“ಅಮೇರಿಕಾದಲ್ಲಿ ಯಕ್ಷಗಾನ ಕಲೆಗೆ ಸಿಕ್ಕ ಗೌರವ ಅವಿಸ್ಮರಣೀಯ”-ಪಟ್ಲ ಸತೀಶ್ ಶೆಟ್ಟಿ. ಅಮೇರಿಕಾ ಪ್ರವಾಸದಿಂದ ತಾಯ್ನಾಡಿಗೆ ಮರಳಿದ ಯಕ್ಷಗಾನ ತಂಡ.

95K Views 25 Sep 2024

ಮಂಗಳೂರು: ಅಮೇರಿಕ ಪ್ರವಾಸ ಕೈಗೊಂಡಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲಗುತ್ತು ಸತೀಶ್ ಶೆಟ್ಟಿ ಅವರು ತಮ್ಮ ತಂಡದ ಜೊತೆ ಮಂಗಳವಾರ ರಾತ್ರಿ ತಾಯ್ನಾಡಿಗೆ ಮರಳಿದ್ದು ಬಜ್ಪೆ ವಿಮಾನ ನಿಲ್ದಾಣದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಸ್ವಾಗತ ಕೋರಿದರು.
ಪಟ್ಲ ಸತೀಶ್ ಶೆಟ್ಟಿ ಅವರ ನೇತೃತ್ವದಲ್ಲಿ 9 ಮಂದಿಯ ತಂಡ ಅಮೇರಿಕ ದೇಶದ ಬೇರೆ ಬೇರೆ ತಾಣಗಳಲ್ಲಿ ಯಕ್ಷಗಾನ ಪ್ರದರ್ಶಿಸಿ 75 ದಿನಗಳ ಬಳಿಕ ತಾಯ್ನಾಡಿಗೆ ಮರಳಿದೆ.
ಈ ವೇಳೆ ತಮ್ಮ ಅಮೇರಿಕ ಪ್ರವಾಸದ ಕಥನವನ್ನು ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡ ಅವರು, “ವಿದೇಶಗಳಲ್ಲಿ ತುಳುನಾಡಿನ ಗಂಡುಮೆಟ್ಟಿನ ಕಲೆಯಾಗಿರುವ ಯಕ್ಷಗಾನ ಪ್ರದರ್ಶನ ಮತ್ತು ಕಾರ್ಯಾಗಾರವನ್ನು ಹಮ್ಮಿಕೊಂಡಿದ್ದು ಹೆಮ್ಮೆ ಅನಿಸುತ್ತಿದೆ. ಅಲ್ಲಿನ ಜನರು ಕೂಡ ಯಕ್ಷಗಾನ ನಾಟ್ಯ ಮತ್ತು ಭಾಗವತಿಕೆಗೆ ಮನಸೋತು ಕಲಿಯಲು ಆಸಕ್ತಿ ತೋರಿಸಿರುವುದು ಖುಷಿಯ ವಿಚಾರ” ಎಂದರು.


“ಅಮೇರಿಕಾದ ಎರಡು ನಗರಗಳಲ್ಲಿ ಪಟ್ಲ ಫೌಂಡೇಶನ್ ದಿನವನ್ನಾಗಿ ಅಲ್ಲಿನ ಮೇಯರ್ ಘೋಷಣೆ ಮಾಡಿದ್ದಾರೆ. ಇದು ಅವಿಸ್ಮರಣೀಯ ಅನುಭವ. ನಮ್ಮ ಕಲೆಗೆ ಇಂದು ವಿಶ್ವವ್ಯಾಪಿ ಮನ್ನಣೆ ಸಿಗುತ್ತಿದೆ. ಪಟ್ಲ ಫೌಂಡೇಷನ್ ಟ್ರಸ್ಟ್ ಅಮೇರಿಕಾ ಘಟಕದ ಅಧ್ಯಕ್ಷ ಡಾ.ಅರವಿಂದ ಉಪಾಧ್ಯಾಯ, ಡಾ. ಶ್ರೀಧರ ಆಳ್ವ, ಮಹಾಬಲ ಶೆಟ್ಟಿ, ಉಳಿ ಯೋಗೇಂದ್ರ ಭಟ್ ಮತ್ತಿತರ ಪ್ರಮುಖರು ಅಮೆರಿಕದ 20 ರಾಜ್ಯಗಳಲ್ಲಿ ಯಕ್ಷಗಾನ ಪ್ರದರ್ಶನ ಆಯೋಜಿಸಿದ್ದರು ಅವರಿಗೆ ಧನ್ಯವಾದಗಳು” ಎಂದರು.


ಪ್ರೊ.ಎಂ.ಎಲ್. ಸಾಮಗ ಮಾತನಾಡಿ, “ಅಮೇರಿಕಾದ ಜನರು ನಮ್ಮ ಯಕ್ಷಗಾನ ತಂಡದ ಮೇಲೆ ತೋರಿಸಿದ ಪ್ರೀತಿ ಮರೆಯಲಾಗದ್ದು. ಪ್ರತೀ ಪ್ರದರ್ಶನಕ್ಕೂ 500 ಜನರಿಗಿಂತ ಕಡಿಮೆ ಜನರು ಸೇರುತ್ತಿರಲಿಲ್ಲ. ನಮ್ಮ ತಂಡದಲ್ಲಿ ಕಲಾವಿದರು ಮಿತಿಯಲ್ಲಿ ಇದ್ದುದರಿಂದ ಅದಕ್ಕೆ ಸೂಕ್ತ ಎನಿಸುವ ಪ್ರಸಂಗ ಆಡಿ ತೋರಿಸಬೇಕಿತ್ತು. ಕೆಲವರು ತಾವು ವೇಷ ಹಾಕುತ್ತೇವೆ ಎಂದು ಮುಂದೆ ಬಂದರು ಮತ್ತೂ ಕೆಲವರು ಭಾಗವತಿಕೆ ಕಲಿಯಲು ಮುಂದೆ ಬಂದರು. ಆನ್ ಲೈನ್ ಕ್ಲಾಸ್ ಬಗ್ಗೆಯೂ ವಿಚಾರಿಸಿದ್ದಾರೆ. ಮುಂದೆ ಆ ಬಗ್ಗೆ ಯೋಚನೆ ಮಾಡುತ್ತೇವೆ“ ಎಂದರು.
ಪಟ್ಲ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಅಡ್ಯಾರ್ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಸಂಘಟನಾ ಕಾರ್ಯದರ್ಶಿಗಳಾದ ಕದ್ರಿ ನವನೀತ ಶೆಟ್ಟಿ, ಪ್ರದೀಪ್ ಆಳ್ವ ಕದ್ರಿ, ಬಾಳ ಜಗನ್ನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ರವಿಚಂದ್ರ ಶೆಟ್ಟಿ, ಮಾಜಿ ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು.
ಅಮೇರಿಕಾ ನಗರಗಳಲ್ಲಿ “ಪಟ್ಲ ಫೌಂಡೇಶನ್ ಡೇ”!
ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಷನ್ ಪ್ರದರ್ಶಿಸಿದ ಯಕ್ಷಗಾನ ಹಾಗೂ ಪಟ್ಲ ಫೌಂಡೇಷನ್ ಕಾರ್ಯ ಚಟುವಟಿಕೆಯನ್ನು ಮೆಚ್ಚಿ ಅಮೆರಿಕದ ವಿಸ್ಕಾನ್ಸಿನ್ ರಾಜ್ಯದ ಬ್ರೂಕ್‌ಫೀಲ್ಡ್ ನಗರದ ಮೇಯರ್ ಸ್ಟೀವನ್ ವಿ. ಪೋಂಟೊ ಅವರು ಆಗಸ್ಟ್ 18 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ.
ಕ್ಯಾಲಿಫೋರ್ನಿಯಾ ರಾಜ್ಯದ ಫೀನಿಕ್ಸ್ ನಗರದ ಮೇಯರ್ ಅವರು ಜುಲೈ 27 ಅನ್ನು ‘ಯಕ್ಷಧ್ರುವ ಪಟ್ಲ ಫೌಂಡೇಷನ್ ಡೇ’ ಎಂದು ಘೋಷಿಸಿದ್ದಾರೆ.

Read More News

ಪತ್ರಕರ್ತರಿಗೆ ನಿವೃತ್ತಿ ನಂತರ ಪಿಂಚಣಿ ಸೇರಿದಂತೆ ಸರಕಾರದ ಸಮರ್ಪಕ ಸೌಲಭ್ಯಗಳು ಸಕಾಲದಲ್ಲಿ ದೊರೆಯದಿರುವುದು ವಿಷಾದನೀಯ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಬದಲಾವಣೆ ತರಲು ಸಂಘಟಿತ ಪ್ರಯತ್ನದ ಅಗತ್ಯತೆ ಇದೆ -ಬಂಟ್ವಾಳ ತಾಲೂಕು ಪತ್ರಿಕಾ ದಿನಾಚರಣೆಯಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ. ಎನ್. ಆಶಯ.

Scroll to Top