ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮದಲ್ಲಿ ಮಂಗಳೂರು ಕೆ.ಎಂ.ಸಿ.ಯ ಗ್ಯಾಸ್ಟ್ರೋ ಎಂಟರಾಲಜಿ ಡಾ. ಅನುರಾಗ್ ಜೆ. ಶೆಟ್ಟಿ ಅವರಿಗೆ ‘ಬೆಸ್ಟ್ ಡಾಕ್ಟರ್ಸ್’ ಪ್ರಶಸ್ತಿ ಪ್ರದಾನ

110.4K Views 4 Jul 2025

ಮಂಗಳೂರು: ಎಂಪಿ ಎಂಎಲ್ಎ ನ್ಯೂಸ್ 13ನೇ ಸೌಹಾರ್ದ ಸಂಗಮವು ಜೂನ್ 24ರ ಮಂಗಳವಾರ ಸಂಜೆ ಗಂಟೆ 4.00ರಿಂದ 9.00ರ ತನಕ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನ (ಟೌನ್‍ಹಾಲ್)ನಲ್ಲಿ ನಡೆಯಿತು.
ಸೌಹಾರ್ದ ಸಂಗಮವನ್ನು ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು, ಇದರ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರುರವರು ಉದ್ಘಾಟಿಸಿ, ನಮ್ಮ ಜಿಲ್ಲೆಗೆ ಸೌಹಾರ್ದತೆಯ ಕೊರತೆ ಇದ್ದು ಇಂತಹ ಸೌಹಾರ್ದ ಸಂಗಮಗಳು ಹೆಚ್ಚು ಮಹತ್ವಪೂರ್ಣ ಮತ್ತು ಅರ್ಥಪೂರ್ಣವಾಗಿ ಸಮಾಜವನ್ನು ತಲುಪುತ್ತದೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವ ಬಿ. ರಮಾನಾಥ ರೈಯವರು ನಮ್ಮ ಜಿಲ್ಲೆ ಅಭಿವೃದ್ಧಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದು ಕೊರತೆಯಿರುವುದು ಸೌಹಾರ್ದತೆಯಲ್ಲಿ ಎಂದರು. ಇಂತಹ ಕೊರತೆಯನ್ನು ಸೌಹಾರ್ದ ಸಂಗಮದಂತಹ ಜನಪರ ಕಾರ್ಯಕ್ರಮಗಳು ನೀಗಿಸಬಲ್ಲದು ಎಂದು ಸೌಹಾರ್ದ ಸಂಗಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸೌಹಾರ್ದತೆ ಎನ್ನುವುದು ಈ ಸಮಾಜಕ್ಕೆ ಬೀಜಮಂತ್ರವಾಗಲಿ. ಶಾಂತಿ ಸಾಮರಸ್ಯ, ಸಹಬಾಳ್ವೆ, ಸೌಹಾರ್ದ ಸಂಗಮದ ಮೂಲಕ ರಾಷ್ಟ್ರವ್ಯಾಪ್ತಿ ಪಸರಿಸಲಿ ಎಂದು ದೇವರಾಜ ಅರಸು ರಾಜ್ಯಪ್ರಶಸ್ತಿ ಪುರಸ್ಕೃತ ಸಮಾಜ ವಿಜ್ಞಾನಿ ಡಾ. ಅಣ್ಣಯ್ಯ ಕುಲಾಲ್‍ರವರು ಹೇಳಿದರು. ಮಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್, ನಿವೃತ್ತ ಸರಕಾರಿ ವೈದ್ಯಾಧಿಕಾರಿ ಡಾ. ಜೂಲಿಯಾನ ಸಲ್ಡಾನ ಅವರು ಸೌಹಾರ್ದ ಸಂಗಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.


ಮನುಷ್ಯ-ಮನುಷ್ಯರ ನಡುವೆ ಸೌಹಾರ್ದತೆ, ಭಾೃತತ್ವ ಅತ್ಯಗತ್ಯವಾಗಿದ್ದು ಜಾತಿ, ಮತ, ಪಕ್ಷ-ಭೇದವಿಲ್ಲದೆ ಸಾಧಕರುಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಸೌಹಾರ್ದ ಸಂಗಮ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಲ್ಲಿ ಸಂಘಟಕರ ಪ್ರಯತ್ನ ಮೆಚ್ಚತಕ್ಕದ್ದು ಎಂದು ಸೌಹಾರ್ದ ಸಂಗಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿ ಕೆ. ದಯಾನಂದ ರೈಯವರು ತಿಳಿಸಿದರು.
ಸಮಾರಂಭದಲ್ಲಿ ವಾರ್ತಾ ಇಲಾಖೆಯ ದಿವ್ಯ ಆರ್. ಶೆಟ್ಟಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ರಾಜೇಶ್ ಬಿ., ಎಂ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷ ಅನಿಲ್ ಲೋಬೊ, ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ, ಯುವವಾಹಿನಿ (ರಿ) ಕೇಂದ್ರ ಸಮಿತಿ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಮಹಿಳಾ ಮಂಡಲ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಚಂಚಲಾಕ್ಷಿ ತೇಜೋಮಯ ಮೊದಲಾದವರು ಉಪಸ್ಥಿತರಿದ್ದರು.
ನರೇಶ್‍ಕುಮಾರ್ ಸಸಿಹಿತ್ಲು ಇವರು ಸ್ವಾಗತಿಸಿ, ಎಸ್.ಆರ್. ಪ್ರದೀಪ್ ವಂದಿಸಿದರು, ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶೋಕ್ ಶೆಟ್ಟಿ ಬಿ.ಎನ್.ರವರು ಪ್ರಸ್ತಾವನೆಗೈದರು. ದಿನಕರ ಡಿ. ಬಂಗೇರ, ಸನ್ಮಾನ ಪತ್ರ ವಾಚಿಸಿದರು. ಕನ್ನಡ-ತುಳು ಚಲನಚಿತ್ರ ಹಿನ್ನಲೆ ಗಾಯಕ ರವೀಂದ್ರ ಪ್ರಭು ಬಳಗದವರಿಂದ ರಾಗ್ ರಂಗ್ ಸೌಹಾರ್ದ ಸುಗಮ ಸಂಗೀತ ರಸಮಂಜರಿ ಮತ್ತು ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗ ಚಲನ ಕಲಾವಿದರು ಮಂಗಳೂರು ಇವರಿಂದ ಯುವಜಾಗೃತಿ ಹಾಡುಗಳ ಮಿಶ್ರಣ ನಾಟಕ ವಿನೂತನ ಕಾರ್ಯಕ್ರಮ ನಡೆಯಿತು.
ಈ ಸೌಹಾರ್ದ ಸಂಗಮದಲ್ಲಿ ಮಂಗಳೂರು ಕೆ.ಎಂ.ಸಿ.ಯ ಅಸೋಸಿಯೇಟ್ ಪ್ರೊಫೆಸರ್ ಆಫ್ ಗ್ಯಾಸ್ಟ್ರೋ ಎಂಟರಾಲಜಿ ಡಾ. ಅನುರಾಗ್ ಜೆ. ಶೆಟ್ಟಿ ಅವರಿಗೆ ‘ಬೆಸ್ಟ್ ಡಾಕ್ಟರ್ಸ್’ ಅವಾರ್ಡ್ ಸೇರಿದಂತೆ ಆರು ಮಂದಿ ಸಾಧಕರಿಗೆ ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಡಾ. ಅನುರಾಗ್ ಜೆ. ಶೆಟ್ಟಿ* ಡಾ. ಅನುರಾಗ್ ಜೆ. ಶೆಟ್ಟಿ ಅವರು ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋ ಎಂಟರಾಲಜಿಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನ ಅಥೆನಾ ಆಸ್ಪತ್ರೆಯ ಸಂದರ್ಶಕ ವೈದ್ಯರಾಗಿರುವ ಶ್ರೀಯುತರು ಕಸ್ತೂರ್‍ಬಾ ಮೆಡಿಕಲ್ ಕಾಲೇಜ್ ಮಂಗಳೂರಲ್ಲಿ ಎಂಬಿಬಿಎಸ್ ವೈದ್ಯಕೀಯ ಪದವಿ ಮತ್ತು ಜನರಲ್ ಮೆಡಿಸಿನಲ್ಲಿ ಎಂ.ಡಿ. ಸ್ನಾತಕೋತ್ತರ ಪದವಿ ಪಡೆದು 2015ರಲ್ಲಿ ಗ್ಯಾಸ್ಟ್ರೋ ಎಂಟರಾಲಜಿಯಲ್ಲಿ ಡಿ.ಎಂ. ಸೂಪರ್ ಸ್ಪೆಷಾಲಿಟಿ ಪದವಿ ಪಡೆದಿರುತ್ತಾರೆ.
ನ್ಯೂ ಡೆಲ್ಲಿಯ ದಿ ಗಂಗರಾಮ್ ಇನ್ಸ್‍ಸ್ಟಿಟ್ಯೂಟ್ ಫಾರ್ ಪೋಸ್ಟ್ ಗ್ರಾಜ್ಯುವೇಶನ್ ಮೆಡಿಕಲ್ ಎಜ್ಯುಕೇಶನ್ ಆ್ಯಂಡ್ ರಿಸರ್ಚ್ ನಲ್ಲಿ ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಟ್ರೈನಿಂಗ್(EUS)ನ್ನು 2018ರಲ್ಲಿ ಪಡೆದಿರುತ್ತಾರೆ.
ಚೀನಾದ ವೆಸ್ಟ್ ಚೀನಾ ಹಾಸ್ಪಿಟಲ್‍ನಲ್ಲಿ 2019ರಲ್ಲಿ ಅಡ್ವಾನ್ಸಡ್ ಎಂಡೋಸ್ಕೋಫಿಕ್ ಟ್ರೈನಿಂಗ್ ಪಡೆದಿರುತ್ತಾರೆ.
ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈದ್ಯಕೀಯ ಸಮ್ಮೇಳನಗಳಲ್ಲಿ ಭಾಗವಹಿಸಿ, ಅಪಾರ ಅನುಭವ ಗಳಿಸಿರುತ್ತಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಡಯಗ್ನಾಸಿಕ್ ಮತ್ತು ಥೆರಫಿಟಿಕ್ ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್‍ನ್ನು ಆರಂಭಿಸಿದ ಸಾಧನೆ, ಹಿರಿಮೆ, ಹೆಗ್ಗಳಿಕೆ ಶ್ರೀಯುತರಿಗೆ ಸಲ್ಲುತ್ತದೆ.
15 ಸಾವಿರಕ್ಕೂ ಮಿಕ್ಕಿ ಡಯಾಗ್ನಾಸಿಕ್ ಮತ್ತು ಥೆರಫಿಟಿಕ್ ಗ್ಯಾಸ್ಟ್ರೋಸ್ಕೋಫಿ, 8 ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಕೊಲೊನೋಸ್ಕೋಪಿ, ಸ್ವತಂತ್ರವಾಗಿ ಎಲ್ಲಾ ರೀತಿಯ ಥೆರೆಪಿಟಿಕ್ ಎಂಡೋಸ್ಕೋಪಿಕ್ ಪ್ರೊಸೀಜರ್ ನಡೆಸಿದ ಜನಪ್ರಿಯ ವೈದ್ಯರೆಂಬ ಸಾಧನೀಯ ಹೆಗ್ಗಳಿಕೆಗೆ ಶ್ರೀಯುತರು ಪಾತ್ರರಾಗಿದ್ದಾರೆ.
1000ಕ್ಕೂ ಹೆಚ್ಚು ERCP, 800ಕ್ಕೂ ಡಯಾಗ್ನಾಸಿಕ್ ಮತ್ತು ಥೆರಫಿಟಿಕ್
ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ (EVS 100 EMP ಸೇರಿದಂತೆ ಎಂಡೋಸ್ಕೋಪಿಕ್ ಗ್ಯಾಸ್ಟ್ರೋ ಎಂಟರಾಲಜಿಯಲ್ಲಿ ದಾಖಲಾರ್ಹ ಸಾಧನೆಗಳನ್ನು ಗೈದಿದ್ದಾರೆ. ಹಲವಾರು ವೈದ್ಯಕೀಯ ಲೇಖನಗಳನ್ನು ಬರೆದಿದ್ದಾರೆ. ರೋಗಿಗಳಿಗೆ ಆಪದ್ಬಾಂಧವ, ನೇರ, ನಡೆ ನುಡಿ, ನಿರ್ಮಲಚಿತ್ತದ ನಿಸ್ವಾರ್ಥ ವೈದ್ಯಕೀಯ ಸಮಾಜಸೇವಕರಾಗಿರುವ ಶ್ರೀಯುತರಿಗೆ 13ನೇ ಸೌಹಾರ್ದ ಸಂಗಮದಲ್ಲಿ ‘ಬೆಸ್ಟ್ ಡಾಕ್ಟರ್ಸ್ ಅವಾರ್ಡ್’ನ್ನು ಗಣ್ಯರ ಸಮ್ಮುಖದಲ್ಲಿ ನೀಡಿ ಗೌರವಿಸಲಾಗಿದೆ.

Read More News

Scroll to Top