ಆಳ್ವಾಸ್: ಅಭಿವ್ಯಕ್ತಿ ವೇದಿಕೆ ಉದ್ಘಾಟನೆಯಲ್ಲಿ ಡಾ.ಎನ್.ಪಿ. ನಾರಾಯಣ ಶೆಟ್ಟಿ. ಆಲಿಸುವ, ಚರ್ಚಿಸುವ ಮನೋಭಾವ ಬೆಳೆಸಿಕೊಳ್ಳಿ

103.9K Views 5 Dec 2024

ವಿದ್ಯಾಗಿರಿ: ‘ಆಲಿಸುವ ಹಾಗೂ ಚರ್ಚಿಸಿ ನಿರ್ಧರಿಸುವ ಮನೋಭಾವವೇ ಯಶಸ್ಸು ಕಾಣುವ ಮಾರ್ಗ’ ಎಂದು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುಲಸಚಿವ (ಮೌಲ್ಯಮಾಪನ) ಡಾ.ಎನ್.ಪಿ. ನಾರಾಯಣ ಶೆಟ್ಟಿ ಹೇಳಿದರು.
ಆಳ್ವಾಸ್ (ಸ್ವಾಯತ್ತ) ಕಾಲೇಜಿನಲ್ಲಿ ಮಂಗಳವಾರ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ‘ಅಭಿವ್ಯಕ್ತಿ’ ವಿದ್ಯಾರ್ಥಿ ವೇದಿಕೆಯ ಶೈಕ್ಷಣಿಕ ವರ್ಷದ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪತ್ರಿಕೋದ್ಯಮದಲ್ಲಿ ಯಶಸ್ಸು ಕಾಣಲು ಸಂಯಮದ ಆಲಿಸುವ ಮನೋಭಾವ ಬಹುಮುಖ್ಯ. ಯಾವುದೇ ಕಾರ್ಯಕ್ರಮ ಯೋಜಿಸುವ ಮೊದಲು ಸಾಕಷ್ಟು ಚರ್ಚೆ ನಡೆಸಬೇಕು. ಹಿರಿಯರು- ಕಿರಿಯರು ಎನ್ನದೇ ಸಲಹೆ -ಸೂಚನೆಗಳನ್ನು ಸ್ವೀಕರಿಸಿಕೊಂಡು ನಿರ್ಧಾರಕ್ಕೆ ಬರಬೇಕು ಎಂದರು.
ಭಾಷೆಯ ಮೇಲಿನ ಹಿಡಿತ ಹಾಗೂ ತಂತ್ರಜ್ಞಾನದ ಸ್ಪರ್ಶ ಇಂದಿನ ಮಾಧ್ಯಮ ಜಗತ್ತಿಗೆ ಅನಿವಾರ್ಯ ಎಂದ ಅವರು, ಜ್ಞಾನ ಮತ್ತು ಅಭಿವ್ಯಕ್ತಿ ಪತ್ರಿಕೋದ್ಯಮದ ಎರಡು ಕಣ್ಣುಗಳು ಎಂದರು.
ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ನಾವು ಏನು ಆಗಿಲ್ಲವೋ, ಆ ವ್ಯಕ್ತಿತ್ವವನ್ನು ನಮ್ಮೊಳಗೆ ರೂಪಿಸುವುದೇ ಕಲಿಕೆ. ಅದು ನಮ್ಮ ವ್ಯಕ್ತಿತ್ವದ ಉನ್ನತೀಕರಣ ಆಗಿರಬೇಕು’ ಎಂದರು.
‘ನಮಗೆಲ್ಲ ಅಭಿವ್ಯಕ್ತಿ ಸ್ವಾತಂತ್ರö್ಯ ಇದೆ. ಆದರೆ, ಅದರ ಸದ್ಬಳಕೆ ಆಗದಿದ್ದರೆ, ಅಧ್ವಾನದ ಅಪಾಯಗಳೂ ಇವೆ’ ಎಂದರು.
‘ಪ್ರಜಾಪ್ರಭುತ್ವ ಉಳಿಸಿ- ಬೆಳೆಸುವಲ್ಲಿ ಪತ್ರಿಕೋದ್ಯಮದ ಪಾತ್ರ ಬಹುಮುಖ್ಯ ಪ್ರಜಾಸತ್ತಾತ್ಮಕವಾಗಿ ವರ್ತಿಸಿದಾಗ ಮಾತ್ರ ಪತ್ರಕರ್ತರ, ಸಮಾಜದ ಯಶಸ್ಸು ಸಾಧ್ಯ’ ಎಂದರು.
ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಯೋಗಿಕ ಕಲಿಕೆ ಹೆಚ್ಚು ಅವಕಾಶಗಳಿದ್ದು ಅವುಗಳನ್ನು ಬಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು.
ವಿಭಾಗ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯ ವಿದ್ಯಾರ್ಥಿ ಸಂಯೋಜಕ ರುಧೀರ್ ವಾರ್ಷಿಕ ವರದಿ ವಾಚಿಸಿದರು. ವಿನೀತ್ ಭವಿಷ್ಯದ ಕಾರ್ಯ ಯೋಜನೆಗಳನ್ನು ತಿಳಿಸಿದರು.
ನೂತನ ವರ್ಷದ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ವೇದಿಕೆ ಖಜಾಂಚಿ ವೀಕ್ಷಿತ .ವಿ ನಿರೂಪಿಸಿದರು. ಉಪ ಸಂಯೋಜಕಿ ಪ್ರೇರಣಾ ಇದ್ದರು.

Read More News

Scroll to Top