ಕ್ಯಾಥೊಲಿಕ್‌ ಧರ್ಮಗುರು ಫಾ. ವಿನ್ಸೆಂಟ್‌ ಮೊಂತೇರೊ ನಿಧನ. ವೈಸಿಎಸ್‌, ವೈಎಸ್ಎಂ ಮಾಜಿ ರಾಷ್ಟ್ರೀಯ ನಿರ್ದೇಶಕರಾಗಿದ್ದ ಫಾ. ವಿನ್ಸೆಂಟ್‌

100.6K Views 29 Aug 2025

ಮಂಗಳೂರು: ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಗುರು, ಯಂಗ್ ಕ್ರಿಶ್ಚಿಯನ್ ಸ್ಟೂಡೆಂಟ್ಸ್‌ (ವೈಸಿಎಸ್‌) ಮತ್ತು ಯಂಗ್ ಸ್ಟೂಡೆಂಟ್ಸ್‌ ಮೂವ್‌ಮೆಂಟ್‌ (ವೈಎಸ್ಎಂ) ಸಂಘಟನೆಗಳ ಮಾಜಿ ರಾಷ್ಟ್ರೀಯ ನಿರ್ದೇಶಕ ಹಾಗೂ ವೈಸಿಎಸ್‌ ಸಂಘಟನೆಯ ಏಶಿಯಾ ವಿಭಾಗದ ಚಾಪ್ಲೈನ್ ಆಗಿ ಸೇವೆ ಸಲ್ಲಿಸಿದ್ದ ವಂದನೀಯ ಫಾ. ವಿನ್ಸೆಂಟ್‌ ಮೊಂತೇರೊ (71) ಅವರು ಮಂಗಳೂರಿನ ಜಪ್ಪು ಸೈಂಟ್ ಜೋಸೆಫ್‌ ವಾಜ್ ಹೋಂ ನಲ್ಲಿ ಆಗಸ್ಟ್ 29 ರಂದು ನಿಧನ ಹೊಂದಿದರು.
ಮೂಲತ: ಮಂಗಳೂರಿನ ಆಂಜೆಲೋರ್ ಚರ್ಚ್ ವ್ಯಾಪ್ತಿಯ ನಿವಾಸಿಯಾಗಿದ್ದ ಅವರು 1981 ರಲ್ಲಿ ಧರ್ಮಗುರು ದೀಕ್ಷೆ ಸ್ವೀಕರಿಸಿದ್ದರು. ಬಳಿಕ ನಾಲ್ಕು ದಶಕಗಳ ಧರ್ಮಗುರುಗಳಾಗಿ ಸಮರ್ಪಣೆ ಮತ್ತು ಬದ್ಧತೆಯೊಂದಿಗೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕಿನ್ನಿಗೋಳಿ ಸಮೀಪದ ಕಿರೆಮ್‌ ಚರ್ಚ್‌ ನಲ್ಲಿ ಸಹಾಯಕ ಗುರುಗಳಾಗಿ ಮತ್ತು ಬಳಿಕ ಮಂಗಳೂರಿನ ಜಪ್ಪು ಸಂತ ಅಂತೋನಿ ಆಶ್ರಮದ ಸಹಾಯಕ ನಿರ್ದೇಶಕರಾಗಿ ತಮ್ಮ ಸೇವೆಯನ್ನು ಪ್ರಾರಂಭಿಸಿದ್ದರು. ಧಾರ್ಮಿಕ ಸೇವೆಯ ಜತೆಗೆ ಮಂಗಳೂರು ಧರ್ಮ ಪ್ರಾಂತ್ಯದ ಯುವಜನರ ಸಂಘಟನೆಗಳಾದ ಐಸಿಯವೈಎಂ, ವೈಸಿಎಸ್ ಮತ್ತು ವೈಎಸ್‌ಎಂ ನಿರ್ದೇಶಕರಾಗಿ ಹಾಗೂ ಬಳಿಕ ಪ್ರಾದೇಶಿಕ ನಿರ್ದೇಶಕ ಮತ್ತು 1989–1995 ಅವಧಿಯಲ್ಲಿ ರಾಷ್ಟ್ರೀಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಯುವಜನ ಸೇವೆಯಲ್ಲಿನ ಬದ್ಧತೆಯನ್ನು ಗುರಿತಿಸಿ 2004 ರಲ್ಲಿ ವೈಸಿಎಸ್‌ನ ಏಷ್ಯಾ ವಿಭಾಗದ ಚಾಪ್ಲೈನ್ ಆಗಿಯೂ ಅವರನ್ನು ನೇಮಕ ಮಾಡಲಾಗಿತ್ತು.
ಧರ್ಮಗುರುಗಳಾಗಿ ಅವರು ಉಡುಪಿ ಜಿಲ್ಲೆಯ ಪಾಂಗಾಳ, ಕಿನ್ನಿಗೋಳಿ ಹಾಗೂ ಅಂತಿಮವಾಗಿ ಮಂಗಳೂರಿನ ಬೆಂದೂರ್ ಚರ್ಚ್ ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. ಕ್ಯಾಥೊಲಿಕ್ ಸಭಾ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ತಮ್ಮ ನಿವೃತ್ತ ಜೀವನವನ್ನು ಜಪ್ಪು ಸಂತ ಜುಜೆ ವಾಜ್ ಹೋಂನಲ್ಲಿ ಕಳೆಯುತ್ತಿದ್ದರು. ಯುವಕರಿಗೆ ಮತ್ತು ಧರ್ಮಗುರುಗಳಿಗೆ ಮಾರ್ಗದರ್ಶನ ನೀಡಿದ ದಾರ್ಶನಿಕ ನಾಯಕ ಎಂಬುದಾಗಿ ಅವರನ್ನು ಸ್ಮರಿಸಲಾಗುತ್ತಿದೆ.
ಅವರ ಅಂತ್ಯಕ್ರಿಯೆಯ ಬಲಿಪೂಜೆ ಮತ್ತು ಅಂತ್ಯ ವಿಧಿಗಳು ಆಗಸ್ಟ್ 31 ರಂದು ಭಾನುವಾರ ಸಂಜೆ 4 ಗಂಟೆಗೆ ವೆಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರರ್ ಚರ್ಚ್‌ನಲ್ಲಿ ನಡೆಯಲಿವೆ.
ಕ್ಯಾಥೊಲಿಕ್ ಸಭಾ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದ ವಂದನೀಯ ಫಾ. ವಿನ್ಸೆಂಟ್‌ ಮೊಂತೇರೊ ಅವರ ನಿಧನಕ್ಕೆ ಕ್ಯಾಥೊಲಿಕ್ ಕೇಂದ್ರೀಯ ಸಮಿತಿಯ ಅಧ್ಯಕ್ಷ ಸಂತೋಷ್‌ ಡಿ’ಸೋಜಾ ಮತ್ತು ಪದಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Read More News

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಯಾರಾಗಲಿದ್ದಾರೆ ನೂತನ ಅಧ್ಯಕ್ಷ. ಚುನಾವಣೆ ಪ್ರಕ್ರಿಯೆಯಲ್ಲಿ ಕಾರ್ಯಕರ್ತರ ಬೆಂಬಲ ಯಾರಿಗೆ? ಕಾಂಗ್ರೆಸ್ ಹೈಕಮಾಂಡ್ ಮೊತ್ತ ಮೊದಲ ಬಾರಿಗೆ ಅಲ್ಪ ಸಂಖ್ಯಾತ ಸಮುದಾಯದ ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಸಾಧ್ಯತೆ ಬಗ್ಗೆ Mp MLA’s News exclusive Report

Scroll to Top