ಮಂಗಳೂರು: ಸಮಾಜ ಸೇವಾ ಸಂಘಟನೆ ಸಂತ ವಿನ್ಸೆಂಟ್ ಪಾವ್ಲ್ ಸಭಾ ಇದರ ಮಂಗಳೂರು ಪ್ರಾದೇಶಿಕ ಸಿಟಿ ವಲಯದ ವಾರ್ಷಿಕ ಸಾಮಾನ್ಯ ಸಭೆ ಹಾಗೂ ಆಧ್ಯಾತ್ಮಿಕ ಸಮಾಲೋಚನೆಯು ರವಿವಾರ (ಸೆ. 14) ಮಂಗಳೂರಿನ ದೇರೆಬೈಲ್ ಚರ್ಚ್ ಸಭಾಂಗಣದಲ್ಲಿ ನಡೆಯಿತು.
ಸುಖ ಜೀವನವನ್ನು ದಾನ ಹಾಗೂ ಧರ್ಮದ ಮೂಲಕ ನಡೆಸ ಬಹುದು ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಈ ಸಭೆಯಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂದನೀಯ ಫಾ. ಜೋಸೆಫ್ ಮಾರ್ಟಿಸ್ ಅವರು ಮಾತನಾಡಿ ಸಂತ ವಿನ್ಸೆಂಟ್ ಪಾವ್ಲ್ ಸಭೆಯ ಸದಸ್ಯರು ಯಾವುದೇ ಪ್ರಚಾರವಿಲ್ಲದೆ ಗೌಪ್ಯವಾಗಿ ದಾನ, ಧರ್ಮ, ಬಡವರ ಸೇವೆಯನ್ನು ಮಾಡುತ್ತಿದ್ದು, ಈ ಸೇವೆ ದೇವರ ಸೇವೆಗೆ ಸಮಾನ. ಬಡತನವು ಖಂಡಿತಾ ಶಾಪವಲ್ಲ. ಯಾವುದೇ ಪರಿಸ್ಥಿತಿಯಲ್ಲಿಯೂ ನಾವು ಧೃತಿಗೆಡದೆ ಪ್ರಯತ್ನವನ್ನು ಮುಂದುವರಿಸಿದರೆ ಯಶಸ್ಸು ಸಾಧಿಸ ಬಹುದು ಎಂದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಿಟಿ ವಲಯದ ಅಧ್ಯಕ್ಷ ರಿಚಾರ್ಡ್ ಪಿಂಟೊ, ಕಾರ್ಯದರ್ಶಿ ಐರಿನ್ ಪಿಂಟೊ, ಖಜಾಂಚಿ ಯೂಜಿನ್ ಲೋಬೊ, ದೇರೆಬೈಲ್ ಘಟಕದ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ಪ್ರಾದೇಶಿಕ ಸಿಟಿ ವಲಯದ ಉಪಾಧ್ಯಕ್ಷ ಜೋಕಿಂ ಮತ್ತು ಇತರರು ಉಪಸ್ಥಿತರಿದ್ದರು.
ಆಶಾ ಡಿ ಸಿಲ್ವಾ ನೇತೃತ್ವದ ತಂಡದಿಂದ ಪ್ರಾರ್ಥನೆ ನಡೆಯಿತು. ಕಾರ್ಯದರ್ಶಿ ಐರಿನ್ ಪಿಂಟೊ ವರದಿ ವಾಚಿಸಿದರು.
ಪ್ರಾದೇಶಿಕ ಸಿಟಿ ವಲಯವು ದೇರೆಬೈಲ್, ಕುಲಶೇಖರ, ಬೋಂದೆಲ್, ಪಾಲ್ದನೆ, ವಾಮಂಜೂರು, ಕೆಲರಾಯ್, ಬಜಾಲ್, ನೀರುಮಾರ್ಗ, ಆಂಜೆಲೋರ್, ಬಜ್ಜೋಡಿ, ಶಕ್ತಿನಗರ, ಪೆರ್ಮಾಯಿ ಚರ್ಚ್ ಗಳನ್ನು ಒಳಗೊಂಡಿದೆ.





















































































































































































