ಮಂಗಳೂರು, ಸೆ. 18: ಕರಾವಳಿ ಜನರ ದಶಕಗಳ ನಿರೀಕ್ಷೆಗೆ( ಸೆ. 18)ಇಂದು ತೆರೆ ಬಿದ್ದಿದೆ. ಪಡೀಲ್ನ ಪ್ರಜಾ ಸೌಧದಲ್ಲಿ ನಡೆದ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯ ನಂತರ ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಗುರುತಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಮಂಗಳೂರು ಪಡೀಲ್ ನ ಪ್ರಜಾಸೌಧದಲ್ಲಿ ನಡೆದ ಐತಿಹಾಸಿಕ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಮೊದಲಾದವರು ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಡಿಕೆಶಿ ಅವರು, “ತುಳು ಒಂದು ಭಾಷೆ ಮಾತ್ರವಲ್ಲ, ಇದು ತುಳುನಾಡಿನ ಸಂಸ್ಕೃತಿ, ನಾಗರೀಕತೆ ಮತ್ತು ಸ್ವಾಭಿಮಾನದ ಸಂಕೇತ. ಇದರ ಪ್ರಾಚೀನತೆ ಮತ್ತು ಸಾಹಿತ್ಯಿಕ ಶ್ರೀಮಂತಿಕೆಯನ್ನು ಪರಿಗಣಿಸಿ ಈ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದರು.
ಹಿನ್ನೆಲೆ:*
ಈ ಹಿಂದೆ ಡಾ. ಎಂ. ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪರಿಣಿತರ ಸಮಿತಿಯು ತುಳುವಿಗೆ ಎರಡನೇ ಅಧಿಕೃತ ಭಾಷೆ ಸ್ಥಾನ ನೀಡಲು ಕಾನೂನಿನಲ್ಲಿ ಯಾವುದೇ ತೊಡಕಿಲ್ಲ ಎಂದು ಸ್ಪಷ್ಟಪಡಿಸಿತ್ತು. ಬಳಿಕ ಆಂಧ್ರಪ್ರದೇಶದ ಭಾಷಾ ನೀತಿ ಅಧ್ಯಯನಕ್ಕಾಗಿ ತೆರಳಿದ್ದ ನಿಯೋಗವು 2026ರ ಮಾರ್ಚ್ನಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿತ್ತು.
ಹೊಸ ಅನುದಾನ:
ತುಳು ಭಾಷೆಯ ಬೆಳವಣಿಗೆ, ತರಬೇತಿ ಕಾರ್ಯಕ್ರಮಗಳು ಮತ್ತು ಆಡಳಿತದಲ್ಲಿ ಬಳಕೆಗಾಗಿ ಪ್ರತಿ ವರ್ಷ 82 ಲಕ್ಷ ರೂಪಾಯಿ ಮೀಸಲಿಡುವುದಾಗಿ ಸಿಎಂ ತಿಳಿಸಿದರು. ಐದು ಪ್ರಮುಖ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಮತ್ತು 18 ಲಕ್ಷಕ್ಕೂ ಹೆಚ್ಚು ಜನರಿಂದ ಮಾತನಾಡಲ್ಪಡುವ ತುಳು, ಈ ನಿರ್ಧಾರದಿಂದ ಸಂವಿಧಾನದ 8ನೇ ಅನುಸೂಚಿಯಲ್ಲಿ ಸ್ಥಾನ ಪಡೆಯುವ ಹಾದಿ ಸುಗಮವಾಗಿದೆ.
ಈ ಘೋಷಣೆಯಿಂದ ಕರಾವಳಿ ಜಿಲ್ಲೆಗಳಲ್ಲಿ ಸಂಭ್ರಮ ಮನೆ ಮಾಡಿದೆ.ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಶಾಸಕ ಸುನೀಲ್ ಕುಮಾರ್ ಸಹಿತ ಜನ ಪ್ರತಿನಿಧಿಗಳು,ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸಹಿತ ವಿವಿಧ ತುಳು ಪರ ಸಂಘಟನೆಗಳು ಸರ್ಕಾರದ ನಿರ್ಧಾರವನ್ನು ಮುಕ್ತವಾಗಿ ಸ್ವಾಗತಿಸಿವೆ.












































































































































































