ಮಂಗಳೂರು : ಮಂಗಳೂರಿನ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡುತ್ತಾ ಬಿಜೆಪಿ ಸಂಘಟನೆ ಹೇಳಿದಾಗ ಚುನಾವಣೆಯಲ್ಲಿ ನಿಂತುಕೊಂಡೆ .ಮೂರು ಅವಧಿ ಯಶಸ್ವಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಇದೀಗ ಸಂಘಟನೆ ಯಾವುದೇ ಕೆಲಸ ಮಾಡು ಅಂತ ಹೇಳಿದರೆ ಅಷ್ಟೇ ಸಂತೋಷದಿಂದ ಸ್ವೀಕರಿಸುತ್ತೇನೆ. ಈಗ ಸೈನಿಕರಾಗಿ ಸೇವೆ ಸಲ್ಲಿಸಿದ್ದ ಕ್ಯಾಪ್ಟನ್ ಬೃಜೇಶ್ ಚೌಟ ಅವರು ಓರ್ವ ಸಮರ್ಥ ಅಭ್ಯರ್ಥಿ ಆಗಿದ್ದಾರೆ. ಇವರು ಮೂರು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ದಾಖಲಿಸುವುದು ಶತಃಸಿದ್ದ. ನಾವೆಲ್ಲರೂ ಟೀಂ ವರ್ಕ್ ಮಾಡುವ ಮುಖೇನ ಅದನ್ನು ಸಾಧಿಸಬೇಕು. ಜಿಲ್ಲೆಯಲ್ಲಿದ್ದ ಎಲ್ಲಾ ರೀತಿಯ ಗೊಂದಲಗಳು ಅಂತ್ಯಗೊಂಡು ಪ್ರಫುಲ್ಲವಾದ ಬಿಜೆಪಿ ಪರವಾದ ವಾತಾವರಣ ನಿರ್ಮಾಣಗೊಂಡಿದೆ. ಇದೀಗ ನಮ್ಮ ಕೆಲಸ ಚುನಾವಣೆಯನ್ನು ಗೆಲ್ಲುವುದಷ್ಟೇ ಅಲ್ಲಾ, ಗೆಲುವಿನ ಅಂತರ ಹಿಂದಿನ ಎಲ್ಲಾ ರೆಕಾರ್ಡ್ ಅನ್ನು ಬ್ರೇಕ್ ಮಾಡುವಂತೆ ಆಗಬೇಕು ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಕುಂಪಲ ಅವರು ಮಾತನಾಡುತ್ತಾ ಇಲ್ಲಿಯವರೆಗೆ ಎಲ್ಲಾ ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆದಿರುತ್ತದೆ. ಜವಾಬ್ದಾರಿ ತೆಗೆದುಕೊಂಡಿರುವ ಎಲ್ಲಾ ಕಾರ್ಯಕರ್ತರು ಮುಖಂಡರು ಬಹಳ ಉತ್ಸಾಹದಿಂದ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಸಂತಸ ತಂದಿದೆ. ಬೃಜೇಶ್ ಚೌಟ ಅವರ ಪ್ರವಾಸದ ಸಂದರ್ಭದಲ್ಲಿ ಮತದಾರರ ಹಾಗೂ ಸಾರ್ವಜನಿಕರ ಅಭೂತಪೂರ್ವ ಸ್ಪಂದನೆ ದೊರೆತಿರುವುದು ಹರ್ಷ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಂದೆ ಈ ಚುನಾವಣಾ ಕಾರ್ಯವನ್ನು ಮುಂದಿನ ಹಂತಕ್ಕೆ ಪರಿಣಾಮಕಾರಿಯಾಗಿ ಬೂತ್ ಮಟ್ಟದವರೆಗೆ ತೆಗೆದುಕೊಂಡು ಹೋಗುವ ಬಗ್ಗೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ವಿವರವಾಗಿ ಚರ್ಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಲಾಯಿತು.
ಈ ಸಭೆಯಲ್ಲಿ ನಿತಿನ್ ಕುಮಾರ್, ಗೋಪಾಲಕೃಷ್ಣ ಹೇರಳೆ, ಪ್ರಸಾದ್ ಕುಮಾರ್, ಶಾಸಕರಾದ ಡಿ. ವೇದವ್ಯಾಸ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಮಹಾಪೌರರಾದ ಸುಧೀರ್ ಶೆಟ್ಟಿ ಕಣ್ಣೂರು, ಮಾಜಿ ಮಂತ್ರಿ ನಾಗರಾಜ ಶೆಟ್ಟಿ, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಹಾಗೂ ಪದಾಧಿಕಾರಿಗಳು ಮುಖಂಡರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು ಹಾಗೂ ಯತೀಶ್ ಆರ್ವಾರ್ ಧನ್ಯವಾದ ಸಮರ್ಪಿಸಿದರು.

















































































































































































