ಮಂಗಳೂರು, ಜೂ. 11: ವಿವಿಧ ಕ್ಷೇತ್ರಗಳ ಮೂಲಕ ದೇಶಕ್ಕೆ ವಿಶೇಷ ಸ್ಥಾನಮಾನ ದೊರಕಿರುವ ಜತೆಯಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ ಯೋಗ, ಧ್ಯಾನವೂ ಪ್ರಪಂಚದಲ್ಲಿ ವಿಶೇಷ ಸ್ಥಾನವನ್ನು ದೊರಕಿಸಿಕೊಟ್ಟಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿಪ್ರಾಯಿಸಿದ್ದಾರೆ.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜೂ. 12ರಿಂದ 24ರವರೆಗೆ ಪತ್ರಕರ್ತರು ಹಾಗೂ ಅವರು ಕುಟುಂಬ ಸದಸ್ಯರಿಗಾಗಿ ನಗರದ ಪ್ರೆಸ್ಕ್ಲಬ್ನಲ್ಲಿ ದೇವಿಕಾ ಯೋಗ ಕ್ಲಾಸೆಸ್ ಸಹಭಾಗಿತ್ವದಲ್ಲಿ ನಡೆಯಲಿರುವ ಯೋಗ ತರಬೇತಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀಳುವುದು ಇಂತಹ ತರಬೇತಿಗೆ ಹೆಚ್ಚಿನ ಒತ್ತು ನೀಡುವುದು ಅಗತ್ಯವಾಗಿದೆ ಎಂದರು.
ದೇವಿಕಾ ಯೋಗ ಕ್ಲಾಸೆಸ್ನ ನಿರ್ದೇಶಕಿ ದೇವಿಕಾ ಪುರುಷೋತ್ತಮ್ ಮಾತನಾಡಿ, ಪತ್ರಕರ್ತರ ದಿನಪೂರ್ತಿಯ ಒತ್ತಡದ ಕೆಲಸದ ನಡುವೆ ಕನಿಷ್ಟ ಒಂದು ಗಂಟೆಯ ಯೋಗ ಮಾನಸಿಕವಾಗಿ ಹಾಗೂದೈಹಿಕವಾಗಿ ಸಾಕಷ್ಟು ಪರಿಣಾಮವನ್ನು ಬೀರಲಿದೆ ಎಂದರು.
ಯೋಗ ಗುರು ಅಯ್ಯಂಗಾರ್ರಿAದ ಯೋಗ ತರಬೇತಿ ಪಡೆದು ಕಳೆದ ಸುಮಾರು 20 ವರ್ಷಗಳಿಂದ ಉಚಿತ ತರಬೇತಿಗಳನ್ನು ರಾಜ್ಯದ ವಿವಿಧ ಕಡೆಗಳಲ್ಲಿ ನಡೆಸುತ್ತಾ ಬಂದಿರುವುದಾಗಿ ಹೇಳಿದ ದೇವಿಕಾ ಪುರುಷೋತ್ತಮ್, ತರಬೇತಿ ಸಂದರ್ಭದಲ್ಲಿ ಗುರುದಕ್ಷಿಣೆಯಾಗಿ ನೀಡುವ ಹಣವನ್ನು ಆಶ್ರಮಗಳಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಉಪಯೋಗಿಸುತ್ತಿರುವುದಾಗಿ ಹೇಳಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಉಪಸ್ಥಿತರಿದ್ದರು. ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.





















































































































































































