸಂಖ್ಯೆ ಹೆಚ್ಚಾಗಿದೆ ಕೇಂದ್ರ ಮಾದರಿಯಾಗಿದೆ ಎಂದು ಶುಭ ಹಾರೈಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿ ಸಿಂಧು ರವರು ಮಾಹಿತಿ ನೀಡುತ್ತಾ, ಪೌಷ್ಠಿಕಾಂಶ ವನ್ನು ಉಳಿಸಿಕೊಂಡು ನಾವು ತಿನ್ನುವ ಆಹಾರದ ತಯಾರಿ ಹೇಗೆ ,ಗರ್ಭಿಣಿ ಮಹಿಳೆಯರಿಗೆ ಯಾವ ಆಹಾರ ಅಗತ್ಯವಿದೆ, ಸಣ್ಣ ಮಕ್ಕಳ ಬೆಳವಣಿಗೆಗೆ ಅಗತ್ಯ ವಾಗಿ ಬೇಕಾಗುವ ಪೋಷಕಾಂಶಗಳ ಬಗ್ಗೆ ಮಾಹಿತಿ ನೀಡಿದರು.ಕೆಎಂಸಿ ಸಮುದಾಯ ಆರೋಗ್ಯ ವಿಭಾಗದ ಅಧಿಕಾರಿ ಶರಾವತಿಯವರು ಆಹಾರದ ಹಿತ ಮಿತ ಆರೋಗ್ಯಕರ ರೀತಿಯಲ್ಲಿ ಸೇವನೆ, ಶುಚಿತ್ವದ ಬಗ್ಗೆ ಮಾಹಿತಿ ನೀಡಿದರು.ಸಮಾರಂಭದಲ್ಲಿ ಪೌಷ್ಠಿಕಾಂಶದ ಆಹಾರ,ಹಣ್ಣು,ತಿಂಡಿಗಳ ಪ್ರದರ್ಶನ ಮತ್ತು ಸಹಭೋಜನ ,ವಿಶೇಷವಾಗಿ ಇಬ್ಬರು ಗರ್ಭಿಣಿ ಮಹಿಳೆಯರಿಗೆ ಪೋಷಕಾಂಶ ಭರಿತ ಆಹಾರ ಹಾಗೂ ಇತರ ವಸ್ತುಗಳನ್ನು ನೀಡಿ ಸೀಮಂತ ಕಾರ್ಯಕ್ರಮ. ಇಬ್ಬರು ಎಳೆಯ ಮಕ್ಕಳಿಗೆ ತುತ್ತು ತಿನಿಸುವ ವಿಶೇಷ ಕಾರ್ಯಕ್ರಮ ನಡೆಯಿತು.ಕೇಂದ್ರದ ಅಂಗನವಾಡಿ ಕಾರ್ಯಕರ್ತೆ ನಂದಾ ಮಾತನಾಡುತ್ತಾ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಂಗನವಾಡಿಯ ಬಗ್ಗೆ ಹೆಚ್ಚಿನ ಕಾಳಜಿ ತೋರಿಸಿರುವ ಬಗ್ಗೆ ಮತ್ತು ಕೇಂದ್ರಕ್ಕೆ ಕುಡಿಯುವ ನೀರು,ಮಕ್ಕಳಿಗೆ ಸಮವಸ್ತ್ರ,ಇತರ ಸಾಮಾಗ್ರಿಗಳನ್ನು ಒದಗಿಸಿ ಸದಾ ಸಹಕಾರ ನೀಡುತ್ತಿರುವುದನ್ನು ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.ಸಮಾರಂಭದಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್ ಶುಭ ಹಾರೈಸಿದರು.ಕೇಂದ್ರದ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಸವಿತಾ ಬಿಜೈ ಕಾಪಿಕಾಡ್ ಹಿರಿಯಪ್ರಾಥಮಿಕ ಶಾಲೆಯ ಮುಖ್ಯೋಪಾ ಧ್ಯಾಯಿನಿ ಲೀನಾ,ಸಹಾಯಕಿ ಲಕ್ಷ್ಮಿ, ಆಶಾ ಕಾರ್ಯಕರ್ತೆ ಗಾಯತ್ರಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯಿಂದ ಸಂಘಟನಾತ್ಮಕ ಚಟುವಟಿಕೆ: ಪ್ರಿಯಾ ಗಿರೀಶ್ ಶೆಟ್ಟಿ. *ಸುರತ್ಕಲ್ ಬಂಟರಭವನದಲ್ಲಿ ಸಾರಿ ಮೇಳ

ಸುರತ್ಕಲ್: ಸಂಘಟನಾತ್ಮಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವುದರ ಮೂಲಕ ಸಮಾಜ ಬಲಿಷ್ಠವಾಗಲು ಸಾಧ್ಯ ಎಂದು ಶ್ರೀಮತಿ ಪ್ರಿಯಾ ಗಿರೀಶ್ ಶೆಟ್ಟಿ ಕಟೀಲು ನುಡಿದರು. ಅವರು ಸುರತ್ಕಲ್ ಬಂಟರ ಭವನದಲ್ಲಿ ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ವತಿಯಿಂದ ಜಯಲಕ್ಷ್ಮಿ ಸಿಲ್ಕ್ ಉದ್ಯಾವರ ಉಡುಪಿ ವತಿಯಿಂದ ನಡೆದ ಸಾರಿ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಬಂಟರ ಸಂಘವು ಹಲವಾರು ಜನಪರ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಇತರ ಸಂಘಗಳಿಗೆ ಮಾದರಿಯಾಗಿದೆ ಎಂದರು.ವೇದಿಕೆಯಲ್ಲಿ ಮಹಿಳಾ ವೇದಿಕೆ ಅಧ್ಯಕ್ಷೆ ಭವ್ಯಾ ಶೆಟ್ಟಿ, ನಿಕಟಪೂರ್ವ ಅಧ್ಯೆಕ್ಷೆ ಚಿತ್ರಾ ಜೆ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು, ಉಪಾಧ್ಯಕ್ಷ ಪುಷ್ಷರಾಜ್ ಶೆಟ್ಟಿ ಕುಡುಂಬೂರು, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಶೆಟ್ಟಿ, ನಿಕಟಪೂರ್ವಧ್ಯಕ್ಷ ಸುಧಾಕರ ಪೂಂಜ, ಮಾಜಿ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಮಹಿಳಾ ವೇದಿಕೆಯ ಮಾಜಿ ಅಧ್ಯೆಕ್ಷರಾದ ಬೇಬಿ ಶೆಟ್ಟಿ, ಚಂದ್ರ ಕಲಾ ಶೆಟ್ಟಿ, ಉಪಾಧ್ಯಕ್ಷೆ ಸರೋಜ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುಜಾತ ಶೆಟ್ಟಿ ಕೃಷ್ಣಾಪುರ, ಕೋಶಾಧಿಕಾರಿ ಜ್ಯೋತಿ ಪ್ರವೀಣ್ ಶೆಟ್ಟಿ, ಜತೆ ಕಾರ್ಯಾದರ್ಶಿ ವಜ್ರಾಕ್ಷಿ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಸುಜಾತ ಶೆಟ್ಟಿ ಕಾಟಿಪಳ್ಳ, ಸಂಘಟನಾ ಕಾರ್ಯದರ್ಶಿ ನಾಗಲತಾ ಶೆಟ್ಟಿ ತೋಕೂರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಜೇಶ್ವರಿ ಡಿ ಶೆಟ್ಟಿ ಕಾರ್ಯಕ್ರಮ‌ ನಿರ್ವಹಿಸಿದರು.

Scroll to Top