ಪ್ರಾದೇಶಿಕ ವಾರ್ತೆಗಳು

ಪ್ರಾದೇಶಿಕ ವಾರ್ತೆಗಳು

ದಕ್ಷಿಣ ಕನ್ನಡ ಜಿಲ್ಲೆಯ” ಪಿಲಿಕುಳ ನಿಸರ್ಗಧಾಮದಲ್ಲಿ ನವೆಂಬರ್ 14ರಿಂದ 18ರವರೆಗೆ ಪಿಲಿಕುಳೋತ್ಸವ” ಜಿಲ್ಲಾಧಿಕಾರಿಗಳೊಂದಿಗೆ ಮಂಜುನಾಥ ಭಂಡಾರಿ ಸಮಾಲೋಚನೆ

ಮಂಗಳೂರು, ಆಗಸ್ಟ್ 29.ದಶಕದಿಂದ ಮಂಗಳೂರಿನ ಪಿಳಿಕುಲ ನಿಸರ್ಗಧಾಮದಲ್ಲಿ ನಡೆಯುತ್ತಿದ್ದ ಕಂಬಳ ಸ್ಥಗಿತಗೊಂಡಿದ್ದು ಆ ಪರಿಸರದಲ್ಲಿ ಜರುಗುತ್ತಿದ್ದ ವಿವಿಧ ಕಾರ್ಯಕ್ರಮಗಳು ಕಳೆಗುಂದಿರುತ್ತದೆ. ಆ ವೈಭವವನ್ನು ಮರು ಸ್ಥಾಪಿಸಲು ಈ ಕಾರ್ಯಕ್ರಮಗಳನ್ನು ರೂಪಿಸುವುದು ಸಮಯೋಚಿತವಾಗಿದೆ.ಈ ವರ್ಷದ ನವಂಬರ್ 14 ರಿಂದ 18ರವರೆಗೆ “ಪಿಲಿಕುಳೋತ್ಸವ” ಹೆಸರಿನಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಈ ಕೆಳಗಿನಂತೆ ಜಿಲ್ಲಾ ಸಾಂಸ್ಕೃತಿಕ ಉತ್ಸವ, ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರುನವೆಂಬರ್ 14ರಂದು ಕಾರ್ಯಕ್ರಮದ ಉದ್ಘಾಟನೆ ಮಕ್ಕಳಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಮೇಳ ಹಾಗೂ ಮಕ್ಕಳ ಹಬ್ಬ ಆಯೋಜಿಸುವುದು.•ನವೆಂಬರ್ 15ರಿಂದ ಕೃಷಿ ಮತ್ತು ಜಾನುವಾರು ಮೇಳ ಆಯೋಜಿಸುವುಸುನವೆಂಬರ್ 16 ರಂದು ಕೆಸರು ಗದ್ದೆಯಲ್ಲಿ ಜಿಲ್ಲಾ ಮಟ್ಟದ ಜಾನಪದ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುವುದು.ನವೆಂಬರ್ 17 ಮತ್ತು 18ರಂದು ಕಂಬಳ ನಡೆಸುವುದು ಹಾಗೂ ಪ್ರತೀ ದಿನ ಸಂಜೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದುದಕ್ಷಿಣ ಕನ್ನಡ ಜಿಲ್ಲೆಯ ವಿನೂತನವಾದ ಈ ಕಾರ್ಯಕ್ರಮಕ್ಕೆ ಮಾನ್ಯ ಕರ್ನಾಟಕ ವಿಧಾನ ಸಭಾಧ್ಯಕ್ಷರು. ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು, ಚುನಾಯಿತ ಪ್ರತಿನಿಧಿಗಳು ಮತ್ತು ಕಂಬಳ ಸಮಿತಿಯೊಂದಿಗೆ ಚರ್ಚಿಸಿ ಕಾರ್ಯಕ್ರಮದ ರೂಪುರೇಖೆ ರಚಿಸಸಲಾಗುವುದು ಎಂದು ಮಂಜುನಾಥ ಭಂಡಾರಿ ತಿಳಿಸಿದರು.

ಪ್ರಾದೇಶಿಕ ವಾರ್ತೆಗಳು

ಸುಸಜ್ಜಿತ ಸಮುದಾಯ ವಾಚನಾಲಯ ನಿರ್ಮಿಸಲು ಮಾಸ್ಟರ್ ಪ್ಲಾನ್-ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್

ಮಂಗಳೂರು : ವೆನ್ಲಾಕ್ ಜಿಲ್ಲಾಸ್ಪತ್ರೆ ಆವರಣದಲ್ಲಿ ಸುಸಜ್ಜಿತ ಸಮುದಾಯ ವಾಚನಾಲಯ ನಿರ್ಮಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆಯ ಸಮುದಾಯ ವಾಚನಾಲಯದ ಎರಡನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ‘ ವೆನ್ಲಾಕ್ ಆಸ್ಪತ್ರೆಯಲ್ಲಿ ರೆಡ್‌ಕ್ರಾಸ್ ಸಂಸ್ಥೆ, ಜಿಲ್ಲಾ ಪತ್ರಕರ್ತರ ಸಂಘ ಸಹಿತ ವಿವಿಧ ಸಂಘ ಸಂಸ್ಥೆಗಳು ಮುತುವರ್ಜಿ ವಹಿಸಿ ಸಮುದಾಯ ವಾಚನಾಲಯ ಸೇವೆ ಒದಗಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ವೆನ್ಲಾಕ್ ಆಸ್ಪತ್ರೆಯ ಕೊರತೆ ನಿವಾರಣೆಗೆ ಸಾಕಷ್ಟು ಶ್ರಮಿಸಿದ್ದೇನೆ. ಖಾಸಗಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗಳಿಗೆ ಸಮನಾದ ಸೇವೆಯನ್ನು ಇಂದು ವೆನ್ಲಾಕ್ ಆಸ್ಪತ್ರೆ ನೀಡುತ್ತಿದೆ. ನೆರೆಯ 7-8 ಜಿಲ್ಲೆಗಳ ರೋಗಿಗಳು ರೋಗಿಗಳು ಚಿಕಿತ್ಸೆಗೆ ವೆನ್ಲಾಕ್ ಆಸ್ಪತ್ರೆಗೆ ಬರುತ್ತಿದ್ದಾರೆ. ರೋಗಿಗಳು ಮತ್ತು ಅವರ ಸಹಾಯಕರಿಗೆ ವಾಚನಾಲಯ ಆರಂಭಿಸಿರುವುದು ಶ್ಲಾಘನೀಯ. ಈ ಕೇಂದ್ರವನ್ನುಇನ್ನಷ್ಟು ಸುವ್ಯವಸ್ಥಿತಗೊಳಿಸಲು ಮಾಸ್ಟರ್ ಪ್ಲಾನ್ ಸಿದ್ದ ಪಡಿಸುವ ಅಗತ್ಯ ಇದೆ ಎಂದು ಯು.ಟಿ.ಖಾದರ್ ಹೇಳಿದರು.ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್‌ನ ಸಂಚಾಲಕ ಡಾ.ಕೆ.ಆರ್.ಕಾಮತ್ ಮಾತನಾಡಿ ‘ವಿವಿಧ ಕಾಲೇಜುಗಳ ಯುವ ರೆಡ್‌ಕ್ರಾಸ್ ವಿದ್ಯಾರ್ಥಿ ಗಳಿಗೆ ವೆನ್ಲಾಕ್‌ನ ಸಮುದಾಯ ಸೇವಾ ಕೇಂದ್ರದ ಮೂಲಕ ಪ್ರತಿ ವಾರ ತರಬೇತಿ ನೀಡಲಾಗುತ್ತಿದೆ. ಪ್ರತಿ ತಿಂಗಳು ಸುಮಾರು 6ಸಾವಿರ ಮಂದಿ ವಾಚನಾಲಯ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.ವೆನ್ಲಾಕ್ ಜಿಲ್ಲಾಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಜೆಸಿಂತಾ ಡಿಸೋಜ,ಆರ್‌ಎಂಒ ಡಾ.ಸುಧಾಕರ್, ರೆಡ್‌ಕ್ರಾಸ್ ಸೊಸೈಟಿಯ ದ.ಕ.ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ್ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಷಾ,ವೆನ್ಲಾಕ್ ಲಯನ್ಸ್ ಲಿಂಬ್ ಸೆಂಟರ್‌ನ ವ್ಯವಸ್ಥಾಪಕ ಸುರೇಶ್ ಶೆಟ್ಟಿ, ರೆಡ್‌ಕ್ರಾಸ್ ಸೊಸೈಟಿಯ ಕಾರ್ಯದರ್ಶಿ ಕಿಶೋರ್‌ಚಂದ್ರ ಹೆಗ್ಡೆ, ಸಲಹೆಗಾರರಾದ ಪ್ರಭಾಕರ ಶರ್ಮ, ರವೀಂದ್ರನಾಥ ಉಚ್ಚಿಲ್, ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಮಹಮ್ಮದ್ ಆರಿಫ್ ಪಡುಬಿದ್ರೆ,ರಾಜೇಶ್ ದಡ್ಡಂಗಡಿ ಉಪಸ್ಥಿತರಿದ್ದರು. ಇದೇ ಸಂದರ್ಭ ಯು.ಟಿ.ಖಾದರ್ ಅವರು ವಾಚನಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಸ್ವಾಗತಿಸಿ, ಕೋಶಾಧಿಕಾರಿ ಪುಷ್ಪರಾಜ್.ಬಿ.ಎನ್. ವಂದಿಸಿದರು. ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

ಪ್ರಾದೇಶಿಕ ವಾರ್ತೆಗಳು

ವಿಶ್ವ ಹಿಂದೂ ಪರಿಷತ್ ಷಷ್ಠಿಪೂರ್ತಿ ಸಂಭ್ರಮ. ಹಿಂದೂ ಸಮಾವೇಶ, ಸಮ್ಮೇಳನ ಸಹಿತ ವಿವಿಧ ಕಾರ್ಯಕ್ರಮಗಳ ಆಯೋಜನೆ.

ಮಂಗಳೂರು: “ಭಾರತೀಯ ಧರ್ಮ, ಸಂಸ್ಕೃತಿ ಹಿಂದೂ ಜೀವನ ಮೌಲ್ಯಗಳು, ನಂಬಿಕೆ ಮತ್ತು ಸ್ವಾಭಿಮಾನವನ್ನುರಕ್ಷಿಸಲು ಪ್ರಾರಂಭಗೊಂಡ ವಿಶ್ವದ ಅತೀ ದೊಡ್ಡ ಸಂಘಟನೆ ವಿಶ್ವ ಹಿಂದೂ ಪರಿಷತ್. 1964 ಆಗಸ್ಟ್ 29ರಂದು ಮುಂಬೈಯ ಸಾಂದೀಪಿನಿ ಆಶ್ರಮದಲ್ಲಿ ಪ್ರಾರಂಭಗೊಂಡ ವಿಶ್ವ ಹಿಂದೂ ಪರಿಷತ್ತಿಗೆ ಈ ವರ್ಷ ಷಷ್ಠಿಪೂರ್ತಿ ಸಂಭ್ರಮ. ಕಳೆದ 60 ವರ್ಷಗಳಲ್ಲಿ ಜಗತ್ತಿನ ಹಿಂದುಗಳನ್ನು ಸಂಘಟಿಸುವ ಕಾರ್ಯದೊಂದಿಗೆ ಹಿಂದೂ ಧರ್ಮದ ಆಚರಣೆ, ಪ್ರಚಾರ, ರಕ್ಷಣೆಯ ಉದ್ದೇಶವನ್ನು ಇಟ್ಟುಕೊಂಡು, ಕೆಲಸಕಾರ್ಯಗಳನ್ನು ಮಾಡುತ್ತ ಬಂದಿದೆ“ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.”ಭಾರತ ಮಾತ್ರವಲ್ಲದೆ ಅಮೇರಿಕ,ಕನಡಾ, ಆಫ್ರಿಕಾ, ಇಂಗ್ಲೆಂಡ್, ಹಂಗೇರಿ, ಜರ್ಮನಿ, ಫ್ರಾನ್ಸ್ ಕಿನ್ಯ, ಫಿಜಿ, ಶ್ರೀಲಂಕಾ, ಇಂಡೋನೇಷ್ಯಾ, ಮಾರಿಷಸ್, ಥಾಯ್ಲೆಾಂಡ್, ಮಲೇಷಿಯಾ, ಜಪಾನ್ ಸೇರಿದಂತೆ 50 ಕ್ಕೂ ಹೆಚ್ಚು ದೇಶಗಳಲ್ಲಿ ವಿಶ್ವ ಹಿಂದೂ ಪರಿಷತ್ತಿನ ಕಾರ್ಯ ನಡೆಯುತ್ತಿದೆ. ಮೊದಲನೆಯ ರಾಷ್ಟ್ರೀಯ ಅಧ್ಯಕ್ಷರಾದ ಮೈಸೂರಿನ ಮಹಾರಾಜರಾದ ಜಯಚಾಮರಾಜ ಒಡೆಯರ್ಇವರ ನೇತೃತ್ವದೊಂದಿಗೆ ದೇಶದಲ್ಲಿ ವಿವಿಧ ಮತಪಂಥಗಳ ಪೂಜ್ಯ ಸಾಧು ಸಂತರು, ಧರ್ಮಾಚಾರ್ಯರು, ಧಾರ್ಮಿಕ ರಾಷ್ಟ್ರೀಯ ಚಿಂತಕರು, ವಿದ್ವಾಂಸರು ಒಳಗೊಂಡ ಮಾರ್ಗದರ್ಶಕ ಮಂಡಳಿಯ ಮಾರ್ಗದರ್ಶನದ ಮೂಲಕ ಪ್ರಾರಂಭಗೊಂಡ ವಿಶ್ವ ಹಿಂದೂ ಪರಿಷದ್ ಹಲವಾರು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡು ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ, ಇದೀಗ ನಮ್ಮ ದೇಶದ ಸುಮಾರು 90 ಸಾವಿರಕ್ಕೂ ಹೆಚ್ಚು ಸ್ಥಾನಗಳಲ್ಲಿ ವಿಶ್ವ ಹಿಂದೂ ಪರಿಷತ್ ಸಮಿತಿಗಳ ಮೂಲಕ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದೆ. ಗೋವುಗಳ ರಕ್ಷಣೆಯ ಜೊತೆಗೆ ಪಾಲನೆಯನ್ನು ಮಾಡಿಕೊಂಡು ಬರುತ್ತಿದೆ. ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಆಂದೋಲನ, ಅಮರನಾಥ, ರಾಮಸೇತು, ತಿರುಪತಿ ಉಳಿಸಿ ಆಂದೋಲನ, ಕರ್ನಾಟಕದ ಪವಿತ್ರ ಕ್ಷೇತ್ರ ದತ್ತಪೀಠದ ಮುಕ್ತಿಗೋಸ್ಕರ ಹೋರಾಟವನ್ನು ಕೈಗೆತ್ತಿಕೊಂಡು ಶ್ರದ್ಧಾಕೇಂದ್ರಗಳನ್ನು ಉಳಿಸುವುದರಲ್ಲಿ ಯಶಸ್ವಿಯಾಗಿದೆ. ಬಜರಂಗದಳ, ದುರ್ಗಾವಾಹಿನಿ ಮುಖಾಂತರ ಯುವಕ ಯುವತಿಯರಲ್ಲಿ ರಾಷ್ಟ್ರ ಭಕ್ತಿಯನ್ನು ಮೂಡಿಸಿ, ಅವರನ್ನು ರಾಷ್ಟ್ರರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸುವಂತೆ ಮಾಡಿದೆ. ಮಾತೃಶಕ್ತಿ ಮೂಲಕ ಮಹಿಳಾಕಾರ್ಯ, ಬಾಲಸಂಸ್ಕಾರ, ಸತ್ಸಂಗಗಳ ಮೂಲಕ ಸಂಸ್ಕಾರ ಕೇಂದ್ರಗಳು ಪ್ರಾರಂಭಗೊಂಡಿದೆ“ ಎಂದವರು ಹೇಳಿದರು.ಬಳಿಕ ಮಾತಾಡಿದ ವಿಭಾಗ ಸಹ ಕಾರ್ಯದರ್ಶಿ ಶಿವಾನಂದ ಮೆಂಡನ್ ಅವರು, ”ಷಷ್ಠಿಪೂರ್ತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 25ರಿಂದ ಸೆಪ್ಟೆಂಬರ್ 1ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ 21 ಪ್ರಖಂಡಗಳಲ್ಲಿ ಹಿಂದೂ ಸಮಾವೇಶ, ಸಮ್ಮೇಳನ, ಶೋಭಾಯಾತ್ರೆ ಮೆರವಣಿಗೆ, ಕ್ರೀಡಾಕೂಟಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಬಾಂಧವರು ಪಾಲ್ಗೊಳ್ಳುವ ನಿರೀಕ್ಷೆಯಿದೆ“ ಎಂದರು.ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಹೆಚ್.ಕೆ.ಪುರುಷೋತ್ತಮ್, ಜಿಲ್ಲಾ ಉಪಾಧ್ಯಕ್ಷ ಮನೋಹರ್ ಸುವರ್ಣ, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಪುನೀತ್ ಅತ್ತಾವರ, ಭುಜಂಗ ಕುಲಾಲ್, ಗುರುಪ್ರಸಾದ್ ಉಳ್ಳಾಲ್, ರವಿ ಕಡೆಗೋಳಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಸೆ.12ಕ್ಕೆ “ರಾನಿ” ಕನ್ನಡ ಸಿನಿಮಾ ಬಿಡುಗಡೆ

ಮಂಗಳೂರು: “ಸೆ.12ಕ್ಕೆ ಬಹು ನಿರೀಕ್ಷಿತ ರಾನಿ ಕನ್ನಡ ಸಿನಿಮಾ ಬಿಡುಗಡೆಗೊಳ್ಳಲಿದೆ. ಆಕ್ಷನ್ ಜೊತೆಗೆ ಫ್ಯಾಮಿಲಿ ಒರಿಯೆಂಟೆಡ್ ಕಥಾನಕ ಇದರಲ್ಲಿದ್ದು ಪ್ರೇಕ್ಷಕರು ಸಿನಿಮಾ ಇಷ್ಟಪಡಲು ಬೇಕಾದ ಎಲ್ಲಾ ಅಂಶಗಳು ಸಿನಿಮಾದಲ್ಲಿ ಇರಲಿದೆ” ಎಂದು ಚಿತ್ರ ನಿರ್ದೇಶಕ ಗುರುತೇಜ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.“ಸಿನಿಮಾದಲ್ಲಿ ಕನ್ನಡದ ಖ್ಯಾತ ನಟರಾದ ರವಿಶಂಕರ್, ಬಿ.ಸುರೇಶ್, ಯಶ್ ಶೆಟ್ಟಿ, ಉಗ್ರಂ ಮಂಜು ಮತ್ತಿತರರು ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ರಾಧ್ಯ ಮೈಸೂರು, ಸಮೀಕ್ಷಾ ಮೈಸೂರು, ಅಪೂರ್ವ ಮೂವರು ನಾಯಕಿಯರಿದ್ದಾರೆ. ಪ್ರಮೋದ್ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆದಿದ್ದು ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಕುನಾಲ್ ಗಾಂಜಾವಾಲ, ಹನ್ಸಿಕಾ ಅಯ್ಯರ್, ವಿಸ್ಮಯ ವಿನಾಯಕ್ ಸಹಿತ ಖ್ಯಾತ ಗಾಯಕರು ಹಾಡಿದ್ದಾರೆ.ಕಿರಣ್ ರಾಜ್ ಕನ್ನಡತಿ ಧಾರವಾಹಿ ಖ್ಯಾತಿಯ ನಟರಾಗಿದ್ದು ಈಗಾಗಲೇ ರಾಜ್ಯದ ಮನೆಮಾತಾಗಿದ್ದಾರೆ“ ಎಂದರು.ಪತ್ರಿಕಾಗೋಷ್ಟಿಯಲ್ಲಿ ನಾಯಕ ಕಿರಣ್ ರಾಜ್, ಚಂದ್ರಕಾಂತ್ ಪೂಜಾರಿ, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ನಿರ್ಮಾಪಕ ಉಮೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಆ.31: ತುಳುಭವನದಲ್ಲಿ “ಸುವರ್ಣ ಸ್ಮರಣೆ”

ಮಂಗಳೂರು: “ದಿ. ಸದಾನಂದ ಸುವರ್ಣ ಅವರದ್ದು ತುಳು, ಕನ್ನಡ ರಂಗಭೂಮಿ, ಸಾಹಿತ್ಯ, ಚಲನ ಚಿತ್ರ, ಕಿರುತೆರೆ ಮಾಧ್ಯಮಗಳಲ್ಲಿ ಚಿರಸ್ಥಾಯಿಯಾದ ಹೆಸರು. 1977 ರಲ್ಲಿ ಅವರ ನಿರ್ಮಾಣದ ಘಟಶ್ರಾದ್ಧ ಸ್ವರ್ಣಕಮಲ ಪಡೆದರೆ, 1991ರಲ್ಲಿ ಅವರು ನಿರ್ಮಿಸಿ ನಿರ್ದೇಶಿಸಿದ ದೂರದರ್ಶನ ಸರಣಿ ಗುಡ್ಡದ ಭೂತ ಕರ್ನಾಟಕದ ಜನಮನಕ್ಕೆ ಲಗ್ಗೆ ಇಡುವುದರ ಜೊತೆ ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತ್ತು. ಇವಲ್ಲದೆ ಅವರು ರಾಜ್ಯ ಪ್ರಶಸ್ತಿ ವಿಜೇತ ಕುಬಿ ಮತ್ತು ಇಯಾಲ ಚಲನಚಿತ್ರವನ್ನೂ ಕಾರಂತ ದರ್ಶನವೆನ್ನುವ ಸರಣಿ ಹಾಗೂ ಶ್ರೀ ನಾರಾಯಣ ಗುರುಗಳ ಬಗ್ಗೆ ಸಾಕ್ಷಚಿತ್ರವೊಂದನ್ನೂ ನಿರ್ದೇಶಿಸಿದ್ದಾರೆ. 1997ರ ನಂತರ ಮುಂಬೈ ತೊರೆದು ಮಂಗಳೂರಲ್ಲಿ ನಲೆಸಿದ ಅವರು ಇಲ್ಲಿ ನಿರ್ದೇಶಿಸಿದ ಉರುಳು, ಕೋರ್ಟ್‌ ಮಾರ್ಷಲ್, ಮಳೆ ನಿಲ್ಲುವವರೆಗೆ ನಾಟಕಗಳು ಬಹಳ ಪ್ರದರ್ಶನಗಳನ್ನು ಕಂಡಿವೆ. ಕಲಂಕ್‌ದಿ ನೀರ್ ಎಂಬ ತುಳು ನಾಟಕವನ್ನೂ ಮಂಗಳೂರಲ್ಲಿ ಅವರು ನಿರ್ದೇಶಿಸಿದ್ದಾರೆ. ಹೀಗಾಗಿ ಅವರ ಸ್ಮರಣೆಯಲ್ಲಿ ಆಗಸ್ಟ್ 31ರಂದು ಉರ್ವಾ ಸ್ಟೋರ್ ಬಳಿಯ ತುಳುಭವನದಲ್ಲಿ ಒಂದು ದಿವಸದ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ“ ಎಂದು ರಂಗಕರ್ಮಿ ಚಂದ್ರಹಾಸ ಉಳ್ಳಾಲ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಬಳಿಕ ಮಾತಾಡಿದ ನಟೇಶ್ ಉಳ್ಳಾಲ್, ”ಆ ದಿನ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಅವರ ಸಿನಿಮಾ, ಸರಣಿಗಳು, ತುಳು ಕನ್ನಡ ರಂಗಭೂಮಿಗೆ ಅವರ ಕೊಡುಗೆಗಳ ಬಗ್ಗೆ ಉಪನ್ಯಾಸ, ಸಂವಾದ ಗೋಷ್ಠಿ ಮತ್ತು ಸಮಾರೋಪದಲ್ಲಿ ಸಂಜೆ 6.30ಕ್ಕೆ ಅವರು ನಿರ್ದೇಶಿಸಿದ ಕೋರ್ಟ್‌ ಮಾರ್ಷಲ್ ನಾಟಕ ಪ್ರದರ್ಶಿಸುತ್ತಿದ್ದೇವೆ. ವಿವಿಧ ಸಂಘಟನೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜರ್ನಿ ಥೇಟರ್‌ಗ್ರೂಪ್ (ರಿ) ಮಂಗಳೂರು, ಅಸ್ತಿತ್ವ (ರಿ)ಮಂಗಳೂರು, ಕಲಾಸಂಗಮ (ರಿ) ಮಂಗಳೂರು, ಸಂಕೇತ್ ಕಲಾವಿದರು (ರಿ) ಮಂಗಳೂರು, ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ) ಮಂಗಳೂರು, ಅರೆಹೊಳ ಪ್ರತಿಷ್ಠಾನ (ರಿ) ಮಂಗಳೂರು, ಸಮುದಾಯ ಮಂಗಳೂರು, ಆಯನ ನಾಟಕದ ಮನೆ ಮಂಗಳೂರು, ಭೂಮಿಕಾ (ರಿ) ಮಂಗಳೂರು ಮತ್ತು ಕಾರಂತೋತ್ಸವ ಸಮಿತಿ ಮುಂಬೈ ಇದರಲ್ಲಿ ಪಾಲ್ಗೊಳುತ್ತಿದೆ“ ಎಂದರು.ಪತ್ರಿಕಾಗೋಷ್ಟಿಯಲ್ಲಿ ಲಕ್ಷ್ಮಣ್ ಕುಮಾರ್ ಮಲ್ಲೂರು, ಗೋಪಿನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು

ಪ್ರಾದೇಶಿಕ ವಾರ್ತೆಗಳು

ಆ.31: ಅಲೋಶಿಯನ್ ಫೆಸ್ಟ್ 2024. ಪಿಯು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮಟ್ಟದ ಉತ್ಸವ ಆಯೋಜನೆ

ಮಂಗಳೂರು: “ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ, ಪದವಿಪೂರ್ವ ವಿದ್ಯಾರ್ಥಿಗಳಿಗೆ ಒಂದು ದಿನದ ರಾಷ್ಟ್ರೀಯ ಮಟ್ಟದ ಪ್ರತಿಭಾ ಉತ್ಸವ ಅಲೋಶಿಯಸ್ ಫೆಸ್ಟ್ 2024 ಇದರ ಉದ್ಘಾಟನಾ ಸಮಾರಂಭವನ್ನು ಎಲ್.ಸಿ.ಆರ್.ಐ. ಸಭಾಂಗಣದಲ್ಲಿಶನಿವಾರ, ಆಗಸ್ಟ್ 31 ರಂದು ಬೆಳಗ್ಗೆ 9 ಗಂಟೆಗೆ ಆಯೋಜಿಸಲಾಗಿದೆ“ ಎಂದು ಕುಲಪತಿ ವಂ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.ಬಳಿಕ ಮಾತಾಡಿದ ಸಹಆಯೋಜಕಿ ಭವ್ಯಾ ಶೆಟ್ಟಿ ”ಕಾಲೇಜಿನ ಹಳೆ ವಿದ್ಯಾರ್ಥಿ ಕೆಂಡಸಂಪಿಗೆ ಖ್ಯಾತಿಯ ನಟಿ ಮಾನ್ವಿತಾ ಕಾಮತ್ ಅವರು ಈ ಉತ್ಸವದ ಉದ್ಘಾಟನೆಯನ್ನು ನಡೆಸಲಿದ್ದಾರೆ. ಗೌರವ ಅತಿಥಿಯಾಗಿ ಲೇಖಕಿ ಸೆರಾ ಫೆಲೆಕ್ಸ್ ಆಗಮಿಸಲಿದ್ದು ಅವರು ಬರೆದಿರುವ ‘ಎ ಕ್ರೈ ಹರ್ಡ್ ಆಸ್ ಎ ಸಾಂಗ್’ ಎನ್ನುವ ಪುಸ್ತಕಈ ವೇಳೆ ಬಿಡುಗಡೆಗೊಳ್ಳಲಿದೆ. ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಮಾಧಿಕಾರಿ ವಂ.ಮೆಲ್ವಿನ್ ಜೋಸೆಫ್‌ ಪಿಂಟೋ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು.ಈ ಉತ್ಸವವು ‘ಹಬ್ಬಗಳ ಹಬ್ಬ’ ಹಾಗೂ ‘ಸಾಂಸ್ಕೃತಿಕ ಹಬ್ಬ’ ಎಂಬ ಎರಡು ವಿಭಾಗಗಳಲ್ಲಿ ಆಯೋಜಿಸಲಾಗುವುದು, ‘ಹಬ್ಬಗಳ ಹಬ್ಬ’ದಲ್ಲಿ ಒಟ್ಟು 31 ಶೈಕ್ಷಣಿಕ ಸ್ಪರ್ಧೆಗಳನ್ನು ಕಲಾ, ವಾಣಿಜ್ಯ, ವಿಜ್ಞಾನ, ಬಿಸಿಎ, ಬಿಬಿಎ, ಬಿವೋಕ್ ಹಾಗೂ ವಿಜ್ಞಾನ ಪ್ರದರ್ಶನಗಳು ಹಾಗೂ ಸಾಂಸ್ಕೃತಿಕ ಹಬ್ಬಗಳಲ್ಲಿ ಶಾಸ್ತ್ರೀಯ ನೃತ್ಯ ಫೇಸ್ ಪೈಂಟಿಂಗ್, ಮೆಹೆಂದಿ, ಕಸದಿಂದ ರಸ್ತೆ ಹಾಗೂ ವೈವಿದ್ಯಮ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ“ ಎಂದರು.ಕಾಲೇಜಿನ ಸಾಂಸ್ಕೃತಿಕ ಕಾರ್ಯದರ್ಶಿ ಅದ್ವಿಕಾ ಶೆಟ್ಟಿ ಮಾತನಾಡಿ ”ಸಮಾರೋಪ ಸಮಾರಂಭವು ಅಪರಾಹ್ನ ಗಂಟೆಗೆ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಹಳೆಯ ವಿದ್ಯಾರ್ಥಿ ಉದ್ಯಮಿಕನ್ಯಾನ ಸದಾಶಿವ ಶೆಟ್ಟಿಯವರು ಆಗಮಿಸಲಿದ್ದಾರೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಕುಲಪತಿ ಪ್ರವೀಣ್ ಮಾರ್ಟಿಸ್, ಎಸ್‌.ಜೆ, ಅವರು ವಹಿಸಲಿದ್ದಾರೆ. ವಿವಿಧ ಕಾಲೇಜುಗಳ 1000 ವಿದ್ಯಾರ್ಥಿಗಳನ್ನು ಒಳಗೊಂಡ ಸುಮಾರು 37 ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನಿರೀಕ್ಷೆಯಿದೆ“ ಎಂದರು.ಪತ್ರಿಕಾಗೋಷ್ಟಿಯಲ್ಲಿ ಉಪಕುಲಪತಿ ಡಾ.ರೇಜಿ ಜಾನ್, ವ್ಯಾನ್ಸ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಆ.31-ಸೆ.1: ಮಂಗಳೂರಲ್ಲಿ 2ನೇ ಆವೃತ್ತಿಯ “ಕಬಡ್ಡಿ ಪ್ರೀಮಿಯರ್ ಲೀಗ್”

ಮಂಗಳೂರು: “ಶೆಫ್ ಟಾಕ್ ಸೀಸನ್ -2 ಕಬಡ್ಡಿ ಪ್ರೀಮಿಯರ್ ಲೀಗ್ ಆಗಸ್ಟ್ 30ರಿಂದ ಸೆಪ್ಟೆಂಬರ್ 1ರವರೆಗೆ ನಡೆಯಲಿದ್ದು ಆಗಸ್ಟ್ 30ರಂದು ಆಹಾರೋತ್ಸವದ ಉದ್ಘಾಟನೆ ನಡೆಯಲಿದೆ. ಇದನ್ನು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಉದ್ಘಾಟಿಸಲಿದ್ದಾರೆ. ಆಗಸ್ಟ್ 31ರಂದು ಕಬಡ್ಡಿ ಪಂದ್ಯಾಟದ ಉದ್ಘಾಟನೆ ನಡೆಯಲಿದ್ದು ಇದನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್‌ ಉದ್ಘಾಟಿಸಲಿದ್ದಾರೆ“ ಎಂದು ಕಾರ್ಯಕ್ರಮ ಆಯೋಜಕ ಸುದೇಶ್ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.ಬಳಿಕ ಮಾತಾಡಿದ ಗೌರವ ಸಲಹೆಗಾರ ವಿಶ್ವಾಸ್ ದಾಸ್ ಅವರು, ”ಕಳೆದ ವರ್ಷ ನಡೆದ ಸೀಸನ್ 1 ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಈ ವರ್ಷ ಗೌರವಾಧ್ಯಕ್ಷ ಪ್ರಕಾಶ್ ಕುಂಪಲ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ. ಕಬಡ್ಡಿ ಟೂರ್ನಮೆಂಟ್ ಜೊತೆಗೆ ಈ ಬಾರಿ ಆಹಾರೋತ್ಸವ ಮತ್ತು ವಿನೋದ ಮೇಳವನ್ನು ಕೂಡಾ ಆಯೋಜಿಸಿದ್ದೇವೆ. ಜೊತೆಗೆ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಡಾ. ಸದಾನಂದ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಸದಾಶಿವ ಉಳ್ಳಾಲ ಪಾಲ್ಗೊಳ್ಳಲಿದ್ದಾರೆ. ಬಹುಮಾನ ವಿತರಣೆಯನ್ನು “ಶೆಫ್ ಟಾಕ್ ಫುಡ್ & ಹಾಸ್ಪಿಟಾಲಿಟಿ ಸರ್ವಿಸಸ್”ನ ಮ್ಯಾನೇಜಿಂಗ್ ಡೈರೆಕ್ಟರ್ ಗೋವಿಂದ ಬಿ. ಪೂಜಾರಿ ಅವರು ನೆರವೇರಿಸಲಿದ್ದಾರೆ“ ಎಂದರು. ಮಾಜಿ ಶಾಸಕರು ಬಿಎ ಮೊಯಿದೀನ್ ಬಾವಾ ಮಾತಾಡಿ, ”ಈ ವರ್ಷ ಕಬಡ್ಡಿ ಟೂರ್ನಮೆಂಟ್‌ನಲ್ಲಿ 8 ತಂಡಗಳು ಭಾಗವಹಿಸುತ್ತಿವೆ. ಅಸ್ರಾ ಬ್ರಿಗೇಡ್ಸ್, ಲೈಫ್ ಲೈನ್ಸ್ ಫಾಲ್ಕನ್ಸ್, ಟೀಮ್ ಬಾವ, ಯು ಕುಂಜತ್ತೂರು, ಮಂಗಳೂರು ಯುನೈಟೆಡ್ ಕಬಡ್ಡಿ ಕ್ಲಬ್, ಪ್ರಕಾಶ್ ಕುಂಪಲ ವಾರಿಯರ್ಸ್, ಕರ್ನಾಟಕ ತುಳುವಾಸ್ ನೈಜೀರಿಯಾ, ಮತ್ತು ನ್ಯೂ ಸ್ಟಾರ್ ಮಂಗಳೂರು ಈ ತಂಡಗಳ ಆಟಗಾರರನ್ನು ಆಗಸ್ಟ್ 20ರಂದು ಸೀವೂ ಹೋಟೆಲ್‌ನಲ್ಲಿ ನಡೆದ ಹರಾಜು ಮೂಲಕ ಆಯ್ಕೆ ಮಾಡಲಾಗಿತ್ತು, ಒಟ್ಟು 99 ಆಟಗಾರರು ಆಯ್ಕೆಯಾಗಿದ್ದಾರೆ.ಈ ವರ್ಷ ನಾವು 100+ ಆಹಾರ ಮಳಿಗೆಗಳನ್ನು ನಿರೀಕ್ಷಿಸುತ್ತಿದ್ದೇವೆ. ಅವು ವಿವಿಧ ರೀತಿಯ ರುಚಿಕರ ಆಹಾರಗಳನ್ನು ಒದಗಿಸುತ್ತವೆ. ಮಂಗಳೂರು ಕಬಡ್ಡಿ ಪ್ರೀಮಿಯರ್ ಲೀಗ್ ಸೀಸನ್ 2 ರಲ್ಲಿ 2 ಲಕ್ಷಕ್ಕಿಂತ ಹೆಚ್ಚು ವೀಕ್ಷಕರನ್ನು ನಿರೀಕ್ಷಿಸಲಾಗಿದ್ದು ಇದು ದಕ್ಷಿಣ ಭಾರತದ ಅತ್ಯಂತ ದೊಡ್ಡ ಈವೆಂಟ್ ಆಗಿರುವುದರ ನಿರೀಕ್ಷೆ ಇದೆ“ ಎಂದರು.ಪತ್ರಿಕಾಗೋಷ್ಟಿಯಲ್ಲಿ ಹರೀಶ್ ನಾಯಕ್, ಅಝ್ಪರ್ ರಜಾಕ್, ಕರುಣಾಕರ್, ಹಮೀದ್ ಅಮ್ಮಿ, ದೀಪಕ್ ಪಿಲಾರ್, ವಿನೋದ್ ಶೆಟ್ಟಿ, ಸುಕೇಶ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಾದೇಶಿಕ ವಾರ್ತೆಗಳು

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ: 2022 ಮತ್ತು 2023ನೇ ಸಾಲಿನ ಗೌರವ ಪ್ರಶಸ್ತಿ ಘೋಷಣೆ

ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಕೊಡಮಾಡುವ 2022 ಮತ್ತು 2023ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಆರು ಮಂದಿ ಸಾಧಕರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ. 2022ನೇ ಸಾಲಿನಲ್ಲಿ ಹಂಝತುಲ್ಲಾಹ್‌ ಕುವೇಂಡ ಬೆಂಗಳೂರು (ಬ್ಯಾರಿ ಭಾಷೆ ಮತ್ತು ಸಂಘಟನೆ), ಮರಿಯಮ್‌ ಇಸ್ಮಾಈಲ್‌ ಉಳ್ಳಾಲ (ಬ್ಯಾರಿ ಸಾಹಿತ್ಯ) ಮತ್ತು ಎಂ.ಜಿ. ಶಾಹುಲ್‌ ಹಮೀದ್‌ ಗುರುಪುರ (ಬ್ಯಾರಿ ಸಂಸ್ಕೃತಿ ಮತ್ತು ಕಲೆ) ಹಾಗೂ 2023ನೇ ಸಾಲಿನಲ್ಲಿ ಟಿ.ಎ. ಆಲಿಯಬ್ಬ ಜೋಕಟ್ಟೆ (ಬ್ಯಾರಿ ಭಾಷೆ ಮತ್ತು ಸಂಘಟನೆ), ಅಶ್ರಫ್‌ ಅಪೋಲೊ ಕಲ್ಲಡ್ಕ (ಬ್ಯಾರಿ ಸಂಸ್ಕೃತಿ ಮತ್ತು ಕಲೆ) ಮತ್ತು ಮುಹಮ್ಮದ್‌ ಶರೀಫ್‌ ನಿರ್ಮುಂಜೆ (ಬ್ಯಾರಿ ಸಾಹಿತ್ಯ) ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಅಕಾಡೆಮಿಯ ಮಾಜಿ ಅಧ್ಯಕ್ಷ ಮುಹಮ್ಮದ್‌ ಕರಂಬಾರು, ಮಾಜಿ ಸದಸ್ಯರಾದ ಅತ್ತೂರು ಚೆಯ್ಯಬ್ಬ, ಆಯಿಶಾ ಯು.ಕೆ. ಮತ್ತು ಹುಸೈನ್‌ ಕಾಟಿಪಳ್ಳ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದು ಸಹಕರಿಸಿದ್ದಾರೆ. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸ್ಥಾಯಿ ಸಮಿತಿ ಸಭೆ ಹಾಗೂ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಲಾಗಿದೆ.ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ಸೆ. 6ರಂದು ಸಂಜೆ 4.30ಕ್ಕೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಉಮರ್‌ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಮುಸ್ಲಿಮ್ ಬರಹಗಾರರ ಕನ್ನಡ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕರ್ನಾಟಕ ಮುಸ್ಲಿಮ್ ಲೇಖಕರ ಸಂಘವು ಪ್ರತಿವರ್ಷ ಮುಸ್ಲಿಮ್ ಬರಹಗಾರರ ಅತ್ತ್ಯುತ್ತಮ ಕನ್ನಡ ಕೃತಿಗೆ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ಯನ್ನು ನೀಡುತ್ತಾ ಬಂದಿದ್ದು, 2023ನೇ ಸಾಲಿನ ಪ್ರಶಸ್ತಿಗಾಗಿ ಕೃತಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ.ಆಸಕ್ತ ಮುಸ್ಲಿಮ್ ಬರಹಗಾರರು ಕನ್ನಡದಲ್ಲಿ ಪ್ರಕಟಿತ 2023ನೇ ಸಾಲಿನ ಕೃತಿಯ ನಾಲ್ಕು ಪ್ರತಿಗಳನ್ನು ಸೆಪ್ಟೆಂಬರ್ 10ರ ಒಳಗಾಗಿ ಸಂಚಾಲಕರು, ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ, ಮುಸ್ಲಿಮ್ ಲೇಖಕರ ಸಂಘ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರಸ್ತೆ, ಮಂಗಳೂರು–575001(ದೂ.ಸಂ. 9845054191, 0824-2410358) ಈ ವಿಳಾಸಕ್ಕೆ ಕಳುಹಿಸು ವಂತೆ ಕೋರಲಾಗಿದೆ.ಅನುವಾದಿತ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ ಹಾಗೂ ಪ್ರಶಸ್ತಿಗಾಗಿ ಕಳುಹಿಸುವ ಕೃತಿಗಳನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ ಎಂದು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ವಾರ್ತೆಗಳು

ಸಮಾಜಕ್ಕೆ ಕೊಡುಗೆ ನೀಡುವ ಉನ್ನತ ಗುರಿಯೊಂದಿಗೆ ಮುನ್ನಡೆಯಿರಿ-ಮುಲ್ಲೈ ಮುಗಿಲನ್. ಪತ್ರಕರ್ತರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ.

ಮಂಗಳೂರು,ಆ.25; ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ನೀಡುವ ಉನ್ನತ ಗುರಿಯೊಂದಿಗೆ ಮುನ್ನಡೆಯಿರಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಯುವ ವಿದ್ಯಾರ್ಥಿ ಗಳಿಗೆ ಕರೆ ನೀಡಿದರು.ಅವರು ಇಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾಭವನದಲ್ಲಿ ರವಿವಾರ 2023-24 ರ ಸಾಲಿನಲ್ಲಿ ಪಿ ಯು ಸಿ ಹಾಗೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ. 90 ಕ್ಕೂ ಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೆರವೇರಿಸಿ ಮಾತನಾಡುತ್ತಿದ್ದರು.ಶಿಕ್ಷಣ ನಮ್ಮನ್ನು ಸಮಾಜ ಮುಖಿಯಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಸಮಾಜದ ಸರಿ ತಪ್ಪುಗಳನ್ನು ಗುರಿತಿಸಲು ಸಹಾಯ ಮಾಡಬೇಕು.‌ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಉನ್ನತ ಗುರಿಯೊಂದಿಗೆ ನಿರಂತರ ಪ್ರಯತ್ನ ಪಡಬೇಕು ಆ ಗುರಿ ಬದುಕನ್ನು ಅರ್ಥ ಪೂರ್ಣ ಗೊಳಿಸು ವಂತಿರಬೇಕು.ಪತ್ರ ಕರ್ತರು ಪ್ರಾಕೃತಿಕ ವಿಕೋಪಗಳಾದ,ಜನರ ಸಮಸ್ಯೆ ಗಳಿಗೆ ಸ್ಪಂದಿಸುತ್ತಿರುವ ರೀತಿ ಅವರ ಘನತೆಯನ್ನು ಹೆಚ್ಚಿಸಿದೆ ಅದಕ್ಕಾಗಿ ಅವರಿಗೆ ತಾನು ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಶಿರೂರು ದುರಂತದ ಸಂದರ್ಭ ಮಾನವೀಯ ಕೆಲಸ ಮಾಡಿರುವ ಪತ್ರಕರ್ತರ ಕಾರ್ಯ ರಾಜ್ಯದ ಎಲ್ಲ ಪತ್ರಕರ್ತರಿಗೆ ಹೆಮ್ಮೆ ತಂದಿದೆ. ಅದೇ ರೀತಿ ಬೆಂಗಳೂರಿನ ಅಂಡರ್‌ ಪಾಸ್ ನಲ್ಲಿ ಕಾರು ನೀರಿಗೆ ಸಿಕ್ಕಿದ ಸಂದರ್ಭದಲ್ಲಿ ಜೀವ ಉಳಿಸಿದ್ದೂ ಕೂಡಾ ಇಬ್ಬರು ಪತ್ರಕರ್ತರು . ಇವರಿಗೆ ಸನ್ಮಾನ ಮಾಡಿರುವುದು ನನಗೆ ಖುಷಿ ಕೊಟ್ಟಿದೆ. ಪತ್ರಕರ್ತರು ಮಾನವೀಯ ಕಾರ್ಯ ಮಾಡಿದಾಗ ಬೆನ್ನುತಟ್ಟಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದರು. ಮನೆಮನೆಗೆ ಬೆಳಗ್ಗೆಪತ್ರಿಕೆ ವಿತರಿಸುವ ಪತ್ರಿಕಾ ವಿತರಕರ ಕಾಯಕಕ್ಕೆ ಸರಿಸಾಟಿ ಯಾವುದೂ ಇಲ್ಲ.ಇಂತಹ ಕೆಲಸವನ್ನು ನಿರಂತರ 62 ವರ್ಷಗಳ ಕಾಲ ಮಾಡಿರುವ ರಮೇಶ್ ಅವರ ಕಾರ್ಯಕ್ಕೆ ನಾವು ಋಣಿಯಾಗಿರಬೇಕು.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಳೆದ ಮೂರು ವರ್ಷಗಳಿಂದ ಪತ್ರಕರ್ತರ ಮಕ್ಕಳಿಗೆ ರಾಜ್ಯಮಟ್ಟ,‌ ಜಿಲ್ಲಾ ಮಟ್ಟ, ತಾಲೂಕು ಮಟ್ಟದಲ್ಲಿ ಸನ್ಮಾನ ಮಾಡುತ್ತಿದೆ. ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಪತ್ರಕರ್ತರಿಗೆ ಏನಾದರೂ ಅನಾಹುತ ಆದರೆ ಅವರ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡುತ್ತಾ ಬಂದಿದೆ ಎಂದರು.ಇದೇ ಸಂದರ್ಭದಲ್ಲಿ 64 ವರ್ಷಗಳಿಂದ ಪತ್ರಿಕೆ ವಿತರಣೆ ಮಾಡುತ್ತಿರುವ 82ರ ಹರೆಯದ ರಮೇಶ್, ವಿನೂತನ ರೀತಿಯಲ್ಲಿ ಮತದಾನ ಹಾಗೂ ಡೆಂಗ್ಯು ಜಾಗೃತಿ ಮೂಡಿಸಿದ ಸನ್ನಿಧಿ ಕಶೆಕೋಡಿ, ಶಿರೂರು ಗುಡ್ಡ ಕುಸಿತ ಸಂದರ್ಭ ವೃದ್ಧೆಯ ಅಂತಿಮ ಸಂಸ್ಕಾರ ನೆರವೇರಿಸಿ ಮಾನವೀಯತೆಯನ್ನು ಸಾರಿದ ಪತ್ರಕರ್ತರನ್ನು ಸನ್ಮಾನಿಸಲಾಯಿತು.ಬಿಜೈ ಅಂಗನವಾಡಿಗೆ ಎರಡು ಫ್ಯಾನ್ ಗಳನ್ನು ಹಸ್ತಾಂತರಿಸಲಾಯಿತು.2023-24ನೆ ಸಾಲಿನ ಪಿಯುಸಿಯ ಪ್ರತಿಭಾ ವಂತ ವಿದ್ಯಾರ್ಥಿಗಳಾದ ತೇಜಸ್ ಕಿಣಿ,ಅವನಿ ಪಿ.ಬಂಗ,ದೀಪ್ತಿಭಟ್ ಹಾಗೂ ಎಸ್ ಎಸ್ ಎಲ್ ಸಿಯ ವಿದ್ಯಾರ್ಥಿ ಗಳಾದ ಬಿ.ಆರ್.ಶ್ರೀ ಹರಿ,ತಂಝಿಲ್ ರಹಮಾನ್,ಮನೀಶ್ ಎಸ್ ಶೆಟ್ಟಿ, ಮುಹಮ್ಮದ್ ಶೆಫಿಕ್,ಮಾಧವ ಕಾಮತ್,ದೇವಾಂಶು,ಸುಧನ್ವ ಕೆ.ಬಿ ಯವರನ್ನು ಪುರಸ್ಕರಿಸಲಾಯಿತು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಹಿರಿಯ ಪತ್ರಕರ್ತ ಆನಂದ್ ಶೆಟ್ಟಿ, ರಾಜ್ಯ ಪತ್ರಕರ್ತರ ಸಂಘದ ಕಾರ್ಯ ಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್ ,ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ,ರಾಜೇಶ್ ಶೆಟ್ಟಿ,ನಿಶಾಂತ್ ಶೆಟ್ಟಿ ಮೊದಲಾದ ವರು ಉಪಸ್ಥಿತರಿದ್ದರು.ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇ ಶ್ವರ ವಂದಿಸಿದರು.ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.

Scroll to Top