ಮೂಲ್ಕಿ : ಇಲ್ಲಿನ ಬಳ್ಕುಂಜೆ ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಸ್ಥಾನದಲ್ಲಿ ನಡೆದ ಶ್ರೀಗುರುನಮನಸಂತೃಪ್ತಿ ಫಿಲ್ಮ್ಸ್ನ ಗಲಾಟೆ ಸಂಸಾರದ ಶುಭ ಮುಹೂರ್ತದಂದು ಕಲಾವಿದರಿಗೆ ಸನ್ಮಾನ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಯನ್ನು ನಡೆಸಲಾಯಿತು.
ಉಳೆಪಾಡಿ ಶ್ರೀ ದುರ್ಗಾಪರಮೇಶ್ವರೀ ಮಹಮ್ಮಾಯಿ ದೇವಸ್ಥಾನದ ಧರ್ಮದರ್ಶಿ ಮೋಹನ್ದಾಸ್ ಸುರತ್ಕಲ್ ಅವರು ಆಶೀರ್ವಾದ ನೀಡಿ, ಜನಜಾಗೃತಿ ಮೂಡಿಸುವಂತಹ ಕಥಾವಸ್ತುವಿನ ಸಿನಿಮಾಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಮೂಡುತ್ತದೆ. ಉತ್ತಮ ಸಧಭಿರುಚಿಯ ಧಾರಾವಾಹಿಗಳು ನಿರಂತರವಾಗಿ ಪ್ರಸಾರ ಆಗಬೇಕು, ಜನರ ಮೂಡನಂಬಿಕೆಗಳನ್ನು ದೂರ ಮಾಡುವ ಕೆಲಸ ಆಗಬೇಕು ಎಂದರು.
ಮೂಲ್ಕಿ ಸೀಮೆಯ ಅರಸರಾದ ಎಂ. ದುಗ್ಗಣ್ಣ ಸಾವಂತರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ,
ಜನಪ್ರಿಯತೆಯೊಂದಿಗೆ ಸಮಾಜದಲ್ಲಿ ಉತ್ತಮ ಸಂದೇಶ ನೀಡುವ ಧಾರಾವಾಹಿಯಾಗಿ ಗಲಾಟೆ ಸಂಸಾರ ಮೂಡಿಬರಲಿ, ಸಾಮಾಜಿಕ ಜಾಲತಾಣದಲ್ಲಿನ ಉತ್ತಮ ಅವಕಾಶವನ್ನು ಪಡೆದುಕೊಂಡು ಈ ಧಾರಾವಾಹಿ ಜನರ ಮೆಚ್ಚುಗೆಯನ್ನುಗಳಿಸಲಿ ಎಂದು ಹೇಳಿದರು.
ಕಿನ್ನಿಗೋಳಿಯ ಯುಗಪುರುಷದ ಕೆ. ಭುವನಾಭಿರಾಮ ಉಡುಪ ಅವರು ಪ್ರಥಮ ದೃಶ್ಯಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.
ಸಮಾಜ ಸೇವಕಿ ಶಾಂಭವಿ ಶಿವರಾಂ ಶೆಟ್ಟಿ ಮುಚ್ಚೂರು ಕ್ಯಾಮರಾಗೆ ಚಾಲನೆ ನೀಡಿದರು.
ಕಿನ್ನಿಗೋಳಿ ರೋಟರಿ ಕ್ಲಬ್ನ ಮಾಜಿ ಅಧ್ಯಕ್ಷ ಸ್ವರಾಜ್ ಶೆಟ್ಟಿ ಅವರು ಕಲಾವಿದರಾದ ನಯನ ಪಡುಬಿದ್ರಿ, ಸುರೇಶ್ ಶೆಟ್ಟಿಗಾರ್ ಕೆರೆಕಾಡು, ಪೂರ್ಣೀಮಾ ಸುರತ್ಕಲ್ ಅವರನ್ನು ವಿಶೇಷವಾಗಿ ಸನ್ಮಾನಿಸಿದರು.
ಕಿನ್ನಿಗೋಳಿ ಲಯನ್ಸ್ ಕ್ಲಬ್ನ ನಿಕಟಪೂರ್ವ ಅಧ್ಯಕ್ಷೆ ಹಿಲ್ಡಾ ಡಿಸೋಜಾ ಹಾಗೂ ಕಿನ್ನಿಗೋಳಿ ವಿಜಯ ಕಲಾವಿದರ ತಂಡದ ಅಧ್ಯಕ್ಷ ಶರತ್ ಶೆಟ್ಟಿ ಅವರು ಎರಡು ಕುಟುಂಬಕ್ಕೆ ಉಚಿತ ಪಡಿತರವನ್ನು ವಿತರಿಸಿದರು.
ಹಿರಿಯ ರಂಗಕರ್ಮಿ ಸುರೇಶ್ ವರ್ಕಾಡಿ, ಪತ್ರಕರ್ತ ರೋಶನ್ ಡಿಕ್ರೂಸ್, ಸಿನಿಮಾ ನಿರ್ಮಾಪಕ ಲಾನ್ಸಿ ಕುವೆಲ್ಲೋ, ಕಲಾವಿದರಾದ ನಾಗರಾಜ್ ಪೂಜಾರಿ ಬಪ್ಪನಾಡು, ವಿಲ್ಫ್ರೆಡ್ ಕೊಲ್ಲೂರು, ಧರ್ಮಾನಂದ ಶೆಟ್ಟಿಗಾರ್ ತೋಕೂರು, ಕಾವ್ಯ ಕೊಡೆತ್ತೂರು ಮತ್ತಿತರರು ಉಪಸ್ಥಿತರಿದ್ದರು.
ಧಾರಾವಾಹಿಯ ನಿರ್ದೇಶಕ ದೇವಿಪ್ರಕಾಶ್ ಮಂಗಳೂರು ಸ್ವಾಗತಿಸಿದರು, ಛಾಯಾಗ್ರಾಹಕ ಹರೀಶ್ ಪಿ. ಕೋಟ್ಯಾನ್ ಪಡುಪಣಂಬೂರು ವಂದಿಸಿದರು, ಕಲಾವಿದ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.




























































































































































































