ಮಂಗಳೂರು: ಅಡ್ಯಾರು ಗ್ರಾಮದ ಗ್ರಾಮದೇವರಾದ ಮಹಾಲಿಂಗೇಶ್ವರ ಕ್ಷೇತ್ರವು ಯೋಗಿಯೋರ್ವರ ಪ್ರೇರಣೆಯಿಂದ ಅತ್ತಾವರ ಕೀರ್ತಿಶೇಷ ಸಂಕಪ್ಪ ಪೂಂಜರಿಂದ 400 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ಕಾರಣೀಕದ ಶಿವಕ್ಷೇತ್ರ. ಊರ ಪರವೂರ ಭಕ್ತರ ಶ್ರದ್ಧಾಪೂರ್ವಕ ಸಹಕಾರದೊಂದಿಗೆ ಬೈದ್ಯಾವುಗುತ್ತು ಕುಟುಂಬಿಕರ ವಂಶ ಪಾರಂಪರಿಕ ಆಡಳಿತದೊಂದಿಗೆ ಭಕ್ತರನ್ನು ಅನುಗ್ರಹಿಸುವ ಈ ಪುಣ್ಯ ಕ್ಷೇತ್ರದ ಪುನರ್ ನಿರ್ಮಾಣ ಕಾರ್ಯ ಬಹಳ ಸುಂದರವಾಗಿ ಮೂಡಿಬಂದಿದ್ದು, ಮಾರ್ಚ್ 1 ರಿಂದ 14ರವರೆಗೆ ತನಕ ತಂತ್ರಿವರೇಣ್ಯರಾದ ವಾಮಂಜೂರು ಶ್ರೀ ಅನಂತ ಉಪಾಧ್ಯಾಯ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ಜಾತ್ರಾಮಹೋತ್ಸವ ನಡೆಯಲಿದೆ ಎಂದು ಕ್ಷೇತ್ರದ ತಂತ್ರಿಗಳಾದ ಅನಂತ ಉಪಾಧ್ಯಾಯರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಮಾರ್ಚ್ 1ರಂದು ಸಂಜೆ ಗಂಟೆ 3.30ಕ್ಕೆ ಶರವು ಮಹಾಗಣಪತಿ ದೇವಸ್ಥಾನದ ಆಡಳಿತ ಮೊಕ್ತಸರ ರಾಘವೇಂದ್ರ ಶಾಸ್ತ್ರಿಗಳಿಂದ ಉದ್ಘಾಟಿಸಲ್ಪಡುವ ಹಸಿರು ಹೊರಕಾಣಿಕೆ ಶೋಭಾಯಾತ್ರೆಯು ಅಡ್ಯಾರು ಸೋಮನಾಥ ಕಟ್ಟೆಯಿಂದ ಹೊರಟು ರಾಜಮಾರ್ಗದಲ್ಲಿ ಸಾಗಿ ಶ್ರೀ ಕ್ಷೇತ್ರವನ್ನು ತಲುಪಲಿದೆ. ಮಾರ್ಚ್ 6ರಂದು ಬೆಳಗ್ಗೆ ಗಂಟೆ 11.05ರಿಂದ ಶ್ರೀ ಮಹಾಲಿಂಗೇಶ್ವರ, ಮಹಾಗಣಪತಿ,ಮಹಾಕಾಳಿ ಹಾಗೂ ಪರಿವಾರ ದೇವರುಗಳ ಪ್ರತಿಷ್ಠೆ ಆಗಿ ಮಾರ್ಚ್ 9ರಂದು ಬೆಳಗ್ಗೆ ಗಂಟೆ 11.05ಕ್ಕೆ ಬ್ರಹ್ಮಕಲಶಾಭಿಶೇಕ ನೆರವೇರಲಿದೆ. ಅದೇ ದಿನ ಸಂಜೆ ಧ್ವಜಾರೋಹಣ ಆಗಿ ಮಾರ್ಚ್ 14ರ ತನಕ ಜಾತ್ರೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಸಭೆಗಳಲ್ಲಿ ವಿವಿಧ ಧಾರ್ಮಿಕ ಕ್ಷೇತ್ರಗಳ ಮಠಾಧೀಶರು ಆಶೀರ್ವಚನ ನೀಡಲಿದ್ದು ಬೇರೆ ಬೇರೆ ಕ್ಷೇತ್ರಗಳ ಸಾಧಕರು,ರಾಜಕೀಯ ನಾಯಕರು, ಕೊಡುಗೈ ದಾನಿಗಳು ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಿದ್ದಾರೆ. ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ
ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ದೇವಸ್ಥಾನದ ಆಡಳಿತ ಟ್ರಸ್ಟ್ ನ ದಿವಾಕರ ದಾಸ್ ಮಲ್ಲಿ, ದೇವಳದ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಎನ್.ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ದಿವಾಕರ ನಾಯ್ಕ್ ಅಡ್ಯಾರು, ಪುನರ್ ನಿರ್ಮಾಣ ಸಮಿತಿಯ ಪ್ರಧಾನ
ಕಾರ್ಯದರ್ಶಿ ಪ್ರಮೋದ್ ಕುಮಾರ್ ಶೆಟ್ಟಿ ಭಂಡಾರಿಂಜ, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧ್ಯಕ್ಷ ದೇವಿಪ್ರಸಾದ್ ಸಾಮಾನಿ ಅಡ್ಯಾರುಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕೆ.ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.
ಫೋಟೋ – ಸತೀಶ್ ಕಾಪಿಕಾಡ್



















































































































































































