ಮೂಲ್ಕಿ : ಹಿಂದಿನ ಕಾಲದಲ್ಲಿ ಆಟಿ ತಿಂಗಳು ಕಷ್ಟಕರವಾಗಿತ್ತು. ತುಳುವರಿಗೆ ಆಟಿ ತಿಂಗಳು ಶ್ರೇಷ್ಠ ತಿಂಗಳು. ಅದಕ್ಕೆ ತನ್ನದೇ ಆದ ವೈಜ್ಞಾನಿಕ ಮಹತ್ವ ಹಾಗೂ ಅರ್ಥವಿದೆ. ತುಳು ಸಂಸ್ಕೃತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸಲು ಆಟಿ ಕಾರ್ಯಕ್ರಮ ಸಹಕಾರಿ ಎಂದು ತಾಳಿಪಾಡಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಆಡಳಿತ ನಿರ್ದೇಶಕ ಮಾಧವ ಶೆಟ್ಟಿಗಾರ್ ಕೆರೆಕಾಡು ಹೇಳಿದರು.
ಅವರು ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಕೆರೆಕಾಡು ಅಕ್ಷಯ ಮಹಿಳಾ ಮಂಡಳಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ನ ಸುರತ್ಕಲ್ ವಲಯ ಇವರ ಜಂಟಿ ಆಶ್ರಯದಲ್ಲಿ ನಡೆದ ”ಆಟಿಡೊಂಜಿ ದಿನ”ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪಡುಪಣಂಬೂರು ಗ್ರಾಮ ಪಂಚಾಯತ್ನ ಅಧ್ಯಕ್ಷೆ ಕುಸುಮ ಚಂದ್ರಶೇಖರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಇದರ ನಿರ್ದೇಶಕರಾದ ಎಸ್ ದೇವರಾಜ ಶೆಟ್ಟಿ, ಮೂಲ್ಕಿ ಎಲ್ಐಸಿ ಮ್ಯಾನೇಜರ್ ಪ್ರಕಾಶ್ ಆಚಾರ್ಯ ಇವರು ಆಟಿ ತಿಂಗಳ ಮಹತ್ವದ ಬಗ್ಗೆ ತಿಳಿಸಿದರು.
ಕಿಲ್ಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ದಮಯಂತಿ ಶೆಟ್ಟಿಗಾರ್, ಸುರತ್ಕಲ್ ವಲಯದ ಸೌತ್ ಕೆನರಾ ಫೋಟೋಗ್ರಾಫರ್ಸ್ಅಸೋಸಿಯೇಷನ್ನ ಅಧ್ಯಕ್ಷ ಅನಂತ ಪದ್ಮನಾಭ, ಅಕ್ಷಯ ಮಹಿಳಾ ಮಂಡಳಿಯ ಉಪಾಧ್ಯಕ್ಷೆ ಭಾರತಿ ಯೋಗಾನಂದ ಉಪಸ್ಥಿತರಿದ್ದರು.
ಬಾಲಗೋಕುಲದ ಮಕ್ಕಳು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿರಿಯ ನಾಟಿ ವೈದ್ಯೆ ಪದ್ಮಾವತಿ ಶೆಟ್ಟಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ರತ್ನ ಶಿವಾನಂದ ಕೋಟ್ಯಾನ್ ವಂದಿಸಿದರು. ಉಷಾ ನರೇಂದ್ರ ಕೆರೆಕಾಡು ಮತ್ತು ಪಿ.ಆರ್.ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸಾರ್ವಜನಿಕರಿಗೆ ಆಟಿ ತಿಂಗಳ ಮಹತ್ವ ಸಾರುವ ವಿವಿಧ ರೀತಿಯ ವಿಶೇಷ ಪಲ್ಯ, ಚಟ್ನಿ ಸಾಂಬಾರ್ ಒಳಗೊಂಡ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು.



























































































































































































