ಎಂಪಿ ನಳಿನ್ ಕುಮಾರ್ ಕಟೀಲು ಅವರ ಸಾಧನೆ, ಬಿಡುಗಡೆಯಾದ ಅನುದಾನ ವಿವರಗಳ ಹೊತ್ತಗೆ ಬಿಡುಗಡೆ. ಜಿಲ್ಲೆಗೆ 1 ಲಕ್ಷ ಕೋಟಿ ರೂ. ಅನುದಾನದ ವಿತರಣೆ.

110K Views 1 Mar 2024

ಮಂಗಳೂರು: ದಕ್ಷಿಣ ಕನ್ನಡ ಸಂಸದ ನಳಿನ್‌ಕುಮಾರ್ ಕಟೀಲ್ ಅವರ 2009 ರಿಂದ 2023 ರ ವರೆಗಿನ ಸತತ ಮೂರು ಅವಧಿಗಳಲ್ಲಿ ಜಿಲ್ಲೆಯಲ್ಲಿ ನಡೆದ ಅಭಿವೃದ್ಧಿ ಕಾರ್ಯ ಹಾಗೂ ಬಂದಿರುವ ಅನುದಾನ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮಾಡಿದ ಸಾಧನೆ ಕುರಿತ ವಿವರಗಳಿರುವ ಪುಸ್ತಕವನ್ನು ಗುರುವಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು ನಳಿನ್ ಸತತ ಮೂರು ಅವಧಿಗಳಲ್ಲಿ ಜಿಲ್ಲೆಗೆ ಒಂದು ಲಕ್ಷ ಕೋಟಿ ರೂ. ಅನುದಾನ ತಂದು ಜಿಲ್ಲೆಯ ಅಭಿವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಅವರ ಈ ಸಾಧನೆಯನ್ನು ಅಂಕಿ ಅಂಶಗಳ ಸಹಿತ ಜನರ ಮುಂದೆ ಇರಿಸಲಾಗಿದೆ ಎಂದು ಹೇಳಿದರು.

1 ಲಕ್ಷ ಕೋಟಿ ರೂ.
ಹಿಂದೆ ಯುಪಿಎ ಅವಧಿಯಲ್ಲಿ ಜಿಲ್ಲೆಗೆ 4.5 ಸಾವಿರ ಕೋಟಿ ಬಂದಿದ್ದರೆ ಬಳಿಕದ ಅವಧಿಗಳಲ್ಲಿ 95 ಸಾವಿರ ಕೋಟಿ ರೂ.ಗೂ ಅಧಿಕ ಅನುದಾನ ತಂದಿದ್ದಾರೆ. ಅವರ ಅವಧಿಯಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾರ್ಯ ಕೆಲವು ಪೂರ್ಣಗೊಂಡಿದ್ದು, ಕೆಲವು ಪ್ರಗತಿಯಲ್ಲಿವೆ. ಸಾವಿರಾರು ಕೋಟಿ ರೂ. ಅನುದಾನ ತಂದು ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿದ್ದಾರೆ. ಬಂದರು ಇಲಾಖೆ ಅಪೂರ್ವ ಅಭಿವೃದ್ಧಿಯಾಗಿದೆ. ವಂದೇ ಭಾರತ್ ರೈಲನ್ನು ಜಿಲ್ಲೆಗೆ ತಂದು ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.
ಸಂಸದ ನಳಿನ್‌ಕುಮಾರ್ ಕಟೀಲು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್, ಕಿಶೋರ್ ಬೊಟ್ಯಾಡಿ ಇದ್ದರು.

Scroll to Top