ಕಾಂಗ್ರೆಸ್ ಆಡಳಿತಕ್ಕೆ ಬಂದ ಮೇಲೆ ಶಾಂತಿಯ ಬೀಡಾಗಿದ್ದ ಕರ್ನಾಟಕದಲ್ಲಿ ಮತಾಂಧ ಕೋಮು ಕ್ರಿಮಿಗಳ ಹಾವಳಿ ಹೆಚ್ಚಾಗಿದ್ದು ಇದೀಗ ಹಿಂದೂಗಳು ನೆಮ್ಮದಿಯಾಗಿ ಹಬ್ಬ ಆಚರಿಸಲೂ ಆತಂಕ ಪಡುವ ಸ್ಥಿತಿಗೆ ಬಂದಿರುವುದು ರಾಜ್ಯದ ಪಾಲಿನ ಅತ್ಯಂತ ದುರಂತವೆಂದು ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.
ಮಂಡ್ಯದ ನಾಗಮಂಗಲದಲ್ಲಿ ಗಣಪತಿ ವಿಸರ್ಜನೆ ವೇಳೆ ನಡೆದ ಗಲಭೆಯು ಪೂರ್ವಯೋಜಿತ ಕೃತ್ಯವಾಗಿದ್ದು ಇದರ ಹಿಂದೆ ನಿಷೇಧಿತ ಸಂಘಟನೆಗಳ ಕೈವಾಡವಿರುವ ಶಂಕೆಯಿರುವುದರಿಂದ ಸಮಗ್ರ ತನಿಖೆಯಾಗಬೇಕು ಹೊರತು ಸರ್ಕಾರವೇ ಇದೊಂದು ಸಣ್ಣ ಘಟನೆ, ಆಕಸ್ಮಿಕ ಘಟನೆ ಎಂದು ಮುಚ್ಚಿ ಹಾಕಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ನಮ್ಮನ್ನು ಕೊಲ್ಲಲೂ ಸಹ ಮುಂದಾಗಿದ್ದರು ಎಂದು ಸ್ವತಃ ಪೊಲೀಸರೇ ಹೇಳುತ್ತಿದ್ದರೆ, ಇಲ್ಲಿಂದ ಓಡಿ ಹೋಗಿ ಮೊದಲು ಜೀವ ಉಳಿಸಿಕೊಳ್ಳು ಎಂದು ಪೊಲೀಸರು ನಮ್ಮನ್ನು ಕಳುಹಿಸಿದರು ಎಂದು ಅಲ್ಲಿನ ಹಿಂದೂಗಳು ಹೇಳುತ್ತಿದ್ದಾರೆ. ಇಷ್ಟಾಗಿಯೂ ಸರ್ಕಾರ ಮತಾಂಧ ಕೋಮು ಕ್ರಿಮಿಗಳನ್ನು ರಕ್ಷಿಸಲು, ಎಲ್ಲಾ ನಿಯಮಗಳನ್ನು ಪಾಲಿಸಿ ಗಣೇಶೋತ್ಸವವನ್ನು ಆಚರಿಸಿರುವ ಆಯೋಜಕರನ್ನೇ ಗಲಭೆಯ ಪ್ರಮುಖ ಆರೋಪಿಗಳನ್ನಾಗಿಸಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿ ಹಿಂದೂಗಳು ಎಂತಹ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.


























































































































































































