ಬಜೆಟ್ ನಲ್ಲಿ ಮಂಗಳೂರು ದಸರಾಗೆ 5 ಕೋಟಿ:- ಮುಖ್ಯಮಂತ್ರಿಗಳಿಗೆ ಶಾಸಕ ಕಾಮತ್ ಮನವಿ

115.3K Views 30 Jan 2026

ಮಂಗಳೂರು ದಸರಾ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಸಂಕೇತವಾಗಿದ್ದು ಪ್ರತೀ ವರ್ಷ ದೇಶ-ವಿದೇಶಗಳ ಲಕ್ಷಾಂತರ ಭಕ್ತರನ್ನು ಆಕರ್ಷಿಸುತ್ತಿದ್ದು ಇಂತಹ ವೈಭವದ ಹಬ್ಬಕ್ಕೆ ರಾಜ್ಯ ಸರ್ಕಾರವು ಈ ಬಾರಿಯ 2026-27 ನೇ ಸಾಲಿನ ಬಜೆಟ್ ನಲ್ಲಿ ರೂ.5 ಕೋಟಿ ಅನುದಾನ ಘೋಷಣೆ ಮಾಡುವಂತೆ ಶಾಸಕ ಡಿ.ವೇದವ್ಯಾಸ ಕಾಮತ್ ರವರು ಮುಖ್ಯಮಂತ್ರಿ ಸಿದ್ದರಾಮಯ್ಯ ನವರನ್ನು ಭೇಟಿ ಮಾಡಿ ಮನವಿ ಮಾಡಿದರು.


ಮೈಸೂರು ನಂತರ ರಾಜ್ಯದಲ್ಲೇ ಅತೀ ಹೆಚ್ಚು ಜನ ಸೇರುವ ಹಬ್ಬ ಮಂಗಳೂರು ದಸರಾ. ನವರಾತ್ರಿಯ ಸಂದರ್ಭದಲ್ಲಿ ಇಲ್ಲಿನ ಪ್ರಸಿದ್ಧ ತೀರ್ಥಕ್ಷೇತ್ರಗಳು ನಾಡಿನ ಭಕ್ತರಿಂದ ತುಂಬಿರುತ್ತವೆ. ರಾಜ್ಯ ಸರ್ಕಾರ ಬಜೆಟ್ ನಲ್ಲಿ 5 ಕೋಟಿ ಘೋಷಣೆ ಮಾಡಿದರೆ ಇನ್ನಷ್ಟು ವಿಜೃಂಭಣೆಯಿಂದ ದಸರಾ ಆಯೋಜನೆ ಮಾಡಬಹುದಾಗಿದ್ದು ಹಬ್ಬದ ಸಂಭ್ರಮವೂ ಹೆಚ್ಚಲಿದೆ. ದಯವಿಟ್ಟು ಈ ಬಗ್ಗೆ ಆದ್ಯತೆಯ ಮೇರೆಗೆ ಕ್ರಮಗೊಳ್ಳಿ ಎಂದು ಶಾಸಕರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಈ ಹಿಂದೆ ಪಾಲಿಕೆಯಲ್ಲಿ ಬಿಜೆಪಿ ಆಡಳಿತದಲ್ಲಿದ್ದಾಗ, ದಸರಾ ವೇಳೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಿಂದ ಆರಂಭವಾಗಿ ಮಂಗಳಾದೇವಿ, ಉರ್ವ ಮಾರಿಗುಡಿ, ಕಾರ್ ಸ್ಟ್ರೀಟ್, ಡೊಂಗರಕೇರಿ, ಹೀಗೆ ಇಡೀ ನಗರಕ್ಕೆ ಪಾಲಿಕೆ ವತಿಯಿಂದಲೇ ದೀಪಾಲಂಕಾರಗೊಳ್ಳಬೇಕು ಎಂದು ಚಿಂತನೆ ನಡೆಸಿದ ಶಾಸಕ ಕಾಮತ್ ರವರು, ಅಂದಿನ ಮೇಯರ್, ಕಾರ್ಪೊರೇಟರ್, ಸ್ಥಾಯಿ ಸಮಿತಿ ಸದಸ್ಯರು, ಜಿಲ್ಲಾಧ್ಯಕ್ಷರ ಸಹಿತ ಎಲ್ಲರ ಸಹಕಾರದೊಂದಿಗೆ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದರು. ಇದರಿಂದಾಗಿ ದೇವಸ್ಥಾನಗಳಿಗೆ ದೀಪಾಲಂಕಾರಕ್ಕಾಗಿಯೇ ವರ್ಷಕ್ಕೆ ಸುಮಾರು 50 ರಿಂದ 60 ಲಕ್ಷದವರೆಗಿನ ಬಹುದೊಡ್ಡ ಆರ್ಥಿಕ ಹೊರೆಯಾಗುವುದು ತಪ್ಪಿರುವುದನ್ನು ಇಲ್ಲಿ ಸ್ಮರಿಸಬಹುದು.

Read More News

Scroll to Top