ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಈ ಬಾರಿ ಕನ್ನಡ ರಾಜ್ಯೋತ್ಸವದ ಸಂದರ್ಭ ನೀಡಲಿರುವ ” ಕರ್ನಾಟಕ ಮುಕುಟಮಣಿ ” ಪ್ರಶಸ್ತಿಗೆ ಮಂಗಳೂರಿನ ಸಮಾಜ ಸೇವಕ ಯು.ಆರ್.ಶೆಟ್ಟಿ ಯವರನ್ನು ಆಯ್ಕೆಗೊಳಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ನೌಕರರಾಗಿರುವ ಯು.ಆರ್.ಶೆಟ್ಟಿ ಮಾಡಿರುವ ಸಾಮಾಜಿಕ ಕಾರ್ಯಚಟುವಟಿಕೆಗಳನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಗೊಳಿಸಲಾಗಿದೆ. ತುರ್ತು ಸಂದರ್ಭ ಗಳಲ್ಲಿ ಅನೇಕ ಬಾರಿ ರಕ್ತದಾನವನ್ನು ಮಾಡಿರುವ ಇವರು ರಕ್ತದಾನ ಶಿಬಿರವನ್ನು ಆಯೋಜಿಸುವ ಮೂಲಕವೂ ಜನಮನ್ನಣೆ ಪಡೆದಿರುವರು. ಕೋವಿಡ್-19 ತುರ್ತುಸ್ಥಿತಿ ಯಲ್ಲಿ ಪ್ಲಾಸ್ಮಾ ದಾನ ಮಾಡಿರುವ ಯು.ಆರ್.ಶೆಟ್ಟಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ನಾಟಕ ಸ್ಪರ್ಧೆಯಲ್ಲಿ ಸತತ ಏಳು ಬಾರಿ ಆಯ್ಕೆಗೊಂಡು ಇಲಾಖೆಗೆ ಹೆಮ್ಮೆ ತಂದಿರುವರು. ಕರ್ನಾಟಕ ಕಲಾ ಮತ್ತು ಸಾಂಸ್ಕೃತಿಕ ಸಂಘದ ಜಿಲ್ಲಾಧ್ಯಕ್ಷರಾಗಿರುವ ಶ್ರೀಯುತರು ಈಗಾಗಲೇ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುವರು.
























































































































































































