ಮಂಗಳೂರು:ಮಂಗಳೂರಿನ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಮತ್ತು ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣಗಳಲ್ಲಿ ತಡರಾತ್ರಿ ವೇಳೆಗೆ ದೂರದೂರಿಂದ ಮಂಗಳೂರಿಗೆ ತಲುಪುವ ಹೊರಜಿಲ್ಲೆಗಳ ಬಡ ಪ್ರಯಾಣಿಕರು ಹಸಿವಿನಿಂದ ಬಳಲಬೇಕಾದ ಪರಿಸ್ಥಿತಿಯನ್ನು ಮನಗಂಡ ತುಳುನಾಡು ಪ್ರತಿಷ್ಠಾನ ಮೂಲ್ಕಿ ಇದರ ಸ್ಥಾಪಕ ಅಧ್ಯಕ್ಷ ಮತ್ತು ಆಯುಷ್ ಇಲಾಖೆಯ ಯುನಾನಿ ವಿಭಾಗದಲ್ಲಿ ಮುಲ್ಕಿ ಕೆರೆಕಾಡ್ ನಲ್ಲಿ ಉದ್ಯೋಗಿಯಾಗಿರುವ ರಾಜೇಶ್ ಅಮೀನ್ ಅವರು ಪ್ರತಿದಿನ ರಾತ್ರಿ 11ಗಂಟೆಯಿಂದ ಮಧ್ಯರಾತ್ರಿ 12 ಗಂಟೆ ತನಕ ಆಹಾರದ ವ್ಯವಸ್ಥೆಯನ್ನು ಸ್ವತಃ ಬಡ ಪ್ರಯಾಣಿಕರಿಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.

ಕಳೆದ 2 ತಿಂಗಳಿಂದ ಅವರು ದೂರದೂರಿಂದ ಮಂಗಳೂರು ತಲುಪುವ ಬಡ ಪ್ರಯಾಣಿಕರಿಗೆ ಉಚಿತವಾಗಿ ಆಹಾರ ವಿತರಣೆ ಮಾಡುತ್ತಿದ್ದಾರೆ. ಬಡ ಪ್ರಯಾಣಿಕರ ಜೊತೆಗೆ, ನಿರಾಶ್ರಿತರಿಗೆ ಕೂಡಾ ಅವರು ಆಹಾರ ವಿತರಣೆ ಮಾಡುತ್ತಿದ್ದಾರೆ. ಪ್ರತಿ ರಾತ್ರಿ ಅವರು 25 ಮಂದಿಗೆ ಉಚಿತವಾಗಿ ಆಹಾರ ವಿತರಣೆ ಮಾಡುತ್ತಿದ್ದಾರೆ. ಲಾಲ್ ಬಾಗ್ ಬಿಗ್ ಬಜಾರ್ ನ ಎದುರುಗಡೆ ಇರುವ ಕ್ಯಾಂಟೀನ್ ವೊಂದರ ಮಾಲಕಿ ಸಾವಿತ್ರಿ ಮತ್ತು ಕೆ ಎಸ್ ಆರ್ ಟಿ ಸಿ ಬಳಿಯ ಕ್ಯಾಂಟೀನ್ ಗಳ ಮಾಲಕರಾದ ರವಿ ಕಡಬ ಮತ್ತು ಲೋಕೇಶ್ ಬಾರೆಬೈಲ್ ಅವರು ತಮ್ಮ ಹೋಟೆಲ್ ನಿಂದ ಆಹಾರ ವ್ಯವಸ್ಥೆಯನ್ನು ಉಚಿತವಾಗಿ ರಾಜೇಶ್ ಅಮೀನ್ ಅವರಿಗೆ ನೀಡುತ್ತಿದ್ದೂ,ಅದನ್ನು ಅವರು ಬಡ ಪ್ರಯಾಣಿಕರಿಗೆ, ನಿರಾಶ್ರಿತರಿಗೆ ತುಳುನಾಡು ಪ್ರತಿಷ್ಠಾನ ಟ್ರಸ್ಟ್ ಮೂಲಕ ನೀಡುತ್ತೀರುವುದಾಗಿ Mp mla’s ನ್ಯೂಸ್ ಗೆ ತಿಳಿಸಿದ್ದಾರೆ. ರಾಜೇಶ್ ಅಮೀನ್ ಅವರ ಸಮಾಜ ಸೇವೆ ವ್ಯಾಪಕ ಜನ ಶ್ಲಾಘನೆಗೆ ಪಾತ್ರವಾಗಿದೆ. ರಾಜೇಶ್ ಅಮೀನ್ ಅವರು ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟಿ ಸಿಟಿಯ ಸಕ್ರಿಯ ಸದಸ್ಯರಾಗಿದ್ದಾರೆ. ಹಲವು ಬಾರಿ ರಕ್ತದಾನ ಮಾಡಿರುವ ಅವರು ತುಳುನಾಡು ಪ್ರತಿಷ್ಠಾನದ ಮೂಲಕ ಸಮಾಜಸೇವೆ ಮಾಡುತ್ತಾ ಬಂದಿದ್ದು, ಬಡರೋಗಿಗಳಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಶಾಲಾ ಮಕ್ಕಳಿಗಾಗಿ ಉಚಿತ ಪುಸ್ತಕ ವಿತರಣೆ ಮೊದಲಾದ ನೆರವು ಒದಗಿಸಿದ್ದಾರೆ. ಇದರ ಜೊತೆಗೆ, ಕೆಲವು ಸಿನೆಮಾಗಳಲ್ಲಿ ಚಲನಚಿತ್ರ ಕಲಾವಿದರಾಗಿಯೂ ದುಡಿದ್ದಾರೆ. ಹಾಯ್ ತುಳುನಾಡು ಪತ್ರಿಕೆಯ ಸ್ಥಾಪಕ ಸಂಪಾದಕರಗಿಯೂ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ.



























































































































































































