ಮಂಗಳೂರು: ವೇದವ್ಯಾಸ ಮಹರ್ಷಿಗಳು ರಚಿಸಿದ ಮಹಾಭಾರತದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನದ ಜತೆ ವೈಜ್ಞಾನಿಕ ಒಳನೋಟವಿದೆ. ಗುರುವಿನ ಮಹತ್ವ ಸಹಿತ ಬದುಕಿನ ಪ್ರತಿಯೊಂದು ವಿಚಾರ ವ್ಯಾಸ ಭಾರತದಲ್ಲಿ ಅಡಕವಾಗಿದ್ದು ಜ್ಞಾನ ಮತು
ಕಾಲಾತೀತ ಬೋಧನೆಗಳಿಂದ ಸಮೃದ್ಧವಾಗಿದೆ. ಗುರು ಪೂರ್ಣಿಮೆಯಾಗಿ ಆಚರಿಸುತ್ತಿರುವ ವ್ಯಾಸ ಜಯಂತಿಯ ಸಾರವು ಮನುಕುಲಕ್ಕೆ ಅತ್ಯಂತ ಪ್ರಸ್ತುತ ಎಂದು ಶಿಕ್ಷಣ ತಜ್ಞ ಪ್ರೊ.ಪವನ್ ಕಿಣ್ಕೆರೆ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ. ಜಿಲ್ಲಾ ಸಮಿತಿ ಇದರ ವತಿಯಿಂದ ಶಾರದಾ ವಿದ್ಯಾಲಯ ಮತ್ತು
ಯಕ್ಷಾರಾಧನಾ ಕಲಾ ಕೇಂದ್ರದ ಸಹಯೋಗದಲ್ಲಿ ನಗರದ ಕೊಡಿಯಾಲ್ಬೈಲ್ನ ಶಾರದಾ ವಿದ್ಯಾಲಯದಲ್ಲಿ ನಡೆದ
ವ್ಯಾಸ ಜಯಂತಿ ಆಚರಣೆಯಲ್ಲಿ ಅವರು ‘ಗುರುವಿನ ಮಹತ್ವ ಮತ್ತು ವ್ಯಾಸ ಭಾರತ ಓದಿನ ಪ್ರಸ್ತುತತೆ ‘ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಮಾತನಾಡಿ ‘ ವ್ಯಾಸರು
ತ್ರಿಮೂರ್ತಿಗಳ ಶಕ್ತಿ ಸ್ವರೂಪವಾಗಿದ್ದಾರೆ ’ಎಂದರು. ಅಭಾಸಾಪ ದ.ಕ.ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಶಾರದಾ ಪಿ.ಯು. ಕಾಲೇಜಿನ ಪ್ರಾಂಶುಪಾಲ ಪ್ರಕಾಶ್ ನಾಯಕ್ , ಯಕ್ಷಾರಾಧನಾ ಕಲಾ ಕೇಂದ್ರದ ನಿರ್ದೇಶಕ ರತ್ನಾಕರ್ ರಾವ್ ಮುಖ್ಯ ಅತಿಥಿಗಳಾಗಿದ್ದರು.
ಶಾರದಾ ವಿದ್ಯಾಲಯದ ಪ್ರಾಂಶುಪಾಲ ದಯಾನಂದ ಕಟೀಲ್, ಡಾ.ಮಾಧವ.ಎಂ.ಕೆ., ಡಾ,ಮೀನಾಕ್ಷಿ ರಾಮಚಂದ್ರ, ದ.ಕ.ಹಾಲು ಉತ್ಪಾಸಕರ ಒಕ್ಕೂಟದ ನಿರ್ದೇಶಕಿ ಸುಭದ್ರ ರಾವ್ ಉಪಸ್ಥಿತರಿದ್ದರು.
ಅಭಾಸಾಪ ಜಿಲ್ಲಾ ಜತೆ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ಸ್ವಾಗತಿಸಿ, ಸಾಹಿತ್ಯ ಕೂಟ ಪ್ರಮುಖ್ ಗೀತಾ ಲಕ್ಷ್ಮೀಶ್ ವಂದಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು.





















































































































































































