ಹಾಸ್ಯಗಾರ ವಳಕುಂಜರಿಗೆ ಬೊಂಡಾಲ ಪ್ರಶಸ್ತಿ ಪ್ರದಾನ.ಪೋಷಕರಿಂದ ಯಕ್ಷಗಾನಕ್ಕೆ ಮನ್ನಣೆ: ಬಿ.ರಮಾನಾಥ ರೈ

112K Views 16 Feb 2025

ಬಂಟ್ವಾಳ: ‘ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ಮನೆ ಮಾತು. ಇಲ್ಲಿನ ಕಲಾಪೋಷಕರಿಂದ ಯಕ್ಷಗಾನಕ್ಕೆ ವಿಶೇಷ ಮನ್ನಣೆ ಪ್ರಾಪ್ತವಾಗಿದೆ. ಅದರಲ್ಲೂ ಕಟೀಲು ಕ್ಷೇತ್ರದ ಹರಿಕೆ ಬಯಲಾಟ ಸಂದರ್ಭದಲ್ಲಿ ಮನೋರಂಜನೆಯೊಂದೇ ಮುಖ್ಯ ಉದ್ದೇಶವಾಗಿರದೆ ಅದನ್ನೊಂದು ಆರಾಧನೆಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಕಲಾವಿದರನ್ನು ಗೌರವಿಸುವುದು ಒಂದು ಉತ್ತಮ ಸಂಪ್ರದಾಯ’ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಶನಿವಾರ ಶಂಬೂರು ಗ್ರಾಮದ ಬೊಂಡಾಲದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಯಕ್ಷಗಾನ ಬಯಲಾಟ ಸೇವೆಯ ಸಂದರ್ಭದಲ್ಲಿ ಕಲಾಪೋಷಕರಾದ ದಿ.ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ಬೊಂಡಾಲ ರಾಮಣ್ಣ ಶೆಟ್ಟಿ ಅವರ ಸಂಸ್ಮರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಟೀಲು ಕ್ಷೇತ್ರದ ಪ್ರಧಾನಾರ್ಚಕ ಶ್ರೀ ಅನಂತ ಪದ್ಮನಾಭ ಆಸ್ರಣ್ಣ ಶುಭಹಾರೈಸಿ ಆಶೀರ್ವಚನ ನೀಡಿದರು.

ಪ್ರಶಸ್ತಿ ಪ್ರದಾನ:
ಸಮಾರಂಭದಲ್ಲಿ ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು‌ ಮೇಳದ ಹಿರಿಯ ಕಲಾವಿದ ಹಾಸ್ಯಗಾರ ರವಿಶಂಕರ ವಳಕುಂಜ ಅವರಿಗೆ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ರಾಮಣ್ಣ ಶೆಟ್ಟಿ ಅವರ ಸ್ಮರಣಾರ್ಥ 2024 – 25 ನೇ ಸಾಲಿನ ‘ಬೊಂಡಾಲ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯ್ತು.
ಧಾರ್ಮಿಕ ಪರಿಷತ್ತು ರಾಜ್ಯ ಸದಸ್ಯ ಎ.ರವಿಶಂಕರ ಶೆಟ್ಟಿ ಬಡಾಜೆ ಗುತ್ತು ಮತ್ತು ಅಹಮದ್ ನಗರದ ಉದ್ಯಮಿ ಹಾಗೂ ಕುಂಬಳೆ ಮುಂಡಪಲ್ಲ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ.ಶೆಟ್ಟಿ ಕುತ್ತಿಕಾರ್ ಮುಖ್ಯ ಅತಿಥಿಗಳಾಗಿದ್ದರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣ ಭಾಷಣ ಮಾಡಿದರು.


ರವಿಶಂಕರ ವಳಕ್ಕುಂಜ ಸನ್ಮಾನ ಸ್ವೀಕರಿಸಿ ಮಾತನಾಡಿ ಬೊಂಡಾಲ ಮನೆತನದವರು ಯಕ್ಷಗಾನ ಹಾಗೂ ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು.


ಗ್ರಾಮ‌ ಪಂಚಾಯತ್ ಅಧ್ಯಕ್ಷ ಸಂತೋಷ್ ‌ಕುಮಾರ್, ಬೊಂಡಾಲ ಕುಟುಂಬಸ್ಥರು ಮತ್ತು ಊರ ಪ್ರಮುಖರು ಉಪಸ್ಥಿತರಿದ್ದರು.
ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಬಯಲಾಟ ಸಮಿತಿ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ ಪರಿಚಯಿಸಿದರು. ಗೌರವಾಧ್ಯಕ್ಷ ಬೊಂಡಾಲ ಸೀತಾರಾಮ ಶೆಟ್ಟಿ ವಂದಿಸಿದರು.
ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ವತಿಯಿಂದ ‘ ಶ್ರೀ ದೇವಿ ಮಹಾತ್ಮೆ’ ಬಯಲಾಟ ಪ್ರದರ್ಶನವಾಯಿತು.

Read More News

ಆರೋಗ್ಯ ಸಚಿವರ ತವರೂರು ಮಂಗಳೂರಿನ ವೆನ್ ಲಾಕ್ ಬಳಿಯ ಮಕ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕಳಪೆ ಗುಣಮಟ್ಟದ ಇಮ್ಮುನೋಗ್ಲೋಬುಲಿನ್ ಇಂಜೆಕ್ಷನ್. ರೇಬಿಸ್ ತಡೆಗಟ್ಟುವ ಈ ಇಂಜೆಕ್ಷನ್ ಚುಚ್ಚಿದರೆ ಅಂಥ ಮಕ್ಕಳು 24 ಗಂಟೆ ಐಸಿಯುನಲ್ಲಿ ಇರಬೇಕು. ತುಂಬಾ ರಿಸ್ಕ್. ಮಕ್ಕಳ ಆರೋಗ್ಯದೊಂದಿಗೆ ಚೆಲ್ಲಾಟವಾಡುವ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಆರೋಗ್ಯ ಸಚಿವರೇ ಉತ್ತರ ನೀಡಬೇಕು. ಖಾದರ್ ಸಾಹೇಬ್ರೆ, ಬಡ ಮಕ್ಕಳು ಏನು ತಪ್ಪು ಮಾಡಿದ್ದಾರೆ. ಅವರಿಗೇಕೆ ಇಂಥ ಕಳಪೆ ಇಂಜೆಕ್ಷನ್?

Scroll to Top