ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಒತ್ತು: ಮಂಜುನಾಥ ಭಂಡಾರಿ. ಪಿಲಿಕುಳ ಪುನಶ್ಚೇತನಕ್ಕೆ ಪಿಲಿಕುಳ ಉತ್ಸವ ಆಯೋಜನೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ನಿಂತ ನೀರಾಗಿದ್ದು ಜಿಲ್ಲೆಗೆ ಹೊರಗಿನಿಂದ ಬರುವ ಪ್ರವಾಸಿಗರ ಸಂಖ್ಯೆ ತೀರಾ ಇಳಿಮುಖವಾಗಿದೆ. ಹೀಗಾಗಿ ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಮತ್ತು ಪಿಲಿಕುಳದಲ್ಲಿ ಉತ್ಸವವನ್ನು ಆಯೋಜಿಸುವ ಮೂಲಕ ಪಿಲಿಕುಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ.ಮಂಜುನಾಥ ಭಂಡಾರಿ ಹೇಳಿದ್ದಾರೆ.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಬುಧವಾರ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ದ.ಕ. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳು ಸೀಮಿತಗೊಂಡಿದ್ದು, ದೇಶದ ಮಹಾನಗರಳಲ್ಲಿ ಇರುವಂತಹ ನೈಟ್ ಲೈಫ್ ಪರಿಕಲ್ಪನೆಯೇ ಇಲ್ಲವಾಗಿದೆ. ಹೀಗಾಗಿ ಇಲ್ಲಿ ಐಟಿ ಬಿಟಿ ಕಂಪನಿಗಳು ಹೂಡಿಕೆಗೆ ಹಿಂದೇಟು ಹಾಕುತ್ತಿವೆ. ಇಲ್ಲಿ ವಿದ್ಯಾರ್ಥಿಗಳು ಪರಸ್ಪರ ಮಾತನಾಡುವುದು, ತಿನ್ನುವ ಆಹಾರ, ಧರಿಸುವ ಬಟ್ಟೆಯ ಮೇಲಿನ ನಿರ್ಬಂಧಗಳು ಹೊರ ರಾಜ್ಯ, ದೇಶಗಳ ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡಾ ಇಲ್ಲಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಶಿಕ್ಷಣ ಹಬ್ ಆಗಿರುವ ಜಿಲ್ಲೆಯಲ್ಲಿ ಹಿಂದೆಲ್ಲಾ ಹೊರ ರಾಜ್ಯಗಳ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಮಂಗಳೂರನ್ನು ಅವಲಂಬಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಪಿಯುಸಿ ಮೇಲಿನ ಹಂತದ ಶಿಕ್ಷಣಕ್ಕೆ ಹೊರ ರಾಜ್ಯಗಳ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದವರು ಹೇಳಿದರು.ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಾಂತರ ಮಂದಿ ಶಿಕ್ಷಣ ಪಡೆಯುತ್ತಾರೆ. ಆದರೆ 9 ಗಂಟೆಯ ಬಳಿಕ ಐಸ್‌ಕ್ರೀಂ ಪಾರ್ಲರ್‌ಗಳು ಕೂಡಾ ಇಲ್ಲಿ ಬಾಗಿಲು ಮುಚ್ಚುತ್ತವೆ.ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜಪಾನ್ ಸಂಸ್ಥೆಯು ಈಗಾಗಲೇ ಕ್ಯಾಂಪಸ್ ಸೆಲೆಕ್ಷನ್ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ನೀಡಿದ್ದು, ಈ ದಿಸೆಯಲ್ಲಿ ಕಾಲೇಜಿನಲ್ಲಿ ಜಪಾನ್ ಭಾಷಾ ಕಲಿಕೆಯ ಕೋರ್ಸ್ ಕೂಡಾ ಆರಂಭಿಸಲಾಗಿದೆ. ಇಂತಹ ಕಾರ್ಯಕ್ರಮಗಳನ್ನು ಸರಕಾರಿ ಮಟ್ಟದಲ್ಲಿ ನಡೆಸಲು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಸಹ್ಯಾದ್ರಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರೂ ಆಗಿರುವ ಮಂಜುನಾಥ ಭಂಡಾರಿ ಹೇಳಿದರು.ಗ್ರಾಮ ಪಂಚಾಯತ್‌ಗಳ ಸರಕಾರಿ ಶಾಲೆ, ಪಂಚಾಯತ್ ಕಟ್ಟಡಗಳ ದುರಸ್ತಿ ಸೇರಿದಂತೆ ರಸ್ತೆ ಅಭಿವೃದ್ಧಿ ಹೊರತುಪಡಿಸಿ ಇತರ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಿ ಗ್ರಾ.ಪಂ. ಒಂದಕ್ಕೆ ತಲಾ 5 ಲಕ್ಷ ರೂ.ನಂತೆ ಆರು ವರ್ಷಗಳ ಅವಧಿಯಲ್ಲಿ 380 ಪಂಚಾಯತ್‌ಗಳಿಗೆ ಅನುದಾನ ಹಂಚಿಕೆಗೆ ನಿರ್ಧಾರ ಮಾಡಿರುವುದಾಗಿ ಮಂಜುನಾಥ ಭಂಡಾರಿ ಹೇಳಿದರು.ಜಿಲ್ಲೆಯ ಬೀಚ್ ಸೇರಿದಂತೆ ಪ್ರವಾಸೋದ್ಯಮಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳಲು ಕೂಡಾ ಆದ್ಯತೆ ನೀಡುವುದಾಗಿ ಅವರು ಈ ಸಂದರ್ಭ ತಿಳಿಸಿದರು.ಪಿಲಿಕುಳದಲ್ಲಿ ಉತ್ಸವ ಆಯೋಜನೆ!ಪಿಲಿಕುಳದಲ್ಲಿ ಹಿಂದೆ ನಡೆಯುತ್ತಿದ್ದ ಕಂಬಳ ಬಂದ್ ಆಗಿದೆ. ಹೀಗಾಗಿ ಪಿಲಿಕುಳದಲ್ಲಿ ಪಿಲಿಕುಳೋತ್ಸವ ಅಥವಾ ತುಳುನಾಡೋತ್ಸವ ರೀತಿ ಒಂದು ವಾರಗಳ ಕಾಲ ನಮ್ಮ ನಾಡು, ನುಡಿ, ಸಂಸ್ಕೃತಿಯನ್ನು ಪ್ರಚಾರ ಮಾಡಲು ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದೇವೆ. ಈಗಾಗಲೇ ಸ್ಪೀಕರ್ ಯು.ಟಿ. ಖಾದರ್ ನೇತೃತ್ವದಲ್ಲಿ ಒಂದು ಸಭೆ ನಡೆದಿದ್ದು ಮುಂದೆ ಉತ್ಸವವನ್ನು ಯಾವ ರೀತಿ ನಡೆಸಬಹುದು ಎಂಬ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸಭೆ ನಡೆಸಲಿದ್ದೇವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯ, ದೇಶ, ವಿದೇಶಗಳ ಜನರು ತುಳುನಾಡಿನ ಸಂಸ್ಕೃತಿಯನ್ನು ಅರಿಯಲು ಸಾಧ್ಯವಾಗುವಂತೆ ಕಾರ್ಯಕ್ರಮ ಆಯೋಜನೆ, ಮಕ್ಕಳಿಗಾಗಿ ವಿನೂತನ ಸ್ಪರ್ಧೆ ಮತ್ತು ಕಾರ್ಯಕ್ರಮ ಆಯೋಜನೆ, ತುಳುನಾಡ ಕಂಬಳ ಇತ್ಯಾದಿ ಆಯೋಜಿಸಲಾಗುವುದು. ಇದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಗುವುದಲ್ಲದೆ ಹೊರಗಿನ ಜನರಿಗೆ ನಮ್ಮ ತುಳುನಾಡಿನ ಸಂಸ್ಕೃತಿಯನ್ನು ತಿಳಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ“ ಎಂದರು.ಶಾಲೆ ದತ್ತು ಪಡೆದು ಮಾದರಿ ಶಾಲೆಯಾಗಿ ಪರಿವರ್ತನೆ!“ಕೋಡಿ ಬೆಂಗ್ರೆ ಶಾಲೆ ಕುಸಿದು ಬೀಳುವ ಸ್ಥಿತಿಯಲ್ಲಿತ್ತು. ಅಲ್ಲಿ ಭೇಟಿ ಕೊಟ್ಟು ಶಾಲೆಯನ್ನು ದತ್ತು ಪಡೆದು ನನ್ನ ಸ್ವಂತ ಹಣ ಮಾತ್ರವಲ್ಲದೆ ದಾನಿಗಳ ನೆರವಿನಿಂದ ಸಂಪೂರ್ಣ ಅಭಿವೃದ್ಧಿ ಮಾಡಿ ರಾಜ್ಯ ಮಾತ್ರವಲ್ಲದೆ ರಾಷ್ಟ್ರದಲ್ಲಿ ಮಾದರಿ ಶಾಲೆಯನ್ನಾಗಿ ಪತಿವರ್ತಿಸಲಾಗುವುದು. ಇದೇ ರೀತಿ ಬೆಂಜನಪದವು ಶಾಲೆಯನ್ನೂ ಅಭಿವೃದ್ಧಿ ಪಡಿಸಲಾಗುವುದು“ ಎಂದರು.”ಅಡಿಕೆ ಹಾಳೆ ಅಡಿಕೆ ತಟ್ಟೆಗಳು ನಮ್ಮ ಜಿಲ್ಲೆಯಿಂದಲೇ ರಫ್ತ್ತು ಆಗುತ್ತಿದೆ. ಇದನ್ನು ರಾಜ್ಯದೆಲ್ಲೆಡೆ ಪ್ರಚಾರ ಮಾಡುವ ಕೆಲಸ ಆಗಬೇಕು. ಪತ್ರಕರ್ತರ ಸಂಘದ ವತಿಯಿಂದ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಆಯೋಜನೆ ಮಾಡಬೇಕು“ ಎಂದು ಶಾಸಕರು ಒತ್ತಾಯಿಸಿದರು.ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ಕುರಿತ ಪ್ರಶ್ನೆಗೆ ”ಮಂಗಳೂರಿನ ಬದಲು ಪುತ್ತೂರಲ್ಲಿ ಮೆಡಿಕಲ್ ಕಾಲೇಜು ಮಾಡಿ ಉಡುಪಿಯ ಬದಲು ಕುಂದಾಪುರದಲ್ಲಿ ಮಾಡಿ ಎಂದು ನಾನು ಮನವಿಯನ್ನು ಮಾಡಿದ್ದೇನೆ. ಯಾಕೆಂದರೆ ಮೂಲ ಸೌಕರ್ಯಗಳೇ ಇಲ್ಲದ ಕಡೆ ಇದನ್ನು ಮಾಡಿದಲ್ಲಿ ಒಳ್ಳೆಯದು ಎಂದರು.ಪಿಲಿಕುಳದಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ನಡೆದು ಹೋಗಲು ಅವಕಾಶವವಿಲ್ಲ. ಇದಕ್ಕಾಗಿ ಪ್ರತ್ಯೇಕ ಹಣ ಕೊಡಬೇಕು. ದುಬಾರಿ ಶುಲ್ಕ ಕೊಟ್ಟರೂ ಪ್ರವಾಸಿಗರಿಗೆ ಇದು ಹೊರೆಯಾಗಲಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಈ ಬಗ್ಗೆ ಕೂಡಲೇ ಅಧಿಕಾರಿಗಳ ಜೊತೆಗೆ ಮಾತಾಡಿ ಕ್ರಮ ಜರುಗಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಪಿಲಿಕುಳ ಗುತ್ತಿನ ಮನೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಾಕಿರುವ ಮರದ ಪೀಠೋಪಕರಣಗಳು ಗೆದ್ದಲು ಹಿಡಿದಿರುವ ಬಗ್ಗೆ ಪತ್ರಕರ್ತರು ಗಮನ ಸೆಳೆದರು.ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ರೈ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ರಾಜ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ರಾಜ್ಯದಲ್ಲಿ ವಿಘ್ನ ವಿನಾಯಕನಿಗೆ ವಿಘ್ನ. ಸರಕಾರದ ಕ್ರಮವನ್ನು ಪ್ರಶ್ನಿಸಿ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರಿಂದ ಸುದ್ದಿಗೋಷ್ಠಿ.

ಮಂಗಳೂರು :1.ರಾಜ್ಯದಲ್ಲಿ ವಿಘ್ನ ವಿನಾಯಕನಿಗೇ ವಿಘ್ನ:- ದೇಶದ ಅತ್ಯಂತ ದೊಡ್ಡ ಹಬ್ಬ ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಇದ್ದು ಮಂಗಳೂರು ನಗರದ ಅನೇಕ ಕಡೆ ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಅನುಮತಿ ಕೋರಲು ಹೋಗಿರುವ ಆಯೋಜಕರಿಗೆ “ನಿಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸುವ ಗಣ್ಯರ-ಅತಿಥಿಗಳ, ಹೆಸರು, ಮೊಬೈಲ್ ಸಂಖ್ಯೆ, ವಿಳಾಸ ನೀಡಬೇಕು. ಭಾಗವಹಿಸುವ ಟ್ಯಾಬ್ಲೋಗಳ ತಂಡ ಯಾವುದು? ಯಾವ ವಾಹನದಲ್ಲಿ ಬರುತ್ತಾರೆ? ಅದರ ದಾಖಲೆ ನೀಡಬೇಕು, ಲೈಸೆನ್ಸ್ ನೀಡಬೇಕು,” ಎಂಬಿತ್ಯಾದಿ ಚಿತ್ರ ವಿಚಿತ್ರ ಅರ್ಥವಿಲ್ಲದ ನೀತಿ ನಿಯಮಗಳನ್ನು ಹೇರುವ ಮೂಲಕ ಗೊಂದಲ ಸೃಷ್ಟಿಸಿ, ಹಿಂದೂ ಬಾಂಧವರು ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಿಸುವುದನ್ನೇ ನಿಲ್ಲಿಸಬೇಕು ಎನ್ನುವ ವ್ಯವಸ್ಥಿತ ಹುನ್ನಾರವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ. ವಿಘ್ನ ವಿನಾಯಕ ಇಡೀ ಬ್ರಹ್ಮಾಂಡದಲ್ಲೇ ತುಂಬಿಕೊಂಡಿದ್ದಾನೆ. ವೈಯಕ್ತಿಕ, ಸಾರ್ವಜನಿಕ, ಸರ್ಕಾರ ಹೀಗೆ ಯಾವುದೇ ಶುಭ ಕಾರ್ಯಗಳಲ್ಲೂ ಅವನಿಗೇ ಮೊದಲ ಪೂಜೆ. ಅಂತಹ ಪೂಜೆಗೆ ಇನ್ನಿಲ್ಲದ ಅಡೆತಡೆಗಳನ್ನು ಒಡ್ದುವ ಪ್ರಯತ್ನವೇಕೆವೆಂದು ಇಂದು ಸುದ್ದಿಗೋಷ್ಠಿ ಕರೆದ ಮಂಗಳೂರು ದಕ್ಷಿಣದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ಸರಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ.ಈ ಕಾಂಗ್ರೆಸ್ಸಿಗರಿಗೆ ಗಣೇಶನ ಮೇಲೆ, ಹಿಂದೂ ಹಬ್ಬಗಳ ಮೇಲೆ ಯಾಕಿಷ್ಟು ಕೋಪ? ಕೂಡಲೇ ಇದನ್ನೆಲ್ಲ ಬಿಟ್ಟು ಹಿಂದೂ ಧಾರ್ಮಿಕ ಭಾವನೆಗಳಿಗೆ ಬೆಲೆ ನೀಡುವಂತೆ ಸರ್ಕಾರವನ್ನು ಆಗ್ರಹಿಸುತ್ತೇನೆಂದಿದ್ದಾರೆ 2.ನಗರದಲ್ಲಿ ಧಿಡೀರ್ ಸಂಚಾರ ಬದಲಾವಣೆಯಿಂದ ಸಾರ್ವಜನಿಕರ ಪರದಾಟ:- ಯಾವುದೇ ಮಾಹಿತಿ ನೀಡದೇ ನಗರದಲ್ಲಿ ಧಿಡೀರ್ ಸಂಚಾರ ಬದಲಾವಣೆ ಮಾಡಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದ್ದು ಆಡಳಿತ ವ್ಯವಸ್ಥೆಯ ಏಕಪಕ್ಷೀಯ ನಿರ್ಧಾರದಿಂದ ಆಟೋರಿಕ್ಷಾ ಚಾಲಕರು ಸಹ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಸ್ಸುಗಳು ಸ್ಟೇಟ್ ಬ್ಯಾಂಕ್ ನಿಂದ ಹಂಪನಕಟ್ಟೆಯವರೆಗೆ ಎಲ್ಲಿಯೂ ನಿಲ್ಲಿಸದೇ ಬಲ ಬದಿಯಲ್ಲಿಯೇ ಹೋಗಬೇಕು ಎಂದು ಸೂಚನೆ ನೀಡಿ ಉದ್ದಕ್ಕೂ ಬ್ಯಾರಿಕೇಡ್ ಅಳವಡಿಸಿರುವುದರಿಂದ ಲೇಡಿಗೋಷನ್ ಆಸ್ಪತ್ರೆಯ ಬಳಿ ಇರುವ ಬಸ್ ನಿಲ್ದಾಣ, ಹಾಗೂ ಬಸ್ ಗಳ ಮಧ್ಯದಲ್ಲೇ ಬ್ಯಾರಿಕೇಡ್ ಬಂದಿದೆ!.ಆದ್ದರಿಂದ ಪ್ರಯಾಣಿಕರು ರಸ್ತೆಯ ಒಂದು ಬದಿಯನ್ನು ಅಪಾಯಕಾರಿಯಾಗಿ ದಾಟಿ ಓಡಿ ಬಂದು ಬ್ಯಾರಿಕೇಡ್ ಸರಿಸಿ ಬಸ್ ಹತ್ತುತ್ತಿರುವ ದೃಶ್ಯ ಪತ್ರಿಕೆಗಳಲ್ಲೂ ವರದಿಯಾಗಿದೆ. ಇಲ್ಲಿ ದುರದೃಷ್ಟವಶಾತ್ ಒಬ್ಬೇ ಒಬ್ಬ ನಾಗರಿಕನ ಅಮೂಲ್ಯ ಜೀವಕ್ಕೆ ಹಾನಿಯಾದರೂ ಅದರ ನೇರ ಹೊಣೆಯನ್ನು ಇಂತಹ ಅವೈಜ್ಞಾನಿಕ ನಿಯಮ ರೂಪಿಸಿದವರೇ ಹೊರಬೇಕೆಂದು ಶಾಸಕರು ಹೇಳಿದ್ದಾರೆ.“ಜಿಲ್ಲೆಯ ಕಾಂಗ್ರೆಸ್ ನಾಯಕರ ಒತ್ತಡ, ಸಚಿವರ ಮೌಖಿಕ ಆದೇಶವೆಂದು” ಏಕಾಏಕಿ ವಾಸ್ತವವನ್ನೇ ಅರಿಯದೇ ಸಂಚಾರ ಬದಲಾವಣೆ ಮಾಡುವ ಮೊದಲು ಕ್ಷೇತ್ರದ ಜನಪ್ರತಿನಿಧಿಗಳ ಅಭಿಪ್ರಾಯ ಪಡೆಯುವ ಸೌಜನ್ಯವೂ ಇಲ್ಲವೇ? ಹಲವಾರು ಕಡೆಗಳಲ್ಲಿ ಯೂ-ಟರ್ನ್‌, ಡಿವೈಡರ್‌ ಬಂದ್‌ ಮಾಡಲಾಗಿದೆ. ನಮಗಂತೂ ಈ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲ. ಕೊನೆಪಕ್ಷ ದಿನನಿತ್ಯ ಇಲ್ಲೇ ಸಂಚರಿಸುವ ಸಾರ್ವಜನಿಕರಿಗಾದರೂ ತಿಳಿಸಬೇಡವೇ? ವೆಂಬುದು ಶಾಸಕರ ಪ್ರಶ್ನೆಯಾಗಿದೆ.3.ಅಕ್ರಮವಾಗಿ ಹಂಪನಕಟ್ಟೆ ವಿ.ವಿ. ಕಾಲೇಜು ಮುಂಭಾಗದ ಬಸ್ ನಿಲ್ದಾಣ ತೆರವು:- ಹಂಪನಕಟ್ಟೆಯ ವಿ.ವಿ. ಕಾಲೇಜು ಮುಂಭಾಗದಲ್ಲಿದ್ದ ಬಸ್ ನಿಲ್ದಾಣವನ್ನು ಕೇವಲ ಒಬ್ಬ ವ್ಯಕ್ತಿಯ ಅಂಗಡಿಯ ವ್ಯಾಪಾರದ ಉದ್ದೇಶಕ್ಕಾಗಿ ಯಾರಿಗೂ ಮಾಹಿತಿ ನೀಡದೇ ರಾತೋರಾತ್ರಿ ತೆರವು ಮಾಡಿದ ಪರಿಣಾಮ ಕಾಲೇಜು ವಿದ್ಯಾರ್ಥಿಗಳು, ವೆನ್ಲಾಕ್ ಆಸ್ಪತ್ರೆಗೆ ಬರುವವರು ಸೇರಿದಂತೆ ಸಾವಿರಾರು ಜನರು ಬಿಸಿಲು, ಮಳೆಯಲ್ಲಿ ನಿಲ್ಲುವಂತಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಲ್ಲೂ ಕೂಡಾ ಜಿಲ್ಲೆಯ ಕಾಂಗ್ರೆಸ್ ನಾಯಕರ ಒತ್ತಡ, ಸಚಿವ ದಿನೇಶ್‌ ಗುಂಡೂರಾವ್‌ ರವರ ಮೌಖಿಕ ಆದೇಶವೆನ್ನುವ ಮಾತು ಕೇಳಿ ಬಂದಿದೆ. ಹಾಗಾದರೆ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಪ್ರತಿಯೊಂದು ಅವ್ಯವಸ್ಥೆಗೂ ಅವರುಗಳೇ ನೇರ ಹೊಣೆ. ಕೂಡಲೇ ಜನಾಭಿಪ್ರಾಯದಂತೆ ಅದೇ ಜಾಗದಲ್ಲಿ ಮತ್ತೆ ಬಸ್ ನಿಲ್ದಾಣ ಮರು ನಿರ್ಮಾಣವಾಗಬೇಕು ಎಂದು ಆಗ್ರಹಿಸುತ್ತೇನೆಂದಿದ್ದಾರೆ4.ಸರ್ಕಾರದ ಆದೇಶದಿಂದ ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆ ಹೆಚ್ಚಳ:- ರಾಜ್ಯ ಸರ್ಕಾರವು ಮಾರ್ಗಸೂಚಿ ದರವನ್ನು ಅವೈಜ್ಞಾನಿಕವಾಗಿ ಹೆಚ್ಚಿಸಿದ ಪರಿಣಾಮ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು ಇದು ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಬಗ್ಗೆ ನಗರ ವಾಸಿಗಳಲ್ಲಿ ನಕಾರಾತ್ಮಕ ಭಾವನೆ ಮೂಡಿಸುವ ಪ್ರಯತ್ನವಾಗಿದೆ. ಈ ಹಿಂದೆ ರಾಜ್ಯದಲ್ಲಿ ನಮ್ಮ ಆಡಳಿತದ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯ ನೀರಿನ ಶುಲ್ಕವನ್ನು ಇಳಿಸುವ ಮೂಲಕ ಜನಪರ ಆಡಳಿತ ನೀಡಲಾಗಿತ್ತು. ಈಗ ಕಾಂಗ್ರೆಸ್‌ ಸರ್ಕಾರವಿದ್ದು ಆಸ್ತಿ ತೆರಿಗೆ ಹೆಚ್ಚಳದ ಆದೇಶವನ್ನು ಕೂಡಲೇ ಹಿಂಪಡೆದು ನಗರದ ಜನಸಾಮಾನ್ಯರಿಗೆ ಹೊರೆಯಾಗುವುದನ್ನು ತಪ್ಪಿಸಿ ನ್ಯಾಯ ಕೊಡಿಸುವಂತಹ ಕೆಲಸ ಮಾಡಲಿ. ಅದು ಬಿಟ್ಟು ಅವರಿವರ ಮೇಲೆ ಆರೋಪ ಹಾಕುತ್ತಾ ಕಾಲಹರಣ ಮಾಡುವುದಲ್ಲ. ಮೊದಲೇ ಮಂಗಳೂರಿಗೆ ಸರ್ಕಾರದಿಂದ ಇದುವರೆಗೆ ಬಿಡಿಗಾಸು ಅನುದಾನವೂ ಬಂದಿಲ್ಲ. ಅಭಿವೃದ್ಧಿಯಂತೂ ಇಲ್ಲವೇ ಇಲ್ಲ. ಅದರ ನಡುವೆ ಈ ಆಸ್ತಿ ತೆರಿಗೆ ಏರಿಕೆ ಯಾವ ಪುರುಷಾರ್ಥಕ್ಕಾಗಿ?ವೆಂದು ಶಾಸಕರು ಕೇಳಿದ್ದಾರೆ.5.ಬಂದರು ಇಲಾಖೆಯಲ್ಲಿನ ಸರ್ಕಾರಿ ಜಾಗದ ಲೀಸ್ ಹಾಗೂ ಬಾಡಿಗೆ ದರವನ್ನು ಕೂಡಲೇ ಇಳಿಸಿ:-ರಾಜ್ಯದ ಬಂದರು ಇಲಾಖೆಯಲ್ಲಿನ ಸರ್ಕಾರಿ ಜಾಗವನ್ನು ಹಲವಾರು ವರ್ಷಗಳಿಂದ ನಿಗದಿತ ದರದಲ್ಲಿ ಬಾಡಿಗೆಗೆ ಹಾಗೂ ಲೀಸ್ ಗೆ ನೀಡಲಾಗಿದೆ. ಇದೀಗ ಆ ದರವು ಹೆಚ್ಚಾಗಿದ್ದು ಈ ಕೂಡಲೇ ಕಡಿಮೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸುತ್ತೇನೆಂದು ಶಾಸಕರು ತಿಳಿಸಿದ್ದಾರೆ.ಅಂತಿಮವಾಗಿ, ನಗರದಲ್ಲಿ ಈಗಾಗಲೇ ಟ್ರಾಫಿಕ್‌ ಸಮಸ್ಯೆ ಮಿತಿ ಮೀರಿದ್ದು ಅದನ್ನು ಬಗೆ ಹರಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರು, ಜಿಲ್ಲಾಡಳಿತ-ಪೊಲೀಸ್‌ ಇಲಾಖೆ,-ಕ್ಷೇತ್ರದ ಜನಪ್ರತಿನಿಧಿಗಳು-ಸ್ಥಳೀಯರನ್ನೊಳಗೊಂಡಂತೆ ಸಂಚಾರ ಬದಲಾವಣೆಯ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಿ. ಅದು ಬಿಟ್ಟು ಏಕಪಕ್ಷೀಯವಾಗಿ, ಅವೈಜ್ಞಾನಿಕ ನಿರ್ಧಾರ ಕೈಗೊಂಡು ಸಾರ್ವಜನಿಕರಿಗೆ ತೊಂದರೆ ಕೊಡುವುದನ್ನು ಬಿಡಲಿ ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಮಂಡಲದ ಬಿಜೆಪಿ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಸಂಜಯ್ ಪ್ರಭು, ಪ್ರಮುಖರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಶ್ರೀ ಶಿರಿಡಿ ಸಾಯಿ ಫ್ರೆಂಡ್ಸ್ ಪುಚ್ಚಾಡಿ ಸೂರಿಂಜೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಶ್ರೀ ಶಿರಿಡಿ ಸಾಯಿ ಫ್ರೆಂಡ್ಸ್ ಪುಚ್ಚಾಡಿ ಸೂರಿಂಜೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಆದಿತ್ಯವಾರ ನಡೆಯಿತು. ಗೌರವ ಅಧ್ಯಕ್ಷರಾಗಿ ಶಂಕರ್ ಶೆಟ್ಟಿ ಅಡುಮನೆ ಶಿಬರೂರು ಹಾಗೂ ಗಣನಾಥ್ ಶೆಟ್ಟಿ ನುರ್ಗೆದಡಿ ಸೂರಿಂಜೆ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಪುನೀತ್ ಕುಮಾರ್, ಉಪಾಧ್ಯಕ್ಷರಾಗಿ ಅಭಿಷೇಕ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಕಾರ್ಯದರ್ಶಿಯಾಗಿ ಅರ್ಜುನ್ ಕುಂದರ್ ಮತ್ತು ಲೋಹಿತ್ ಸಾಲಿಯಾನ್, ಕೋಶಾಧಿಕಾರಿಯಾಗಿ ಪುರಂದರ ಗುಜರನ್, ಜೊತೆ ಕೋಶಾಧಿಕಾರಿಯಾಗಿ ರವೀಂದ್ರ, ಕ್ರೀಡೆ ಶರತ್ ಮತ್ತು ಪ್ರಜಾಯ್, ಸಂಘಟನೆಯ ಜವಾಬ್ದಾರಿಯನ್ನು ಬಾಲಕೃಷ್ಣ ಶೆಟ್ಟಿ , ಸುಧಾಕರ್ ಬಂಗೇರ, ವಿಜಯ್, ಮನೋಜ್ ಅವರಿಗೆ ನೀಡಲಾಯಿತು.ಸದಸ್ಯರು ಮೋಹನದಾಸ ಮತ್ತು ರವಿ ಸಾಲಿಯಾನ್ .ಗುರುವಾರ ವಿಶೇಷ ಪೂಜೆ, ಅನ್ನ ಸಂತರ್ಪಣೆ:ಸುರತ್ಕಲ್ ನಿಂದ ಕೆಲವೇ ದೂರದಲ್ಲಿರುವ ಶಿಬರೂರು-ಕಟೀಲು-ಸುರತ್ಕಲ್ ರಸ್ತೆ ಹಾದು ಹೋಗುವಾಗ ಸಿಗುವ ಪುಚ್ಚಾಡಿ ಸಾಯಿಬಾಬಾ ಮಂದಿರದಲ್ಲಿ ನಿತ್ಯ ಪೂಜೆ ಮತ್ತು ಪ್ರತಿ ಗುರುವಾರ ಭಕ್ತರ ಸೇವಾ ರೂಪದಲ್ಲಿ ವಿಶೇಷ ಪೂಜೆ ಮತ್ತು ಅನ್ನ ಸಂತರ್ಪಣೆ ಕಳೆದು ಹತ್ತು ವರ್ಷಗಳಿಂದ ನಡೆಯುತ್ತಾ ಬರುತ್ತಿದೆ.ಭಕ್ತರು ತಮ್ಮ ತಮ್ಮ ವಿಶೇಷ ದಿನಗಳು ಅಂದರೆ ಹುಟ್ಟುಹಬ್ಬ, ಮದುವೆಯ ವಾರ್ಷಿಕೋತ್ಸವ ಮತ್ತು ಹರಕೆ ರೂಪದಲ್ಲಿ ಶ್ರೀ ಸಾಯಿಬಾಬಾ ಕ್ಷೇತ್ರದಲ್ಲಿ ಅನ್ನ ಸಂತರ್ಪಣೆ ಸೇವೆಯನ್ನು ನೀಡುತ್ತಿರುತ್ತಾರೆ. ಸೇವಾರ್ಥಿಗಳು ಸೇವೆ ನೀಡಲು ಇಚ್ಚಿಸಿದಲ್ಲಿ +91 81975 74625, 9743010099 ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಜನಸಾಮಾನ್ಯರಿಗೆ ಅತ್ಯುತ್ತಮ ಅಂಚೆ ವಿಮಾ ಯೋಜನೆ -ಸುಧಾಕರ ಮಲ್ಯ

ಮಂಗಳೂರು,ಸೆ.1; ಅಂಚೆ ಅಪಘಾತ ವಿಮಾ ಯೋಜನೆ ದೇಶದ ಅತ್ಯುತ್ತಮ ಸರಳವಾದ ಜನಸಾಮಾನ್ಯರ ಕೈಗೆಟುಕುವ ವಿಮಾ ಯೋಜನೆಯಾಗಿದೆ ಎಂದು ಭಾರತೀಯ ಅಂಚೆ ಇಲಾಖೆಯ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸುಧಾಕರ ಮಲ್ಯ ತಿಳಿಸಿದ್ದಾರೆ. ಅವರು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ ಇದರ ನೇತೃತ್ವದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಪತ್ರಕರ್ತರ ಸಂಘದ ಸದಸ್ಯರಿಗೆ ಪತ್ರಕರ್ತರ ಕ್ಷೇಮಾ ಭಿವೃದ್ಧಿ ಯೋಜನೆಯಿಂದ ಪತ್ರಿಕಾ ಭವನದ ಲ್ಲಿ ರವಿವಾರ ಹಮ್ಮಿಕೊಂಡ ಅಂಚೆ ಅಪಘಾತ ವಿಮಾಯೋಜನೆಯ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾ ಡುತ್ತಿದ್ದರು.ಭಾರತೀಯ ಅಂಚೆ ಇಲಾಖೆಯು ದೇಶಾದ್ಯಂತ ಒಂದು ಲಕ್ಷ ಅರುವತ್ತನಾಲ್ಕು ಸಾವಿರ ಅಂಚೆ ಕಚೇರಿಗಳನ್ನು ಹೊಂದಿರುವ ಬಲಿಷ್ಠವಾದ ಸೇವಾ ಜಾಲವನ್ನು ಹೊಂದಿದೆ. ನೂತನ ಅಂಚೆ ಪಾವತಿ ಬ್ಯಾಂಕ್ ಆರು ವರ್ಷ ಪೂರ್ಣ ಗೊಳಿಸಿ 7ನೆ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ.ಅಂಚೆ ಇಲಾಖೆಯ ಅಪಘಾತ ವಿಮಾಯೋಜನೆ ಆದಿತ್ಯ ಬಿರ್ಲಾ ಸಂಸ್ಥೆಯ ಜೊತೆ ಒಡಂಬಡಿಕೆಯೊಂದಿಗೆ ಜಾರಿಯಾಗಿದೆ ಇದನ್ನು ಇದು 10 ಮತ್ತು 15ಲಕ್ಷ ರೂಪಾಯಿ ಮೊತ್ದ ಅಪಘಾತ ವಿಮಾಯೋಜನೆಗೆ ಕ್ರಮವಾಗಿ ರೂ. 549,ರೂ.749 ವಿಮಾ ಕಂತು ಪಾವತಿಸಿದ ಬಳಿಕ ಯಾವುದೇ ಅಂಚೆ ಕಚೇರಿಯ ಮೂಲಕ ದಾಖಲೆ ಸಲ್ಲಿಸಿ ಸಣ್ಣ ಪುಟ್ಟ ಅಪಘಾತ ಸಂಭವಿಸಿದಾಗ ನಿರ್ದಿಷ್ಟ ವಿಮಾ ಪರಿಹಾರ ಮೊತ್ತ ಪಡೆಯಬಹುದು. ಶಾಶ್ವತ ಅಂಗ ವೈಕಲ್ಯದ ಸಂದರ್ಭದಲ್ಲಿ ಮತ್ತು ಮರಣ ಸಂದರ್ಭದಲ್ಲಿ ಪೂರ್ಣ ಪ್ರಮಾಣದ ವಿಮಾ ಮೊತ್ತ ಪಡೆಯಬಹುದು.ಇದಲ್ಲದೆ ಅಂಚೆ ಪಾವತಿ ಬ್ಯಾಂಕ್ ಆದ ಬಳಿಕ ಭಾರತೀಯ ಅಂಚೆ ಇಲಾಖೆ ಆಧಾರ್ ನೋಂದಣಿ, ಠೇವಣಿ ಸ್ವೀಕಾರ,ಕೇಂದ್ರ ಸರಕಾರದ ವಿವಿಧ ಯೋಜನೆ,ಸುಕನ್ಯಾ ಸಮೃದ್ಧಿ,ಮಹಿಳಾ ಸಮ್ಮಾನ್,ಕಿಸಾನ್ ವಿಕಾಸ್ ಸರ್ಟಿಫಿಕೇಟ್ ,ಅಟಕ್ ಪೆನ್ಷನ್ ಯೋಜನೆ ಸೇರಿದಂತೆ ವಿಸ್ತೃತ ವಾದ ಸೇವೆ ನೀಡುತ್ತಿದೆ ಎಂದು ಸುಧಾಕರ ಮಲ್ಯ ವಿವರಿಸಿದರು.ಪತ್ರಕರ್ತರಿಗೆ ವಿಮಾ ನೋಂದಾವಣೆ ಉಚಿತ ವಾಗಿದೆ.ಪ್ರತಿಯೊಬ್ಬರ ವಿಮಾ ವಾರ್ಷಿಕ ಪಾಲಿಸಿ ರೂ.549 ವೆಚ್ಚವನ್ನು ಪತ್ರಕರ್ತರ ಕ್ಷೇಮಾಭಿವೃದ್ಧಿ ಯೋಜನೆ ಯಿಂದ (ಒಂದು ವರ್ಷಕ್ಕೆ ) ಪಾವತಿಸ ಲಾಗುತ್ತಿದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾಹಿತಿ ನೀಡಿದ್ದಾರೆ.ಸಮಾರಂಭದಲ್ಲಿ ಇಂಡಿಯನ್ ಪೋಸ್ಟಲ್ ಬ್ಯಾಂಕ್ ಮಂಗಳೂರು ಇದರ ವ್ಯವಸ್ಥಾಪಕರಾದ ಶಿಯಾಝ್ ಬಿ,, ಭಾರತೀಯ ಅಂಚೆ ಇಲಾಖೆಯ ಮಂಗಳೂರು ಪ್ರದಾನ ಅಂಚೆ ಕಚೇರಿಯ ಅಸಿಸ್ಟೆಂಟ್ ಪೋಸ್ಟ ಮಾಸ್ಟರ್, ಎಚ್ .ಆರ್. ಚಂದ್ರಶೇಖ ರ್ ,ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ,ನಿಕಟ ಪೂರ್ವ ಅಧ್ಯಕ್ಷ ಅನ್ನು ಮಂಗಳೂರು, ಹಿರಿಯ ಪತ್ರಕರ್ತ ರಾದ ಆನಂದ ಶೆಟ್ಟಿ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ,ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮ ಕೃಷ್ಣ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್, ಕಾರ್ಯಕಾರಿ ಸಮಿತಿ ಸದಸ್ಯ ಆರಿಫ್ ಪಡುಬಿದ್ರೆ,ಸಂದೇಶ್ ಜಾರ,ಸತೀಶ್ ಇರಾ ಮೊದಲಾದವರು ಉಪಸ್ಥಿತರಿದ್ದರು.ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿದರು. ಪ್ರದಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ಪತ್ರಕರ್ತರಿಗೆ 10 ಲಕ್ಷ ರೂಪಾಯಿ ವಿಮಾ ಯೋಜನೆಯ ನೋಂದಾವಣೆ ಶಿಬಿರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್ ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಅಂಚೆ ಇಲಾಖೆ ಸಹಾಭಾಗಿತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸದಸ್ಯರಿಗೆ 10 ಲಕ್ಷ ರೂಪಾಯಿ ಉಚಿತ ವಿಮಾ ಯೋಜನೆಯ ನೋಂದಾವಣೆ ಶಿಬಿರ ಸೆಪ್ಟೆಂಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಪತ್ರಿಕಾ ಭವನದಲ್ಲಿ ನಡೆಯಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ಅಂಚೆ ಇಲಾಖೆಯ ಮಂಗಳೂರು ವಿಭಾಗದ ಹಿರಿಯ ಅಧೀಕ್ಷಕ ರಾಗಿರುವ ಎಂ ಸುಧಾಕರ ಮಲ್ಯ ನೆರವೇರಿಸಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಸ್ಥಾಪಕ ಅಧ್ಯಕ್ಷ ಆನಂದ್ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು ಮುಖ್ಯ ಅತಿಥಿ ಗಳಾಗಿ ಭಾಗವಹಿಸಲಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ ಬಿ ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ. ಆರ್ ಅವರು ಗೌರವ ಉಪಸ್ಥಿತರಿರುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸೆ.1-30ರವರೆಗೆ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದಿಂದ ಅಭಿಯಾನ

ಮಂಗಳೂರು: “ಕಲ್ಕತ್ತಾದಲ್ಲಿ ನಡೆದಿರುವ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಹತ್ಯೆ ಘಟನೆಯಿಂದ ಹಿಡಿದು ಕಾರ್ಕಳದಲ್ಲಿ ನಡೆದಿರುವ ಯುವತಿಯ ಸಾಮೂಹಿಕ ಅತ್ಯಾಚಾರ ಪ್ರಕರಣದವರೆಗೆ ದೇಶದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಎನ್ನುವುದೇ ಇಲ್ಲವಾಗಿದೆ. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ ನೋಡಲಾಗುತ್ತದೆ. ಇದೆಲ್ಲದಕ್ಕೂ ಕಾರಣ ಮದ್ಯ ಮತ್ತು ಮಾದಕ ವಸ್ತುಗಳ ಬಳಕೆ ಮಾರಾಟವೇ ಆಗಿದೆ. ಇಷ್ಟೇ ಅಲ್ಲದೆ ಅಶ್ಲೀಲ ವೆಬ್ ಸೈಟ್, ಗಳ ವೀಕ್ಷಣೆ ಹಾಗೂ ಸಾಮಾಜಿಕ ಜಾಲತಾಣಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿವೆ. ಇಂತಹ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗವು ದೇಶಾದ್ಯಂತ ಒಂದು ತಿಂಗಳ ಕಾಲ ಅಭಿಯಾನವನ್ನು ಆಯೋಜಿಸಲಾಗುವುದು. ಸೆ.1ರಿಂದ 30ರವರೆಗೆ ನೈತಿಕತೆಯೇ ಸ್ವಾತಂತ್ರ್ಯ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಅಭಿಯಾನ ನಡೆಸಲಾಗುವುದು“ ಎಂದು ಅಭಿಯಾನದ ರಾಜ್ಯ ಸಮಿತಿ ಸದಸ್ಯೆ ಸಬೀಹಾ ಫಾತಿಮಾ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಸಂಘಟನೆಯ ಸಲಹಾ ಸಮಿತಿ ಸದಸ್ಯೆ ಶಮಿರಾ ಜಹಾನ್ ಮಾತನಾಡಿ, ”ಯುವ ಪೀಳಿಗೆಯನ್ನು ಸ್ವಾತಂತ್ರ್ಯದ ತಪ್ಪು ಕಲ್ಪನೆಯಿಂದ ಜಾಗೃತಗೊಳಿಸುವುದು ಮತ್ತು ಅದರಿಂದ ರಕ್ಷಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.ವಿಶೇಷವಾಗಿ ಮುಸ್ಲಿಂ ಸಮುದಾಯದಲ್ಲಿ ಕುರ್‌ ಆನ್ ಮತ್ತು ಸುನ್ನತ್‌ ಬೆಳಕಿನಲ್ಲಿ ಇಸ್ಲಾಮಿನ ಸರಿಯಾದ ಅರಿವನ್ನು ಉಂಟು ಮಾಡುವುದು ಹಾಗೂ ತಮ್ಮ ಜೀವನವನ್ನು ಅದರ ಮಾನದಂಡದಲ್ಲಿ ಎರಕಹೊಯ್ಯುವಂತೆ ಪ್ರೇರೇಪಿಸುವುದರ ಕಡೆಗೆ ಗಮನವೀಯಲಾಗುವುದು.ಅಭಿಯಾನದ ಸಂದರ್ಭದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಉದಾಹರಣೆಗೆ,‘ಧರ್ಮದಲ್ಲಿ ನೈತಿಕತೆಯ ಕಲ್ಪನೆ’ ಶೀರ್ಷಿಕೆಯಲ್ಲಿ ಅಂತರ್‌ ಧರ್ಮೀಯ ವಿಚಾರಗೋಷ್ಠಿ, ಮಹಿಳಾ ಸಮಾವೇಶ, ಶಾಲಾ-ಕಾಲೇಜುಗಳಲ್ಲೂ ಉಪನ್ಯಾಸ, ವೈಯಕ್ತಿಕ ಭೇಟಿ, ಸಮಾಜದ ಪ್ರಸಿದ್ಧ ವ್ಯಕ್ತಿಗಳ ಸಂದರ್ಶನ ನಡೆಸುವುದು ಅದರ ಪ್ರಮುಖ ಅಂಶಗಳನ್ನು ಆಯ್ದು ಸೋಶಿಯಲ್ ಮೀಡಿಯಾದ ಮೂಲಕಪ್ರಚಾರ ಮಾಡುವುದು. ಲೇಖನ, ಭಾಷಣ ಸ್ಪರ್ಧೆ, ಪೋಸ್ಟರ್ ಡಿಸೈನಿಂಗ್, ಕಥೆ ಮುಂತಾದವುಗಳ ಸ್ಪರ್ಧೆಗಳನ್ನು ನಡೆಸಲಾಗುವುದು. ಕರ್ನಾಟಕದಲ್ಲಿ ಈ ಅಭಿಯಾನದ ಉದ್ಘಾಟನೆಯು ಸೆಪ್ಟೆಂಬರ್ 1ರಂದು ನೆರವೇರಲಿರುವುದು. ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಡಾಕ್ಟರ್ ಮುಹಮ್ಮದ್ ಸಅದ್ ಬೆಳಗಾವಿಯವರುಇದರ ಅಧ್ಯಕ್ಷತೆ ವಹಿಸಲಿದ್ದಾರೆ“ ಎಂದರು.ಪತ್ರಿಕಾಗೋಷ್ಟಿಯಲ್ಲಿ ಸಂಘಟನೆಯ ನಗರ ಸಂಚಾಲಕಿ ಸುಮಯ್ಯ ಹಮೀದುಲ್ಲ, ಶಹಿದಾ ಉಮರ್ ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕನ್ನಡದಲ್ಲೇ ವೆಬ್ಸೈಟ್ ಡಿಸೈನಿಂಗ್ ಕಲಿಯಲು ನಿಮಗಿದು ಸುವರ್ಣಾವಕಾಶ

ಸುಲಭವಾಗಿ, ಸರಳವಾಗಿ ಕನ್ನಡದಲ್ಲೇ ವೆಬ್ ಡಿಸೈನಿಂಗ್ ಕಲಿಯಲು ನಾವು ನಾಳೆಯಿಂದ ವೆಬ್ ಡಿಸೈನ್ ಕೋರ್ಸ್ ಪ್ರಾರಭಿಸುತ್ತಿದ್ದೇವೆ. ಯಾವುದೇ ಕೋಡಿಂಗ್ ಜ್ಞಾನದ ಅಗತ್ಯವಿಲ್ಲ. ಬೇಸಿಕ್ ಕಂಪ್ಯೂಟರ್ ಗೊತ್ತಿದ್ದರೆ ಸಾಕು. 10 ವರ್ಷ ಮೇಲ್ಪಟ್ಟವರು ಕಲಿಯಬಹುದು.ಏನು ಲಾಭ?1.ನಮ್ಮ ವ್ಯವಹಾರಕ್ಕೆ ಬೇಕಾದ ಸ್ವಂತ ವೆಬ್ಸೈಟ್ ನಾವೇ ನಮಗೆ ಬೇಕಾದ ರೀತಿಯಲ್ಲಿ ರಚಿಸಬಹುದು ಅಥವಾ ನಮ್ಮಲ್ಲಿ ಈಗಾಗಲೇ ಇರುವ ಸ್ವಂತ ವೆಬ್ಸೈಟ್ ನಿರ್ವಹಿಸಲು ಯಾರ ಮೇಲೂ ಡಿಪೆಂಡ್ ಆಗಬೇಕಿಲ್ಲ.2.ವೆಬ್ಸೈಟ್ ಡಿಸೈನಿಂಗ್ ಬ್ಯುಸಿನೆಸ್ ಪ್ರಾರಂಭಿಸಬಹುದು. ಅಥವಾ ಮನೆಯಲ್ಲೇ ಕೂತು ಕೆಲಸ ಮಾಡಿ ಸಂಪಾದಿಸಬಹುದು.3.ಡಿಜಿಟಲ್ ಮಾರ್ಕೆಟಿಂಗ್ ನ ಪ್ರಮುಖ ಭಾಗವಾಗಿರುವ SEO (Serach Engine Optimization) ಮಾಡಿ ನಮ್ಮ ವ್ಯವಹಾರ ವ್ಯಾಪ್ತಿಯನ್ನು ವಿಸ್ತರಿಸಬಹುದು.4.ಮುಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾದ ಡಿಜಿಟಲ್ ನೆಟ್ವರ್ಕ್ ನ ಸಂಪೂರ್ಣ ಸಾಕ್ಷರತೆಗೆ ಇದು ಪೂರಕವಾಗಿದೆ.5.ಸೋಶಿಯಲ್ ಮೀಡಿಯಾ ಮಾರ್ಕೆಟಿಂಗ್ ಗೆ ಬೇಕಾದ ಲ್ಯಾಂಡಿಂಗ್ ಪೇಜ್ ನೀವೇ ರಚಿಸಬಹುದು.ಕೋರ್ಸ್ ಜೊತೆಗೆ ಏನೆಲ್ಲಾ ಸಿಗುತ್ತದೆ?1.ಸುಮಾರು 50ಕ್ಕೂ ಅಧಿಕ ವಿಡಿಯೋ ಲೆಕ್ಚರ್ಗಳಿದ್ದು, ಪ್ರತಿದಿನದ ಅಭ್ಯಾಸದ ಬಳಿಕ ಸಂದೇಹಗಳನ್ನು ಚಾಟ್ ಸಪೋರ್ಟ್ ಮೂಲಕ ಬಗೆಹರಿಸಿಕೊಳ್ಳಬಹುದು.2.ಕಲಿಯಲು ಸುಮಾರು 2000 ರೂಪಾಯಿಗಳವರೆಗಿನ ಹೋಸ್ಟಿಂಗ್ ಸರ್ವರ್ ಉಚಿತವಾಗಿ ನೀಡಲಾಗುವುದು.3.ಕಲಿಯಲು ಬೇಕಾದ ಪ್ರಮುಖ ಎಲ್ಲಾ Professional Pluginಗಳು GPL lisence ಮೂಲಕ ನೀಡುತ್ತೇವೆ. ಇದು ಸುಮಾರು 4000 ರೂಪಾಯಿಗಳಷ್ಟು ಮೌಲ್ಯದ್ದಾಗಿದ್ದು ಕಲಿಯಲು ತಮಗೆ ಉಚಿತವಾಗಿ ನೀಡಲಾಗುತ್ತದೆ.4.Static webiste to dynamic website ಎಲ್ಲಾ ಪ್ರಮುಖ ತರಬೇತಿ ನೀಡಲಾಗುತ್ತದೆ. ಉದಾಹರಣೆಗೆ: ನ್ಯೂಸ್ ವೆಬ್ಸೈಟ್ ಮಾಡುವುದು ಹೇಗೆ? ಆನ್ಲೈನ್ ಶಾಪಿಂಗ್, Matrimony, Real estate, Job search, Cinema OTT, LMS* ಹೀಗೆ ಬ್ಯುಸಿನೆಸ್ ರಿಲೇಟೆಡ್ ವೆಬ್ ಡಿಸೈನ್ ತರಬೇತಿ ನೀಡಲಾಗುವುದು.5.ಸುಮಾರು 3000 ರೂಪಾಯಿ ಬೆಲೆಬಾಳುವ GPL lisenced Professional Theme ಗಳು ಕೂಡ ಉಚಿತವಾಗಿ ನೀಡಲಾಗುವುದು.6.ಕೋರ್ಸ್ ಮುಗಿದ ನಂತರ ಆನ್ಲೈನ್ ಎಕ್ಸಾಮ್ ನಡೆಸಲಾಗುತ್ತದೆ. ಕೊನೆಯ ಭಾಗವಾಗಿ ಸರ್ಟಿಫಿಕೆಟ್ ನೀಡಲಾಗುತ್ತದೆ.ಕೋರ್ಸ್ ಬೆಲೆ ಕೇವಲ 2499/-. ಕೋರ್ಸ್ Validity ಒಂದು ವರ್ಷಗಳವರೆಗೆ ಇರುತ್ತದೆ. ಸಾಧಾರಣ ಕಂಪ್ಯೂಟರ್ ಅಥವಾ Laptop ಬಳಸಬಹುದು.Limited Hosting ಇರುವುದರಿಂದ limited Admission ಇರುತ್ತದೆ. ತಕ್ಷಣವೇ ನೋಂದಾಯಿಸಬಹುದು.ಹೆಚ್ಚಿನ ಮಾಹಿತಿಗಾಗಿ: 6363426084Graphic AcademyG-Space.cloud

ಪ್ರಾದೇಶಿಕ ವಾರ್ತೆಗಳು

ಮಂಗಳೂರು ವಿವಿಯನ್ನು ಅಧೋಗತಿಗಿಳಿಸಿದ ರಾಜ್ಯ ಸರ್ಕಾರದ ಗ್ಯಾರಂಟಿ ; ಬಡವರ ಶಿಕ್ಷಣಕ್ಕೂ ಹಣ ಇಲ್ಲದ ಸ್ಥಿತಿ, ವಿವಿ ಕಾಲೇಜನ್ನೇ ಮುಚ್ಚುವ ಹುನ್ನಾರದಲ್ಲಿ ಕಾಂಗ್ರೆಸ್ ಸರ್ಕಾರ:- ಶಾಸಕ ವೇದವ್ಯಾಸ ಕಾಮತ್ ಆಕ್ರೋಶ

ಮಂಗಳೂರು: ಶಿಕ್ಷಣ ಮೂಲಭೂತ ಹಕ್ಕಾದರೂ, ಗ್ಯಾರಂಟಿ ಹಿಂದೆ ಬಿದ್ದಿರುವ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನೂ ನಿರ್ಲಕ್ಷ್ಯ ಮಾಡಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಒಂದೆಡೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಆರ್ಥಿಕ ದುರ್ಗತಿ ಒದಗಿದ್ದರೆ, ರಾಜ್ಯ ಸರ್ಕಾರಕ್ಕೆ ಅನುದಾನ ಕೊಟ್ಟು ಮಕ್ಕಳ ಶಿಕ್ಷಣಕ್ಕೆ ಆಸರೆಯಾಗುವುದಕ್ಕೂ ಗತಿ ಇಲ್ಲದ ಸ್ಥಿತಿ. ವಿವಿಯಲ್ಲಿ ಆರ್ಥಿಕ ದುಸ್ಥಿತಿಯಿಂದಾಗಿ ಸಿಬ್ಬಂದಿ ವೇತನಕ್ಕೂ ಪರದಾಡುವ ಸ್ಥಿತಿಯಾಗಿದೆ. ಇದಲ್ಲದೆ, ಮಂಗಳೂರು ವಿವಿಯ ಆಡಳಿತ ಸಂಧ್ಯಾ ಕಾಲೇಜು ಸೇರಿದಂತೆ ಕೆಲವು ವಿಭಾಗಗಳನ್ನೇ ಮುಚ್ಚುವುದಕ್ಕೆ ಮುಂದಾಗಿದ್ದು ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಕನ್ನಡಿ ಹಿಡಿಯುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ. ‌ಮಂಗಳೂರು ವಿವಿಯಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದಾಗಿಯೇ ಇಂತಹ ಸ್ಥಿತಿ ಬಂದೊದಗಿದೆ ಎಂದು ಅಲ್ಲಿನ ನಿವೃತ್ತ ಪ್ರಾಧ್ಯಾಪಕರೇ ಹೇಳುತ್ತಿದ್ದಾರೆ. ವಿವಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಅತಿಥಿ ಉಪನ್ಯಾಸಕರಿಗೆ ಕಳೆದ ನಾಲ್ಕು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಒಂದು ತಿಂಗಳು ವೇತನ ವಿಳಂಬವಾದರೂ ಜೀವನ ನಡೆಸುವುದು ಕಷ್ಟಕರವಾಗಿರುವ ಇಂದಿನ ದಿನಗಳಲ್ಲಿ ನಾಲ್ಕೈದು ತಿಂಗಳ ಕಾಲ ವೇತನ ಬಾಕಿ ಉಳಿಸಿಕೊಂಡರೆ ಅವರ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಒಂದು ಕಾಲದಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ಎಂಬ ಹೆಸರು ಪಡೆದುಕೊಂಡಿದ್ದ ಮಂಗಳೂರು ವಿವಿ ಭ್ರಷ್ಟಾಚಾರದಿಂದಾಗಿ ಅಕ್ಷರಶಃ ತನ್ನ ಘನತೆಯನ್ನು ಹಾಳು ಮಾಡಿಕೊಂಡಿದೆ.ವಿವಿಯ ಆಡಳಿತದ ನಿರ್ಲಕ್ಷ್ಯದಿಂದಾಗಿ ಯುಜಿಸಿ ಮಾನ್ಯತೆ ಬಿ ಗ್ರೇಡ್ ಗೆ ಇಳಿದಿದೆ. ಇದರ ನಡುವೆ, ವಿದ್ಯಾರ್ಥಿಗಳ ಅಡ್ಮಿಶನ್ ಕಡಿಮೆಯಾದ ನೆಪದಲ್ಲಿ ಅನೇಕ ಪದವಿ, ಸ್ನಾತಕೋತ್ತರ ವಿಭಾಗಗಳನ್ನು ಮುಚ್ಚಲಾಗುತ್ತಿದೆ. ಮಂಗಳೂರಿನ ಸಂಧ್ಯಾ ಕಾಲೇಜಿನಲ್ಲಿ ಪದವಿ ವಿಭಾಗಕ್ಕೆ ಅಡ್ಮಿಷನ್ ನಿಲ್ಲಿಸಿದ್ದು ಇದಕ್ಕೆ ಸಾಕ್ಷಿ. ಹಗಲಿನಲ್ಲಿ ಕೆಲಸ ನಿರ್ವಹಿಸುತ್ತ ಸಂಜೆಯ ವೇಳೆ ಶಿಕ್ಷಣ ಪಡೆಯುತ್ತಿದ್ದ ಬಡ ವಿದ್ಯಾರ್ಥಿಗಳ ಹೊಟ್ಟೆಗೆ ಬಡಿದಂತಾಗಿದೆ. ಖಾಸಗಿ ಕಾಲೇಜುಗಳ ಭರಾಟೆ ನಡುವೆ ಸರ್ಕಾರದ ಶಿಕ್ಷಣ ವ್ಯವಸ್ಥೆಯನ್ನು ಚೆನ್ನಾಗಿಟ್ಟುಕೊಂಡರೆ, ವಿದ್ಯಾರ್ಥಿಗಳಿಗೆ ಕೊರತೆಯಾಗಲ್ಲ. ಕಡಿಮೆ ಶುಲ್ಕದಲ್ಲಿ ಶಿಕ್ಷಣ ಸಿಗುತ್ತೆ ಎನ್ನುವ ಕನಸಿನೊಂದಿಗೆ ಬರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವೇ ಬಾಗಿಲು ಮುಚ್ಚಿದಂತಾಗಿದ್ದು ನಗರದ ಹೃದಯಭಾಗದಲ್ಲಿರುವ ಏಕೈಕ ಸರ್ಕಾರಿ ಕಾಲೇಜನ್ನೇ ಮುಚ್ಚುವ ಹುನ್ನಾರದಂತೆ ಕಾಣುತ್ತಿದೆ. ಸಂಧ್ಯಾ ಕಾಲೇಜಿನಲ್ಲಿ ಪದವಿ ಪ್ರವೇಶ ನಿಲ್ಲಿಸಿದ್ದರಿಂದ ಹಲವಾರು ಮಂದಿ ಉಪನ್ಯಾಸಕರು, ಸಿಬ್ಬಂದಿಯ ಉದ್ಯೋಗಕ್ಕೂ ಕತ್ತರಿ ಹಾಕಿದಂತಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರ ತನ್ನ ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳ ನೆಪದಲ್ಲಿ ಶಿಕ್ಷಣದ ಉನ್ನತೀಕರಣಕ್ಕೂ ಅನುದಾನವನ್ನು ಒದಗಿಸಲಾಗದೆ, ಕೈಲಾಗದಿದ್ದರೆ ಮುಚ್ಚಿಬಿಡಿ ಎನ್ನುವ ಮನಸ್ಥಿತಿಗೆ ಬಂದಿರುವುದನ್ನು ತೋರಿಸುತ್ತಿದೆ. ಗ್ಯಾರಂಟಿ ಯೋಜನೆ ಹೆಸರಲ್ಲಿ ರಾಜ್ಯ ಸರ್ಕಾರವೇ ಮಂಗಳೂರು ವಿವಿಯನ್ನು ಅಧೋಗತಿಗೆ ತಳ್ಳಿದ್ದು ಸಾವಿರಾರು ಬಡವರ ಮಕ್ಕಳಿಗೆ ಅನ್ಯಾಯ ಮಾಡಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಮಂಗಳೂರು ಹೋಬಳಿ ಮಟ್ಟದ ಕಬ್ಬಡ್ಡಿ ಪಂದ್ಯಾಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಕಾವೂರು ಇವುಗಳ ಸಂಯುಕ್ತ ಆಶ್ರಯದಲ್ಲಿ 2024-2025 ನೇ ಸಾಲಿನ ಮಂಗಳೂರು ಹೋಬಳಿ ಮಟ್ಟದ ಕಬ್ಬಡ್ಡಿ ಪಂದ್ಯಾಟ ದಿನಾಂಕ 28ರಂದು ಶಾಲಾ ಮೈದಾನದಲ್ಲಿ ನಡೆಯಿತು.ಸ್ಥಳೀಯ ಕಾರ್ಪೋರೇಟರ್ ಸುಮಂಗಲಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜೇಮ್ಸ್ ಕುಟಿನೋ, ದೈಹಿಕ ಶಿಕ್ಷಣಾಧಿಕಾರಿಗಳಾದ ಭರತ್, ಕರ್ನಾಟಕ ರಾಜ್ಯ ಸರಕಾರದ ಆಹಾರ ಆಯೋಗದ ಸದಸ್ಯ ಸುಮಂತ್ ರಾವ್, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿ ನಿತೇಶ್ ಕೊಂಡೆ, ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ವಾಣಿ, CRP ದೀಪಿಕಾ, ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷರಾದ ಚೆಲುವಮ್ಮ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಲಕ್ಷ್ಮಣ ಛಲವಾದಿ, ಶಾಲಾ ಹಳೆ ವಿದ್ಯಾರ್ಥಿ ಹಸನಬ್ಬ, ಪ್ರವೀಣ್ ಲೋಬೊ, ನಿವೃತ್ತ ಮುಖ್ಯ ಶಿಕ್ಷಕಿ ಚಂದ್ರಾವತಿ, ಮುಖ್ಯ ಶಿಕ್ಷಕಿ ಸೀತಮ್ಮ. ಜೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಈ ಕಬಡ್ಡಿ ಪಂದ್ಯಾಟದಲ್ಲಿ 28 ಶಾಲೆಗಳು ಭಾಗವಹಿಸಿದ್ದವು. ಬಾಲಕರ ವಿಭಾಗ- MGC ಬೋಂದೆಲ್( ಪ್ರಥಮ.)ವಿದ್ಯಾಜ್ಯೋತಿ ಕಾವೂರು( ದ್ವಿತೀಯ)ಬಾಲಕಿಯರ ವಿಭಾಗ – B.E. M ಕಾರ್ ಸ್ಟ್ರೀಟ್ (ಪ್ರಥಮ ) ವಿದ್ಯಾ ಆಂಗ್ಲ ಮಾಧ್ಯಮ ಹಿ. ಪ್ರಾಥಮಿಕ ಶಾಲೆ ಕೊಂಚಾಡಿ (ದ್ವಿತೀಯ ) ಶಾಲಾ ಮುಖ್ಯ ಶಿಕ್ಷಕಿ ಸೀತಮ್ಮ. ಜೆ ಸ್ವಾಗತಿಸಿದರು. ಸುನೀತಾ ಪ್ಲಾವಿಯಾ ಡಿಕೋಸ್ತಾ ನಿರೂಪಿಸಿದರು. ಕೋಕಿಲವಾಣಿ ವಂದಿಸಿದರು. ಶಿಕ್ಷಕಿ ಆಶಾ ಮತ್ತು ದೈಹಿಕ ಶಿಕ್ಷಕಿ ವಿಜಯಲಕ್ಷ್ಮಿ ಹಾಗೂ SDMC ಸದಸ್ಯರು ಸಹಕರಿಸಿದರು.

Scroll to Top