Author name: editor

ಪ್ರಾದೇಶಿಕ ವಾರ್ತೆಗಳು

“ದಕ್ಷ ಆಡಳಿತ ಮತ್ತು ಕಾರ್ಯವೈಖರಿ ರಾಜೇಂದ್ರ ಕುಮಾರ್ ಯಶಸ್ಸಿನ ಸೂತ್ರ” -ಯು.ಟಿ. ಖಾದರ್. ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಗೆ 7ನೇ ಬಾರಿ ಅಧ್ಯಕ್ಷರಾಗಿ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಪದಗ್ರಹಣ ಸಮಾರಂಭ

ಮಂಗಳೂರು *  ಎಸ್ ಸಿಡಿಸಿಸಿ ಬ್ಯಾಂಕ್ ಇದರ ಅಧ್ಯಕ್ಷರಾಗಿ 7ನೇ ಬಾರಿ ಅಧಿಕಾರ ಸ್ವೀಕರಿಸಿರುವ “ಸಹಕಾರ ರತ್ನ” ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭ  ಈಚೆಗೆ ಬುಧವಾರ ಮಧ್ಯಾಹ್ನ ಬ್ಯಾಂಕ್ ಸಭಾಂಗಣದಲ್ಲಿ ಜರುಗಿತು. ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನಾಡಿ, “ರಾಜೇಂದ್ರ ಕುಮಾರ್ ಅವಧಿಯಲ್ಲಿ  ಎಸ್ ಸಿಡಿಸಿಸಿ ಬ್ಯಾಂಕ್ ಯಶಸ್ಸಿನ ತುತ್ತತುದಿಯನ್ನು ಏರಿದೆ. ವರಂಗದಲ್ಲಿ ಹುಟ್ಟಿ ಬೆಳೆದ ಓರ್ವ ಸಾಮಾನ್ಯ ಸಹಕಾರಿ ಬ್ಯಾಂಕ್ ಸಿಬ್ಬಂದಿಯಾಗಿದ್ದ ರಾಜೇಂದ್ರ ಕುಮಾರ್ ಅವರು ಎಸ್ ಸಿಡಿಸಿಸಿ ಬ್ಯಾಂಕ್ ಚುಕ್ಕಾಣಿಯನ್ನು ಹಿಡಿದು ಅಸಾಧ್ಯವಾದುದನ್ನು ಸಾಧಿಸಿ ತೋರಿಸಿದ್ದಾರೆ. ಅವರ ಕಾರ್ಯ ದಕ್ಷತೆಯಿಂದ ಬ್ಯಾಂಕ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ” ಎಂದರು. ಎಂಎನ್ ಆರ್ ದಕ್ಷ ಆಡಳಿತಗಾರ  – ಯು. ಟಿ. ಖಾದರ್    ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಮಾತನಾಡಿ, “ದೇವರ ಆಶೀರ್ವಾದ ಇರುವ ಕಾರಣಕ್ಕೆ ರಾಜೇಂದ್ರ ಕುಮಾರ್ ಅವರು ಸತತ ಏಳನೇ ಬಾರಿಗೆ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನನ್ನ ತಂದೆ ಕೂಡ ಈ ಬ್ಯಾಂಕಿನ ನಿರ್ದೆಶಕರಾಗಿದ್ದರು. ಹೀಗಾಗಿ ಚಿಕ್ಕಂದಿನಿಂದಲೇ ಬ್ಯಾಂಕ್ ಕಾರ್ಯವೈಖರಿ ಕುರಿತು ತಿಳಿದಿದ್ದೆ. ಇಂದು ಉತ್ತಮ ಕಾರ್ಯ ವೈಖರಿ ಹಾಗೂ ದಕ್ಷ ಆಡಳಿತದಿಂದಾಗಿ ರಾಜೇಂದ್ರ ಕುಮಾರ್ ಅವರು ಜನರಿಗೆ ಹತ್ತಿರವಾಗಿದ್ದಾರೆ. ಅವರು ಮುಂದೆಯೂ ಸಮಾಜಪರ ಕಾರ್ಯ ನಿರ್ವಹಿಸುವ ಮೂಲಕ ಬ್ಯಾಂಕ್ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲಿ” ಎಂದರು. ರೈತರ ಪರ ಬ್ಯಾಂಕ್ : ಎಂಎನ್ ಆರ್ ಅಭಿನಂದನೆ ಸ್ವೀಕರಿಸಿ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರು, “ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ರೈತರು ಸಾಲ ಸಿಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆಗಳು ನಡೆದಿಲ್ಲ. ರೈತರ ಶಕ್ತಿಗನುಸಾರವಾಗಿ ಸಾಲ ನೀಡಿ ಅವರನ್ನು ಸಮಾಜದಲ್ಲಿ ಸಶಕ್ತರಾಗಲು ನಾವು ಶ್ರಮಿಸಿದ್ದೇವೆ. ಸಹಕಾರಿ ಕ್ಷೇತ್ರ ಇನ್ನಷ್ಟು ಬೆಳೆಯಲಿ. ರೈತರು ಮಹಿಳೆಯರಿಗೆ ಶಕ್ತಿ ತುಂಬಲು ಬ್ಯಾಂಕ್ ಸದಾ ಸಿದ್ಧವಿದೆ. ಬ್ಯಾಂಕ್ ಅಭಿವೃದ್ಧಿಯಲ್ಲಿ ನಿಮ್ಮೆಲ್ಲರ ಪಾತ್ರವಿದೆ. ಮೊಳಹಳ್ಳಿ ಶಿವರಾಯರು ತೋರಿಸಿದ ದಾರಿಯಲ್ಲಿ ಮುನ್ನಡೆದು ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಮುನ್ನಡೆಸೋಣ” ಎಂದರು. ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, “ಎಸ್ ಸಿಡಿಸಿಸಿ ಬ್ಯಾಂಕ್ ನಿಂದ ಸಾಲ ಪಡೆದು ಮಹಿಳೆಯರು ಸ್ವಾವಲಂಬಿಗಳಾಗಿದ್ದಾರೆ. ಕನಿಷ್ಠ ದರದಲ್ಲಿ ಸಾಲ ಪಡೆದ ರೈತಾಪಿ ವರ್ಗದ ಜನರು ಆರ್ಥಿಕವಾಗಿ ಸಶಕ್ತರಾಗಿದ್ದಾರೆ. ಇದೆಲ್ಲವೂ ರಾಜೇಂದ್ರ ಕುಮಾರ್ ಅವರ ಸೇವಾ ದಕ್ಷತೆಯಿಂದ ಸಾಧ್ಯವಾಗಿದೆ” ಎಂದರು.ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಬಂಟರ ಸಂಘಕ್ಕೂ ಎಸ್ ಸಿಡಿಸಿಸಿ ಬ್ಯಾಂಕ್ ಗೂ ಅವಿನಾಭಾವ ಸಂಬಂಧವಿದೆ. ರಾಜೇಂದ್ರ ಕುಮಾರ್ ಅವರ ಅವಧಿಯಲ್ಲಿ ಬ್ಯಾಂಕ್ ಇನ್ನಷ್ಟು ಎತ್ತರಕ್ಕೇರಲಿ” ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶಾಸಕರುಗಳಾದ ಯಶ್ ಪಾಲ್ ಸುವರ್ಣ,  ಗುರ್ಮೆ ಸುರೇಶ್ ಶೆಟ್ಟಿ , ಮಾಜಿ ಸಚಿವರಾದ ರಮಾನಾಥ ರೈ,  ಮಾಜಿ ಶಾಸಕರುಗಳಾದ ಸುಕುಮಾರ್ ಶೆಟ್ಟಿ, ಪದ್ಮನಾಭ ಕೊಟ್ಟಾರಿ ಶುಭ ಹಾರೈಸಿದರು. ವೇದಿಕೆಯಲ್ಲಿ  ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಸಹಾಯಕ ಆಯುಕ್ತ  ಹರ್ಷವರ್ಧನ್, ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರುಗಳಾದ ಟಿ. ಜಿ. ರಾಜರಾಮ ಭಟ್, ಭಾಸ್ಕರ್ ಎಸ್. ಕೋಟ್ಯಾನ್, ಎಂ. ವಾದಿರಾಜ ಶೆಟ್ಟಿ, ಐಕಳಬಾವ ದೇವಿಪ್ರಸಾದ್  ಶೆಟ್ಟಿ ಬೆಳಪು, ಶಶಿಕುಮಾರ್ ರೈ, ಎಸ್. ರಾಜು ಪೂಜಾರಿ, ಎಂ. ಮಹೇಶ್ ಹೆಗ್ಡೆ, ಅಶೋಕ್ ಕುಮಾರ್ ಶೆಟ್ಟಿ, ಕೆ. ಹರಿಶ್ಚಂದ್ರ, ಮೋನಪ್ಪ ಶೆಟ್ಟಿ ಎಕ್ಕಾರು, ಕೆ.ಜೈರಾಜ್ ಬಿ. ರೈ , ಎಸ್. ಬಿ. ಜಯರಾಮ್ ರೈ,      ಎಸ್. ಎನ್. ಮನ್ಮಥ, ಕುಶಾಲಪ್ಪ ಗೌಡ ಪಿ. ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್, ಸಹಕಾರ ಸಂಘಗಳ ಉಪನಿಬಂಧಕರಾದ ಎನ್. ರಮೇಶ್ ಲಾವಣ್ಯ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಸುಧೀರ್ ಕುಮಾರ್ ಹಾಗೂ ರಾಜೇಂದ್ರ ಕುಮಾರ್ ಪುತ್ರ ಮೇಘರಾಜ್ ಮತ್ತಿತರರು ಉಪಸ್ಥಿತರಿದ್ದರು.

ಸಂದರ್ಶನ

8ನೇ ತರಗತಿ ಫೇಲಾದ ಹುಡುಗ ಇವತ್ತು 1೦೦೦ ಉದ್ಯೋಗಿಗಳ ಅನ್ನದಾತ. ಇದು ರಾಜೇಂದ್ರ ವಿ. ಶೆಟ್ಟಿ ಯಶಸ್ವಿ ಹೊಟೇಲ್ ಉದ್ಯಮಿಯಾದ ಸಾಹಸಗಾಥೆ. ಇವರು ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್ ಮತ್ತು ಹೊಟೇಲ್ ಲೀಲಾವತಿ ಪ್ಯಾಲೇಸ್‌ನ ಸಂಸ್ಥಾಪಕ. ಇವರಿಗೆ ಮೇ.19 ರಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆಯಿಂದ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ಮಂಗಳೂರು ಪುರಭವನದಲ್ಲಿ ನಡೆಯುವ ತ್ರಿಪಂಚಕ ಸಂಭ್ರಮದಲ್ಲಿ ‘ಬಂಟ ವಿಭೂಷಣ ಪ್ರಶಸ್ತಿ’ ಘೋಷಣೆ.

ಹುಬ್ಬಳ್ಳಿ :ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿಯೊಂದರ ಬಡ ಕುಟುಂಬವೊಂದರಲ್ಲಿ ಜನಿಸಿದ ರಾಜೇಂದ್ರ ಶೆಟ್ಟಿ ಬಾಲ್ಯದಲ್ಲೇ ಬಡತನದ ಬೇಗೆ ಅನುಭವಿಸಿದವರು. ಅವರ ತಂದೆ ತಾಯಿ ಕುಟುಂಬದೊಂದಿಗೆ ಉಡುಪಿಯಿಂದ ಹುಬ್ಬಳ್ಳಿಗೆ ವಲಸೆ ಬಂದಾಗ ರಾಜೇಂದ್ರ ಶೆಟ್ಟಿಯವರು ಬಾಲಕನಾಗಿದ್ದರು. ಹೇಗೋ ಕಷ್ಟಪಟ್ಟು 8ನೇ ತರಗತಿಯವರೆಗೆ ಓದಿದರು. ಆದರೆ, ಫೇಲ್ ಆದರು. ಮುಂದೆ,ಅವರು ಉದ್ಯೋಗಕ್ಕಾಗಿ ಮನೆಯಲ್ಲಿ ಯಾರಿಗೂ ಹೇಳದೆ ರೈಲು ಹತ್ತಿದರು. ಅದು ಹೋಗಿ ನಿಂತದ್ದು ಮುಂಬೈಯಲ್ಲಿ, ಅಲ್ಲಿ ರೈಲ್ವೇ ಸ್ಟೇಷನ್ ಅಕ್ಕಪಕ್ಕದಲ್ಲಿ ಚಹಾ ಮಾರುವ ಕೆಲಸ ಮಾಡಿದರು. ಆರಂಭದಲ್ಲಿ ಬೀದಿ ಬದಿಯಲ್ಲಿ ಮಲಗಿ ಕೆಲಸ ಹುಡುಕುತ್ತಾ ಅಲ್ಲಿನ ಹೊಟೇಲ್‌ಗಳಿಗೆ ಕೆಲಸಕ್ಕಾಗಿ ಅಲೆದಾಡಿದರು. ಮುಂದೆ, ಅವರಿಗೆ ಹೊಟೇಲ್‌ನಲ್ಲಿ ಕ್ಲೀನರ್ ಕೆಲಸ ಸಿಗುತ್ತದೆ. ವಿವಿಧ ಹೋಟೆಲ್‌ಗಳಲ್ಲಿ ಅಡುಗೆ ಮನೆಯ ಕೆಲಸ, ಕ್ಲೀನರ್, ವೇಟರ್, ಕ್ಯಾಪ್ಟನ್ ನಂತಹ ನಾನಾ ತರಹದ ಕೆಲಸಗಳನ್ನು ಮಾಡಿದರು. ಆ ಬಳಿಕ ದೇವತಾ ಮನುಷ್ಯರಂಥ ಮಾಲಕರೊಬ್ಬರು ಸಿಕ್ಕಿದ್ದರಿಂದ ಅವರ ಹೊಟೇಲ್‌ನಲ್ಲಿ 12 ವರ್ಷಗಳ ಕಾಲ ಮೆನೇಜರ್ ಆಗಿ ದುಡಿದರು. ಮುಂಬೈಗೆ ಬಂದಾಗ ಅವರಿಗೆ 13 ರಿಂದ 14 ವರ್ಷ ಆಗಿತ್ತು. ಅಲ್ಲಿ 18 ವರ್ಷಗಳ ತನಕ ಒಟ್ಟು 45 ಹೊಟೇಲ್‌ಗಳಲ್ಲಿ ದುಡಿದರು. ಅಪಾರ ಅನುಭವ ಗಳಿಸಿದರು.ತದನಂತರ, ಅವರು ತಾಯಿಯವರಿಗೆ ಫೋನ್ ಮಾಡಿ ಮುಂಬೈಯಲ್ಲಿ ಮನೆ ಮಾಡುತ್ತೇನೆ. ಬಂದು ನೆಲೆಸಿ ಎಂದಾಗ ಅವರ ತಾಯಿಯವರು ತಾನು ಸತ್ತರೂ ಬರೋಲ್ಲ ಎಂದರು. ತಾಯಿ ಲೀಲಾವತಿ ಅವರ ಮೇಲೆ ರಾಜೇಂದ್ರ ಶೆಟ್ಟಿಯವರಿಗೆ ಅತೀವ ಪ್ರೀತಿ. ತಾಯಿಯೆಂದರೆ ಪಂಚಪ್ರಾಣ. ಅವರ ಪಾಲಿಗೆ ಪ್ರತ್ಯಕ್ಷ ದೇವರು. ಈ ಕಾರಣಕ್ಕಾಗಿಯೇ ತನ್ನ ತಾಯಿಗಾಗಿ ಮುಂಬೈ ಬಿಟ್ಟು ಅಲ್ಲಿನ ಅಸಂಖ್ಯಾತ ಸ್ನೇಹಿತರ ಫ್ರೆಂಡ್ಸ್ ಸರ್ಕಲ್ ತೊರೆದರು. ಹುಬ್ಬಳ್ಳಿಯಲ್ಲಿಯೇ ಹೊಟೇಲ್ ಉದ್ಯಮ ಆರಂಭಿಸಿದ ಅವರು ನವೀನ್ ಕಾಮತ್ ಅವರು ಕೊಟ್ಟ 5೦ ಸಾವಿರ ರೂಪಾಯಿ ಹಣವನ್ನು ಹೊಟೇಲ್ ಉದ್ಯಮಕ್ಕೆ ತೊಡಗಿಸಿಕೊಂಡರು. ಇಂದು ಅದು ಕೋಟ್ಯಾಂತರ ರೂಪಾಯಿ ಬೆಲೆ ಬಾಳುತ್ತದೆ. ಮನೆ ದೇವರ ಹೆಸರಲ್ಲಿ ಹುಬ್ಬಳ್ಳಿ, ಧಾರವಾಡ, ಬೆಳಗಾಂ, ದಾವಣಗೆರೆ ಯಲ್ಲಿ ಶ್ರೀಪಂಜುರ್ಲಿ ಗ್ರೂಪ್ ಆಪ್ ಹೊಟೇಲ್’ ಮತ್ತು ತಾಯಿ ಲೀಲಾವತಿ ಯವರ ಹೆಸರಲ್ಲಿಹೊಟೇಲ್ ಲೀಲಾವತಿ ಪ್ಯಾಲೇಸ್’ ಮತ್ತು ಪೂಜ್ಯ ತಂದೆಯವರ ಹೆಸರಲ್ಲಿ ಪುಣೆಯಲ್ಲಿ ವಿಶ್ವನಾಥ್ ಪ್ಯಾಲೇಸ್ ಸೇರಿದಂತೆ ಒಟ್ಟು 9 ಹೊಟೇಲ್‌ಗಳನ್ನು ಆರಂಭಿಸಿದರು. ದಾವಣಗೆರೆಯಲ್ಲಿ ಒಂದು ಸುಸಜ್ಜಿತ ಕಲ್ಯಾಣ ಮಂಟಪವನ್ನು ಸ್ಥಾಪಿಸಿದರು.ಇಂದು ಅದು ರಾಜ್ಯ, ರಾಷ್ಟ್ರ,ಅಂತರಾಷ್ಟೀಯ ಮಟ್ಟದಲ್ಲಿಯೇ ಖ್ಯಾತಿ ಯನ್ನು ಪಡೆದು ಗ್ರಾಹಕರ ಶ್ಲಾಘನೆಗೆ ಪಾತ್ರವಾಗಿದೆ. ತಾನೊಬ್ಬನೇ ಬೆಳೆಯ ಬೇಕು, ತಾನೊಬ್ಬನೇ ದುಡ್ಡು ಗಳಿಸಬೇಕೆಂಬ ದುರಾಸೆಗೆ ಬೀಳದೆ 2೦ ವರ್ಷಗಳ ಕಾಲ ವಿವಿಧ ಹೊಟೇಲ್‌ಗಳಲ್ಲಿ ಕೆಲಸ ಮಾಡುವಾಗ ತನ್ನ ಜೊತೆಯಲ್ಲಿ ಕೆಲಸ ಮಾಡಿದ, ಸಹಾಯ, ಸಹಕಾರ ನೀಡಿದ, ಅರ್ಹ ಹಾಗೂ ಪ್ರಾಮಾಣಿಕ, ಆತ್ಮೀಯ ಗೆಳೆಯರನ್ನು ಕರೆದು ತನ್ನ ಹೊಟೇಲ್‌ಗಳ ಜವಾಬ್ದಾರಿಯನ್ನು ಅವರಿಗೆ ವಹಿಸಿಕೊಟ್ಟರು. ಅವರು ಕೂಡಾ ತನ್ನೊಟ್ಟಿಗೆ ಬೆಳೆದು ತಮ್ಮ ಸುಂದರ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಹೀಗೇ ತನ್ನ ಹೊಟೇಲ್‌ನ ಕಾರ್ಮಿಕರನ್ನೇ ಮಾಲಕರಾಗಿಸಿ ಹಿರಿತನ ಮೆರೆದರು. ಇಂದು ಪಂಜುರ್ಲಿ ಗ್ರೂಪ್ ಆಪ್ ಹೊಟೇಲ್ ಮೂಲಕ ನಾನಾ ಸಂಸ್ಥೆಗಳನ್ನು ಆರಂಭಿಸಿ ಉದ್ಯಮದಲ್ಲಿ ಬಂದ ಹಣದಲ್ಲಿ ಸಮಾಜಸೇವೆಯನ್ನು ಮಾಡುತ್ತಿದ್ದಾರೆ. ಅವರ ತಂದೆಯವರು ತನ್ನ ಮಗ ದಾನಶೂರ ಕರ್ಣನಾಗುತ್ತಾನೆ ಎನ್ನುತ್ತಿದ್ದರು. ಕೊಡುವುದೆಂದರೆ ರಾಜೇಂದ್ರ ಶೆಟ್ಟಿಯವರಿಗೆ ಎಲ್ಲಿಲ್ಲದ ಪ್ರೀತಿ, ಅವರು ಕೊಡುಗೈದಾನಿ, ಬಡವರ ಬಂಧು. ತಾಳ್ಮೆ ಮತ್ತು ಶ್ರದ್ಧೆಯೊಂದಿದ್ದರೆ ಯಶಸ್ಸು ಸಾಧಿಸಬಹುದೆಂಬುವುದಕ್ಕೆ ರಾಜೇಂದ್ರ ಶೆಟ್ಟಿಯವರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಯಾವುದೇ ದುರಾಭ್ಯಾಸಗಳಿಲ್ಲದ ರಾಜೇಂದ್ರ ಶೆಟ್ಟಿಯವರು ಸದ್ಗುಣಗಳ ಸಂಪನ್ನ. ಮಾನವೀಯ ಮೌಲ್ಯಗಳಿಗೆ ಜೀವ ತುಂಬುವ ಅಪೂರ್ವ ಸಾಧಕ. ಅವರ ಸಾಧನೆಯ ಹಿಂದೆ ಕಷ್ಟಗಳ ನೆರಳಿದೆ. ಹಠ, ಛಲ, ಪ್ರಾಮಾಣಿಕತೆ, ಶ್ರದ್ಧೆ, ನಿಷ್ಠುರತೆ, ಅನುಭವ, ಮಾತೃ ವಾತ್ಸಲ್ಯ ಸೇರಿದಂತೆ ನಂಬಿಕೆ, ವಿಶ್ವಾಸದ ಗುಣವಿದೆ. ಅದೇ ಅವರನ್ನು ಹೊಟೇಲ್ ಉದ್ಯಮದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆಸಿದೆ. ತಾಯಿ, ಮಗಳು, ಹೆಂಡತಿ, ಪ್ರಾಮಾಣಿಕತೆ ಎಂಬ ನಾಲ್ಕು ಸಿದ್ಧಾಂತಗಳೇ ಅವರ ಯಶಸ್ಸಿನ ಬೆನ್ನೆಲುಬುಗಳು. ಹುಬ್ಬಳ್ಳಿ-ಧಾರವಾಡದಲ್ಲಿ ಹೊಟೇಲ್ ಎಂದರೆ ಹಸಿದವನಿಗೆ ಅನ್ನ ಹಾಕುವ ಮನೆಯಿದ್ದಂತೆ. ರಾಜೇಂದ್ರ ಶೆಟ್ಟಿಯವರು ಶ್ರೀ ಪಂಜುರ್ಲಿ ಗ್ರೂಪ್ ಆಫ್ ಹೊಟೇಲ್, ಹೊಟೇಲ್, ಲೀಲಾವತಿ ಪ್ಯಾಲೇಸ್ ಮೂಲಕ ಹೊಟೇಲ್ ಉದ್ಯಮದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಬಡವರ ಬಂಧುವಾಗಿ ಸಾವಿರಾರು ಜನರ ಹಸಿವು ನೀಗಿಸಿದ್ದಾರೆ. 37 ವರ್ಷಗಳ ಹೊಟೇಲ್ ಉದ್ಯಮದ ಅನುಭವವಿರುವ ಅವರು ಇಂದು ಸಾವಿರಾರು ಉದ್ಯೋಗಿಗಳಿಗೆ ಅನ್ನದಾತ. ಅವರ ಸಾಧನೆ, ಜೀವನ ಶೈಲಿ ಯುವಜನತೆಗೆ ಸ್ಪೂರ್ತಿ. ಅವರು ಕರ್ನಾಟಕದ ಹೆಮ್ಮೆಯ ಸುಪುತ್ರರಾಗಿದ್ದಾರೆ. ಸಾಧನೆಗಳ ಸರದಾರ ರಾಜೇಂದ್ರ ಶೆಟ್ಟಿ:ರಾಜೇಂದ್ರ ಶೆಟ್ಟಿಯವರು ನವೆಂಬರ್ 2೦, 1973 ರಂದು ಉಡುಪಿ ಜಿಲ್ಲೆಯ ಮೂಡುಬೆಟ್ಟು ಮಣಿಪುರ ಗ್ರಾಮದ ದೆಂದೂರುನಲ್ಲಿ ಜನಿಸಿದರು. ಅವರ ತಂದೆ ದಿ. ವಿಶ್ವನಾಥ ಶೆಟ್ಟಿ ಮತ್ತು ತಾಯಿ ಲೀಲಾವತಿ. ಹರೀಶ್ ಮತ್ತು ಅಜಯ್ ಅವರು ರಾಜೇಂದ್ರ ಶೆಟ್ಟಿಯವರ ಸಹೋದರರಾಗಿದ್ದು, ದೀಪಾ ಮತ್ತು ವಿದ್ಯಾ ಸಹೋದರಿಯರು.ರಾಜೇಂದ್ರ ಶೆಟ್ಟಿಯವರ ಧರ್ಮಪತ್ನಿ ಹರಿಣಿ. ಕುಮಾರಿ ವೈಷ್ಣವಿ ಮತ್ತು ಕುಮಾರಿ ವೈಭವಿ ಇವರ ಸುಪುತ್ರಿಯರು.ಹುಬ್ಬಳ್ಳಿ-ಧಾರವಾಡ-ಬೆಳಗಾವಿ-ದಾವಣಗೆರೆ, ಪುಣೆ ಗಳಲ್ಲಿ ಒಟ್ಟು 9 ಹೊಟೇಲ್‌ಗಳನ್ನು ಹೊಂದಿರುವ ಅವರು ದಾವಣಗೆರೆಯಲ್ಲಿ ಸುಸಜ್ಜಿತ ಕಲ್ಯಾಣ ಮಂಟಪವನ್ನು ಹೊಂದಿದ್ದಾರೆ. ಒಟ್ಟು 1೦೦೦ ಮಂದಿ ಉದ್ಯೊಗಿಗಳಿಗೆ ಇವರು ಅನ್ನದಾತರಾಗಿದ್ದಾರೆ. 2005 ರಲ್ಲಿ ಧಾರವಾಡದ ಟೋಲ್ ನಾಕಾದಲ್ಲಿ ಹೊಟೇಲ್ ಶ್ರೀ ಪಂಜುರ್ಲಿ, 2009ರಲ್ಲಿ ಹುಬ್ಬಳ್ಳಿ ಕೋರ್ಟು ಸರ್ಕಲ್‌ನ ಹತ್ತಿರ ಹೊಟೇಲ್ ಶ್ರೀ ಪಂಜುರ್ಲಿ, 2011ರಲ್ಲಿ ಹುಬ್ಬಳ್ಳಿ ವಿದ್ಯಾನಗರದ ಬಿ.ವಿ.ಬಿ. ಎದುರು ಹೊಟೇಲ್ ಶ್ರೀ ಪಂಜುರ್ಲಿ, 2012ರಲ್ಲಿ ಧಾರವಾಡ ಕೆ.ಸಿ. ಪಾರ್ಕು ಎದುರು ಹೊಟೇಲ್ ಶ್ರೀ ಪಂಜುರ್ಲಿ, 2015 ರಲ್ಲಿ ಹುಬ್ಬಳ್ಳಿ ಗೋಕುಲ್ ರಸ್ತೆಯ ನೆಹರು ನಗರದಲ್ಲಿ ಹೊಟೇಲ್ ಶ್ರೀ ಪಂಜುರ್ಲಿ, 2015 ರಲ್ಲಿ ಹುಬ್ಬಳ್ಳಿ ಗೋಕುಲ ರಸ್ತೆ ಓಯಾಸಿಸ್ ಮಾಲ್ ಎದುರು ಹೊಟೇಲ್ ಲೀಲಾವತಿ ಪ್ಯಾಲೇಸ್, 2020 ರಲ್ಲಿ ಬೆಳಗಾವಿಯ ಖಾನಾಪುರ ರಸ್ತೆಯ 3ನೇ ರೈಲ್ವೇ ಗೇಟ್ ಬಳಿ ಶ್ರೀ ಪಂಜುರ್ಲಿ ಫೈನ್ ಡೈನ್, 2022 ರಲ್ಲಿ ದಾವಣಗೆರೆ ಹಳೇ ಬಸ್ ನಿಲ್ದಾಣದ ಹತ್ತಿರ ಹೊಟೇಲ್ ಶ್ರೀ ಪಂಜುರ್ಲಿ ಪ್ಯಾಲೇಸ್, ದಾವಣಗೆರೆ ಹಳೇ ಬಸ್ ನಿಲ್ದಾಣದ ಹತ್ತಿರ 2022 ರಲ್ಲಿ ಲೀಲಾವತಿ ಕಲ್ಯಾಣ ಮಂಟಪವನ್ನು ಸ್ಥಾಪಿಸಿದ್ದಾರೆ.2023 ರಲ್ಲಿ ಪುಣೆಯಲ್ಲಿ ಹೋಟೆಲ್ ವಿಶ್ವನಾಥ್ ಪ್ಯಾಲೇಸ್ ನ್ನು ಆರಂಭಿಸಿದ್ದಾರೆ. ಹುಬ್ಬಳ್ಳಿ ಹೊಟೇಲ್ ಸಂಘದ ಸಂಘಟನಾ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪಹಾರ ಮಂದಿರಗಳ ಸಂಘ, ಬೆಂಗಳೂರು ಇದರ ಧಾರವಾಡ ಜಿಲ್ಲಾ ಪ್ರತಿನಿಧಿ ಸದಸ್ಯ, ಹುಬ್ಬಳ್ಳಿ-ಧಾರವಾಡ ಬಂಟರ ಸಂಘ, ಹುಬ್ಬಳ್ಳಿ ಇದರ ಸಹ ಕಾರ್ಯದರ್ಶಿ, ವಿಶ್ವ ಬಂಟರ ಸಂಘ ಮುಂಬಯಿ ಇದರ ನಿರ್ದೇಶಕರು, ಧಾರವಾಡ ಹೋಟೆಲ್ ಸಂಘ, ಬೆಳಗಾವಿ ಹೋಟೆಲ್ ಸಂಘ, ದಾವಣಗೆರೆ ಹೋಟೆಲ್ ಸಂಘ, ಪುಣೆ ಹೋಟೆಲ್ ಸಂಘ, ಹುಬ್ಬಳ್ಳಿ ರೋಟರಿ ಕ್ಲಬ್, ಹುಬ್ಬಳ್ಳಿ ಶಿರೂರ ಪಾರ್ಕ್ ಅಯ್ಯಪ್ಪ ಸ್ವಾಮಿ ದೇವಸ್ಥಾನ ಟ್ರಸ್ಟ್ ಕಮಿಟಿ ಇವುಗಳಲ್ಲಿ ಸಮಿತಿ ಸದಸ್ಯರಾಗಿ ಗುರುತಿಸಿದ್ದಾರೆ. ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘ ಹುಬ್ಬಳ್ಳಿ ಇದರ ಗೌರವ ಅಧ್ಯಕ್ಷರಾಗಿದ್ದಾರೆ. ಧಾರವಾಡ ಜಿಲ್ಲಾ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಹುಬ್ಬಳ್ಳಿ ಇದರ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೋಟೆಲ್ ಉದ್ಯಮದಲ್ಲಿ ಸಾಧಿಸಿದ ಸಾಧನೆಗೆ ಮತ್ತು ಇವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಮಾಧ್ಯಮಗಳು ಇವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿ, ಸನ್ಮಾನಿಸಿವೆ. ಬೆಂಗಳೂರಿನ ಕರ್ನಾಟಕ ಸಿರಿ ಸಂಘಟನೆಯು ಕರ್ನಾಟಕ ಉದ್ಯಮ ರತ್ನ ಪ್ರಶಸ್ತಿ ನೀಡಿದೆ.2015 ರಲ್ಲಿ ಹೊನ್ನಾವರದ ಹೊನ್ನಾವರ ಸಂಘದಿಂದ ರಾಜ್ಯೋತ್ಸವ ಪ್ರಶಸ್ತಿ, 2016 ರಲ್ಲಿ ಹುಬ್ಬಳ್ಳಿಯ ಹುಬ್ಬಳ್ಳಿ ಹೊಟೇಲ್ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಪ್ರಶಸ್ತಿ, 2018 ರಲ್ಲಿ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆ ಹುಬ್ಬಳ್ಳಿ ಆವೃತ್ತಿಯಿಂದ 2018ರಲ್ಲಿ ಅಚೀವರ್ಸ್ ಆಫ್ ಕರ್ನಾಟಕ ಪ್ರಶಸ್ತಿ, 2018 ರಲ್ಲಿ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಟಾನ ಟ್ರಸ್ಟ್ ನಿಂದ ವಿಶ್ವೇಶ್ವರಯ್ಯ ರಾಷ್ಟೀಯ ಸದ್ಭಾವನಾ ಪ್ರಶಸ್ತಿ, 2021 ರಲ್ಲಿ ಮದರ್ ಥೆರೇಸಾ ಮೆಮೋರಿಯಲ್ ನ್ಯಾಷನಲ್ ಅವಾರ್ಡ್ ನ್ನು ನ್ಯಾಷನಲ್ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ, ಬೆಂಗಳೂರು ಇವರಿಂದ ಪಡೆದಿದ್ದಾರೆ. 2021ರಲ್ಲಿ ಕರ್ನಾಟಕ ಮಾದ್ಯಮ ಸಹಕಾರ ಮತ್ತು ದಿ ನ್ಯೂಸ್ ಪೇಪರ್ ಅಸೋಸಿಯೇಷನ್ ಆಫ್ ಕರ್ನಾಟಕದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. 2021ರಲ್ಲಿ ರೆಡ್ ಎಫ್.ಎಂ. ರೇಡಿಯೋದಿಂದ ಬಿಸಿನೆಸ್ ಬ್ರಿಲಿಯನ್ಸ್ ಅವಾರ್ಡ್, 2022 ರಲ್ಲಿ ಸುವರ್ಣ ನ್ಯೂಸ್ ಟಿ.ವಿ. ಚಾನೆಲ್ ಮತ್ತು ಕನ್ನಡ ಪ್ರಭ ದಿನಪತ್ರಿಕೆಯಿಂದ ಉತ್ತರ ಕರ್ನಾಟಕ ಸಾಧಕರು ಪ್ರಶಸ್ತಿ, 2022 ರಲ್ಲಿ ಇಂದು ಸಂಜೆ ಪತ್ರಿಕೆಯಿಂದ ಉದ್ಯೋಗ ರತ್ನ ಪ್ರಶಸ್ತಿ, 2022 ರಲ್ಲಿ ರಾಜ್ ನ್ಯೂಸ್ ಟಿ.ವಿ.ಯಿಂದ ಗುರು ಅನುಗ್ರಹ ಪುರಸ್ಕಾರ, 2022 ರಲ್ಲಿ ಸರ್ಕಾಳ ಮರಾಠಿ ದಿನಪತ್ರಿಕೆಯಿಂದ ಐಡಲ್ಸ್ ಆಫ್ ಬೆಳಗಾವ, 2022 ರಲ್ಲಿ ಆರ್ಯಭಟ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು ಇವರಿಂದ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, 2023 ರಲ್ಲಿ ವಿಸ್ತಾರ ಟಿವಿಯಿಂದ ಬಿಜಿನೆಸ್ ಎಕ್ಸಲೆನ್ಸ್ ಅವಾರ್ಡ್,2023 ರಲ್ಲಿ ಪಬ್ಲಿಕ್ ನೆಸ್ಟ್ ಇಂಟರ್‌ನ್ಯಾಷನಲ್ ನ್ಯೂಸ್‌ನಿಂದ ಪಂಚರತ್ನ ಪ್ರಶಸ್ತಿ, 2023 ರಲ್ಲಿ ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್ ನ್ಯೂಸ್ ಫಸ್ಟ್ ಟಿವಿ ಮೊದಲಾದ ಹಲವಾರು ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳು ದೊರೆಕಿವೆ.ಇವರು ಹೊಟೇಲ್ ಉದ್ಯಮದಲ್ಲಿ ಸಾಧಿಸಿದ ಸಾಧನೆಯ ಬಗ್ಗೆ 2021ರಲ್ಲಿ ಪವರ್ ಟಿವಿಯ ‘ಹೊಟೇಲ್ ಹೀರೋ’ ಕಾರ್ಯಕ್ರಮ, 2022 ರಲ್ಲಿ ನ್ಯೂಸ್ ಫಸ್ಟ್ ಟಿವಿಯಿಂದ ‘ನಾನು ನನ್ನ ಸಾಧನೆ ಕಾರ್ಯಕ್ರಮ’, 2023 ರಲ್ಲಿ ಟಿವಿ 5 ‘ನಮ್ಮ ಬಾಹುಬಲಿ’ ಕಾರ್ಯಕ್ರಮ ಮೂಲಕ ಸುದ್ಧಿ ಬಿತ್ತರಗೊಂಡಿವೆ. ಸಮಾಜ ಕಂಡ ಸರ್ವಶ್ರೇಷ್ಠ ಸಾಧಕ ರಾಜೇಂದ್ರ ವಿಶ್ವನಾಥ ಶೆಟ್ಟಿಯವರ ವೃತ್ತಿ ಬದುಕು ಆರಂಭದಲ್ಲಿ ಕಷ್ಟಕರವಾಗಿದ್ದರೂ, ಕಠಿಣ ಪರಿಶ್ರಮ ಹಾಗೂ ನಿರಂತರ ದುಡಿಮೆ,ಪ್ರಾಮಾಣಿಕ ಪ್ರಯತ್ನಗಳಿಂದ ಹಂತ ಹಂತವಾಗಿ ಮೇಲೇರಿ ಯಶಸ್ವಿ ಸಾಧಿಸಲು ಸಾಧ್ಯ ಎಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ.ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಕ್ರೀಡಾ ಕಾರ್ಯಕ್ರಮಗಳಿಗೆ ಪ್ರೋತ್ಸಾಹಿಸುವ ಇವರ ನಿಸ್ವಾರ್ಥ ಸೇವಾ ಮನೋಭಾವವನ್ನು ಪರಿಗಣಿಸಿ ರಂಜಿತ್ ಶೆಟ್ಟಿ ಸಾರಥ್ಯದ ಪ್ರತಿಷ್ಠಿತ ಬಂಟ್ಸ್ ನೌ ಮಾದ್ಯಮ ಸಂಸ್ಥೆಯು ಮೇ 19, 2024 ರ ಸಂಜೆ 4ಕ್ಕೆ ಮಂಗಳೂರು ಪುರಭವನದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ನಿವೃತ್ತ ಲೋಕಾಯುಕ್ತ ನ್ಯಾಯಾಧೀಶ ಸಂತೋಷ್ ಹೆಗ್ಡೆ ಸೇರಿದಂತೆ ಗಣ್ಯರ ಸಮ್ಮುಖದಲ್ಲಿ ತ್ರಿಪಂಚಕ ಸಂಭ್ರಮದಲ್ಲಿ ಇವರಿಗೆ ‘ಬಂಟ ವಿಭೂಷಣ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದೆಂದು ಘೋಷಣೆ ಮಾಡಿದೆ.

ರಾಜಕೀಯ ವಾರ್ತೆಗಳು

3 ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿಯಲ್ಲಿ ಕ್ಯಾಪ್ಟನ್ ಬೃಜೇಶ್ ಚೌಟ ಗೆಲ್ಲಲಿದ್ದಾರೆ ಎಂದ ಕೃಷ್ಣ ಪಾಲೆಮಾರ್. ಬಿಜೆಪಿ ಪಾಳಯದಲ್ಲಿ ಅರುಣ್ ಪುತ್ತಿಲ ಸೇರಿದಂತೆ ಪ್ರಮುಖ ನಾಯಕರು ಚೌಟ ಪರ ಬ್ಯಾಟಿಂಗ್.

ಮಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕ್ಯಾಪ್ಟನ್ ಬೃಜೇಶ್ ಚೌಟ ಆಯ್ಕೆಯಾಗಿರುವುದು ಬಿಜೆಪಿ ಪಾಳಯದಲ್ಲಿ ಹೊಸ ಉಲ್ಲಾಸ, ಉತ್ಸಾಹದ ಜೊತೆಗೆ ಹೊಸ ಅಲೆ ಎಬ್ಬಿಸಿದೆ. ಬೃಜೇಶ್ ಚೌಟ ಅವರು 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ಲಲಿದ್ದಾರೆ. ಅವರನ್ನು ಗೆಲ್ಲಿಸಿ ಕೊಡುತ್ತೇವೆಂದು ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅವರು ಹೇಳಿದ್ದಾರೆ. ತನಗೆ ಟಿಕೇಟ್ ಸಿಗದಿದ್ದರೂ, ಆ ಬಗ್ಗೆ ತಲೆಕೆಡಿಸಿಕೊಳ್ಳದ ನಳಿನ್‌ಕುಮಾರ್ ಕಟೀಲ್ ಅವರು ತಾನು ಬೃಜೇಶ್ ಚೌಟರ ಗೆಲುವಿಗಾಗಿ ಶಕ್ತಿಮೀರಿ ಶ್ರಮಿಸುವುದಾಗಿ ನುಡಿದಿದ್ದಾರೆ. ಈ ಹಿಂದೆ ತಾನು ಬಂಡಾಯ ಏಳುತ್ತೇನೆಂದು ಸಾರಿದ್ದ ಅರುಣ್ ಪುತ್ತಿಲ ಅವರು ಮಂಗಳೂರಿನಲ್ಲಿ ಬಿಜೆಪಿ ಪಕ್ಷವನ್ನು ಅಧಿಕೃತವಾಗಿ ಸೇರಿ ಬೃಜೇಶ್ ಚೌಟ ಗೆಲುವಿಗಾಗಿ ದುಡಿಯುವುದಾಗಿ ಘೋಷಿಸಿದ್ದಾರೆ. ಒಟ್ಟಿನಲ್ಲಿ ಮಂಗಳೂರಲ್ಲಿ ಬೃಜೇಶ್ ಚೌಟರ ಪರ ಜನ ಅಲೆ ಎದ್ದಿದ್ದು ಪ್ರತಿಸ್ಪರ್ಧಿ ಕಾಂಗ್ರೆಸ್‌ನಲ್ಲಿ ಪದ್ಮರಾಜ್ ಆರ್. ಅವರು ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುದ್ಧಿ ಇದೆ.

ಹೊರ ರಾಜ್ಯ ವಾರ್ತೆಗಳು

ನಮ್ಮನ್ನು ನಾವು ಗಟ್ಟಿಗೊಳಿಸಿದಂತೆ ನಮ್ಮವರನ್ನು ಗಟ್ಟಿಗೊಳಿಸುವ ಕಾರ್ಯ ಆಗಲಿ -ಕನ್ಯಾನ ಸದಾಶಿವ ಶೆಟ್ಟಿ

ಪುಣೆ : ಒಗ್ಗಟ್ಟೇ ಮೂಲವೆಂದು ಸಂಘಟಿತ ಬಂಟರಾದ ನಾವು ಶ್ರೀಮಂತಿಕೆಯಲ್ಲಿ ಇಂದು ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಪಡೆಯಬಹುದು. ಆದರೆ, ಬಡ ಸಮಾಜಕ್ಕಾಗಿ ಸೇವಾ ಕಾರ್ಯ ಮಾಡುವಾಗ ಸಂಘ ನನಗಾಗಿ ಅಲ್ಲ ಸಮಾಜಕ್ಕಾಗಿ ಇರುವುದು ಎಂಬ ಆತ್ಮ ಸ್ಮರಣೆ ಇರಲಿ ಹಾಗೂ ಸೇವೆ ಕೂಡಾ ಸಮಾಜಕ್ಕಾಗಿ ಮಾಡಿದೆ ಎಂಬ ಹೆಮ್ಮೆ ನಮ್ಮಲ್ಲಿರಲಿ. ಸಮಾಜ ಕಾರ್ಯ ಯಾವುದೇ ಇರಲಿ ಧನಾತ್ಮಕವಾಗಿ ನಡೆದಾಗ ಅದಕ್ಕೆ ಫಲ ಸಿಗುವುದು ಸೃಷ್ಟಿಯ ನಿಯಮ. ನಿರ್ಮಲ ಮನಸ್ಸಿನ ಸೇವೆಯಿಂದ ಚಿತ್ತ ಶುದ್ಧಿಯನ್ನು ಪಡೆಯಲು ಸಾಧ್ಯ. ನಮ್ಮನ್ನು ನಾವು ಗಟ್ಟಿಗೊಳಿಸಿದಂತೆ ನಮ್ಮವರನ್ನು ಗಟ್ಟಿಗೊಳಿಸುವ ಕಾರ್ಯ ಆಗಲಿ. ನಮ್ಮ ಶ್ರೀಮಂತ ಸಂಸ್ಕ್ರತಿಗೆ ತಕ್ಕಂತೆ ಕೈಗೊಂಡ ಕಾರ್ಯ ಪರಿಪೂರ್ಣಗೊಳ್ಳುವ ತನಕ ವಿರಮಿಸದೇ ಸಮಾಜಕ್ಕಾಗಿ ಅರ್ಪಣೆ ಮಾಡುವ ಛಲವೊಂದಿದ್ದರೆ ಅದು ಬಂಟರಲ್ಲಿ ಕಾಣಬಹುದು. ನಮಗೆ ಬಂದ ಶ್ರೀಮಂತಿಕೆಯಲ್ಲಿ ಮೆರೆಯದೆ ದಾನ ಧರ್ಮದ ಮೂಲಕ ನಾವು ಸಮಾಜದಲ್ಲಿ ಶ್ರೇಷ್ಠರಾಗಬೇಕು ಎಂದು ಹೇರಂಬ ಇಂಡಸ್ಟ್ರೀಸ್ ಪ್ರೈ ಲಿಮಿಟೆಡ್ ನ ಸಿಎಂಡಿ ಕನ್ಯಾನ ಸದಾಶಿವ ಶೆಟ್ಟಿ ನುಡಿದರು. ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ವಾರ್ಷಿಕೊತ್ಸವ, ಸ್ನೇಹ ಸಮ್ಮಿಲನ ಸಮಾರಂಭವು ಮಾರ್ಚ್ 10ರಂದು ಚಿಂಚ್ವಾಡ್ ನ ಪ್ರೊ ರಾಮಕೃಷ್ಣ ಮೋರೆ ಆಡಿಟೋರಿಯಂನಲ್ಲಿ ಜರಗಿತು. ಈ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸದಾಶಿವ ಶೆಟ್ಟಿಯವರು ಮಾತನಾಡಿ ನಾವು ದೈವ ದೇವರ ಆಶೀರ್ವಾದಿಂದ ಪ್ರಯತ್ನ ಮತ್ತು ಸಾಹಸ ಮಾಡಿ ಆರ್ಥಿಕವಾಗಿ ಬೆಳೆದವರು. ವಿಶ್ವ ಬಂಟರ ಶ್ರೆಯೋಭಿವೃದ್ದಿಗಾಗಿ ಸಂಘಟನಾತ್ಮಕ ಹಲವಾರು ಕಾರ್ಯ ಯೋಜನೆಗಳು ನಡೆಯುತ್ತಿವೆ. ವಿಶ್ವ ಬಂಟ ಕೋಶ ಎಂಬ ಕಾರ್ಯವು ಆರಂಭವಾಗಿದೆ. ನಮ್ಮ ಬಡ ಕುಟುಂಬಗಳ ಉದ್ದಾರ ಕೂಡಾ ನಮ್ಮ ಕರ್ತವ್ಯ ಎಂದು ಅರಿತು ಸೇವಾ ಕಾರ್ಯದಲ್ಲಿ ಮುನ್ನಡೆಯೋಣ. ಈ ಎಲ್ಲಾ ಕಾರ್ಯಗಳು ಅರ್ಥಪೂರ್ಣವಾಗಿ ನಡೆಯಲು ತಮ್ಮೆಲ್ಲರ ಸಹಕಾರ ಸದಾ ಇರಲಿ. ಇಲ್ಲಿ ಇಂದು ಉತ್ತಮ ಸಂದೇಶ ನೀಡುವ ಸಾಂಸ್ಕ್ರತಿಕ ಕಾರ್ಯಕ್ರಮಗಳು ಮತ್ತು ಸಂಘಟಿತ ಸಮಾರಂಭ ನಡೆದಿದೆ. ಹೃದಯ ತುಂಬಿ ಬಂದಿದೆ ಎಂದರು.ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆಯವರ ಅಧ್ಯಕ್ಷತೆಯಲ್ಲಿ ನಡೆದ ಈ ವಾರ್ಷಿಕೋತ್ಸವ ಸಮಾರಂಭದ ವೇದಿಕೆಯಲ್ಲಿ ಗೌರವ ಅತಿಥಿಗಳಾದ ಕರ್ನಾಟಕ ವಿಧಾನಸಭಾ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ, ಗುಜರಾತ್ ನ ಸಿಲ್ವಾಸ ದಾದರ್ ನಗರ ಹವೇಲಿ ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ರಜನಿ ಜಿ ಶೆಟ್ಟಿ, ಸಂಘದ ಉಪಾಧ್ಯಕ್ಷ ಜಗದೀಶ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ವಿಜಯ್ ಶೆಟ್ಟಿ ಬೋರ್ಕಟ್ಟೆ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಕೋಶಾಧಿಕಾರಿ ಸುಧಾಕರ್ ಶೆಟ್ಟಿ ಪೆಲತ್ತೂರು, ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ದಿನೇಶ್ ಶೆಟ್ಟಿ ಉಜಿರೆ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಕೆ ಶೆಟ್ಟಿ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಜಯಾನಂದ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಜ್ಯೋತಿ ವಿ ಶೆಟ್ಟಿ, ಸುನಿತಾ ರಾಕೇಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಜೆ ಶೆಟ್ಟಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಮೊದಲಿಗೆ ವೇದಿಕೆಯಲ್ಲಿದ್ದ ಅತಿಥಿ ಗಣ್ಯರು, ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಶ್ವನಾಥ್ ಡಿ ಶೆಟ್ಟಿ, ರಘುರಾಮ್ ಶೆಟ್ಟಿ, ಎರ್ಮಾಳ್ ನಾರಾಯಣ ಶೆಟ್ಟಿ, ಎರ್ಮಾಳ್ ವಿಶ್ವನಾಥ್ ಶೆಟ್ಟಿ, ಪದ್ಮನಾಭ ಕೆ ಶೆಟ್ಟಿ, ಎರ್ಮಾಳ್ ಸೀತಾರಾಂ ಶೆಟ್ಟಿ, ಮಹೇಶ್ ಹೆಗ್ಡೆಯವರು ಉಪಸ್ಥಿತರಿದ್ದರು. ನಳಿನಿ ಶೆಟ್ಟಿ, ಶೋಭಾ ಶೆಟ್ಟಿ, ರೇಖಾ ಶೆಟ್ಟಿ ಪ್ರಾರ್ಥನೆಗೈದರು. ನಿಕಟ ಪೂರ್ವ ಅಧ್ಯಕ್ಷ ವಿಜಯ್ ಶೆಟ್ಟಿ ಸ್ವಾಗತಿಸಿದರು. ಸಂಘದ ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ಎಲ್.ಇ.ಡಿ ಪರದೆಯಲ್ಲಿ ಪ್ರದರ್ಶಿಸಲಾಯಿತು. ಅತಿಥಿ ಗಣ್ಯರನ್ನು ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಮತ್ತು ಪದಾಧಿಕಾರಿಗಳು ಪುಷ್ಪಗುಚ್ಛ ನೀಡಿ ಗೌರವಿಸಿದರು ಹಾಗೂ ವಿವಿದ ಸಂಘ ಸಂಸ್ಥೆಗಳ ಅಧ್ಯಕ್ಷರುಗಳು, ಪದಾಧಿಕಾರಿಗಳನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘಕ್ಕೆ ಆಗಮಿಸಿದ ಗಣ್ಯರು ತಮ್ಮ ಸಂದೇಶಗಳನ್ನು ತಿಳಿಸುವ ಅತಿಥಿ ದೇವೋಭವ ಎಂಬ ಪುಸ್ತಕವನ್ನು ಕನ್ಯಾನ ಸದಾಶಿವ ಶೆಟ್ಟಿಯವರು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಗೌರವ ಅತಿಥಿಗಳಾದ ಗುರುರಾಜ್ ಗಂಟಿಹೊಳೆ, ರಜನಿ ಜಿ .ಶೆಟ್ಟಿಯವರನ್ನು ಶಾಲು, ಹಾರ, ಸನ್ಮಾನ ಪತ್ರ, ಸ್ಮರಣಿಕೆ ನೀಡಿ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಇವರ ಪರಿಚಯವನ್ನು ಕ್ರಮವಾಗಿ ಅವಿನಾಶ್ ಶೆಟ್ಟಿ, ರಾಜೇಶ್ ಶೆಟ್ಟಿ, ಸ್ಮಿತಾ ಎಂ ಹೆಗ್ಡೆ ಓದಿದರು. ಇದೇ ಸಂದರ್ಭದಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘಕ್ಕೆ ಹಲವಾರು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆಗೈದ ಸಮಿತಿಯ ಸೇವಾ ಪ್ರಮುಖರಾದ ಪುಚ್ಚೊಟ್ಟು ಬೀಡು ಎರ್ಮಾಳ್ ಬಾಲಚಂದ್ರ ಶೆಟ್ಟಿ, ಅವಿನಾಶ್ ಶೆಟ್ಟಿ ಮಂದಾಡಿಗುತ್ತು, ಜಯಾನಂದ ಶೆಟ್ಟಿ ಪುತ್ತೂರುರವರನ್ನು ಸನ್ಮಾನಿಸಲಾಯಿತು. ಇವರ ಸಾಧನೆಗಳ ವರದಿಯನ್ನು ಕೋಶಾಧಿಕಾರಿ ಸುಧಾಕರ್ ಶೆಟ್ಟಿ ಪೆಲತ್ತೂರು ಪರಿಚಯಿಸಿದರು. ಸಂಘದ ನಾಯಕತ್ವ ವಹಿಸಿ ಪಾದರಸದಂತೆ ಕಾರ್ಯಗೈದು ಕಳೆದ ವರ್ಷ ರಜತ ಸಂಭ್ರಮ ಹಾಗೂ ಸಂಘವನ್ನು ಉತ್ತಮ ರೀತಿಯಲ್ಲಿ ಸಂಘಟಿಸಿದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಸುನಿತಾ ಅರ್ ಶೆಟ್ಟಿ ದಂಪತಿಗಳನ್ನು ಸಮಾಜ ಬಾಂಧವರ ಪರವಾಗಿ ಅತಿಥಿಗಳು ಸನ್ಮಾನಿಸಿದರು. ವೇದಿಕೆಯಲ್ಲಿದ್ದ ಗಣ್ಯರು ಸಮಾಜಕ್ಕೆ ಮತ್ತು ಸಮಾಜ ಸೇವೆಗೆ ಉತ್ತೇಜನ ನೀಡುವಂತಹ ನುಡಿ ನಮನಗಳನ್ನು ಸಲ್ಲಿಸಿದರು. ಸಾಂಸ್ಕ್ರತಿಕ ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯರು ಮತ್ತು ಬಂಟ ಸಮಾಜ ಬಾಂಧವರಿಂದ ವಿವಿದ ವೈವಿಧ್ಯಮಯ ನೃತ್ಯ ಪ್ರದರ್ಶನಗೊಂಡಿತು ಹಾಗೂ ಅರ್ಥಗರ್ಭಿತ ಸಂದೇಶ ನೀಡುವ ಹಾಸ್ಯ ಪ್ರಹಸನ ತುಂಬಿದ ಸಭಾಂಗಣದಲ್ಲಿದ್ದ ಭಾಂದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿತು. ಸಾವಿರಾರು ಸಂಖ್ಯೆಯ ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷರುಗಳು, ಹಿರಿಯರು, ದಾನಿಗಳು, ಸಮಿತಿ ಪದಾಧಿಕಾರಿಗಳು, ಮಹಿಳಾ ವಿಭಾಗದವರು, ಯುವ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು. ಕಾರ್ಯಕ್ರಮದ ನಂತರ ತುಳುನಾಡ ಶೈಲಿಯ ಪ್ರೀತಿ ಭೋಜನ ನಡೆಯಿತು. ಅಭಿಷೇಕ್ ಶೆಟ್ಟಿ ಪಡೀಲ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ್ ಶೆಟ್ಟಿ ಪೆಲತ್ತೂರು ವಂದಿಸಿದರು. ಚಿತ್ರ, ವರದಿ : ಹರೀಶ್ ಮೂಡಬಿದ್ರಿ

ಪ್ರಾದೇಶಿಕ ವಾರ್ತೆಗಳು

ಮಂಗಳೂರಿನ ಹೋಲಿ ಕ್ರಾಸ್ ಚರ್ಚ್ ಕೊರ್ಡೇಲ್ ಅವರ ನೇತೃತ್ವದಲ್ಲಿ ಮಾರ್ಚ್ 25 ರ ಸಂಜೆ 4.30 ಕ್ಕೆ ‘ಶಿಲುಬೆಯ ಹಾದಿ’.

ಮಂಗಳೂರು :ಮಂಗಳೂರಿನ ಹೋಲಿ ಕ್ರಾಸ್ ಚರ್ಚು ಕೊರ್ಡೆಲ್ ಅವರ ನೇತೃತ್ವದಲ್ಲಿ ಮಾರ್ಚ್ 25 ರಂದು ಸಂಜೆ 4.3೦ ಗಂಟೆಗೆ “ಶಿಲುಬೆಯ ಹಾದಿ” (ಕುರ್ಸಾಚಿ ವಾಟ್) ನ್ನು ಸಿಟಿ ವಲಯದ 12 ಚರ್ಚುಗಳ ಸಹಯೋಗದಿಂದ ನಡೆಸಲಾಗುತ್ತದೆ. ಕೊರ್ಡೆಲ್, ವಾಮಂಜೂರ್, ಪಾಲ್ದಾನೆ, ಬೊಂದೇಲ್, ದೆರೆಬೈಲು, ನೀರುಮಾರ್ಗ, ಕೆಲರೈ, ಬಜ್ಜೊಡಿ, ಕಪಿತಾನಿಯೋ, ಬಜಾಲ್, ಪೆರ್ಮಾಯಿ, ಶಕ್ತಿನಗರ ಚರ್ಚುಗಳು ಭಾಗವಹಿಸಲಿದ್ದು, ಏಸುಕ್ರಿಸ್ತರು ಶಿಲುಬೆಯ 14 ಹಾದಿಗಳನ್ನು ಈ ಚರ್ಚುಗಳ ಕಲಾವಿದರ ನಟನೆಯ ಮೂಲಕ ಚರ್ಚಿನ ಆವರಣದ ಒಳಗೆ ನಡೆಸಲಾಗುವುದು. ಶಿಲುಬೆಯ ಹಾದಿಯ 14 ನಿಲ್ದಾಣಗಳನ್ನು (ಸ್ಟೇಶನ್) ನ್ನು ವಲಯದ 12 ಚರ್ಚುಗಳ ಹಾಗೂ ಧರ್ಮಗುರುಗಳ ಮತ್ತು ಧರ್ಮಭಗಿನಿಯರ ಪ್ರತಿನಿಧಿಗಳು ನಡೆಸಿಕೊಡುತ್ತಾರೆ. ಸಂಜೆ 4.30ಕ್ಕೆ ಬಲಿಪೂಜೆ, ನಂತರ ಶಿಲುಬೆಯ ಹಾದಿ, 12ನೇ ನಿಲ್ದಾಣದಲ್ಲಿ ಪ್ರವಚನವನ್ನು ನಡೆಸಿಲಾಗುವುದು.ಈ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ| ಪಾ| ಕ್ಲಿಫರ್ಡ್ ಫೆರ್ನಾಂಡಿಸ್ ಅವರು ಸ್ಕಿçಪ್ಟ್ ಬಿಡುಗಡೆ ಮಾಡಿದರು. ಸಹಾಯಕ ಧರ್ಮಗುರುಗಳಾದ ವಂ| ಪಾ| ಪಾವುಲ್ ಡಿ’ಸೋಜ, ಧರ್ಮಪ್ರಾಂತ್ಯದ ಪಿ.ಆರ್.ಓ. ರೋಯ್ ಕ್ಯಾಸ್ಟಲಿನೋ, ಚರ್ಚಿನ ಉಪಾಧ್ಯಕ್ಷ ರೂತ್ ಕ್ಯಾಸ್ಟಲಿನೋ, ಕಾರ್ಯದರ್ಶಿ ಅನಿಲ್ ಡೆಸಾ, ಸರ್ವ ಆಯೋಗದ ಸಂಚಾಲಕ ಡೊಲ್ಫಿ ಡಿ’ಸೋಜ,12 ಚರ್ಚುಗಳ ಉಪಾಧ್ಯಕ್ಷರು ಉಪಸ್ಥಿತರಿದ್ದರು. ಕಲಾವಿದರಿಗೆ ನಿರ್ದೇಶಕರಾಗಿ ಡೆನ್ನಿಸ್ ಮೊಂತೆರೋ ಹಾಗೂ ಸ್ಟ್ಯಾನ್ಲಿ ಅಲ್ವಾರೀಸ್, ಏಸು ಕ್ರಿಸ್ತರ ಪಾತ್ರವನ್ನು ವಿಕಾಸ್ ಕುಲಾಕುಲ್, ಮದರ್ ಮೇರಿಯ ಪಾತ್ರವನ್ನು ಆ್ಯಶೆಲ್ ಡಿ’ಸಿಲ್ವಾ, ಪಿಲಾತನ ಪಾತ್ರವನ್ನು ಆಲ್ವಿನ್ ಪಾಯಸ್ ಮುಂತಾದವರು ನಿರ್ವಹಿಸಲಿದ್ದಾರೆ.

ಪ್ರಾದೇಶಿಕ ವಾರ್ತೆಗಳು

9 ಮಂದಿ ಹಿರಿಯ ಪತ್ರಕರ್ತರಿಗೆ ಪ್ರೆಸ್ ಕ್ಲಬ್ ಗೌರವ ಸನ್ಮಾನ. ಮೈಮುನಾ-ಮರ್ಝಿನಾರಿಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ. ಸಾಧಕರನ್ನು ಗುರುತಿಸುವುದು ಸಮಾಜಕ್ಕೆ ಪ್ರೇರಣೆ- ಡಾ.ವೈ.ಭರತ್ ಶೆಟ್ಟಿ

ಮಂಗಳೂರು : ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಸಮಾಜಕ್ಕೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಹೇಳಿದರು.ಮರವೂರಿನ ದಿ ಗ್ರ್ಯಾಂಡ್ ಬೇಯಲ್ಲಿ ಭಾನುವಾರ ನಡೆದ ಮಂಗಳೂರು ಪ್ರೆಸ್ ಕ್ಲಬ್ ದಿನಾಚರಣೆಯಲ್ಲಿ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ ವಿತರಿಸಿ ಮಾತನಾಡಿದ ಅವರುಹೈನುಗಾರಿಕೆಯ ಮೂಲಕ ಅತ್ಯಪೂರ್ವ ಸಾಧನೆ ಮಾಡಿರುವ ಮೈಮೂನಾ ಮತ್ತು ಮರ್ಝಿನಾ ಅವರು ಮಹಿಳಾ ಸಬಲೀಕರಣಕ್ಕೆ ಮಾದರಿಯಾಗಿದ್ದಾರೆ. ಅವರನ್ನು ಗುರುತಿಸಿ ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಟ -ನಿರ್ದೇಶಕ ದೇವದಾಸ್ ಕಾಪಿಕಾಡ್ ಮಾತನಾಡಿ “ಸಮಾಜದಲ್ಲಿ ಮಾಧ್ಯಮ ರಂಗ ಮಹತ್ವದ ಸ್ಥಾನವನ್ನು ಪಡೆದಿದೆ. ಗುರು , ಹಿರಿಯರನ್ನು ಗೌರವಿಸಿದರೆ ಮಾತ್ರ ಸಾಧನೆಯ ಹಾದಿಯಲ್ಲಿ ಯಶಸ್ಸು ಕಾಣಲು ಸಾಧ್ಯ ” ಎಂದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರಾದ ಅನ್ನು ಮಂಗಳೂರು, ರವಿ ಪೊಸವಣಿಕೆ, ರಾಘವೇಂದ್ರ ಭಟ್, ಪ್ರಕಾಶ್ ಮಂಜೇಶ್ವರ, ಕೃಷ್ಣ ಕೋಲ್ಚಾರ್, ರಾಜೇಶ್ ಕಿಣಿ, ಅಶೋಕ್ ಶೆಟ್ಟಿ ಬಿ.ಎನ್., ರವೀಂದ್ರ ಶೆಟ್ಟಿ ಕುತ್ತೆತ್ತೂರು, ಶರತ್ ಸಾಲ್ಯಾನ್ ಇವರುಗಳಿಗೆ ಪ್ರೆಸ್ ಕ್ಲಬ್ ಗೌರವ ಪ್ರದಾನ ಹಾಗೂ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿತು.ಪ್ರೆಸ್ ಕ್ಲಬ್ ಪ್ರಶಸ್ತಿ ತೀರ್ಪು ಗಾರರಾದ ಎಸ್ ಡಿಎಂ ಕಾಲೇಜಿನ ಉಪನ್ಯಾಸಕ ಪುಷ್ಪರಾಜ್ ಮತ್ತು ವಿಶ್ರಾಂತ ಪತ್ರಕರ್ತ ಕುಮಾರ್ ನಾಥ್ ಅವರನ್ನು ಗೌರವಿಸಲಾಯಿತು.ಪ್ರೆಸ್ ಕ್ಲಬ್ ಸಿಬ್ಬಂದಿ ಚಂಚಲಾಕ್ಷಿ ಅವರನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭ ಮತದಾನದ ಪ್ರತಿಜ್ಞಾ ವಿಧಿಯನ್ನು ಹರೀಶ್ ಮೋಟುಕಾನ ನೆರವೇರಿಸಿದರು.ಸಮಾರಂಭದಲ್ಲಿ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ, ಮಾಜಿ ಮೇಯರ್‌ ಗಳಾದ ಶಶಿಧರ್ ಹೆಗ್ಡೆ,ಭಾಸ್ಕರ ಕೆ,ಮನಪಾ ಸದಸ್ಯ ನವೀನ್ ಡಿ ಸೋಜ, ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಕಾರ್ಯನಿರತ ಪತ್ರ ಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಪ್ರೆಸ್ ಕ್ಲಬ್ ಪೂರ್ವಾಧ್ಯಕ್ಷ ಅನ್ನು ಮಂಗಳೂರು, ಹಿರಿಯ ಪತ್ರಕರ್ತರಾದ ಬಿ. ರವೀಂದ್ರ ಶೆಟ್ಟಿ, ವಾಲ್ಟರ್ ನಂದಳಿಕೆ, ಉಪಸ್ಥಿತರಿದ್ದರು. ಸತೀಶ್ ಇರಾ ಪ್ರಾರ್ಥಿಸಿದರು. ಮಹಮ್ಮದ್ ಆರಿಫ್ ಪಡುಬಿದ್ರಿ, ಆರ್.ಸಿ.ಭಟ್ ಮತ್ತು ಆತ್ಮಭೂಷಣ್ ಭಟ್ ಸನ್ಮಾನಿತರನ್ನು ಪರಿಚಯಿಸಿದರು.ಪ್ರೆಸ್ ಕ್ಲಬ್ ಪ್ರದಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಾರ್ಯದರ್ಶಿ ಪುಷ್ಪರಾಜ್ ಬಿ.ಎನ್ ಕಾರ್ಯ ಕ್ರಮ ನಿರೂಪಿಸಿದರು.

ರಾಜಕೀಯ ವಾರ್ತೆಗಳು

ಟಿಕೆಟ್ ಕೈ ತಪ್ಪುವರ ಬೆಂಬಲಕ್ಕೆ ನಿಂತ ಬಿಎಸ್ ವೈ. ವಿರೋಧವಿರುವ ಹಾಲಿ 7 ಮಂದಿ ಬಿಜೆಪಿ ಸಂಸದರ ಪರ ಯಡಿಯೂರಪ್ಪ ಬ್ಯಾಟಿಂಗ್. ನಾಳೆ ಸಂಜೆಯೊಳಗೆ ಟಿಕೆಟ್ ಹಂಚಿಕೆ ಪ್ರಕ್ರಿಯೆ ಫೈನಲ್. ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲು ಹೆಸರು ಶಿಫಾರಸ್ಸು.

ಬ್ರೇಕಿಂಗ್ ನ್ಯೂಸ್ :ಡಾ. ಅಶೋಕ್ ಶೆಟ್ಟಿ. ಬಿ. ಎನ್. ಬೆಂಗಳೂರು :ಕಳೆದ ಒಂದು ವಾರದಿಂದ ನಳಿನ್ ಕುಮಾರ್ ಕಟೀಲ್ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ಸಿಗುವುದಿಲ್ಲವೆಂಬ ಸುದ್ದಿ ಹಬ್ಬಿದ್ದು, ಕ್ಯಾಪ್ಟನ್ ಬೃಜೇಶ್ ಚೌಟ ಅವರಿಗೆ ದಕ್ಷಿಣ ಕನ್ನಡದಿಂದ ಎಂಪಿ ಟಿಕೆಟ್ ಫೈನಲ್ ಆಗಿದೆ ಎಂಬ ಬಗ್ಗೆ ಸುದ್ದಿಯಾಗಿತ್ತು. ಆದರೆ, ಇದೆಲ್ಲ ಗಾಸಿಪ್ ಸುದ್ದಿ ಎಂದು ಬಿಜೆಪಿ ಹೈ ಕಮಾಂಡ್ ನ ಆಪ್ತ ಮೂಲವೊಂದು mpmla’s news tvಗೆ ತಿಳಿಸಿದೆ. ಅದರ ಪ್ರಕಾರ, ಬಿ ಎಸ್ ವೈ ಅವರು ಟಿಕೆಟ್ ಕೈ ತಪ್ಪುವರ ಬೆಂಬಲಕ್ಕೆ ನಿಂತಿದ್ದಾರೆ. ಟಿಕೆಟ್ ಕೊಡಬಾರದೆಂದು ವಿರೋಧವಿರುವ ಬಿಜೆಪಿಯ 7 ಮಂದಿ ಹಾಲಿ ಸಂಸದರ ಪರ ನಿಂತು ಯಡಿಯೂರಪ್ಪ ಅವರು ಬ್ಯಾಟಿಂಗ್ ನಡೆಸುತ್ತಿದ್ದಾರೆ. ಬೆಂಗಳೂರು ಉತ್ತರದಲ್ಲಿ ಡಿ. ವಿ. ಸದಾನಂದ ಗೌಡ, ಮಂಡ್ಯದಲ್ಲಿ ಜೆಡಿಎಸ್ ಪರ, ಮೈಸೂರಿನಲ್ಲಿ ಪ್ರತಾಪ್ ಸಿಂಹ ಪರ,ಉತ್ತರ ಕನ್ನಡದಲ್ಲಿ ಅನಂತ್ ಕುಮಾರ್ ಹೆಗಡೆ ಪರ, ಬೀದರನಲ್ಲಿ ಭಗವಂತ ಖೂಬ ಪರ,ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಪರ,ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲು ಹೆಸರು ಶಿಫಾರಸ್ಸು ಮಾಡಿ ಬಿಜೆಪಿ ಹೈ ಕಮಾಂಡ್ ಗೆ ತಾನು ಶಿಫಾರಸ್ಸು ಮಾಡಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಸ್ಪಷ್ಟವಾಗಿ ಸೂಚಿಸಿದ್ದಾರೆ. ನಾಳೆ ಮಾರ್ಚ್ 10 ರಂದು ದೆಹಲಿಯಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಮೋದಿ, ನಡ್ಡಾ, ಅಮಿತ್ ಶಾ ಭಾಗವಹಿಸಲಿದ್ದಾರೆ. ಕರ್ನಾಟಕದಿಂದ ಬಿ ಎಸ್ ವೈ ಅವರು ಪಾಲ್ಗೊ ಳ್ಳ ಲಿದ್ದಾರೆ. ನಾಳೆ ಸಂಜೆಯೊಳಗೆ ಬಿಜೆಪಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಫೈನಲ್ ಆಗಲಿದೆ. ಕರ್ನಾಟಕದಲ್ಲಿ ಬಿಎಸ್ ವೈ ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್ ನೂರಕ್ಕೆ ನೂರರಷ್ಟು ಗ್ಯಾರಂಟಿಯಾಗಿದ್ದು, ಬಿ. ಎಲ್. ಸಂತೋಷ್ ಅವರ ಕೃಪಾಕಟಾಕ್ಷವೂ ಕಟೀಲ್ ಪರವಿರುವುದ್ದರಿಂದ ನಳಿನ್ ಕುಮಾರ್ ಕಟೀಲು ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸತತ 4 ನೇ ಬಾರಿಗೆ ಬಿಜೆಪಿಯಿಂದ ಎಂಪಿ ಟಿಕೆಟ್ ಪಡೆದು ಸ್ಪರ್ಧಿಸುವುದು ಸ್ಪಷ್ಟ ಹಾಗೂ ನೂರಕ್ಕೆ ನೂರರಷ್ಟು ಸತ್ಯವೆಂದು ವರದಿಯಾಗಿದೆ. ವಿವಾದ ರಹಿತ, ನಿಷ್ಕಲ್ಮಶ ಮನಸ್ಸಿನ ನೇರ ನಡೆ ನುಡಿಯ ನಿಷ್ಕಳಂಕ ನಾಯಕರಾಗಿರುವ ಕಟೀಲ್ ಅವರು ಯಾವುದೇ ಹಗರಣವಿಲ್ಲದ, ಭ್ರಷ್ಟಾಚಾರವಿಲ್ಲದ ಜನಪರ, ಜನ ಮೆಚ್ಚಿದ ನಾಯಕರಾಗಿದ್ದಾರೆ. 2009 ರಿಂದ 2023 ರ ವರೆಗೆ ಸತತವಾಗಿ 3 ಅವಧಿಗಳಲ್ಲಿ ದಕ್ಷಿಣ ಕನ್ನಡದ ಎಂಪಿಯಾಗಿ ಒಂದು ಲಕ್ಷ ಕ್ಕೂ ಅಧಿಕ ಕೋಟಿ ರೂಪಾಯಿಗಳ ಅನುದಾನವನ್ನು ಕೇಂದ್ರದಿಂದ ತಂದು ಜಿಲ್ಲೆಯ ಸಮಗ್ರ ಅಭಿವೃದ್ಧಿ ಮಾಡಲು ಶಕ್ತಿ ಮೀರಿ ದುಡಿದ್ದಾರೆ.ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅತಿ ಹೆಚ್ಚು ಬಾರಿ ರಾಜ್ಯ ಪ್ರವಾಸ ಮಾಡಿ ರಾಜ್ಯದ ಮೂಲೆ ಮೂಲೆಗಳನ್ನು ಸುತ್ತಿ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸಿ ಬೃಹತ್ ಶಕ್ತಿಶಾಲಿ ಹೆಮ್ಮರವಾಗಿಸಿದ್ದಾರೆ. ಈ ಸಲ ಅವರು ಸ್ಪರ್ಧಿಸಿದಲ್ಲಿ ಮೂರು ಲಕ್ಷ ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ಪ್ರಚಂಡ ಜಯಭೇರಿ ಬಾರಿಸುವುದು ಗ್ಯಾರಂಟಿ ಎಂಬ ಸಮೀಕ್ಷೆ ವ್ಯಕ್ತವಾಗಿದೆ. ನಳಿನ್ ಕುಮಾರ್ ಕಟೀಲ್ ಅವರು 4 ನೇ ಬಾರಿಗೆ ಸ್ಪರ್ಧಿಸಿ ಎಂಪಿಯಾಗಿ ಜಯಭೇರಿ ಬಾರಿಸಲೆಂದು mp mla’s news tv ಶುಭ ಹಾರೈಸುತ್ತದೆ.

Scroll to Top