ಮಂಗಳೂರು; ಕೆಲರಾಯ್:
ಶಾಲಾ ಅವಧಿಯಲ್ಲಿ ಕಲಿಯುವ ಪಾಠಗಳು ಹಾಗೂ ನಡೆಸುವ ಪಠ್ಯೇತರ ಚಟುವಟಿಕೆಗಳು ಪರಸ್ಪರ ಒಂದಕ್ಕೊಂದು ಪೂರಕವಾಗಿದ್ದರೆ ಮಾತ್ರ ವ್ಯಕ್ತಿತ್ವ ವಿಕಸನ ಸಾಧ್ಯ ಎಂದು ಕೆಲರಾಯ್ ಸಂತ ಅನ್ನಾ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ವಂದನೀಯ ಗುರು ಸಿಲ್ವೆಸ್ಟರ್ ಡಿ’ಕೋಸ್ಟಾ ಹೇಳಿದರು.
ಕೆಲರಾಯ್ ಸಂತ ಅನ್ನಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯುತ್ತಿರುವ ಐದು ದಿನಗಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೂನ್ ತಿಂಗಳಿನಿಂದ ಮಾರ್ಚ್ ವರೆಗೆ ವಿದ್ಯಾರ್ಥಿಗಳು ಶಾಲಾ ಕೊಠಡಿಯ ನಾಲ್ಕು ಗೋಡೆಗಳ ನಡುವೆ ಜ್ಞಾನಾರ್ಜನೆಯಲ್ಲಿ ತೊಡಗಿಸಿಕೊಂಡು ಪರೀಕ್ಷೆಗಳನ್ನು ಮುಗಿಸಿ ಬೇಸಿಗೆ ರಜೆಗೆ ತೆರಳುವ ಮುನ್ನ ಒತ್ತಡಗಳಿಂದ ಮುಕ್ತಗೊಳಿಸಿ ಅವರ ವ್ಯಕ್ತಿತ್ವ ವಿಕಸನಗೊಳಿಸುವ ಉದ್ದೇಶದಿಂದ ಆಯೋಜಿಸಿದ ಈ ಶಿಬಿರ ನಿಜವಾಗಿಯೂ ಪ್ರಶಂಸಾರ್ಹ ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ವಂದನೀಯ ಗುರು ರೋಶನ್ ಫೆರ್ನಾಂಡಿಸ್, ಶಾಲಾ ಮುಖ್ಯೋಪಾಧ್ಯಾಯರಾದ ಜಾನ್ ಪಾಯ್ಸ್, ಐರಿನ್ ಮಿನೇಜಸ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸ್ವೀಡಲ್ ಫೆರ್ನಾಂಡಿಸ್ ಸ್ವಾಗತಿಸಿ, ದಿಶಾ ಎಸ್..ಎನ್. ಕಾರ್ಯಕ್ರಮ ನಿರ್ವಹಿಸಿದರು.



























































































































































































