ಪ್ರತ್ಯಕ್ಷ ವರದಿ: ಕೃತ್ತಿಕಾಬ್ರಹ್ಮ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಟೈಗರ್ ಕಾರ್ಯಾಚರಣೆ ಮೂಲಕ ಬೀದಿಬದಿ ವ್ಯಾಪಾರಿಗಳ ಅನಧೀಕೃತ ಗೂಡಂಗಡಿಗಳನ್ನು ತೆರವುಗೊಳಿಸಿರುವ ಮೇಯರ್ ಸುಧೀರ್ ಶೆಟ್ಟಿಯವರ ಕ್ರಮಕ್ಕೆ ವ್ಯಾಪಕ ಜನಶ್ಲಾಘನೆ ವ್ಯಕ್ತವಾಗಿದೆ.
ಬೀದಿಬದಿಯ ವ್ಯಾಪಾರಿಗಳ ಸೋಗಿನಲ್ಲಿ ಒಂದೊಂದು ಮನೆಯಿಂದ ನಾಲ್ಕೈದು ಮಂದಿಗಳಿದ್ದು , ಒಬ್ಬೊಬ್ಬರಿಗೆ ಒಂದರಿಂದ ಹತ್ತರ ತನಕ ಬೀದಿಬದಿ ವ್ಯಾಪಾರ ವಹಿವಾಟುವಿರುವುದು ಬೆಳಕಿಗೆ ಬಂದಿದೆ.

ಮಂಗಳೂರು ಮಹಾನಗರಪಾಲಿಕೆಯ ಕೆಲವು ಅಧಿಕಾರಿಗಳಿಗೆ, ಕೆಲವು ಕಾರ್ಪೊರೇಟರ್ಗಳಿಗೆ ತಿಂಗಳು ತಿಂಗಳು ಮಾಮೂಲು (ಹಪ್ತ) ಕೊಟ್ಟು ವ್ಯಾಪಾರ ನಡೆಸುವ ಬೀದಿಬದಿಯ ಕೆಲವು ವ್ಯಾಪಾರಿಗಳು ನಗರದ ಸೌಂದರ್ಯವನ್ನು, ಆರೋಗ್ಯವನ್ನು ಹದಗೆಡಿಸುತ್ತಿದ್ದಾರೆಂಬ ದೂರುಗಳು ಮೊದಲಿನಿಂದಲೂ ಇತ್ತು.
ಅವಧಿ ಮೀರಿದ ಆಹಾರ ವಸ್ತುಗಳನ್ನು, ತರಕಾರಿಗಳನ್ನು ಅಂಗಡಿಗಿಂತ ದುಪಟ್ಟು ಬೆಲೆಗೆ ಮಾರುವ ಬೀದಿ ಬದಿ ವ್ಯಾಪಾರಿಗಳು ಹಿಂದೂಗಳ ಹಬ್ಬ ಹರಿದಿನ ಸಂದರ್ಭದಲ್ಲಿ ಹರಿವೆ ಸೊಪ್ಪುವೊಂದಕ್ಕೆ 1೦೦ ರೂ.ಗೆ ಮಾರುತ್ತಾರೆಂದು ಹೇಳಿದರೆ ಬೀದಿ ವ್ಯಾಪಾರಿಗಳ ರೇಟ್ ಮಾಫಿಯಾವನ್ನು ನೀವೇ ಊಹಿಸಿ.
ಟೈಗರ್ ಕಾರ್ಯಾಚರಣೆ ವೇಳೆ ಕೆಲವು ಬೀದಿಬದಿಯ ವ್ಯಾಪಾರಿಗಳ ಗೂಡಂಗಡಿಯಲ್ಲಿ ನಿಷೇಧಗೊಳಗಾದ ಟೆಸ್ಟ್ ಪೌಡರ್ಗಳು ಪತ್ತೆಯಾದದ್ದನ್ನು ಗಮನಿಸಿದರೆ ಇವರಿಂದ ಜನರಿಗೆ, ಮಂಗಳೂರು ನಗರಕ್ಕೆ ಎಷ್ಟು ಅಪಾಯವಿದೆ ಎಂದು ನೀವೇ ಲೆಕ್ಕ ಹಾಕಿ.

ಪ್ರತೀ ಬಾರಿ ಬೀದಿಬದಿಯ ವ್ಯಾಪಾರಿಗಳ ಅಂಗಡಿಗಳನ್ನು ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದಾಗಲೂ ಹೋರಾಡುವ ಇದರ ಸಂಘಟನೆ ಅರ್ಹ ಬಡಪಾಯಿ ವ್ಯಾಪಾರಿಗಳಿಗೆ ನ್ಯಾಯ ಕೊಡಿಸಬೇಕೇ ವಿನಾಃ ಕೆಲವು ಅಬ್ಬೇಪಾರಿ ಬೀದಿಬದಿ ವ್ಯಾಪಾರಿ ಮಾಫಿಯಾಗಳಿಗಲ್ಲ ಎಂಬುವುದನ್ನು ಇದರ ಅಧ್ಯಕ್ಷರು ಮೊದಲು ತಿಳಿದುಕೊಳ್ಳಬೇಕಾಗಿದೆ.
ಅಂಗವಿಕಲರು ಯಾರಾದರೂ ವ್ಯಾಪಾರ ನಡೆಸಲು ಪಾಲಿಕೆಗೆ ಪರವಾನಿಗೆಗೆ ಅರ್ಜಿ ಸಲ್ಲಿಸಿದರೆ ವರ್ಷಗಟ್ಟಲೆ ಲೈಸನ್ಸ್ ಕೊಡದೆ ಅಲೆದಾಡಿಸಿ ಸತಾಯಿಸುವ ಪಾಲಿಕೆ ಬೀದಿಬದಿಯ ವ್ಯಾಪಾರಿಗಳ ಅಡ್ಡಾದಿಡ್ಡಿ ವ್ಯಾಪಾರ ವಹಿವಾಟುಗಳಿಗೆ ಎಲ್ಲೆಂದರಲ್ಲಿ ಇಲ್ಲಿ ತನಕ ಆಸ್ಪದ ನೀಡಿದ್ದೇ ತಪ್ಪಾಯಿತು. ಇನ್ನು ಮುಂದೆಯಾದರೂ ಅರ್ಹ ಬೀದಿಬದಿ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕೊಟ್ಟು ಅಬ್ಬೇಪಾರಿ ಬೀದಿಬದಿ ವ್ಯಾಪಾರಿಗಳನ್ನು ಮಟ್ಟ ಹಾಕಿ ಒದ್ದು ಓಡಿಸುವ ಕೆಲಸವನ್ನು ಪಾಲಿಕೆ ಮಾಡಬೇಕಾಗಿದೆಂದು ಜನ ಒತ್ತಾಯಿಸಿದ್ದಾರೆ. ವಿಪರ್ಯಾಸವೆಂದರೆ, ಟೈಗರ್ ಕಾರ್ಯಾಚರಣೆ ನಡೆಸಿದ ಮರುದಿವಸವೇ ಕೆಲವು ಪ್ರಭಾವಿ ವಸೂಲಿಬಾಜಿ ವ್ಯಾಪಾರಿಗಳು ಮತ್ತೆ ಅದೇ ಜಾಗದಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಹಾಗಾದರೆ ಟೈಗರ್ ಕಾರ್ಯಾಚರಣೆ ಯಾಕೆ ನಡೆಸಿದ್ದು? ಇದು ಸಾರ್ವಜನಿಕರ ಕಣ್ಣೆಗೆ ಮಣ್ಣೆರೆಚುವ ನಾಟಕವೇ?




























































































































































































