ವಿಶೇಷ ವರದಿ: ಅಶೋಕ್ ಶೆಟ್ಟಿ ಬಿ.ಎನ್.
ಮಂಗಳೂರು : ಗೆಲ್ ಇಂಡಿಯಾ ಕನ್ಸ್ಟ್ರಕ್ಷನ್( ಗೆಲ್ ಗ್ಯಾಸ್ ಕಂಪೆನಿ)ಯವರು ಮಂಗಳೂರು ಮಹಾನಗರಪಾಲಿಕೆ ಇಂಜಿನಿಯರ್ ಗಳ ಗಮನಕ್ಕೆ ತರದೆ ಏಕಾಏಕಿ ಸರ್ವಾಧಿಕಾರಿ ಧೋರಣೆಯಿಂದ ತುಂಬೆ ಅಹ್ಮದ್ ಹಾಜಿ ಬಳಿ ಪೈಪ್ ಲೈನ್ ಅಗೆದಿದ್ದು,ಇದರಿಂದ ಮಂಗಳೂರಿಗೆ ನೀರು ಸರಬರಾಜು ಆಗುವ ಮೈನ್ ಪೈಪ್ ಲೈನ್ ತುಂಡಾಗಿದ್ದು,ಇನ್ನು ಕೆಲವು ದಿನಗಳ ಕಾಲ ಮಂಗಳೂರಿಗೆ ತುಂಬೆಯಿಂದ ನೀರು ಸರಬರಾಜು ಆಗುವುದು ಅಸಾಧ್ಯವೆಂದು ವರದಿಯಾಗಿದೆ. ಗೆಲ್ ಗ್ಯಾಸ್ ಕಂಪೆನಿಯವರು ಗ್ಯಾಸ್ ಲೈನ್ ಹಾಕುವ ಭರದಲ್ಲಿ ಪಾಲಿಕೆ ಇಂಜಿನಿಯರ್ ಗಳನ್ನು ಗಣನೆಗೆ ತೆಗೆದುಕೊಳ್ಳದೆ, ನಿರ್ಲಕ್ಷಿಸಿ ತಾವೇ ಮನಬಂದಂತೆ ಅಗೆಯಲು ಶುರು ಮಾಡಿದ್ದರಿಂದ ಮಂಗಳೂರಿಗೆ ನೀರು ಸರಬರಾಜು ಮಾಡುವ ಮೈನ್ ಪೈಪ್ ಲೈನ್ ಡ್ಯಾಮೇಜ್ ಆಯಿತು. ಇದು ಸರಿಯಾಗಲು ಕನಿಷ್ಠ ಒಂದು ವಾರವಾದರೂ ಬೇಕು.



ಶಶಿಧರ ಹೆಗ್ಡೆ
ಈ ರೀತಿಯ ಗೆಲ್ ಗ್ಯಾಸ್ ಕಂಪೆನಿಯವರ ಬೇಜವಾಬ್ದಾರಿ ವರ್ತನೆಗೆ ಮಂಗಳೂರು ಕಂಡ ಹಿರಿಯ ಜನಪರ ಕಾರ್ಪೊರೇಟರ್, ಮಾಜಿ ಮೇಯರ್ ಶಶಿಧರ್ ಹೆಗ್ಡೆಯವರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಗೆಲ್ ಗ್ಯಾಸ್ ಕಂಪೆನಿಯವರು ಈ ರೀತಿ ನಿರ್ಲಕ್ಷ ವಹಿಸಿ ಮೈನ್ ಪೈಪ್ ಲೈನ್ ಬ್ರೆಕ್ ಮಾಡಿದ್ದರಿಂದ ಮಂಗಳೂರಿನ ಜನ ನೀರಿಗಾಗಿ ಪರದಾಡುವ ಪರಿಸ್ಥಿತಿ ಬಂದಿದೆ. ಇದು ಖಂಡನಿಯ, ಜನ ವಿರೋಧಿ ಕೆಲಸವಾಗಿದೆ. ಪಾಲಿಕೆ ಗಮನಕ್ಕೆತರದೆ ಈ ರೀತಿ ಯಾವುದೇ ಕೆಲಸ ಕಾರ್ಯಗಳು ಮುಂದಿನ ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಕೂಡದೆಂದು ಶಶಿಧರ್ ಹೆಗ್ಡೆಯವರು ಎಚ್ಚರಿಸಿದ್ದಾರೆ. ಈ ಮಧ್ಯೆ ಮಂಗಳೂರು ಮಹಾನಗರಪಾಲಿಕೆ ಕಮೀಷನರ್ ಸಿ. ಎಲ್. ಆನಂದ್ ಅವರು ತುಂಬೆಯಿಂದ ಪಡೀಲ್ ಗೆ ನೀರು ಸರಬರಾಜು ಮಾಡುವ 1100 ಎಂ ಎಂ ಪೈಪ್ ಲೈನ್ ತುಂಬೆ ಬಳಿ ಡ್ಯಾಮೇಜ್ ಆಗಿದೆ. ಈ ಪೈಪ್ ಲೈನ್ ರಸ್ತೆಯಿಂದ 20 ಅಡಿ ಕೆಳಗಿದೆ. ಈ ಬಗ್ಗೆ ಪಾಲಿಕೆ ಇಂಜಿನಿಯರ್ ಗಳು ಇದರ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದು, ಅದನ್ನು ಆದಷ್ಟು ಬೇಗ ಸರಿಪಡಿಸಲಿದ್ದಾರೆಂದು ತಿಳಿಸಿದ್ದಾರೆ. ತುಂಬೆ ಪೈಪ್ ಲೈನ್ ಡ್ಯಾಮೇಜ್ ನ್ನು ಸ್ಥಳಕ್ಕೆ ಭೇಟಿ ನೀಡಿ ಮಂಗಳೂರು ಮಹಾನಗರ ಪಾಲಿಕೆಯ ಪ್ರತಿ ಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ, ಹಿರಿಯ ಕಾರ್ಪೊರೇಟರ್ ಗಳಾದ ಶಶಿಧರ್ ಹೆಗ್ಡೆ, ಲಾನ್ಸಿ ಲಾಟ್ ಪಿಂಟೋ, ನವೀನ್ ಡಿ’ಸೋಜ, ಅಬ್ದುಲ್ ರವೂಫ್ ಮತ್ತು ಪಾಲಿಕೆ ಇಂಜಿನಿಯರ್ ಗಳು, ಅಧಿಕಾರಿಗಳು ವೀಕ್ಷಿಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಿ, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.



























































































































































































