ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಮಂಗಳೂರು – ಮಾನವ ಸೇವೆಯ ಹದಿನಾರು ವೈಭವಯುತ ವರ್ಷಗಳ ಸಂಭ್ರಮಾಚರಣೆ

91.7K Views 28 Aug 2025

2025ರ ಆಗಸ್ಟ್ 26ರಂದು, ಕೋಲ್ಕತ್ತಾದ ಸಂತ ಮದರ್ ತೆರೆಸಾ ಅವರ ಜನ್ಮದಿನದ ಸುದಿನದಂದೇ, ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಇವರ ಮಾನವಸೇವೆಯ ಹದಿನಾರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂತೋಷವನ್ನು ಭಾವಪೂರ್ಣವಾಗಿ ಹಾಗೂ ಅತ್ಯಂತ ಸಡಗರದಿಂದ ಆಚರಿಸಿತು.
ಕಾರ್ಯಕ್ರಮವು ದಿವ್ಯ ಬಲಿಪೂಜೆಯೊಂದಿಗೆ ಪ್ರಾರಂಭವಾಯಿತು. ಮಂಗಳೂರು ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಕುಲಪತಿಗಳಾದ ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಪ್ರಧಾನ ಗುರುಗಳಾಗಿ ದಿವ್ಯ ಬಲಿಪೂಜೆಯನ್ನು ನೆರವೇರಿಸಿದರು. ವಂ. ಫಾ. ಪೀಟರ್ ರೆಜಿನಾಲ್ಡ್ ಡಿ’ಸೋಜ, ವಂ. ಫಾ. ಲೀಗೊರಿ ಕ್ರಾಸ್ಟಾ ಓಸಿಡಿ (ನಿರ್ವಹಣಾಧಿಕಾರಿ, ರಿಷಿವನ–ಆಧ್ಯಾತ್ಮಿಕ ಕೇಂದ್ರ, ರಾಣಿಪುರ), ವಂ. ಫಾ. ಸಿರಿಲ್ ಡಿ’ಸೋಜ (ಸ್ನೇಹಾಲಯದ ಚಾಪ್ಲೇನ್), ಹಾಗೂ ವಂ. ಫಾ. ಡೊಮಿನಿಕ್ ಸೆಕ್ವೇರಾ ಎಸ್ಡಿಬಿ (ಹೋಲಿ ಕ್ರಾಸ್ ಚರ್ಚ್, ಪಾವೂರು) ದಿವ್ಯ ಬಲಿ ಪೂಜೆಯಲ್ಲಿ ಸಹಭಾಗಿಯಾಗಿದ್ದರು.


ಈ ಧನ್ಯಾತಾ ಬಲಿಪೂಜೆಯನ್ನು ಕಳೆದ ಹದಿನಾರು ವರ್ಷಗಳಲ್ಲಿ ಸ್ನೇಹಾಲಯಕ್ಕೆ ಸಹಕಾರ, ದಾನ, ಪ್ರೀತಿ ಮತ್ತು ಪ್ರೋತ್ಸಾಹವನ್ನು ನೀಡಿದ ಎಲ್ಲಾ, ಶುಭಚಿಂತಕರು ಹಾಗೂ ಹಿತೈಷಿಗಳಿಗಾಗಿ ಅರ್ಪಿಸಲಾಯಿತು.
ಸಾಹಿತ್ಯ ಕೃತಿಗಳ ಬಿಡುಗಡೆ:
ಬಲಿಪೂಜೆಯ ನಂತರ, ಶ್ರೀ ಜಿಯೋ ಡಿ. ಸಿಲ್ವಾ ಅಗ್ರಾರ್ ಅವರ ಎರಡು ಸೃಜನಶೀಲ ಕೃತಿಗಳ ಸ್ಮರಣೀಯ ಅನಾವರಣ ನೆರವೇರಿತು.
ಮೊದಲ ಕೃತಿ: “The Chosen One” – ಆಂಗ್ಲ ಭಾಷೆಯಲ್ಲಿ ರಚಿಸಲ್ಪಟ್ಟ ಈ ಕೃತಿಯಲ್ಲಿ ಸಂಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ತಾ ಅವರ ಅಮೋಘ ಜೀವನಗಾಥೆ, ಸಾಧನೆಗಳು, ಹಾಗೂ ಸಂಸ್ಥೆಯ ನಿರ್ಮಾಣಕ್ಕಾಗಿ ನಡೆಸಿದ ದುರ್ಗಮವಾದ ಹೋರಾಟವನ್ನು ಸಾಹಿತ್ಯಮಯ ಶೈಲಿಯಲ್ಲಿ ಚಿತ್ರಿಸಲಾಗಿದೆ. “ದಿ ಚೊಸನ್ ಒನ್” ಅಂದರೆ “ಆರಿಸಲ್ಪಟ್ಟವನು” ಎನ್ನುವ ಶೀರ್ಷಿಕೆಯಲ್ಲಿ ಲೋಕಾರ್ಪಣೆಗೊಂಡ ಈ ಪುಸ್ತಕಕ್ಕೆ ಶ್ರಿಯುತ ಜೆ. ವಿ. ಡಿ ಮೆಲ್ಲೊ ಇವರು ಸೊಗಸಾದ ಪ್ರಸ್ತಾವನೆಯನ್ನು ಬರೆದಿರುತ್ತಾರೆ.
ಎರಡನೇ ಕೃತಿ: ಕೊಂಕಣಿ ಭಾಷೆಯ “ಪಾಟಿಂ ಯಾ ಮುಕಾರ್ ಮೇಟಾಂ ತುಜಿಂ” – ಸಕಾರಾತ್ಮಕ ಚಿಂತನೆಗಳನ್ನು ಯುವಪೀಳಿಗೆಗೆ ಪ್ರೇರಕವಾಗುವಂತೆ ಲೇಖನರೂಪದಲ್ಲಿ ಸಂಕಲಿಸಿದ ಪುಸ್ತಕವಾಗಿದೆ.. ಈ ಅದ್ವಿತೀಯ ಕೃತಿಗಳು ರೂಪಗೊಂಡಿರುವ ಶ್ರಮದ ಹಿಂದೆ ಪ್ರಭಾವಿ ಲೇಖಕರಾದ ಶ್ರೀ ಜಿಯೋ ಡಿ’ ಸಿಲ್ವ ಅವರ ಅದ್ಭುತ ಸಾಹಿತ್ಯ ಮತ್ತು ಕೌಶಲ್ಯವನ್ನು ಕಾಣಬಹುದಾಗಿದೆ. ಈ ಕೃತಿಗಳನ್ನು ವಂದನೀಯ ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ. ಗೌರವಪೂರ್ವಕವಾಗಿ ಅನಾವರಣಗೊಳಿಸಿ ಬಿಡುಗಡೆ ಮಾಡಿದರು.
ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ – ಸೇವೆಯ ಮೆಚ್ಚುಗೆ:
ಈ ಸಂದರ್ಭದಲ್ಲಿ, 2024–2025ರಲ್ಲಿ ಸ್ನೇಹಾಲಯದಲ್ಲಿ ನೀಡಿದ ವಿಶಿಷ್ಟ ಸೇವೆಯನ್ನು ಪರಿಗಣಿಸಿ, ಶ್ರೀ ಪುರುಷೋತ್ತಮ (ಸ್ನೇಹಾಲಯದ ನಿರ್ವಹಣಾ ಮೇಲ್ವಿಚಾರಕ) ಅವರಿಗೆ “ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ” ಯನ್ನು ಪ್ರದಾನಿಸಿ ಅವರನ್ನು ಗೌರವಿಸಲಾಯಿತು.
ಕೃತಜ್ಞತೆಯ ವಂದನಾ ನುಡಿಗಳು
ಸ್ನೇಹಾಲಯದ ಸಂಸ್ಥಾಪಕರಾದ ಶ್ರೀ ಜೋಸೆಫ್ ಕ್ರಾಸ್ಟಾ ತಮ್ಮ ಭಾವಪೂರ್ಣ ಭಾಷಣದ ಸಂದರ್ಭದಲ್ಲಿ, ಸಂಸ್ಥೆಯ ದೀರ್ಘಯಾತ್ರೆಯಲ್ಲಿ ಅಡಿಗಲ್ಲಿನಂತೆ ಬೆಂಬಲಿಸಿದ ಎಲ್ಲಾ ಧಾನಿಗಳು, ಹಿತೈಷಿಗಳು ಹಾಗೂ ಸ್ನೇಹಿತರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸಿದರು. ಅವರೊಂದಿಗೆ ಶ್ರೀಮತಿ ಒಲಿವಿಯಾ ಕ್ರಾಸ್ಟಾ ಅವರು ಅತಿಥಿಗಳಿಗೂ ಸಭಿಕರಿಗೂ ಹೃತ್ಪೂರ್ವಕ ಧನ್ಯವಾದ ವ್ಯಕ್ತಪಡಿಸಿದರು.
ಸಹಭೋಜನ ಸಮಾರೋಪ
ಅನೇಕ ದಾನಿಗಳು, ಹಿತೈಷಿಗಳು ಮತ್ತು ಶುಭಚಿಂತಕರ ಸಾನ್ನಿಧ್ಯದಲ್ಲಿ ಸಮಾರಂಭವು ಸೌಹಾರ್ದಪೂರ್ಣ ಸಹಭೋಜನದೊಂದಿಗೆ ಸಮಾರೋಪಗೊಂಡಿತು.

Read More News

Scroll to Top