ವಿಶೇಷ ವರದಿ: ಡಾ. ಅಶೋಕ್ ಶೆಟ್ಟಿ ಬಿ.ಎನ್.
ಬೆಂಗಳೂರು :ವೈದ್ಯಕೀಯ ಸಮಾಜ ಸೇವೆ ಮೂಲಕ ರಾಷ್ಟ್ರ -ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನೆ ಮಾತಾಗಿರುವ ಪುಣೆಯ ಖ್ಯಾತ ಮಕ್ಕಳ ತಜ್ಞ ಡಾ. ಸುಧಾಕರ್ ಶೆಟ್ಟಿಯವರು ದಕ್ಷಿಣ ಕನ್ನಡದ ಮೂಡಬಿದ್ರಿಯ ಪ್ರತಿಷ್ಠಿತ ಬಂಟ ಮನೆತನದ ಹಿನ್ನಲೆ ಹೊಂದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಪುಣೆಯಲ್ಲಿದ್ದ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಕನ್ನಡಿಗರಿಗೆ ಚಿಕಿತ್ಸೆ ನೀಡಿದ ಡಾ. ಸುಧಾಕರ್ ಶೆಟ್ಟಿಯವರ ವೈದ್ಯಕೀಯ ತಂಡಕ್ಕೆ ಸತತ 4 ಬಾರಿ ಕೇಂದ್ರ ಸರಕಾರದ ರಕ್ಷಾ ಮಂತ್ರಿ ಅವಾರ್ಡ್ ಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಚಾರ್ ಸಹಿ ಬಜಾದೆ ಅವಾರ್ಡ್, ಕಂಟೋನೂಮೆಂಟ್ ನಿಂದ ಶ್ರೇಷ್ಠತೆಯ ಪ್ರಮಾಣ ಪತ್ರ ಪಡೆದಿರುವ ಡಾ. ಸುಧಾಕರ್ ಶೆಟ್ಟಿಯವರು ಪುಣೆಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ಬೇಬಿ ಫ್ರೆಂಡ್ ಮಕ್ಕಳ ಕ್ಲಿನಿಕ್ ನ್ನು ನಡೆಸುತ್ತಿದ್ದೂ, ಪುಣೆಯ ಹೆಸರಾಂತ ಆಸ್ಪತ್ರೆಗಳಲ್ಲಿ ಪ್ರೊಫೆಸರ್ ಆಗಿದ್ದಾರೆ.




ಮೂಡಬಿದ್ರಿಯ ಆಳ್ವಾಸ್ ಮೆಡಿಕಲ್ ಕಾಲೇಜ್ ನಲ್ಲಿ ಸಂದರ್ಶಕ ಪ್ರೊಫೆಸರ್ ಆಗಿದ್ದಾರೆ. ಪುಣೆಯಲ್ಲಿ ಸ್ಲಂ ಮಕ್ಕಳಿಂದ ಎಲ್ಲ ವರ್ಗದ ಮಕ್ಕಳ ತನಕ ಸಾವಿರಾರು ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಿರುವ ಅವರು ಮೂಡಬಿದ್ರಿಯಲ್ಲಿ ಮಕ್ಕಳ ಸಂಚಾರಿ ಕ್ಲಿನಿಕ್ ನ್ನು ಡಾ. ಮೋಹನ್ ಆಳ್ವರ ಸಹಕಾರದೊಂದಿಗೆ ಕಳೆದೊಂದು ವರ್ಷಗಳಿಂದ ನಡೆಸುತ್ತಿದ್ದಾರೆ. ವೈದ್ಯಕೀಯ ಜಗತ್ತಿನಲ್ಲಿ ನೇರ ನಡೆ ನುಡಿಯ ಕಠಿಣ ಪರಿಶ್ರಮಿ, ದಣಿವರಿಯದ ವೈದ್ಯರಾಗಿರುವ ಇವರು ಹೊರನಾಡ ಕನ್ನಡ ರತ್ನ ಪ್ರಶಸ್ತಿಗೂ ಭಾಜನಾರಾಗಿದ್ದಾರೆ. ಡಾ. ಸುಧಾಕರ್ ಶೆಟ್ಟಿಯವರ ಜನಪ್ರಿಯತೆ ಇದೀಗ ಅವರನ್ನು ಸಿನೆಮಾ ಜಗತ್ತಿನಲ್ಲಿ ವೈದ್ಯಕೀಯ ಪ್ರೊಫೆಸರ್ ಆಗಿ ಅಭಿನಯಿಸುವ ಪಾತ್ರಕ್ಕೆ ಸ್ವತಃ ಬಹುಭಾಷಾ ನಿರ್ದೇಶಕರೊಬ್ಬರು ಆಹ್ವಾನ ಕೊಟ್ಟಿದ್ದು, ಆಗಸ್ಟ್ 24 ರಂದು ಅದರಂತೆ ಡಾ. ಸುಧಾಕರ್ ಶೆಟ್ಟಿಯವರು ಪುಣೆಯಿಂದ ಬೆಂಗಳೂರಿಗೆ ಬಂದು’ ಹೇ ಪ್ರಭು ‘ ಎಂಬ ಭಾರೀ ನಿರೀಕ್ಷೆಯ ಬಹು ಭಾಷಾ ಸಿನೆಮಾದಲ್ಲಿ ವೈದ್ಯಕೀಯ ಪ್ರೊಫೆಸರ್ ಆಗಿ ಅಭಿನಯಿಸಿದ್ದಾರೆ. ಬೆಂಗಳೂರಿನ ಬೆಂಗಳೂರು -ಮೈಸೂರು ರೋಡ್ ನಲ್ಲಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಡಾ. ಸುಧಾಕರ್ ಶೆಟ್ಟಿಯವರು ಅಭಿನಯಿಸಿದ ಚಿತ್ರದ ಚಿತ್ರೀಕರಣ ನಡೆದಿದೆ. ಗ್ರಾಮೀಣ ವೈದ್ಯಕೀಯ ಕ್ಷೇತ್ರದ ಬಗ್ಗೆ ಮಹತ್ವ ಸಾರುವ ಸಂದೇಶವನ್ನು ಡಾ. ಸುಧಾಕರ್ ಶೆಟ್ಟಿಯವರ ಮೂಲಕ ಚಿತ್ರದ ನಿರ್ದೇಶಕ ವೆಂಕಟ್ ಭಾರಧ್ವಜ್ ಅವರು ನೀಡಿದ್ದಾರೆ. ‘ ಹೇ ಪ್ರಭು’ ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ.




ಇದು ಅಮೃತ ಫಿಲಂಸ್ ಸೆಂಟರ್ ಅವರ ಸಿನೆಮಾವಾಗಿದೆ. ವೆಂಕಟ್ ಭಾರಧ್ವಜ್ ನಿರ್ದೇಶನದ ಪ್ರೊಡಕ್ಷನ್ ನಂ-14 ಬಹುನಿರೀಕ್ಷೆಯ ಸಿನಿಮಾವಾಗಿದೆ. ಹಳ್ಳಿಗೆ ಹೋಗಲಿಚ್ಚಿಸದ ಚಿತ್ರದ ನಾಯಕ ಯುವ ವೈದ್ಯನಿಗೆ ಗ್ರಾಮೀಣ ವೈದ್ಯಕೀಯದ ಮಹತ್ವವನ್ನು ತಿಳಿಸುವ ಪಾತ್ರದಲ್ಲಿ ಡಾ. ಸುಧಾಕರ್ ಶೆಟ್ಟಿಯವರು ನೈಜ ಅಭಿನಯ ನೀಡಿದ್ದು, ಚಿತ್ರೀಕರಣದ ವೇಳೆ ಅನುಭವದ ಮಾತುಗಳನ್ನಾಡಿದ್ದಾರೆ. ವೆಂಕಟ್ ಭಾರದ್ವಜ್ ಅವರು ಅತ್ಯಂತ ಪ್ರತಿಭಾವಂತ, ಅತ್ಯುತ್ತಮ ಮತ್ತು ಪ್ರಶಸ್ತಿ ವಿಜೇತ ನಿರ್ದೇಶಕರಾಗಿದ್ದು, ಡಾ. ಸುಧಾಕರ್ ಶೆಟ್ಟಿಯವರು ಹೆಸರಾಂತ ಹಾಗೂ ಹಿರಿಯ ಅನುಭವಿ ಜನಪ್ರಿಯ ವೈದ್ಯರಾಗಿದ್ದು ಈ ಚಿತ್ರದ ವೈದ್ಯಕೀಯ ಪ್ರೊಫೆಸರ್ ಪಾತ್ರಕ್ಕೆ ನೈಜಕ್ಕೆ ಹೆಚ್ಚು ಒತ್ತು ಕೊಡುವ ದೃಷ್ಟಿಯಿಂದ ಅವರನ್ನು ಆಯ್ಕೆ ಮಾಡಲಾಯಿತು ಮತ್ತು ಅವರು ಚಿತ್ರದ ಪಾತ್ರಕ್ಕೆ ನಿರೀಕ್ಷೆಗಿಂತ ಹೆಚ್ಚು ನ್ಯಾಯ ಒದಗಿಸಿದ್ದಾರೆಂದಿದ್ದಾರೆ. ಹೇ ಪ್ರಭು ಚಿತ್ರದಲ್ಲಿ ಡಾ. ಸುಧಾಕರ್ ಶೆಟ್ಟಿಯವರು ಅಭಿನಯಿಸಿರುವುದ್ದರಿಂದ ಈ ಚಿತ್ರದ ಬಗ್ಗೆ ಕರ್ನಾಟಕ, ಮಹಾರಾಷ್ಟ್ರದಲ್ಲಿರುವ ಲಕ್ಷಾಂತರ ಮಂದಿ ಡಾ. ಸುಧಾಕರ್ ಶೆಟ್ಟಿಯವರ ಅಭಿಮಾನಿಗಳು ಚಿತ್ರ ವೀಕ್ಷಿಸುವ ಸಾಧ್ಯತೆ ಇದೆ.ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಮಕ್ಕಳ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಆದರ್ಶ್ E ಅವರು ಕೂಡಾ ಡಾ. ಸುಧಾಕರ್ ಶೆಟ್ಟಿಯವರ ಜೊತೆ ಅಭಿನಯಿಸಿದ್ದರು.
ಹೇ ಪ್ರಭುವಿನಲ್ಲಿ ಡಾ. ಸುಧಾಕರ್ ಶೆಟ್ಟಿಯವರು ವೈದ್ಯಕೀಯ ಪ್ರೊಫೆಸರ್ ಆಗಿ ಅಭಿನಯಿಸಿದ ದೃಶ್ಯವನ್ನು ನೋಡಲು ಈ ಲಿಂಕ್ ಬಳಸಿ https://drive.google.com/file/d/1F74BbGb2WnvEmBuUWEUG4yC_odjDvAaQ/view?usp=sharing
























































































































































































