ಯಕ್ಷಗಾನದ ಕಲಿಕೆಯಿಂದ ವಿದ್ಯಾರ್ಥಿಗಳ ಏಕಾಗ್ರತೆ ಹೆಚ್ಚುತ್ತದೆ

98.1K Views 5 Jul 2025

“ಯಕ್ಷಗಾನದ ಕಲಿಕೆಯಿಂದ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ. ಇದರಿಂದ ಶೈಕ್ಷಣಿಕ ಅಂಕಗಳಿಕೆಯೂ ಹೆಚ್ಚಾಗಿ, ಸಂಸ್ಕಾರವೂ ಬೆಳೆಯುತ್ತದೆ” ಎಂದು ಮುಲ್ಲಕಾಡು ಸರಕಾರಿ ಶಾಲೆಯ ಎಸ್.ಡಿ.ಎಂ.ಸಿ‌. ಅಧ್ಯಕ್ಷರಾದ ಶ್ರೀಮತಿ ಗೀತಾ ಲಕ್ಷೀಶ ಶೆಟ್ಟಿ ಹೇಳಿದರು. ಇವರು ಮುಲ್ಲಕಾಡು ಸರಕಾರಿ ಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಸರಕಾರಿ ಪ್ರೌಢಶಾಲೆ ಮುಲ್ಲಕಾಡಿನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಅವರು ನಡೆಸುವ ಯಕ್ಷ ಶಿಕ್ಷಣದ ಮೂರನೆಯ ವರ್ಷದ ಉಚಿತ ಯಕ್ಷ ತರಗತಿಯ ಉದ್ಘಾಟನಾ ಸಮಾರಂಭ ನೆರವೇರಿತು. ಯಕ್ಷ ಧ್ರುವ ಪಟ್ಲ ಫೌಂಡೇಶನ್‌ನ ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಶೆಟ್ಟಿ ತಾರೆಮಾರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಧಾನ ಸಂಚಾಲಕರಾದ ಶ್ರೀ ವಾಸುದೇವ ಐತಾಳರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಪದಾಧಿಕಾರಿಗಳಾದ ಪ್ರದೀಪ್ ಆಳ್ವ, ರವಿಚಂದ್ರ ಶೆಟ್ಟಿ, ಗೋಪಿನಾಥ್, ಸಂತೋಷ ಕುಮಾರ್ ರೈ , ಸುಬ್ರಹ್ಮಣ್ಯ ಭಟ್, ಯಕ್ಷಗಾನ ಗುರುಗಳಾದ ರಾಕೇಶ್ ರೈ ಅಡ್ಕ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ವೇಣುಗೋಪಾಲ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಜಿ. ಉಸ್ಮಾನ್ ಅವರು ಸ್ವಾಗತಿಸಿ, ಶಿಕ್ಷಕ ನಾಗರಾಜ ಖಾರ್ವಿ ವಂದಿಸಿದರು. ಶ್ರೀಮತಿ ಕೃಪಾ ಕಾರ್ಯಕ್ರಮ ನಿರೂಪಿಸಿದರು.

Read More News

Scroll to Top