ಮಂಗಳೂರು: ಕೆಲರಾಯಿ ಮಂಗಳೂರು ಇಲ್ಲಿನ ಸಂತ ಅನ್ನಾ ಆಂಗ್ಲ ಮಾದ್ಯಮ ಶಾಲೆಯ ವಾರ್ಷಿಕೋತ್ಸವ ಇತ್ತೀಚೆಗೆ ಬಹಳ ವಿಜೃಂಭಣೆಯಿಂದ ಜರುಗಿತು. ಬೆಳಿಗ್ಗೆ ಸಂತ ಅನ್ನಾ ಚರ್ಚಿನ ಸಭಾಂಗಣದಲ್ಲಿ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಉದ್ಯಮಿ ಬ್ಯಾಪ್ಟಿಸ್ಟ್ ಕ್ರಾಸ್ತ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ಮೂಲಕ, ಅವರಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ, ಅವರ ಸರ್ವತೋಮುಖ ಬೆಳವಣೆಗೆಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿದಂತಾಗುತ್ತದೆಂದು ತಿಳಿಸಿದರು.
ಅದೇ ದಿನ ಸಾಯಂಕಾಲದಂದು ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಲೂರ್ಡ್ಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ವಂ। ಜಾನ್ಸಾನ್ ಸಿಕ್ವೇರಾವರು ಮಕ್ಕಳು ತಮ್ಮ ಹೆಚ್ಚಿನ ಅವಧಿಯನ್ನು ಶಾಲೆಯಲ್ಲಿ ಕಳೆಯುವ ಕಾರಣ, ಅವರ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳ ಪೋಷಕರು ಕೂಡ ಅವರೊಂದಿಗೆ ಕೈ ಜೋಡಿಸಿ ಸಕಾರಾತ್ಮಕವಾಗಿ ಸ್ಪಂದಿಸಿದರೆ, ಖಂಡಿತವಾಗಿ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ತಿಳಿಸಿದರು.2023- 24 ನೇ ಸಾಲಿನ, 10ನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಂದು ಸನ್ಮಾನಿಸಲಾಯಿತು. ಬಳಿಕ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕಲಾ ಪ್ರತಿಭೆಯನ್ನು ಮೆರೆದರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಿದ್ಯಾಸಂಸ್ಥೆಯ ಸಂಚಾಲಕರಾದ ವಂ| ಗುರು ಸಿಲ್ವೆಸ್ಟರ್ ಡಿ’ ಕೋಸ್ತಾ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಜೋನ್ ಪಾಯ್ಸ್ ಸರ್ವರನ್ನು ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಐರಿನ್ ಮಿನೇಜಸ್ ವರದಿಯನ್ನು ವಾಚಿಸಿದರು. ವಿದ್ಯಾರ್ಥಿಗಳಾದ ಮಾ| ಗಲೇನ್ಸನ್ ಡಿ’ಸೋಜಾ ಹಾಗೂ ಕು| ಡೆನಿಕಾ ಡಿ’ಸೋಜಾ
ಕಾರ್ಯಕ್ರಮವನ್ನು ನಿರೂಪಿಸಿ, ಹಿರಿಯ ಶಿಕ್ಷಕಿ ಹೇಮಾವತಿ ವಂದನಾರ್ಪಣೆಗೈದರು. ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ವಂ| ಗುರು ಜೋಸೆಫ್ ಮಸ್ಕರೇನಸ್, ಶ್ರೀಯು ಸಂತೋಷ್ ಡಿ’ಕೋಸಾ, ಕಾರ್ಯದರ್ಶಿ ಶ್ರೀಮತಿ ಸೆಲಿಸ್ ಡಿ’ಮೆಲ್ಲೊ, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಮೈಕಲ್ ಲೋಬೋ, ಶಿಕ್ಷಕ – ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ವಿನೋದ್ ರೇಗೋ ಹಾಗೂ ಶಾಲಾ ನಾಯಕ ಸೋಹನ್ ಜೋಶ್ವಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.









































































































































































































