ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬಡ ನಿವೇಶನ ರಹಿತರಿಗೆ G+ 3 ಮಾದರಿ ವಸತಿಯೋಜನೆಯನ್ನು ಜಾರಿಗೊಳಿಸಲು ಒತ್ತಾಯಿಸಿ ನಿವೇಶನ ರಹಿತರ ಹೋರಾಟ ಸಮಿತಿ (CPIM ) ನೇತೃತ್ವದಲ್ಲಿ ಲಾಲ್ ಬಾಗ್ ನಲ್ಲಿರುವ ನಗರಪಾಲಿಕೆ ಕಚೇರಿ ಎದುರು ಪ್ರತಿಭಟನಾ ಪ್ರದರ್ಶನ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐಎಂ ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿರುವ ಸುಮಾರು 7000ದಷ್ಟು ಮನೆ ನಿವೇಶನ ಆಕಾಂಕ್ಷಿಗಳ ಪರಿಸ್ಥಿತಿ ಡೋಲಾಯಮಾನವಾಗಿದೆ. ಕೇಂದ್ರ, ರಾಜ್ಯ ಸರಕಾರ ಮತ್ತು ಸ್ಥಳೀಯಾಡಳಿತವು ನಿವೇಶನ ರಹಿತರಿಗೆ ಸೂರು ನೀಡುವ ಕುರಿತಾದ ಪತ್ರಿಕಾ ಪ್ರಕಟಣೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ವಸತಿ ವಿತರಿಸಲಾಗಿದೆ ಎಂಬ ಆಕರ್ಷಕ ಹೇಳಿಕೆಗಳು ರಾರಾಜಿಸುತ್ತಿದೆ. ಆದರೆ ವಾಸ್ತವಿಕವಾಗಿ ಅದು ಕೇವಲ ಪ್ರಚಾರದ ತೆವಳಿಗಾಗಿಯೇ ಹೊರತು ಎಲ್ಲಿಯೂ ಜಾರಿಯಾಗುತ್ತಿಲ್ಲ. ಪಾಲಿಕೆ ವ್ಯಾಪ್ತಿಯ ಶಾಸಕರು ವಸತಿ ನೀಡುವ ಬದಲು ನಿವೇಶನ ರಹಿತರ ಹೆಸರಿನಲ್ಲಿ TDR ನೀಡಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಎಸಗಿದ್ದಾರೆ ಎಂದರು.
ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಮಾತನಾಡಿ, ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್ನ ಇಡ್ಯಾದಲ್ಲಿ ಬಹುಮಹಡಿಗಳ ನಿವೇಶನ ರಹಿತರ ವಸತಿ ಸಂಕೀರ್ಣ ಕಾಮಗಾರಿ ಅರ್ಧದಲ್ಲೇ ನಿಂತು ಆರು ವರ್ಷಗಳು ಆದರೂ ಕೂಡ ಜನಪ್ರತಿನಿದಿಗಳಿಗೆ ಯಾವುದೇ ಸಂಬಂಧ ಇರದ ರೀತಿಯಲ್ಲಿ ಮೂಕರಾಗಿದ್ದಾರೆ
ಶಕ್ತಿನಗರದಲ್ಲಿಯೂ ವಸತಿ ನಿರ್ಮಾಣ ಯೋಜನೆ ಅಂತಿಮಗೊಂಡಿಲ್ಲ. ಮ.ನ.ಪಾ.ದ ಅಡಳಿತ ಮತ್ತು ಜನಪ್ರತಿನಿಧಿಗಳ ಉಡಾಫೆ ಮನೋಭಾವವೇ ಇದಕ್ಕೆ ಕಾರಣ. ಈ ಎರಡು ಯೋಜನೆಗಳು ಅಲ್ಲದೆ ಟಿಡಿಆರ್ನಲ್ಲಿ ವಸತಿಹೀನರ ಹೆಸರಿನಲ್ಲಿ ನಾಲೈದು ಕಡೆ ಮಂಗಳೂರು ಮಹಾನಗರ ಪಾಲಿಕೆ ಜಾಗವನ್ನು ಪಡೆದಿದೆಯೇ ವಿನಾಃ ಕಾಮಗಾರಿಯ ಪ್ರಸ್ತಾಪ ಆಗಿರುವುದಿಲ್ಲ. ಬದಲಾಗಿ ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ ಎಸಗಲಾಗಿದೆ ಎಂದರು.
Dyfi ನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ, ಕಳೆದ ಜನವರಿ ತಿಂಗಳಿನಿಂದ ಮೂರು ಬಾರಿ ಪ್ರತಿಭಟನೆಯನ್ನು ನಡೆಸಲಾಗಿದೆ. ಆದರೆ ಕುಂಭಕರ್ಣ ನಿದ್ದೆಯಲ್ಲಿ ಇರುವ ಮಂಗಳೂರು ಮಹಾನಗರ ಪಾಲಿಕೆ ಯಾವುದೇ ರೀತಿಯಲ್ಲಿ ಸ್ಪಂಧಿಸುತ್ತಿಲ್ಲ.
ಆದುದರಿಂದ ಮ.ನ.ಪಾ.ದ ಜನವಿರೋಧಿ ಧೋರಣೆ ವಿರೋಧಿಸಿ ತೀವೃ ಸ್ವರೂಪದ ಹೋರಾಟಮುಂದಿನ ದಿನಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು
ಪ್ರತಿಭಟನೆಯಲ್ಲಿ ಮಾಜಿ ಕಾರ್ಪೋರೇಟರ್ ದಯಾನಂದ ಶೆಟ್ಟಿ , ಯುವಜನ ಮುಖಂಡರಾದ ಶ್ರೀನಾಥ್ ಕಾಟಿಪಳ್ಳ ಸಭೆಯನ್ನುದ್ದೇಶಿಸಿ. ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ಹೋರಾಟ ಸಮಿತಿಯ ಅಧ್ಯಕ್ಷರಾದ ಅಸುಂತಾ ಡಿಸೋಜ, ನವೀನ್ ಕೊಂಚಾಡಿ , ಅಬ್ದುಲ್ ತಯ್ಯೂಬ್, ನಾಗೇಶ್ ಕೋಟ್ಯಾನ್,ಮನೋಜ್ ವಾಮಂಜೂರ್,ಯೋಗಿತಾ ಉಳ್ಳಾಲ್ ವಹಿಸಿದ್ದರು.
ಪ್ರತಿಭಟನೆಯಲ್ಲಿ DHS ಮುಖಂಡರಾದ ಕೃಷ್ಣ ತಣ್ಣೀರುಬಾವಿ, ರಾದಾಕೃಷ್ಣ , ತಿಮ್ಮಯ್ಯ ಕೊಂಚಾಡಿ, DYFI ನ ಜಗದೀಶ ಬಜಾಲ್ , ನಾಸೀರ್ ಬೆಂಗ್ರೆ ಉಪಸ್ಥಿತರಿದ್ದರು.
ಹೋರಾಟಸಮಿತಿಯ ಕಾರ್ಯದರ್ಶಿ ಪ್ರಮೀಳಾ ಶಕ್ತಿನಗರ ವಂದನಾರ್ಪನೆಗೈದರು.





















































































































































































