ಬಸವಣ್ಣನವರ ವಚನಗಳಾಗಲಿ, ನಾರಾಯಣ ಗುರುಗಳ ತಾತ್ವಿಕ ಚಿಂತನೆಗಳು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಬೇಕು-ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಆಶಯ.

119.1K Views 24 Nov 2025

ಬಸವಣ್ಣನವರ ವಚನಗಳಾಗಲಿ, ನಾರಾಯಣ ಗುರುಗಳ ತಾತ್ವಿಕ ಚಿಂತನೆಗಳನ್ನಾಗಲೀ ಬೆಳೆಸುವ ಬದಲು ನಮ್ಮ ಜೀವನದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಅಭಿಪ್ರಾಯಪಟ್ಟರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ದಕ್ಷಿಣ ಕನ್ನಡ ಜಿಲ್ಲಾ ಕದಳಿ ಮಹಿಳಾ ವೇದಿಕೆ, ದ.ಕ.ನಾರಾಯಣ ಗುರು ಧರ್ಮ ಪರಿಪಾಲನಾ ಸಮಿತಿ ಮಂಗಳೂರು ಹಾಗೂ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ನಡೆದ ‘ಶರಣರ ಅನುಭಾವ ಸಂಗಮ, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ವಿಚಾರ ಸಂಕೀರ್ಣ ಹಾಗೂ ಪ್ರಶಸ್ತಿ ಪ್ರಧಾನ’ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಗೋಕರ್ಣಥೇಶ್ವರ ಶಿಕ್ಷಣ ಸಂಸ್ಥೆಯ ಸಂಚಾಲಕ ವಸಂತ ಕಾರಂದೂರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಯುವಜನತೆಗೆ ಸಮಾಜ ಸುಧಾರಕರ ತತ್ವಗಳನ್ನು ತಿಳಿಸುತ್ತಾ ಅವರನ್ನು ಸಮಾಜಮುಖಿಯಾಗಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ದ.ಕ. ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ನಮ್ಮ ದೇಶದ ಪರಂಪರೆ ಹಾಗೂ ನೆಲದ ಗುಣ ನಮ್ಮನ್ನು ಒಗ್ಗೂಡಿಸಿ ಹೃದಯವಂತರನ್ನಾಗಿ ಮಾಡುವುದರೊಂದಿಗೆ ಸಂಸ್ಕಾರವಂತರನ್ನಾಗಿ ಮಾಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಅಲೆಮಾರಿ-ಅರೆಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರಿಗೆ ‘ಬಸವಶ್ರೀ’ ಕಾಯಕಯೋಗಿ ಪ್ರಶಸ್ತಿ, ಸ್ತ್ರೀಶಕ್ತಿಗಾಗಿ ಪ್ರತಿಭಾ ಕುಳಾಯಿ ಅವರಿಗೆ ‘ಕದಳಿಶ್ರೀ’ ಪ್ರಶಸ್ತಿ ಹಾಗೂ ಆಕಾಶವಾಣಿ ಉದ್ಘೋಷಕ ಮುದ್ದು ಮೂಡುಬೆಳ್ಳೆ ಅವರಿಗೆ ‘ನಾರಾಯಣ ಗುರುಶ್ರೀ’ ಸದ್ಭಾವನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಳಿಕ ಮಂಗಳೂರು ಅಕ್ಕಮಹಾದೇವಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ಸುಮಾ ಅರುಣ್ ಮಾನ್ವಿ ಅಧ್ಯಕ್ಷತೆಯಲ್ಲಿ ‘ಸಾಮಾಜಿಕ ಕ್ರಾಂತಿಗಾಗಿ ಶರಣರ ಪಯಣ’ ಈ ವಿಷಯದ ಬಗ್ಗೆ ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಡಾ.ಕೆ ಎಸ್.ಜಯಪ್ಪ ಅವರು ವಿಚಾರ ಮಂಡಿಸಿದರು. ನಾರಾಯಣ ಗುರುಶ್ರೀ ವಿಚಾರ ಸಂಕಿರಣದ ಬಗ್ಗೆ ಡಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ರಾಮಚಂದ್ರ ಮಾತನಾಡಿದರು.
ಅಖಿಲ ಭಾರತ ವೀರೇಶೈವ ಲಿಂಗಾಯಿತ ಮಹಾಸಭಾ ಅಧ್ಯಕ್ಷ ಬಸವರಾಜ ಗಗನ್, ಮಂಗಳೂರಿನ ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಉಪಾಧ್ಯಕ್ಷರುಗಳಾದ ಶೇಖರ ಪೂಜಾರಿ, ಡಾ.ಬಿ.ಜಿ ಸುವರ್ಣ, ಮಂಗಳೂರು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ.ಜಯಪ್ರಕಾಶ್, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಘುರಾಜ್ ಕದ್ರಿ, ಶ್ರೀ ಗೋಕರ್ಣಥೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಉದಯಕುಮಾರ್, ಮಂಗಳೂರು ಅನುಭಾವ ಸಂಗಮದ ಅಧ್ಯಕ್ಷ ಶರಣ ಗುಂಡಪ್ಪ ಪೀರಲಾ ಅಬ್ಬೆಂದಿ, ಕರಾವಳಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಪ್ರ.ಕಾ. ಚನ್ನಬಸಪ್ಪ ರೊಟ್ಟಿ, ಧಾರವಾಡ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯವಾದಿ ಶರಣ ಕರಿಬಸಪ್ಪ ಕೋರಿಶೆಟ್ಟರ್ ಮೊದಲಾದವರು ಉಪಸ್ಥಿತರಿದ್ದರು. ಶರಣ ಸಾಹಿತ್ಯ ಪರಿಷತ್ತಿ ದ.ಕ. ಜಿಲ್ಲಾಧ್ಯಕ್ಷ ಶರಣ ಜಗನ್ನಾಥಪ್ಪ ಪನ್ಸಾಲೆ ಜನವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕದಳಿ ಮಹಿಳಾ ವೇದಿಕೆಯ ರಿಜಿಸ್ಟರ್ ಸುರೇಖಾ ಯಾಳವಾರ ವಂದಿಸಿದರು. ಕರಾವಳಿ ಪ್ರದೇಶ ಅನುಭವ ಪೀಠದ ಪೀಠಾಧಿಪತಿ ಅಲ್ಲಮಪ್ರಭು ನಿರ್ವಹಿಸಿದರು.

Read More News

Scroll to Top