ಮಂಗಳೂರು : ಅತ್ಯಾಚಾರ, ಅಪಘಾತದಂತಹ ಘಟನೆ ಸಂಭವಿಸಿದಾಗ ಮೊಬೈಲ್ ಫೋನ್ನಲ್ಲಿರುವ ಫೀಚರ್ ಬಳಸಿ ಪೊಲೀಸರನ್ನು ಹೇಗೆ ಸಂಪರ್ಕ ಮಾಡಬಹುದು ಎನ್ನುವ ಮಹತ್ವದ ಸಂದೇಶವನ್ನು ಎಸ್ಒಎಸ್ (ಸೇವ್ ಅವರ್ ಸೋಲ್ ) ಕಿರುಚಿತ್ರದಲ್ಲಿ ಮನೋಜ್ಞವಾಗಿ ತೋರಿಸಲಾಗಿದೆ. ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಅರಿವು ಮೂಡಿಸಲು ಕೂಡಾ ಈ ಕಿರುಚಿತ್ರದಲ್ಲಿ ಪ್ರಯತ್ನಿಸಲಾಗಿದೆ ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್. ಹೇಳಿದರು.
ಮಂಗಳೂರಿನ ಭಾರತ್ ಸಿನಿಮಾಸ್ನಲ್ಲಿ ಬುಧವಾರ ನಡೆದ ‘ಸೇವ್ ಅವರ್ ಸೋಲ್ ‘ ಕಿರುಚಿತ್ರದ ಪ್ರೀಮಿಯರ್ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಮಂಗಳೂರು ನಗರ ಪೊಲೀಸ್ ಕಮಿಷನರೆಟ್ನ ಡಿಸಿಪಿ ಸಿದ್ಧಾರ್ಥ ಗೋಯಲ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ .ಡಿ.ಎಸ್. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಶುಭ ಹಾರೈಸಿದರು.
ಎ.ಯು. ಕ್ರಿಯೇಶನ್ಸ್ ಮತ್ತು ದ.ಕ.ಜಿಲ್ಲಾ ಪೊಲೀಸ್ ಘಟಕದ ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಎಸ್ಒಎಸ್ ಕಿರುಚಿತ್ರ ಅ.18ರಂದು ಯು ಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಯು.ಜಿ.ರಾಧ ತಿಳಿಸಿದರು.
ಚಿತ್ರದ ನಿರ್ದೇಶಕ ಅಚಲ್ ಉಬರಡ್ಕ , ಸಹ ನಿರ್ದೇಶಕರಾದ ಗುರುಮೂರ್ತಿ ಅಮ್ಮಣ್ಣಾಯ , ರತ್ನ ಸಿಂಚನ, ಸಂಗೀತ ನಿರ್ದೇಶಕ ಸಾತ್ವಿಕ್ ಪಡಿಯಾರ್ , ಛಾಯಾಗ್ರಾಹಕ ಷಣ್ಮುಖ ಪ್ರಸಾದ್, ತಾಂತ್ರಿಕ ಸಲಹೆಗಾರ ಅನೀಶ್ ಗಾಣಿಗ , ಪ್ರಸಾದ ಕೊಲ ಉಪಸ್ಥಿತರಿದ್ದರು. ರಚನ ಗುಡಿಗಾರ್ ಕಾರ್ಯಕ್ರಮ ನಿರೂಪಿಸಿದರು.







































































































































































































