ಮಂಗಳೂರು :ದ.ಕ. ಜಿಲ್ಲಾ ಹಿಂದೂ ಟೂರಿಸಂ ಅಸೋಸಿಯೇಶನ್ನ ಸರ್ವ ಸದಸ್ಯರ ಸಮಾವೇಶ, ಸಂಸ್ಥೆಯ ಲೋಗೋ ಬಿಡುಗಡೆ ಮತ್ತು ಗಣ್ಯರಿಗೆ ಸಮ್ಮಾನ ಫೆ. 20ರಂದು ಬೆಳಗ್ಗೆ 9.30ರಿಂದ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಲಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಹೇಮಂತ್ ಎಚ್.ಎಂ. ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ವಾಟ್ಸ್ ಆ್ಯಪ್ ಗ್ರೂಪ್ನ ರೂಪದಲ್ಲಿ ಸಂಘಟನೆ ಆರಂಭಗೊಂಡಿತ್ತು. ಸಂಘದ ಸದಸ್ಯರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು, ಅನಾರೋಗ್ಯ/ಅಪಘಾತಗಳ ಸಂದ ರ್ಭದಲ್ಲಿ ಸದಸ್ಯರಿಗೆ ಹಣಕಾಸಿನ ನೆರವು, ರಕ್ತದಾನ ಮೊದಲಾದವು ಸಂಘಟನೆಯ ಮೂಲ ಉದ್ದೇಶವಾಗಿದೆ ಎಂದರು.
ಪುರಭವನದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಲಿದ್ದು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ ಭಟ್, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ದ.ಕ. ಜಿಲ್ಲಾ ಹಿಂದೂ ಟೂರಿಸಂ ಅಸೋಸಿಯೇಶನ್ ಸಲಹೆಗಾರ ಜಗದೀಶ್ ಶೇಣವ, ಉದ್ಯಮಿ ಜಿತೇಂದ್ರ ಕೊಟ್ಟಾರಿ, ದ.ಕ. ಜಿಲ್ಲಾ ಟ್ಯಾಕ್ಸಿಮನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ ಆನಂದ ಕೆ. ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಮಂತ್ ತಿಳಿಸಿದರು.
ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಎಚ್.ಎಂ., ಕೋಶಾಧಿಕಾರಿ ಅಣ್ಣಪ್ಪ ವಿಜಯೇಂದ್ರ, ಹರೀಶ್ ಉಪಸ್ಥಿತರಿದ್ದರು.



























































































































































































