ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸೋತಿರಬಹುದು. ಆದರೆ, ಶೇಕಡವಾರು ಮತದಾನದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ನಿನ್ನೆ ರಾಷ್ಟ್ರೀಯ ನಾಯಕರು ಕರೆ ಮಾಡಿ ಶ್ಲಾಘಿಸಿ, ನನ್ನ ಸ್ಪರ್ಧೆ ಬಗ್ಗೆ “ಫೈಟ್ ಲೈಕ್ ಎ ಲಯನ್” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪದ್ಮರಾಜ್ ಆರ್. ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಟಿಕೇಟ್ ಘೋಷಣೆ ವೇಳೆ ಇಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ವಾತಾವರಣವಿತ್ತು. ಆದರೆ, ಕಾಂಗ್ರೆಸ್ ಉತ್ತಮವಾಗಿ ಹೋರಾಟ ಮಾಡಿ ಗಮನ ಸೆಳೆದಿದೆ.
ಈ ಸಲ ಕಾಂಗ್ರೆಸ್ 6,14,924 ಮತಗಳನ್ನು ಪಡೆದ ಶೇ. 43.43 ಸಾಧನೆ ಮಾಡಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 4,99,664 ಮತಗಳನ್ನು ಪಡೆದು ಶೇ. 37.14 ದಾಖಲಿಸಿತ್ತು.
ಸೋಲಿನ ನೈತಿಕ ಹೊಣೆ ನಾನೇ ಹೊರುತ್ತೇನೆ. ಇದು ಅಂತ್ಯವಲ್ಲ. ಆರಂಭ. ಮುಂದಿನ ದಿನಗಳಲ್ಲಿಯೂ ಪಕ್ಷದಲ್ಲಿ ಸಕ್ರಿಯವಾಗಿ ಜನಪರವಾಗಿ, ಸೌಹಾರ್ದದಿಂದ ತೊಡಗಿಸಿಕೊಳ್ಳುತ್ತಾ ಬೂತ್ ಮಟ್ಟದಿಂದಲೇ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವತ್ತ ಸಾಗುತ್ತೇನೆ ಎಂದು ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಈ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರ, ನಾಯಕರ ಬೆಂಬಲವನ್ನು ಮರೆಯುವಂತಿಲ್ಲ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆಂದವರು ನುಡಿದರು.

ಈ ಸಲ ಕಾಂಗ್ರೆಸ್ ಸೋತರೂ ನೈತಿಕವಾಗಿ ನಾವು ಗೆದ್ದಿದ್ದೇವೆ. ಬಿಜೆಪಿ ನೈತಿಕವಾಗಿ ಸೋತಿದೆ. ಮುಂದೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮಂಗಳೂರು ನಗರಪಾಲಿಕೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪ್ರಬಲ ಸ್ಪರ್ಧೆ ನೀಡಲಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಶಾಹುಲ್ ಹಮೀದ್, ಶುಭೋದಯ ಆಳ್ವ, ಅಶ್ರಫ್, ಲ್ಯಾನ್ಸಿಲೋಟ್ ಪಿಂಟೋ, ಸಂಶುದ್ದೀನ್, ಅಬ್ದುಲ್ ಲತೀಫ್, ಅಬುಲ್ ಖಾದರ್, ಅಬ್ದುಲ್ ರವೂಫ್, ಕೇಶವ ಮರೋಳಿ, ಸುಹಾನ್ ಆಳ್ವ, ನಜೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.


















































































































































































